'ಪೆದ್ದಿ' ಚಿತ್ರದಲ್ಲಿ ಶಿವಣ್ಣನ ನಟನೆಯನ್ನು ಹಾಡಿ ಹೊಗಳಿದ ಮೆಗಾಸ್ಟಾರ್ ಚಿರಂಜೀವಿ
ರಾಮ್ಚರಣ್ ನಟನೆಯ 'ಪೆದ್ದಿ' ಸಿನಿಮಾ ಕಲೆಕ್ಷನ್ 350 ಕೋಟಿ ರೂ. ದಾಟಿದೆ. ಈ ವರ್ಷ ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ನಟ ಚಿರಂಜೀವಿ ಸಿನಿಮಾ ನೋಡಿದ್ದಾರೆ. ಚಿತ್ರತಂಡವನ್ನು ಮನೆಗೆ ಕರೆದು ಸಂತೋಷ ಹಂಚಿಕೊಂಡಿದ್ದಾರೆ.
'ಪೆದ್ದಿ' ಸಿನಿಮಾ ಬಗ್ಗೆ ಸಂದರ್ಶನದಲ್ಲಿ ಚಿರಂಜೀವಿ ಮಾತನಾಡಿದ್ದಾರೆ. ಮಗನ ನಟನೆಯನ್ನು ಹಾಡಿ ಹೊಗಳಿಸಿದ್ದಾರೆ. ಚಿತ್ರದ ಪ್ರತಿ ಕಲಾವಿದರು, ಪ್ರತಿ ವಿಭಾಗದ ಕೆಲಸ ಹೇಗಿದೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಶಿವರಾಜ್ಕುಮಾರ್ ನಟನೆಯನ್ನು ಕೂಡ ಚಿರು ಕೊಂಡಾಡಿದ್ದಾರೆ. ಪಾತ್ರಕ್ಕೆ ತಕ್ಕ ನಟ, ಬಹಳ ಚೆನ್ನಾಗಿ ನಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿವಣ್ಣ ಆ ಪಾತ್ರವನ್ನು ಒಪ್ಪಿ ನಟಿಸ್ತೀನಿ ಎನ್ನುವುದು ದೊಡ್ಡ ಗೆಲುವು ಎಂದು ಚಿರಂಜೀವಿ ಹೇಳಿದ್ದಾರೆ. "ಅಂತಹ ಒಳ್ಳೆ ವ್ಯಕ್ತಿ, ಒಳ್ಳೆ ನಟ ಪಾತ್ರದಲ್ಲಿ ತಲ್ಲೀನರಾಗಿ ನಟಿಸಿದ್ದಾರೆ. ಚರಣ್ನ ಹಿಡಿತದಲ್ಲಿಟ್ಟುಕೊಳ್ಳಬೇಕು, ಗದರಬೇಕು, ಬೈಯ್ಯಬೇಕು ಅಂದ್ರೆ, ಅಷ್ಟು ಖಡಕ್ ಆಗಿರುವ ಒಬ್ಬ ತಂದೆಯ ರೀತಿಯ ಪಾತ್ರ ಬಹಳ ಚೆನ್ನಾಗಿದೆ. ಶಿವಣ್ಣ ಚೆನ್ನಾಗಿ ನಟಿಸಿದ್ದಾರೆ ಎಂದು ಚಿರಂಜೀವಿ ಹೇಳಿರುವುದು ವೈರಲ್ ಆಗ್ತಿದೆ.
'ಪೆದ್ದಿ' ಸಿನಿಮಾ ಬಿಡುಗಡೆಯಾದಾಗ ಚಿರಂಜೀವಿ ಬೇರೆ ಸಿನಿಮಾ ಚಿತ್ರೀಕರಣಕ್ಕಾಗಿ ಪೊಲ್ಲಾಚಿಯಲ್ಲಿ ಇದ್ದರು. ಇತ್ತೀಚೆಗೆ ಚಿತ್ರೀಕರಣ ಮುಗಿಸಿ ಬಂದು ಪತ್ನಿ ಸಮೇತ ಹೈದರಾಬಾದ್ನಲ್ಲಿ ಸಿನಿಮಾ ವೀಕ್ಷಿಸಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗಿತ್ತು. ಅಂದಹಾಗೆ ಚಿತ್ರದಲ್ಲಿ ಕುಸ್ತಿ ಉಸ್ತಾದ್ ಗೌರ್ನಾಯ್ಡು ಪಾತ್ರದಲ್ಲಿ ಶಿವರಾಜ್ಕುಮಾರ್ ಅಬ್ಬರಿಸಿದ್ದಾರೆ. 'ಪೆದ್ದಿ' ಗೆಲುವಿನ ಜರ್ನಿಯಲ್ಲಿ ಬಹುಮುಖ್ಯ ಪಾತ್ರ ವಹಿಸುವಂತೆ ಪಾತ್ರದಲ್ಲಿ ನಟಿಸಿದ್ದಾರೆ.
ಶಿವಣ್ಣ 'ಪೆದ್ದಿ' ಸಿನಿಮಾ ಪಾತ್ರ ಒಪ್ಪಿಕೊಂಡಾಗಲೇ ಅವರಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಹಾಗಾಗಿ ಸಿನಿಮಾ ಕೈಬಿಡಲು ತೀರ್ಮಾನಿಸಿದ್ದರು. ಇದೇ ಮಾತನ್ನು ಚಿತ್ರತಂಡಕ್ಕೂ ಹೇಳಿದ್ದರು. ಬೇರೆ ಯಾರಾನ್ನಾದರೂ ಈ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಿ ಎಂದಿದ್ದರು. ಆದರೆ ನೀವೇ ನಟಿಸಬೇಕು, ನಾವು ಕಾಯ್ತೀವಿ ಎಂದು ಬುಚ್ಚಿಬಾಬು ಕಾದು ಸಿನಿಮಾ ಚಿತ್ರೀಕರಣ ಮಾಡಿದ್ದರು.
ತೆಲುಗು ಪ್ರೇಕ್ಷಕರು ಕೂಡ ಶಿವಣ್ಣನ ನಟನೆಗೆ ಬಹುಪರಾಕ್ ಎನ್ನುತ್ತಿದ್ದಾರೆ. ರಾಮ್ಚರಣ್ ಬಿಟ್ಟರೆ ಚಿತ್ರದಲ್ಲಿ ಹೆಚ್ಚು ಅವಕಾಶ ಇರುವುದು ಶಿವಣ್ಣ ಮಾಡಿರುವ ಗೌರ್ನಾಯ್ಡು ಪಾತ್ರಕ್ಕೆ. ಉಸ್ತಾದ್ ಆಗಿ ಬಹಳ ಗಂಭೀರವಾದ ಪಾತ್ರದಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಮುಂದೆ ಮತ್ತಷ್ಟು ತೆಲುಗು ಸಿನಿಮಾ ಅವಕಾಶಗಳು ಅವರನ್ನು ಹುಡುಕಿ ಬರುವುದರಲ್ಲಿ ಎರಡು ಮಾತಿಲ್ಲ.
'ಜೈಲರ್' ಚಿತ್ರದ ನರಸಿಂಹ ಪಾತ್ರದಿಂದಲೇ ಶಿವಣ್ಣ ತೆಲುಗು ಪ್ರೇಕ್ಷಕರ ಗಮನ ಸೆಳೆದಿದ್ದರು. ಹಾಗಾಗಿ ಅವಕಾಶಗಳು ಬರಲು ಆರಂಭಿಸಿತ್ತು. 'ಪೆದ್ದಿ' ಬಿಟ್ಟರೆ 'ಗುಮ್ಮಡಿ ನರಸಯ್ಯ' ಎಂಬ ಮತ್ತೊಂದು ಚಿತ್ರದಲ್ಲಿ ಹೀರೊ ಆಗಿ ನಟಿಸುತ್ತಿದ್ದಾರೆ. ಈ ಬಯೋಪಿಕ್ ಸಿನಿಮಾ ಮೂಲಕ ಟಾಲಿವುಡ್ನಲ್ಲಿ ಶಿವಣ್ಣ ಹೀರೊ ಆಗುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಕೂಡ ಆರಂಭವಾಗಿದೆ. ಸರಳ ಸಜ್ಜನ ವ್ಯಕ್ತಿತ್ವದಿಂದ ಜನಪ್ರಿಯರಾದ ಆಂಧ್ರದ ಶಾಸಕ ನರಸಯ್ಯ ಅವರ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಚಿರಂಜೀವಿ ಹಾಗೂ ಡಾ. ರಾಜ್ಕುಮಾರ್ ಕುಟುಂಬದ ನಡುವೆ ಮೊದಲಿನಿಂದ ಒಳ್ಳೆ ಒಡನಾಟ ಇದೆ. ಅಣ್ಣಾವ್ರ ದೊಡ್ಡ ಅಭಿಮಾನಿ ಚಿರು. ಇದೀಗ ಅವರ ಮಗನ ಚಿತ್ರದಲ್ಲಿ ಶಿವಣ್ಣ ನಟಿಸಿರುವುದು ವಿಶೇಷ.


Click it and Unblock the Notifications