ಬಾಲಿವುಡ್ ಮಂದಿ ಮಾಡಿದ್ದ ಅವಮಾನ ನೆನಪಿಸಿಕೊಂಡ ಚಿರಂಜೀವಿ
ಮೆಗಾಸ್ಟಾರ್ ಚಿರಂಜೀವಿ ಭಾರತದ ಬಹುದೊಡ್ಡ ನಟರಲ್ಲಿ ಒಬ್ಬರು. ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರು.
ದಕ್ಷಿಣ ಭಾರತದ ಚಿತ್ರರಂಗವನ್ನು ಜೀವಂತವಾಗಿಟ್ಟವರಲ್ಲಿ, ದಕ್ಷಿಣ ಭಾರತ ಚಿತ್ರರಂಗದಲ್ಲಿ ಮನ್ನಣೆ ಧಕ್ಕಿಸಿಕೊಡುವಲ್ಲಿ ನಟ ಚಿರಂಜೀವಿ ಪಾತ್ರವೂ ಇದೆ.
150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಚಿರಂಜೀವಿ ಯಾವುದೇ ಗಾಡ್ಫಾದರ್ಗಳಿಲ್ಲದೆ ಸ್ವಂತ ಶ್ರಮದಿಂದ ಸಿನಿಮಾ ರಂಗಕ್ಕೆ ಬಂದವರು. ಆರಂಭದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿ ಇಂದು ಇರುವ ಹಂತಕ್ಕೆ ಏರಿರುವ ನಟ ಚಿರಂಜೀವಿ.
ಇದೀಗ ಚಿರಂಜೀವಿ ನಟಿಸಿರುವ 'ಆಚಾರ್ಯ' ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾ ಸಂಬಂಧಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಚಿರಂಜೀವಿ, ತಾವು ಅನುಭವಿಸಿದ ಅವಮಾನದ ಕುರಿತು ಮಾತನಾಡಿದರು.

ನರ್ಗಿಸ್ ದತ್ ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಅವಮಾನ
1989ರಲ್ಲಿ 'ರುದ್ರವೀಣ' ಸಿನಿಮಾಕ್ಕೆ ಚಿರಂಜೀವಿ ಅವರಿಗೆ ನರ್ಗಿಸ್ ದತ್ ಪ್ರಶಸ್ತಿ ದೊರಕಿತ್ತು, ಪ್ರಶಸ್ತಿ ವಿತರಣೆ ಸಮಾರಂಭಕ್ಕೆ ಮುಂಬೈಗೆ ಹೋಗಿದ್ದರು ಚಿರಂಜೀವಿ. ಅಲ್ಲಿ ಭಾರತೀಯ ಚಿತ್ರರಂಗದ ಇತಿಹಾಸ ಹೇಳುವ ಚಿತ್ರಗಳ ಪ್ರದರ್ಶನ ಆಯೋಜಿಸಲಾಗಿತ್ತು, ಚಿರಂಜೀವಿ ಸಹ ಉತ್ಸಾಹದಿಂದ ನಮ್ಮ ಚಿತ್ರರಂಗದ ಯಾವ ತಾರೆಯ ಚಿತ್ರಗಳು ಇವೆಯೆಂದು ನೋಡಲು ಹೋದರು, ಆದರೆ ಅಲ್ಲಿ ಅವರಿಗೆ ನಿರಾಸೆ ಕಾದಿತ್ತು.

''ಡಾ.ರಾಜ್ಕುಮಾರ್, ವಿಷ್ಣುವರ್ಧನ್, ಎನ್ಟಿಆರ್ ಚಿತ್ರಗಳು ಇರಲಿಲ್ಲ''
''ಭಾರತೀಯ ಚಿತ್ರರಂಗದ ಇತಿಹಾಸ ಸಾರುವ ಚಿತ್ರ ಪ್ರದರ್ಶನದಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಚಿತ್ರಗಳು ಇದ್ದಿದ್ದು ಬೆರಳೆಣಿಕೆಯಷ್ಟು ಮಾತ್ರ. ಜಯಲಲಿತಾ ಹಾಗೂ ಎಂಜಿಆರ್ ಡ್ಯಾನ್ಸ್ ಮಾಡುತ್ತಿರುವ ಒಂದೆರಡು ಚಿತ್ರಗಳನ್ನು ಹಾಕಿ ದಕ್ಷಿಣ ಭಾರತ ಚಿತ್ರರಂಗ ಎಂದು ಬರೆಯಲಾಗಿತ್ತು. ಕನ್ನಡ ಕಂಠೀರವ ಡಾ ರಾಜ್ಕುಮಾರ್, ವಿಷ್ಣುವರ್ಧನ್ ಅವರ ಚಿತ್ರಗಳಾಗಲಿ ಇರಲಿಲ್ಲ. ನಾವೆಲ್ಲ ದೇವರಂತೆ ಕಾಣುವ ಎನ್ಟಿಆರ್, ನಾಗೇಶ್ವರ್ ರಾವ್ ಚಿತ್ರಗಳು ಇರಲಿಲ್ಲ. ಶಿವಾಜಿ ಗಣೇಶನ್ ಅವರ ಚಿತ್ರಗಳು ಸಹ ಅಲ್ಲಿ ಇರಲಿಲ್ಲ. ಅದನ್ನು ನೋಡಿ ನನಗೆ ಬಹಳ ಬೇಸರ ಅವಮಾನ ಎನಿಸಿತು'' ಎಂದು ನೆನಪು ಮಾಡಿಕೊಂಡಿದ್ದಾರೆ ಚಿರಂಜೀವಿ.

ಆಗಲೇ ಪತ್ರಿಕಾಗೋಷ್ಠಿ ಮಾಡಿ ಪ್ರಶ್ನೆ ಮಾಡಿದೆ: ಚಿರಂಜೀವಿ
''ನಾನು ಮುಂಬೈನಿಂದ ಬಂದ ಕೂಡಲೇ ಇಲ್ಲಿ ಒಂದು ಪತ್ರಿಕಾಗೋಷ್ಠಿ ಮಾಡಿದೆ. ಭಾರತೀಯ ಚಿತ್ರರಂಗ ಎಂದರೆ ಬಾಲಿವುಡ್ ಮಾತ್ರ ಎಂಬಂತೆ ಬಿಂಬಿಸಲಾಗುತ್ತಿದೆ. ದಕ್ಷಿಣ ಭಾರತದ ಸಿನಿಮಾಗಳನ್ನು ಪ್ರಾಂಥೀಯ ಸಿನಿಮಾಗಳೆಂದು ಅಗೌರವ ಮಾಡಲಾಗುತ್ತಿದೆ ಎಂದು ಆರೋಪಿಸಿದೆ. ನನ್ನ ಪ್ರಶ್ನೆಗಳಿಗೆ ಯಾರೂ ಉತ್ತರ ನೀಡಲಿಲ್ಲ. ಆದರೆ ಇಂದು ನನಗೆ ಬಹಳ ಹೆಮ್ಮೆ ಆಗುತ್ತಿದೆ. 'ಬಾಹುಬಲಿ', 'RRR' ಅಂಥಹಾ ಸಿನಿಮಾಗಳು ದಕ್ಷಿಣ ಭಾರತದ ಸಿನಿಮಾಗಳನ್ನು ವಿಶ್ವಮಟ್ಟಕ್ಕೆ ಕೊಂಡು ಹೋಗಿವೆ. ಇಂಥಹಾ ಅದ್ಭುತ ಸಿನಿಮಾಗಳನ್ನು ತೆಗೆದ ನಿರ್ದೇಶಕ ನಮ್ಮ ತೆಲುಗಿನವರು ಎಂಬ ಹೆಮ್ಮೆಯೂ ಇದೆ'' ಎಂದಿದ್ದಾರೆ ಚಿರಂಜೀವಿ.

ಬಾಲಿವುಡ್ಗೆ ಪೈಪೋಟಿ ನೀಡುತ್ತಲೇ ಬಂದಿರುವ ಚಿರು
ನಟ ಚಿರಂಜೀವಿ ಮೊದಲಿನಿಂದಲೂ ಬಾಲಿವುಡ್ ಸಿನಿಮಾಗಳಿಗೆ ಪೈಪೋಟಿ ನೀಡುತ್ತಲೇ ಬಂದಿರುವ ನಟ. ಆಗಿನ ಕಾಲಕ್ಕೆ ತೆಲುಗು ಚಿತ್ರರಂಗದ ಮಾರುಕಟ್ಟೆ ವಿಸ್ತಾರಗೊಳಿಸುವಲ್ಲಿ ಚಿರಂಜೀವಿ ಪಾತ್ರ ಬಹಳ ದೊಡ್ಡದು. ಬಾಲಿವುಡ್ ಮಂದಿ ತಿರುಗಿ ನೋಡುವಂತೆ ಒಂದರ ಹಿಂದೊಂದರಂತೆ ಸೂಪರ್ ಹಿಟ್ ಸಿನಿಮಾಗಳನ್ನು ಚಿರು ನೀಡಿದ್ದರು. ಅವರ ಸಿನಿಮಾಗಳು ಬಾಲಿವುಡ್ ಸಿನಿಮಾಗಳಿಗಿಂತಲೂ ಹೆಚ್ಚು ಕಲೆಕ್ಷನ್ ಮಾಡುತ್ತಿದ್ದವು. ಒಂದು ಕಾಲದಲ್ಲಿ ನಟ ಅಮಿತಾಬ್ ಬಚ್ಚನ್ಗಿಂತಲೂ ಹೆಚ್ಚಿನ ಸಂಭಾವನೆಯನ್ನು ಚಿರಂಜೀವಿ ಪಡೆಯುತ್ತಿದ್ದರು. ಹೈದರಾಬಾದ್ನಲ್ಲಿ ಹಿಂದಿ ಸಿನಿಮಾಗಳ ಅಬ್ಬರ ತಗ್ಗಿಸುವಲ್ಲಿ ಸಹ ಚಿರಂಜೀವಿ ಮಹತ್ವದ ಪಾತ್ರ ವಹಿಸಿದ್ದಾರೆ.


Click it and Unblock the Notifications










