ಚಿರಂಜೀವಿ ಜನಸೇನಾ ಪಕ್ಷ ಸೇರ್ಪಡೆ ಬಗ್ಗೆ ಪವನ್ ಕಲ್ಯಾಣ್ ಪ್ರತಿಕ್ರಿಯೆ
ನಟ ಚಿರಂಜೀವಿ ಜನಸೇನಾ ಪಕ್ಷ ಸೇರ್ಪಡೆಗೊಳ್ಳುತ್ತಾರೆ ಎಂಬ ಸುದ್ದಿ ಕೆಲ ದಿನಗಳಿಂದಲೂ ಗಟ್ಟಿಯಾಗಿ ಹರಿದಾಡುತ್ತಿದೆ.
ಜಿರಂಜೀವಿ ಜನಸೇನಾ ಪಕ್ಷ ಸೇರುತ್ತಾರೆ ಎಂಬ ಸುದ್ದಿ ಹರಿದಾಡಲು ಕಾರಣ, ಜನಸೇನಾ ಪಕ್ಷದ ಖಾಸಗಿ ಸಭೆಯೊಂದರ ವಿಡಿಯೋ ವೈರಲ್ ಆಗಿರುವುದು.
ಜನಸೇನಾ ಮುಖಂಡರ ಸಭೆಯಲ್ಲಿ ಮಾತನಾಡಿರುವ ಪವನ್ ಕಲ್ಯಾಣ್ ಆಪ್ತ ಹಾಗೂ ಜನಸೇನಾ ಪಕ್ಷದ ಪ್ರಮುಖ ಮುಖಂಡ ನಾದೆಂಡ್ಲ ಮನೋಹರ್, 'ಚಿರಂಜೀವಿ ಶೀಘ್ರದಲ್ಲಿಯೇ ಪಕ್ಷಕ್ಕೆ ಬರುತ್ತಾರೆ' ಎಂದಿದ್ದಾರೆ.

'ನಾನು (ನಾದೆಂಡ್ಲ ಮನೋಹರ್), ಪವನ್ ಕಲ್ಯಾಣ್, ಚಿರಂಜೀವಿ ಒಟ್ಟಿಗೆ ಕೂತು ಮಾತನಾಡಿದೆವು. 'ನೀನು ಇನ್ನೂ ಎರಡು ವರ್ಷ ಸಿನಿಮಾ ಮಾಡು ನಂತರ ಪೂರ್ಣವಾಗಿ ರಾಜಕೀಯಕ್ಕೆ ಇಳಿ, ನಿನಗೆ ನನ್ನ ಬೆಂಬಲ ಸದಾ ಇರುತ್ತದೆ' ಎಂದು ಚಿರಂಜೀವಿ ಅವರು ಪವನ್ ಕಲ್ಯಾಣ್ ಗೆ ಹೇಳಿದರು' ಎಂದು ನಾದೆಂಡ್ಲ ಮನೋಹರ್ ವಿಡಿಯೋದಲ್ಲಿ ಹೇಳಿದ್ದಾರೆ.
ಈ ಬಗ್ಗೆ ಪವನ್ ಕಲ್ಯಾಣ್ ಸಹ ಮಾತನಾಡಿದ್ದು, 'ರಾಜಕೀಯ ವಿಷಯದಲ್ಲಿ ಚಿರಂಜೀವಿ ಅವರ ಬೆಂಬಲ ನನಗೆ ಸದಾ ಇರುತ್ತದೆ. ಚಿರಂಜೀವಿ ಎಲ್ಲರಿಗೂ ಒಳಿತು ಭಯಸುವ ವ್ಯಕ್ತಿ. ಚಿರಂಜೀವಿ ಅವರು ಜನಸೇನಾ ಪಕ್ಷವನ್ನು ಯಾವಾಗ ಸೇರಿಕೊಳ್ಳುತ್ತಾರೆ ಎಂಬುದನ್ನು ನಾನು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಅವರು ಪಕ್ಷಕ್ಕೆ ಬರಲಿ, ಬರದೇ ಇರಲಿ, ಅವರ ಬೆಂಬಲ ನನಗೆ ಸದಾ ಇರುತ್ತದೆ' ಎಂದಿದ್ದಾರೆ ಪವನ್ ಕಲ್ಯಾಣ್.
ಚಿರಂಜೀವಿ ಈ ಹಿಂದೆ 'ಪ್ರಜಾರಾಜ್ಯಂ' ಹೆಸರಿನ ಪಕ್ಷ ಸ್ಥಾಪಿಸಿದ್ದರು. ನಂತರ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಿ , ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿ ಕೇಂದ್ರ ಮಂತ್ರಿಯೂ ಆಗಿದ್ದಾರೆ. ಆದರೆ ಕೆಲವು ವರ್ಷಗಳಿಂದಲೂ ಅವರು ಕಾಂಗ್ರೆಸ್ ಹಾಗೂ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದಾರೆ.


Click it and Unblock the Notifications











