ಎಸ್ ಪಿ ಬಿಗೆ ಪದ್ಮ ವಿಭೂಷಣ; 'ಮರಣೋತ್ತರ' ಎಂದು ನೋಡಿ ದುಃಖವಾಗುತ್ತೆ ಎಂದ ಚಿರಂಜೀವಿ
ಲೆಜೆಂಡರಿ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಕೇಂದ್ರ ಸರ್ಕಾರ ಪದ್ಮವಿಭೂಷಣ ಘೋಷಿಸಿ ಗೌರವಿಸಿದೆ. 72ನೇ ವರ್ಷದ ಗಣರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ.
ದಿವಂಗತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಕಟಿಸಲಾಗಿದೆ. ಎಸ್ಪಿಬಿ ಈಗಾಗಲೇ ಪದ್ಮಶ್ರೀ, ಪದ್ಮಭೂಷಣ ಗೌರವಕ್ಕೆ ಪಾತ್ರರಾಗಿದ್ದಾರೆ. ಈಗ ಪದ್ಮವಿಭೂಷಣ ಎಸ್ಪಿಬಿ ಮುಡಿಗೇರಿದೆ.
ದಿಗ್ಗಜ ಗಾಯಕನಿಗೆ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿರುವುದಕ್ಕೆ ಅಭಮಾನಿಗಳು, ಸ್ನೇಹಿತರು ಮತ್ತು ಬೇರೆ ಬೇರೆ ಭಾಷೆಯ ಚಿತ್ರರಂಗದ ಗಣ್ಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಟ್ವೀಟ್ ಮಾಡಿ, 'ನನ್ನ ಪ್ರೀತಿಯ ಸಹೋದರ ಬಾಲುಗಾರು ಅವರಿಗೆ ಪದ್ಮ ವಿಭೂಷಣ ಘೋಷಣೆಯಾಗಿರುವುದು ತುಂಬ ಸಂತೋಷವಾಗಿದೆ. ಅವರು ಈ ಗೌರವಕ್ಕೆ ಅತ್ಯಂತ ಅರ್ಹರು. ಆದರೆ ಮರಣೋತ್ತರ ಎಂದು ನೋಡಲು ತುಂಬಾ ದುಃಖವಾಗುತ್ತೆ' ಎಂದಿದ್ದಾರೆ.

ಇನ್ನೂ ಬಗ್ಗೆ ಕನ್ನಡದ ನಟಿ ಮತ್ತು ಸಂಸದೆ ಸುಮಲತಾ ಅಂಬರೀಶ್ ಟ್ವೀಟ್ ಮಾಡಿ, 'ಸಂಗೀತ ಕ್ಷೇತ್ರದಲ್ಲಿನ ಕೊಡುಗೆಗಾಗಿ ತಾಯಿ ಶಾರದೆಯ ವರಪುತ್ರ ಶ್ರೀ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಪದ್ಮವಿಭೂಷಣ ಸಂದಿರುವುದು ಅತೀವ ಸಂತೋಷವನ್ನು ತಂದಿದೆ. ನಮ್ಮೆಲ್ಲರ ಮನಸ್ಸಿನಲ್ಲಿ ಇನ್ನೂ ಜೀವಂತ ಇರುವ ಗಾನ ಮಾಂತ್ರಿಕನಿಗೆ ಯಾವ ಪ್ರಶಸ್ತಿಯೂ ಕಡಿಮೆಯೇ. ಪ್ರಶಸ್ತಿಗೆ ಗೌರವ ಹೆಚ್ಚಿಸುವ ಪ್ರತಿಭೆ ಹಾಗೂ ವ್ಯಕ್ತಿತ್ವ ಅವರದಾಗಿತ್ತು' ಎಂದು ಸುಮಲತಾ ಟ್ವೀಟ್ ಮಾಡಿದ್ದಾರೆ.
ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ಸತತ 52 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು ಸಾವು-ಬದುಕಿನ ಮಧ್ಯೆ ಹೋರಾಡಿ, ಸೆಪ್ಟೆಂಬರ್ 25 ರಂದು ಕೊನೆ ಉಸಿರೆಳೆದಿದ್ದಾರೆ. ಕೊರೊನಾ ಸೋಂಕಿಗೆ ತುತ್ತಾಗಿದ್ದ ಎಸ್ ಪಿ ಬಿ ಆಗಸ್ಟ್ 4ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾದಿಂದ ಮುಕ್ತರಾಗಿದ್ದರೂ ಸಹ ಎಸ್ ಪಿ ಬಿ ಬದುಕುಳಿಯಲಿಲ್ಲ.


Click it and Unblock the Notifications











