'ಜೈ ಹನುಮಾನ್' ಚಿತ್ರದಲ್ಲಿ ಶ್ರೀರಾಮನಾಗಿ ಮಹೇಶ್ ಬಾಬು, ಆಂಜನೇಯನಾಗಿ ಚಿರು? ಫ್ಯಾನ್ಸ್ ಥ್ರಿಲ್
ಭಾರತೀಯ ಚಿತ್ರರಂಗದಲ್ಲೀಗ ಪೌರಾಣಿಕ, ಐತಿಹಾಸಿಕ, ಜಾನಪದ ಸಿನಿಮಾಗಳ ಟ್ರೆಂಡ್ ಶುರುವಾಗಿದೆ. ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನಗಳು ನಡೆಯುತ್ತಲೇ ಇದೆ. ಕೆಲವರು ಸೋತರೇ ಕೆಲವರು ಗೆಲ್ಲುತ್ತಿದ್ದಾರೆ. ಇತ್ತೀಚೆಗೆ ಸಂಕ್ರಾಂತಿ ಸಂಭ್ರಮದಲ್ಲಿ ಬಂದ ತೆಲುಗಿನ 'ಹನುಮಾನ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೂಪರ್ ಹಿಟ್ ಆಗಿದೆ.
ನಮ್ಮ ಪುರಾಣ, ಪೌರಾಣಿಕ ವಿಷಯಗಳನ್ನಿಟ್ಟುಕೊಂಡು ಇವತ್ತಿನ ತಂತ್ರಜ್ಞಾನ ಬಳಸಿಕೊಂಡು ಒಳ್ಳೆ ಸಿನಿಮಾ ಮಾಡಿದರೆ ಪ್ರೇಕ್ಷಕರು ನೋಡುತ್ತಾರೆ ಎನ್ನುವುದು ಸಾಬೀತಾಗಿದೆ. ಪ್ರಶಾಂತ್ ವರ್ಮಾ ನಿರ್ದೇಶನದ ಈ ಸೂಪರ್ ಹೀರೊ ಸಿನಿಮಾ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ತೇಜ ಸಜ್ಜಾ ಚಿತ್ರದಲ್ಲಿ ಹೀರೋ ಆಗಿ ಮಿಂಚಿದ್ದಾರೆ. ಸದ್ಯ ಚಿತ್ರದ ಸೀಕ್ವೆಲ್ ಬಗ್ಗೆ ಚರ್ಚೆ ನಡೀತಿದೆ.

ಶ್ರೀರಾಮ ಹಾಗೂ ಹನುಮಂತನ ಕಥೆಯನ್ನಿಟ್ಟುಕೊಂಡು ಪ್ರಶಾಂತ್ ವರ್ಮಾ 'ಹನುಮಾನ್' ಸೀಕ್ವೆಲ್ ಪ್ಲ್ಯಾನ್ ಮಾಡುತ್ತಿದ್ದಾರೆ. ಈಗಾಗಲೇ 'ಜೈ ಹನುಮಾನ್' ಟೈಟಲ್ನಲ್ಲಿ ಸಿನಿಮಾ ಘೋಷಣೆ ಆಗಿದೆ. ಆದರೆ ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ? ಎನ್ನುವ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಹೊಸ ನಿರ್ದೇಶಕ ಹಾಗೂ ಕಡಿಮೆ ಬಂಡವಾಳ ಎನ್ನುವ ಕಾರಣಕ್ಕೆ 'ಹನುಮಾನ್' ಚಿತ್ರವನ್ನು ಚಿಕ್ಕದಾಗಿ ತೆರೆಗೆ ತರಲಾಗಿತ್ತು. ಸಿನಿಮಾ ಹಿಟ್ ಆಗಿರುವುದರಿಂದ ದೊಡ್ಡ ಮಟ್ಟದಲ್ಲಿ ಸೀಕ್ವೆಲ್ ಪ್ಲ್ಯಾನ್ ಮಾಡಲಾಗುತ್ತಿದೆ.
'ಜೈ ಹನುಮಾನ್' ಚಿತ್ರದಲ್ಲಿ ಶ್ರೀರಾಮನಾಗಿ ಮಹೇಶ್ ಬಾಬು, ಹನುಮಂತನಾಗಿ ಚಿರಂಜೀವಿ ನಟಿಸಿದರೆ ಚೆನ್ನಾಗಿರುತ್ತದೆ ಎಂದು ನಿರ್ದೇಶಕ ಪ್ರಶಾಂತ್ ವರ್ಮಾ ಹೇಳಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ನಿರ್ದೇಶಕ ಪ್ರಶಾಂತ್ ವರಮಾ ಮಾತನಾಡಿ "ಜೈ ಹನುಮಾನ ಬಹಳ ದೊಡ್ಡ ಸಿನಿಮಾ. ಹಾಗಾಗಿ ಸ್ಟಾರ್ ಕಲಾವಿದರು ನಟಿಸುವ ಸಾಧ್ಯತೆಯಿದೆ. ಹನುಮಂತನ ಪಾತ್ರದಲ್ಲಿ ನಟಿಸಲು ಬಾಲಿವುಡ್ ನಟರು ಸಿದ್ಧರಿದ್ದಾರೆ. ಆದರೆ ನೋಡಿದಾಗ ನಮಗೆ ಭಕ್ತಿಯಿಂದ ಕೈಮುಗಿಯಬೇಕು ಅನಿಸಬೇಕು. ಆ ರೀತಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಬೇಕು. ಹಾಗಾಗಿ ಆ ಲಿಸ್ಟ್ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಕೂ ಇರಬಹುದು. ಎಲ್ಲಾ ಅಂದುಕೊಂಡಂತೆ ಆದರೆ ಹನುಮಂತನಾಗಿ ಚಿರುನ ತೋರಿಸಬೇಕು ಎಂದುಕೊಂಡಿದ್ದೇನೆ" ಎಂದಿದ್ದಾರೆ.

"ಇನ್ನು ಶ್ರೀರಾಮನಾಗಿ ನನ್ನ ಕಲ್ಪನೆಯಲ್ಲಿಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಇದ್ದಾರೆ. ರಾಮನ ಅವತಾರದಲ್ಲಿ ಮಹೇಶ್ ಬಾಬು ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದೇನೆ. ನನ್ನ ಆಫೀಸ್ನಲ್ಲಿ ಕೂಡ ರಾಮನ ಅವತಾರದಲ್ಲಿ ಮಹೇಶ್ ಬಾಬು ಇರುವ ಪೋಸ್ಟರ್ ಹಾಕಿಕೊಂಡಿದ್ದೇನೆ" ಎಂದಿದ್ದಾರೆ. ಪ್ರಶಾಂತ್ ವರ್ಮಾ ಮಾತು ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ನಿಜಕ್ಕೂ ರಾಮನಾಗಿ ಮಹೇಶ್ ಬಾಬು, ಹನುಮಂತನಾಗಿ ಚಿರು ಅದ್ಭುತವಾಗಿ ಕಾಣಿಸುತ್ತಾರೆ. ಆ ಪಾತ್ರಗಳು ಹೊಂದಿಕೆ ಆಗುತ್ತದೆ. ಇಬ್ಬರೂ ಒಪ್ಪಿ ಸಿನಿಮಾ ಮಾಡಿದರೆ ಅದ್ಭುತವಾಗಿರುತ್ತದೆ ಎನ್ನುತ್ತಿದ್ದಾರೆ.
ಚಿರು ಹನುಮಂತನ ಪರಮಭಕ್ತರೂ ಕೂಡ ಹೌದು. 'ಹನುಮಾನ್' ಸಿನಿಮಾ ಟ್ರೈಲರ್ ನೋಡಿ ಚಿರಂಜೀವಿ ಮೆಚ್ಚಿಕೊಂಡಿದ್ದರು. ಚಿತ್ರತಂಡಕ್ಕೆ ಬೆಂಬಲವಾಗಿ ನಿಂತಿದ್ದರು. ಹಾಗಾಗಿ ಕತೆ ಇಷ್ಟವಾದರೆ ಚಿರು ನಟಿಸೋಕೆ ಒಪ್ಪುವುದರಲ್ಲಿ ಸಂದೇಹವಿಲ್ಲ. ಇನ್ನು ರಾಮನ ಅವತಾರದಲ್ಲಿ ಮಹೇಶ್ ಬಾಬು ಅವರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಟಾಲಿವುಡ್ ಪ್ರಿನ್ಸ್ ಸದ್ಯ ರಾಜಮೌಳಿ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ರಾಜಮೌಳಿ- ಮಹೇಶ್ ಬಾಬು ಕಾಂಬಿನೇಷನ್ನಲ್ಲಿ ಪ್ಯಾನ್ ವರ್ಲ್ಡ್ ಸಿನಿಮಾ ತಯಾರಿ ನಡೀತಿದೆ. ಈ ಚಿತ್ರಕ್ಕಾಗಿ ಮಹೇಶ್ ಮೂರ್ನಾಲ್ಕು ವರ್ಷ ಮೀಸಲಿಡುತ್ತಿದ್ದಾರೆ. ಆ ಸಿನಿಮಾ ಬಿಟ್ಟು 'ಜೈ ಹನುಮಾನ್' ಸಿನಿಮಾ ಒಪ್ಪುತ್ತಾರಾ? ಅದಕ್ಕೆ ಜಕ್ಕಣ್ಣ ಅವಕಾಶ ಕೊಡುತ್ತಾರಾ? ಎನ್ನುವ ಚರ್ಚೆ ಕೂಡ ಶುರುವಾಗಿದೆ. ಆದರೆ ಪ್ರಶಾಂತ್ ವರ್ಮಾ ಮಾತ್ರ ಇಬ್ಬರು ಒಪ್ಪಿದರೆ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ.


Click it and Unblock the Notifications










