"ಒಂದೆರಡು ಲಕ್ಷ ಕೊಡ್ತಾರೆ ಅಂದ್ಕೊಂಡೆ ಆದ್ರೆ ಅಣ್ಣ ಏನು ಹೇಳಿದ್ರು ಗೊತ್ತಾ?": ಪೊನ್ನಾಂಬಳಂ ಭಾವುಕ
ಕಷ್ಟದಲ್ಲಿರುವವರಿಗೆ ತೆಲುಗು ನಟ ಚಿರಂಜೀವಿ ಸಹಾಯ ಮಾಡುತ್ತಿದ್ದಾರೆ. ಆದ್ರೆ ಬಲಗೈಯಲ್ಲಿ ಮಾಡಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುವಂತೆ ಇದ್ದು ಬಿಡುತ್ತಾರೆ. ಟಾಲಿವುಡ್ ಮೆಗಾಸ್ಟಾರ್ ಸಹಾಯದಿಂದ ಮರುಹುಟ್ಟು ಪಡೆದೆ ಎಂದು ತಮಿಳು ಖಳನಟ ಪೊನ್ನಾಂಬಳಂ ಹೇಳಿದ್ದಾರೆ. ತಮಿಳು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ವಿಚಾರ ಈಗ ವೈರಲ್ ಆಗಿದೆ.
ತಮಿಳು ನಟ ಪೊನ್ನಾಂಬಳಂ ಕೆಲ ದಿನಗಳ ಹಿಂದೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ತನಗೆ ಆರ್ಥಿಕ ಸಹಾಯ ಬೇಕು ಎಂದು ಮನವಿ ಕೂಡ ಮಾಡಿಕೊಂಡಿದ್ದರು. ಕೆಲವರು ಸಹಾಯ ಮಾಡಿದ್ದರು. ಆದರೆ ಅದೆಲ್ಲಾ ಅವರ ವೈದ್ಯಕೀಯ ವೆಚ್ಚಕ್ಕೆ ಸಾಕಾಗಲಿಲ್ಲ. ಈಗ ಪೊನ್ನಾಂಬಳಂ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿರುವ ಪೊನ್ನಾಂಬಳಂ ತೆಲುಗು ನಟ ಚಿರಂಜೀವಿ ಅವರ ಸಹಾಯದಿಂದ ನನಗೆ ಚಿಕಿತ್ಸೆ ದೊರೆಯಿತು. ತಮ್ಮ ಸ್ನೇಹಿತರ ಮೂಲಕ ಪೊನ್ನಾಂಬಳಂ ಚಿರಂಜೀವಿ ಫೋನ್ ನಂಬರ್ ಪಡೆದಿದ್ದರಂತೆ.

"ಅಣ್ಣಯ್ಯ ನಾನು ಪೊನ್ನಾಂಬಳಂ. ನನ್ನ ಆರೋಗ್ಯ ಚೆನ್ನಾಗಿಲ್ಲ. ಕೈಲಾದಷ್ಟು ಸಹಾಯ ಮಾಡಿ' ಎಂದು ಮೆಸೇಜ್ ಮಾಡಿ ರಿಕ್ವೆಸ್ಟ್ ಮಾಡಿದ್ದೆ. ಹತ್ತು ನಿಮಿಷಗಳ ನಂತರ ಅಣ್ಣಯ್ಯನಿಂದ ಫೋನ್ ಬಂತು. ಹಾಯ್ ಪೊನ್ನಾಂಬಳಂ. ಏನಾಯಿತು? ಆರೋಗ್ಯ ಸರಿ ಇಲ್ಲವೇ? ಹೈದರಾಬಾದ್ಗೆ ಬರೋಕೆ ಸಾಧ್ಯವೇ ಚಿಕಿತ್ಸೆ ಕೊಡಿಸುತ್ತೇನೆ ಎಂದು ಕೇಳಿದರು. ನಾನು ಬರಲಾಗದ ಪರಿಸ್ಥಿತಿಯಲ್ಲಿ ಇದ್ದೇನೆ ಎಂದು ಹೇಳಿದ್ದೆ. ಹಾಗಾದರೆ ಕೂಡಲೇ ಚೆನ್ನೈ ಅಪೋಲೋ ಆಸ್ಪತ್ರೆಗೆ ಹೋಗು. ನಾನು ಎಲ್ಲವನ್ನು ನೋಡಿಕೊಳ್ಳುತ್ತೇನೆ ಎಂದರು. ನಾನು 1 ಲಕ್ಷ, 2 ಲಕ್ಷ ಸಹಾಯ ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ ಇಷ್ಟು ನನಗೆ ಮರುಜನ್ಮ ಕೊಡುತ್ತಾರೆ ಎಂದುಕೊಂಡಿರಲಿಲ್ಲ" ಎಂದು ಪನ್ನಾಂಬಳಂ ಹೇಳಿದ್ದಾರೆ.
"ನಾನು ಆಸ್ಪತ್ರೆಗೆ ಹೋದರೆ ಕನಿಷ್ಠ ನನ್ನ ಪ್ರವೇಶ ಶುಲ್ಕ ಕೂಡ ಕೇಳಲಿಲ್ಲ. ಎಲ್ಲವನ್ನು ಅವರೇ ನೋಡಿಕೊಂಡು ಚಿಕಿತ್ಸೆ ನೀಡಿದರು. ನನ್ನ ಚಿಕಿತ್ಸೆಗೆ 45 ಲಕ್ಷ ರೂ. ವೆಚ್ಚವಾಯಿತು. ಅಷ್ಟೂ ಮೊತ್ತವನ್ನು ಚಿರಂಜೀವಿ ಅಣ್ಣಯ್ಯ ಭರಿಸಿದರು ಎನ್ನುತ್ತಾ ಪೊನ್ನಾಂಬಳಂ ಭಾವುಕರಾಗಿದ್ದಾರೆ. ಆ ಆಸ್ಪತ್ರೆ ರಾಮ್ಚರಣ್ ಅವರ ಪತ್ನಿ ಉಪಾಸನಾ ಅವರದ್ದು. ಹಾಗಾಗಿ ಬಹಳ ಚೆನ್ನಾಗಿ ನೋಡಿಕೊಂಡರು" ಎಂದು ಪೊನ್ನಾಂಬಳಂ ವಿವರಿಸಿದ್ದಾರೆ. ಪೊನ್ನಾಂಬಳಂ ಮಾತುಗಳನ್ನು ಕೇಳಿ ಮೆಗಾ ಫ್ಯಾನ್ಸ್ ಖುಷಿಯಾಗಿದ್ದಾರೆ. ತಮ್ಮ ನೆಚ್ಚಿನ ನಟನ ಸಹಾಯವನ್ನು ಕೊಂಡಾಡುತ್ತಿದ್ದಾರೆ.

ಚಿರಂಜೀವಿ ನಟಿಸಿದ 'ಮುಗ್ಗರು ಮೊನಗಾಳ್ಳು', 'ಘರಾನಾ ಮೊಗುಡು', 'ಮೆಕಾನಿಕ್ ಅಲ್ಲುಡು', 'ಹಿಟ್ಲರ್' ಮುಂತಾದ ಚಿತ್ರಗಳಲ್ಲಿ ಪೊನ್ನಾಂಬಳಂ ನಟಿಸಿದ್ದಾರೆ. 90ರ ದಶಕದಲ್ಲಿ ಬಹಳ ಕ್ರೂರವಾಗಿ ಕಾಣುತ್ತಿದ್ದ, ನಾಯಕ ನಟರ ಎದುರು ಅಬ್ಬರಿಸುತ್ತಿದ್ದ ಖಳನಟರಲ್ಲಿ ಪೊನ್ನಾಂಬಳಂ ಕೂಡ ಒಬ್ಬರಾಗಿದ್ದರು. ದಕ್ಷಿಣ ಭಾರತದ ಎಲ್ಲ ಭಾಷೆಗಳ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಚಿರಂಜೀವಿ ಇದೇ ರೀತಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಚಿರಂಜೀವಿ ಬ್ಲಡ್ ಬ್ಯಾಂಕ್, ಐ ಬ್ಯಾಂಕ್ ಸ್ಥಾಪಿಸಿ ರಕ್ತದಾನ, ನೇತ್ರದಾನಕ್ಕೆ ಎಲ್ಲರನ್ನು ಪ್ರೇರೇಪಿಸುತ್ತಿದ್ದಾರೆ.
'ವಾಲ್ತೇರು ವೀರಯ್ಯ' ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಚಿರಂಜೀವಿ ಈಗ 'ಭೋಳಾ ಶಂಕರ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಇನ್ನು ಮೂರ್ನಾಲ್ಕು ಸಿನಿಮಾಗಳನ್ನು ಮೆಗಾಸ್ಟಾರ್ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಚಿರಂಜೀವಿ ನಟನೆಯ 'ಗ್ಯಾಂಗ್ ಲೀಡರ್' ಸಿನಿಮಾ ಹೊಸ ರೂಪದಲ್ಲಿ ರೀ ರಿಲೀಸ್ ಆಗಿತ್ತು. ಮತ್ತೊಂದು ಕಡೆ ಪುತ್ರ ರಾಮ್ ಚರಣ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ.


Click it and Unblock the Notifications










