ಯುವ ನಟರನ್ನು ಸಭೆಗೆ ಕರೆದ ಮೆಗಾಸ್ಟಾರ್ ಚಿರಂಜೀವಿ
ಕೊರೊನಾ ಹೊಡೆತಕ್ಕೆ ಸಿಕ್ಕಿ ದೇಶದ ಚಿತ್ರರಂಗ ತತ್ತರಿಸಿದೆ. ಅದರಲ್ಲಿ ತೆಲುಗು ಸಿನಿಮಾ ಉದ್ಯಮವೂ ಒಂದು. ತತ್ತರಿಸಿರುವ ಚಿತ್ರರಂಗಕ್ಕೆ ನೆರವು ಕೊಡಿಸಲೆಂದು ಮೆಗಾಸ್ಟಾರ್ ಚಿರಂಜೀವಿ ಶತಪ್ರಯತ್ನ ಮಾಡುತ್ತಿದ್ದಾರೆ.
ಚಿರಂಜೀವಿ ಈಗಾಗಲೇ ತೆಲಂಗಾಣ ಹಾಗೂ ಆಂಧ್ರಪ್ರದೇಶದ ಸಿಎಂಗಳಾದ ಕೆಸಿಆರ್ ಹಾಗೂ ಜಗಮ್ ಮೋಹನ್ ರೆಡ್ಡಿ ಅವರನ್ನು ಕೆಲವು ಭಾರಿ ಭೇಟಿ ಮಾಡಿ ತೆಲುಗು ಚಿತ್ರರಂಗಕ್ಕೆ ಬೇಕಾದ ಅಗತ್ಯ ನೆರವು ನೀಡಲು ಮನವಿ ಮಾಡಿದ್ದಾರೆ.
ಟಿಕೆಟ್ ದರ ಪರೀಕ್ಷರಣೆ, ಚಿತ್ರಮಂದಿರಗಳ ತೆರಿಗೆ ವಿನಾಯಿತಿ, ಸ್ಟುಡಿಯೋಗಳಿಗೆ ತೆರಿಗೆ ವಿನಾಯಿತಿ, ಚಿತ್ರೀಕರಣ ಅನುಮತಿ ಸರಳೀಕರಣ ಇನ್ನಿತರೆ ಬೇಡಿಕೆಗಳನ್ನು ಚಿರಂಜೀವಿ ಎರಡೂ ರಾಜ್ಯದ ಸಿಎಂಗಳ ಮುಂದೆ ಇಟ್ಟಿದ್ದಾರೆ.

ಇದೀಗ ಜಗನ್ ಮೋಹನ್ ರೆಡ್ಡಿ ಜೊತೆಗೆ ಮತ್ತೆ ಸಭೆ ಆಯೋಜಿತವಾಗಿದ್ದು ಈ ಸಭೆಗೆ ತೆಲುಗು ಚಿತ್ರರಂಗದ ಪ್ರಚಲಿತ ಯುವ ನಾಯಕ ನಟರನ್ನು ಚಿರಂಜೀವಿ ಆಹ್ವಾನಿಸಿದ್ದಾರೆ. ಪ್ರಭಾಸ್, ಅಲ್ಲು ಅರ್ಜುನ್, ರಾಮ್ ಚರಣ್ ತೇಜ, ಜೂ.ಎನ್ಟಿಆರ್, ಮಹೇಶ್ ಬಾಬು ಇನ್ನೂ ಹಲವು ನಾಯಕ ನಟರನ್ನು ಜಗನ್ ಮೋಹನ್ ರೆಡ್ಡಿ ಜೊತೆಗಿನ ಸಭೆಗೆ ಚಿರಂಜೀವಿ ಆಹ್ವಾನಿಸಿದ್ದಾರೆ.
ಈಗಾಗಲೇ ಚಿರಂಜೀವಿ ತಮ್ಮೊಟ್ಟಿಗೆ ನಾಗಾರ್ಜುನ, ರಾಘವೇಂದ್ರ, ತ್ರಿವಿಕ್ರಮ್, ದಿಲ್ ರಾಜು ಇನ್ನೂ ಅನೇಕ ಹಿರಿಯ ನಿರ್ಮಾಪಕರು, ನಿರ್ದೇಶಕರನ್ನು ನಿಯೋಗ ಮಾಡಿಕೊಂಡು ಸಿಎಂ ಅವರುಗಳನ್ನು ಭೇಟಿ ಮಾಡಿದ್ದರು. ಈಗ ಸ್ಟಾರ್ ನಾಯಕ ನಟರನ್ನು ನಿಯೋಗದಲ್ಲಿ ಕೊಂಡೊಯ್ಯಲು ಚಿರಂಜೀವಿ ನಿರ್ಧರಿಸಿದ್ದಾರೆ.
ಸೆಪ್ಟೆಂಬರ್ 20 ರಂದು ಜಗನ್ ಮೋಹನ್ ರೆಡ್ಡಿ ಜೊತೆಗೆ ಸಭೆ ನಡೆಯಲಿದ್ದು, ಸಭೆಯಲ್ಲಿ ತೆಲುಗಿನ ಸ್ಟಾರ್ ನಾಯಕ ನಟರು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಚಿತ್ರರಂಗದ ಬೇಡಿಕೆಗಳನ್ನು ಈಡೇರಿಸುವಂತೆ ಜಗನ್ ಮೇಲೆ ಒತ್ತಡ ಹೇರಲಿದ್ದಾರೆ.
ತೆಲಂಗಾಣ ಸಿಎಂ ಕೆಸಿಆರ್, ಮೆಗಾಸ್ಟಾರ್ ಮಾಡಿದ ಮನವಿಗಳಿಗೆ ಬಹುತೇಕ ಒಪ್ಪಿಗೆ ನೀಡಿದ್ದಾರೆ, ಆದರೆ ಜಗನ್ ಮೋಹನ್ ರೆಡ್ಡಿ ಪೂರ್ಣ ಪ್ರಮಾಣದಲ್ಲಿ ಒಪ್ಪಿಗೆ ನೀಡಿಲ್ಲ. ಅದರಲ್ಲೂ ವಿಶೇಷವಾಗಿ ಟಿಕೆಟ್ ಬೆಲೆ ವಿಚಾರದಲ್ಲಿ ಜಗನ್ ಮೋಹನ್ ರೆಡ್ಡಿ ಅಸಮಾಧಾನ ಹೊಂದಿದ್ದಾರೆ. ಹಾಗಾಗಿಯೇ ಹೊಸ ಪೋರ್ಟಲ್ ಒಂದನ್ನು ಬಿಡುಗಡೆ ಮಾಡುತ್ತಿದ್ದು ಆ ಪೋರ್ಟಲ್ ಮೂಲಕವೇ ರಾಜ್ಯದ ಎಲ್ಲ ಚಿತ್ರಮಂದಿರಗಳು ಟಿಕೆಟ್ ವಿತರಣೆ ಮಾಡುವಂತೆ ಸೂಚಿಸಲಾಗುತ್ತಿದೆ. ಇದರಿಂದ ಎಷ್ಟು ಟಿಕೆಟ್ ಮಾರಾಟವಾಗುತ್ತದೆ, ಎಷ್ಟು ಲಾಭವಾಗುತ್ತದೆ ಎಂಬ ಮಾಹತಿ ಸರ್ಕಾರಕ್ಕೆ ಲಭಿಸುತ್ತದೆ ಅದರ ನಂತರ ಟಿಕೆಟ್ ಬೆಲೆ ಏರಿಸಬೇಕೊ, ಇಳಿಸಬೇಕೊ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.


Click it and Unblock the Notifications











