ಕೊರೊನಾ ವೈರಸ್ಗೆ ನಟ ಚಿರಂಜೀವಿ ಕ್ಯಾರವಾನ್ ಚಾಲಕ ಬಲಿ
ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರ ಕ್ಯಾರವಾನ್ ಚಾಲಕ ಕೊರೊನಾ ವೈರಸ್ಗೆ ಬಲಿಯಾಗಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಚಾಲಕನ ನಿಧನ ಸುದ್ದಿಯಿಂದ ತೀರಾ ಬೇಸರಗೊಂಡ ಚಿರಂಜೀವಿ ಆಚಾರ್ಯ ಸಿನಿಮಾ ಚಿತ್ರೀಕರಣ ನಿಲ್ಲಿಸಿದ್ದಾರೆ.
ಕೊರಟಲಾ ಶಿವ ನಿರ್ದೇಶನದಲ್ಲಿ ತಯಾರಾಗುತ್ತಿರುವ ಆಚಾರ್ಯ ಸಿನಿಮಾದ ಶೂಟಿಂಗ್ ಹೈದರಾಬಾದ್ನಲ್ಲಿ ನಡೆಯುತ್ತಿತ್ತು. ಚಿತ್ರೀಕರಣವನ್ನು ಇದ್ದಕ್ಕಿದ್ದಂತೆ ಸ್ಥಗಿತಗೊಳಿಸಲಾಯಿತು. ಶೂಟಿಂಗ್ ನಿಲ್ಲಿಸಿದ ಕಾರಣ ಹುಡುಕಿದಾಗ ಚಿರಂಜೀವಿ ಅವರ ಖಾಸಗಿ ಸಾವನ್ನಪ್ಪಿರುವುದು ತಿಳಿದು ಬಂದಿದೆ.
ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ತೆಲುಗು ಸಿನಿ ಕಾರ್ಮಿಕರಿಗೆ ಉಚಿತವಾಗಿ ಲಸಿಕೆ ಹಾಕುವ ಅಭಿಯಾನಕ್ಕೆ ನಟ ಚಿರಂಜೀವಿ ಕೈ ಜೋಡಿಸಿದ್ದರು. ಅಪೋಲೋ ಸಂಸ್ಥೆಯ ಜೊತೆ ನಿಂತ ಚಿರು, ಸಿನಿಮಾ ಕಾರ್ಮಿಕರು, ಕಲಾವಿದರು, ಪತ್ರಕರ್ತರು 45 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್ ಲಸಿಕೆ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದರು. ಇದರ ಬೆನ್ನಲ್ಲೆ ತಮ್ಮ ಕ್ಯಾರವಾನ್ ಚಾಲಕ ಕೊನೆಯುಸಿರೆಳೆದಿರುವುದು ಬೇಸರ ಮೂಡಿಸಿದೆ.

ಆಚಾರ್ಯ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸೋನು ಸೂದ್ ಅವರಿಗೂ ಕೋವಿಡ್ ಸೋಂಕು ತಗುಲಿದೆ. ಪ್ರಸ್ತುತ, ಸೋನು ಸೂದ್ ಕ್ವಾರಂಟೈನ್ಗೆ ಒಳಗಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಪವನ್ ಕಲ್ಯಾಣ್ ಅವರಿಗೂ ಇತ್ತೀಚಿಗಷ್ಟೆ ಸೋಂಕು ದೃಢವಾಗಿತ್ತು. ಪವನ್ ಕಲ್ಯಾಣ್ ಅವರ ಆಪ್ತ ಸಿಬ್ಬಂದಿಗೆ ಸೋಂಕು ತಗುಲಿದ ನಂತರ ಕ್ವಾರಂಟೈನ್ ಆಗಿದ್ದರು. ಪರೀಕ್ಷಿಸಿದ ಬಳಿಕ ತಮಗೂ ಸೋಂಕು ತಗುಲಿರುವುದು ಪತ್ತೆಯಾಗಿತ್ತು.

ಆಚಾರ್ಯ ಸಿನಿಮಾದ ಚಿತ್ರೀಕರಣ ಇನ್ನು 10-15 ದಿನ ಮುಗಿಯಲಿದೆ. ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣ ಮುಗಿದಿದೆ. ಹಾಗಾಗಿ, ಚಿತ್ರಕ್ಕಿಂತ ಸಿನಿಮಾದಲ್ಲಿ ಕೆಲಸ ಮಾಡಿದ ಸಿಬ್ಬಂದಿಗಳ ಆರೋಗ್ಯದ ಮೇಲೆ ರಾಮ್ ಚರಣ್ ಹೆಚ್ಚಿನ ಗಮನ ಕೊಟ್ಟಿದ್ದಾರೆ ಎನ್ನಲಾಗಿದೆ.
ಸದ್ಯದ ವರದಿ ಪ್ರಕಾರ, ಆಚಾರ್ಯ ಸಿನಿಮಾ ಮೇ 13 ರಂದು ತೆರೆಗೆ ಬರಲಿದೆ. ಕಾಜಲ್ ಅಗರ್ ವಾಲ್ ನಾಯಕಿಯಾಗಿದ್ದು, ಪೂಜಾ ಹೆಗ್ಡೆ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











