ಬ್ಲಾಕ್ಬಸ್ಟರ್ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕನಿಗೆ ಚಿರಂಜೀವಿ ದುಬಾರಿ ಉಡುಗೊರೆ
ಅನಿಲ್ ರಾವಿಪುಡಿ ನಿರ್ದೇಶನದ 'ಮನ ಶಂಕರವರಪ್ರಸಾದ್ಗಾರು' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಚಿರಂಜೀವಿ ಹಾಗೂ ನಯನತಾರ ನಟನೆಯ ಫ್ಯಾಮಿಲಿ ಕಾಮಿಡಿ ಎಂಟರ್ಟೈನರ್ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಆಗಿ 300 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಸಂಭ್ರಮದಲ್ಲೇ ನಿರ್ದೇಶಕನಿಗೆ ಭರ್ಜರಿ ಉಡುಗೊರೆ ಸಿಕ್ಕಿದೆ.
ರಾಜಕೀಯರಂಗಕ್ಕೆ ಹೋಗಿ ಮತ್ತೆ ಚಿತ್ರರಂಗಕ್ಕೆ ಮರಳಿದ ಚಿರಂಜೀವಿ ಒಂದೊಳ್ಳೆ ಹಿಟ್ ಸಿನಿಮಾ ನೀಡಲು ಹೆಣಗಾಡುತ್ತಿದ್ದರು. ಒಂದೆರಡು ಸಿನಿಮಾ ಬಾಕ್ಸಾಫೀಸ್ನಲ್ಲಿ ಗೆದ್ದರೂ ಸಂಪೂರ್ಣವಾಗಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಾವುದೇ ಸಿನಿಮಾ ಯಶಸ್ವಿ ಆಗಿರಲಿಲ್ಲ. ಆ ಕೊರಗನ್ನು 'ಮನ ಶಂಕರವರಪ್ರಸಾದ್ಗಾರು' ಸಿನಿಮಾ ನೀಗಿಸಿದೆ.

ನಿರ್ಮಾಪಕ ಸಾಹು ಗರಪತಿ ಜೊತೆ ಸೇರಿ ಚಿರಂಜೀವಿ ಪುತ್ರಿ ಸುಶ್ಮಿತಾ ಕೊನಿಡೇಲ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿನ್ನೆ ಹೈದರಾಬಾದ್ನಲ್ಲಿ 'ಮನ ಶಂಕರವರಪ್ರಸಾದ್ಗಾರು' ಚಿತ್ರದ ಸಕ್ಸಸ್ ಸಂಭ್ರಮಾಚರಣೆ ಮಾಡಲಾಯಿತು. ಅದಕ್ಕೂ ಮುನ್ನ ನಿರ್ದೇಶಕ ಅನಿಲ್ ರಾವಿಪುಡಿ ಅವರನ್ನು ಮನೆಗೆ ಕರೆದು ಚಿರಂಜೀವಿ ಸರ್ಪ್ರೈಸ್ ಕೊಟ್ಟಿದ್ದಾರೆ. ದುಬಾರಿ ಕಾರ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.
ಒಂದೊಳ್ಳೆ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕನಿಗೆ ರೇಂಜ್ರೋವರ್ ಸ್ಪೋರ್ಟ್ಸ್ ಕಾರ್ ಅನ್ನು ಕೊಟ್ಟಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗ್ತಿದೆ. ಈ ಮಾಡೆಲ್ ಕಾರಿನ ದರ 1.45 ಕೋಟಿ ರೂ. ಇಂದ ಆರಂಭವಾಗುತ್ತದೆ. ಈಗಾಗಲೇ ಚಿತ್ರ ನಿರ್ದೇಶನಕ್ಕೆ ಸಂಭಾವನೆ ಸಿಕ್ಕಿದ್ದರೂ ದುಬಾರಿ ಕಾರ್ ಉಡುಗೊರೆಯಾಗಿ ಸಿಕ್ಕಿದ್ದಕ್ಕೆ ಅನಿಲ್ ಸಂತಸ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಕಟ್ಟಿರುವ 9 ಸಿನಿಮಾಗಳು ಹಿಟ್ ಲಿಸ್ಟ್ ಸೇರಿರುವುದು ವಿಶೇಷ.
ಸಿನಿಮಾಗಳ ಬಗ್ಗೆ ದಿನದಿಂದ ದಿನಕ್ಕೆ ನೆಗೆಟಿವ್ ಜಾಸ್ತಿ ಆಗ್ತಿದೆ. ಸ್ಟಾರ್ ನಟರು ಎಲ್ಲರನ್ನು ಸಮಾಧಾನಪಡಿಸುವ ಸಿನಿಮಾಗಳನ್ನು ಮಾಡುವುದು ಈಗ ಸವಾಲಿನ ಕೆಲಸ. ಸ್ಟಾರ್ ನಟರನ್ನು ತೆರೆಮೇಲೆ ಸೊಗಸಾಗಿ ತೋರಿಸಿ ಪ್ರೇಕ್ಷಕರನ್ನು ಖುಷಿಪಡಿಸುವುದು ನಿರ್ದೇಶಕರಿಗೆ ಮತ್ತಷ್ಟು ಸವಾಲು ಎನಿಸಿದೆ. ಇಂತಹ ಸಮಯದಲ್ಲಿ 'ಮನ ಶಂಕರವರಪ್ರಸಾದ್ಗಾರು' ರೀತಿಯ ಫ್ಯಾಮಿಲಿ ಎಂಟರ್ಟೈನರ್ ಕೊಟ್ಟ ಅನಿಲ್ ರಾವಿಪುಡಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರ್ತಿದೆ. ಚಿತ್ರದ ಗೆಲುವಿನ ಕ್ರೆಡಿಟ್ ಅನ್ನು ನಿರ್ದೇಶಕನಿಗೆ ಕೊಟ್ಟುಬಿಟ್ಟಿದ್ದಾರೆ ಚಿರಂಜೀವಿ.
ವಿಕ್ಟರಿ ವೆಂಕಟೇಶ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಪಾತ್ರದಲ್ಲಿ ಮಿಂಚಿದ್ದಾರೆ. ಈ ಹಿಂದೆ ವೆಂಕಿ ಹಾಗೂ ಅನಿಲ್ ಕಾಂಬಿನೇಷನ್ ಸಿನಿಮಾಗಳು ಹಿಟ್ ಆಗಿದ್ದವು. ಒಳ್ಳೆ ಕಥೆ ಮಾಡಿದರೆ ಇಡೀ ಸಿನಿಮಾ ಇಬ್ಬರೂ ಒಟ್ಟಿಗೆ ತೆರೆಹಂಚಿಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ಸಾಧ್ಯವಾದರೆ ಅಂತಾದೊಂದು ಸಿನಿಮಾ ಮಾಡುವುದಾಗಿ ನಿರ್ದೇಶಕ ಅನಿಲ್ ರಾವಿಪುಡಿ ಕೂಡ ಸೈ ಎಂದಿದ್ದಾರೆ.
'ಮನ ಶಂಕರವರಪ್ರಸಾದ್ಗಾರು' ಬ್ಲಾಕ್ಬಸ್ಟರ್ ಸಕ್ಸಸ್ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ತಮಗೆ ಸರ್ಪ್ರೈಸ್ ಗಿಫ್ಟ್ ಸಿಕ್ಕ ಬಗ್ಗೆ ಅನಿಲ್ ರಾವಿಪುಡಿ ಮಾತನಾಡಿದ್ದಾರೆ. ಇವತ್ತು ಸಂಜೆ ಕಾರ್ಯಕ್ರಮ ಇತ್ತು. ಬೆಳಗ್ಗೆ ಫೋನ್ ಮಾಡಿ ಚಿರಂಜೀವಿ ಸರ್ ಮನೆಗೆ ಬರಲು ಹೇಳಿದರು. ನಾನು ಯಾಕೆ ಎಂದುಕೊಂಡು ಹೋದೆ. ಬಳಿಕ ಗಿಫ್ಟ್ ಅಂದಾಗ ಒಂದು ರೇಂಜ್ನಲ್ಲಿ ಇರುತ್ತದೆ ಎಂದುಕೊಂಡೆ. ಆದರೆ ರೇಂಜ್ರೋವರ್ ಸಿಗುತ್ತೆ ಎಂದುಕೊಂಡಿರಲಿಲ್ಲ ಎಂದು ತಿಳಿಸಿದ್ದಾರೆ.
ಸಿಂಪಲ್ ಕಥೆಯನ್ನು ಬಹಳ ಸೊಗಸಾಗಿ ತೆರೆಗೆ ತಂದು ಇಡೀ ಚಿತ್ರತಂಡ ಗೆದ್ದಿದೆ. ಗಂಡ-ಹೆಂಡತಿ ಕಾರಣಾಂತರಗಳಿಂದ ಡಿವೋರ್ಸ್ ಪಡೆದು ದೂರಾಗುತ್ತಾರೆ. ಮಕ್ಕಳ ಮೂಲಕ ಹೇಗೆ ಇಬ್ಬರೂ ಮತ್ತೆ ಒಂದಾಗುತ್ತಾರೆ ಎನ್ನುವ ಕಥೆ ಚಿತ್ರದಲ್ಲಿದೆ. ಬಹಳ ತಮಾಷೆಯಾಗಿ ಇದನ್ನು ಕಟ್ಟಿಕೊಡಲಾಗಿದೆ. ಅದು ಪ್ರೇಕ್ಷಕರಿಗೆ ಇಷ್ಟವಾಗಿದೆ.


Click it and Unblock the Notifications











