ಹನುಮ ಜಯಂತಿ ದಿನ ಚಿರಂಜೀವಿ ಮನೆಯಲ್ಲಿ ನಡೆದ ಪವಾಡ; ವಿಡಿಯೋ ಸಮೇತ ವಿವರಿಸಿದ ನಟ
ತೆಲುಗು ನಟ ಮೆಗಾಸ್ಟಾರ್ ಚಿರಂಜೀವಿ ಹನುಮಂತನ ಪರಮಭಕ್ತ. ಕುಟುಂಬದಲ್ಲಿ ಎಲ್ಲರಿಗೂ ಹನುಮನೇ ಇಷ್ಟದೈವ. ಮಕ್ಕಳು, ಮೊಮ್ಮಕ್ಕಳಿಗೆ ಹನುಮಂತನ ಹೆಸರನ್ನು ಚಿರು ಇಟ್ಟಿದ್ದಾರೆ. ಈ ಬಾರಿ ಹನುಮ ಜಯಂತಿ ಸಮಯದಲ್ಲಿ ತಮ್ಮ ಮನೆಯಲ್ಲಿ ಒಂದು ಅದ್ಭುತ ನಡೆದಿದೆ ಎಂದು ವೀಡಿಯೋ ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟ ಚಿರಂಜೀವಿ ಆಗಾಗ್ಗೆ ಪೋಸ್ಟ್ ಮಾಡುತ್ತಿದ್ದಾರೆ. ಹಬ್ಬದ ಸಮಯದಲ್ಲಿ ಶುಭಾಶಯ ಕೋರುತ್ತಾರೆ. ಮನೆಯ ವಿಶೇಷ ಸಂದರ್ಭಗಳ ಫೋಟೊ, ವೀಡಿಯೋ ಹಂಚಿಕೊಳ್ಳುತ್ತಾರೆ. ಹನುಮ ಜಯಂತಿ ದಿನ ಮನೆಯ ದೇವರಕೋಣೆಯಲ್ಲಿರುವ ಹನುಮಂತನ ಮೂರ್ತಿಗೆ ಸೂರ್ಯ ರಶ್ಮಿ ಸ್ಪರ್ಶಿಸಿರುವ ವೀಡಿಯೋವನ್ನು ಚಿರು ಪೋಸ್ಟ್ ಮಾಡಿದ್ದಾರೆ.

ವೀಡಿಯೋ ಹಿನ್ನೆಲೆಯಲ್ಲಿ ಚಿರು ಮಾತನಾಡಿದ್ದಾರೆ. "ಹನುಮ ಜಯಂತಿ ಸಂದರ್ಭದಲ್ಲಿ ನಮ್ಮ ಮನೆಯ ಪೂಜಾಮಂದಿರದಲ್ಲಿ ಜರುಗಿದ ಒಂದು ವಿಶೇಷವನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತಿದ್ದೇನೆ. ಪ್ರತಿವರ್ಷ ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳಲ್ಲಿ ಸೂರ್ಯ ಕಿರಣಗಳು ಸಪ್ತವರ್ಣಗಳಾಗಿ ಬದಲಾಗಿ ನಮ್ಮ ಪೂಜಾ ಮಂದಿರದಲ್ಲಿರುವ ಹನುಮಂತನನ್ನು ಮೇಲಿಂದ ಕೆಳಗೆವರೆಗೆ ಸ್ಪರ್ಶಿಸುವುದು ನೋಡಿದ್ರೆ, ಆ ದೃಶ್ಯ, ಅನುಭೂತಿ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ" ಎಂದು ಚಿರು ಹೇಳಿದ್ದಾರೆ.
ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮ ಮೂರ್ತಿಗೆ ಸೂರ್ಯರಶ್ಮಿ ಸ್ಪರ್ಶಿಸಿದ ಅದ್ಭುತದ ಬಗ್ಗೆ ಚಿರಂಜೀವಿ ನೆನಪಿಸಿದ್ದಾರೆ. "ಕೋನಾರ್ಕ್ ದೇವಸ್ಥಾನದಲ್ಲಿ ಕೂಡ ಸೂರ್ಯ ಕಿರಣಗಳು ದೇವರನ್ನು ಸ್ಪರ್ಶಿಸುವ ವಿಶೇಷ ಎಲ್ಲರಿಗೂ ಗೊತ್ತೇಯಿದೆ. ಅಂತಹ ದೈವಾನುಭೂತಿ ನಮ್ಮ ಮನೆಯಲ್ಲಿ ಹನುಮಂತ ಮೂರ್ತಿಯನ್ನು ಸ್ಪರ್ಶಿಸುವುದು ನಮ್ಮ ಪೂರ್ವಜನ್ಮದ ಪುಣ್ಯ. ಎಲ್ಲರಿಗೂ ಹನುಮ ಜಯಂತಿ ಶುಭಾಶಯಗಳು" ಎಂದು ಚಿರಂಜೀವಿ ತಿಳಿಸಿದ್ದಾರೆ.
"ಶ್ರೀ ರಾಮ ಜಯಂ.. ಶ್ರೀ ರಾಮನ ಹೆಜ್ಜೆಗಳನ್ನು ಅನುಸರಿಸಿದರೆ ನಾವು ಯಶಸ್ಸು ಸಿಗುತ್ತದೆ. ಈ ವರ್ಷದ ಶ್ರೀ ರಾಮ ನವಮಿ ದಿನವೇ ರಾಮ್ಚರಣ್ ಬಾಬು ಹುಟ್ಟುಹಬ್ಬ ಬಂದಿದ್ದು ತುಂಬಾ ಸಂತೋಷ ತಂದಿದೆ. ಶ್ರೀ ರಾಮ ಚಂದ್ರನ ಆಶೀರ್ವಾದದ ಜೊತೆಗೆ ರಾಮನ ಪಾದಗಳಲ್ಲಿ ಪ್ರಕಾಶಮಾನವಾಗಿ ಹೊಳೆಯುವ ನಮ್ಮ ಪ್ರೀತಿಯ ಹನುಮಂತನ ಆಶೀರ್ವಾದ ಎಲ್ಲರಿಗೂ ಸಿಗಲಿ ಎಂದು ಹಾರೈಸುತ್ತೇನೆ" ಎಂದು ಚಿರು ಟ್ವೀಟ್ ಮಾಡಿದ್ದಾರೆ.
ಚಿರಂಜೀವಿ ತಮ್ಮ ಯಶಸ್ಸಿಗೆ ಹನುಮಂತನೇ ಕಾರಣ ಎಂದು ನಂಬಿದ್ದಾರೆ. 'ಹನುಮಾನ್' ಚಿತ್ರದ ಪ್ರೀ-ರಿಲೀಸ್ ಈವೆಂಟ್ನಲ್ಲಿ ತಾವು ಯಾಕೆ ಹನುಮಂತನ ಭಕ್ತನಾಗಿದ್ದು ಎನ್ನುವುದನ್ನು ಚಿರು ವಿವರಿಸಿದ್ದರು. ಕೆಲಸದ ಮೇಲಿನ ತನ್ನ ಶ್ರದ್ಧೆ, ಕ್ರಮಶಿಕ್ಷಣ ಎಲ್ಲದ್ದಕ್ಕೂ ಹನುಮ ಕಾರಣ ಎಂದಿದ್ದರು. ಆತನ ಮೇಲಿನ ಪ್ರೀತಿ, ಭಕ್ತಿ ಒಂದರ್ಥದಲ್ಲಿ ಕುಲದೈವದಂತೆ ಬದಲಾಗಿಬಿಟ್ಟಿತು. ಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿ ದೈವಭಕ್ತರು ಇರಲಿಲ್ಲ. ಅಪ್ಪ ಕಮ್ಯುನಿಷ್ಟ್.. ದೇವರನ್ನು ನಂಬುತ್ತಿರಲಿಲ್ಲ. ಆದರೆ ಅಮ್ಮನ ಬಲವಂತಕ್ಕೆ ಒಮ್ಮೆ ತಿರುಪತಿಗೆ ಕರೆದುಕೊಂಡು ಹೋಗಿದ್ದರು ಎಂದು ಚಿರಂಜೀವಿ ಮೆಲುಕು ಹಾಕಿದ್ದರು.
ಹುಟ್ಟೂರಿನಲ್ಲಿ 7ನೇ ತರಗತಿ ಓದುವಾಗ ಅಲ್ಲಿ ಒಂದು ಹನುಮಂತನ ಆಲಯ ಇತ್ತು. ಪ್ರತಿದಿನ ದೇವರಿಗೆ ಕೈಮುಗಿಯುತ್ತಿದ್ದೆ. ಟೂಷನ್ಗೆ ಹೋಗಿ ಬರುವಾಗ ದೇವಸ್ಥಾನದಲ್ಲಿ ಪ್ರಸಾದ ಕೊಡುತ್ತಿದ್ದರು. ಪ್ರಸಾದಕ್ಕಾಗಿ ಹನುಮಂತನಿಗೆ ಅಲ್ಲಿಗೆ ಹೋಗುತ್ತಿದ್ದಾಗ ನಿಧಾನವಾಗಿ ಹನುಮಂತನ ಮೇಲೆ ಭಕ್ತಿ ಮೂಡಿತ್ತು. ಪ್ರಸಾದ ತಿನ್ನುತ್ತಾ ಪುರೋಹಿತರು ಹೇಳುವ ಕಥೆಗಳನ್ನು ಕೇಳಿ ಹನುಮಾನ್ ಚಾಲಿಸಾ ಪಠಿಸುತ್ತಿದ್ದೆ. ಹೀಗೆ ಹನುಮಂತನ ಮೇಲೆ ಭಕ್ತಿ ಮೂಡಿತು ಎಂದು ಚಿರು ವಿವರಿಸಿದ್ದರು.
ಒಮ್ಮೆ ತಂದೆಗೆ ಬೇರೆ ಕಡೆ ಕೆಲಸ ವರ್ಗಾವಣೆ ಆಗಿತ್ತು. ಅಲ್ಲಿಗೆ ಹೋಗಲು ಅವರಿಗೆ ಮನಸ್ಸಿರಲಿಲ್ಲ. ಆಗ ನಾನು 10ನೇ ತರಗತಿ ಓದುತ್ತಿದ್ದೆ. ಹನುಮಾನ್ ಚಾಲಿಸಾ ಪಠಿಸಲು ಹೇಳಿದೆ. ಮೊದಲಿಗೆ ಒಪ್ಪಲಿಲ್ಲ. ಬಳಿಕ ಒಪ್ಪಿ ಪಠಿಸಿದರು. ತಮ್ಮ ಊರಿಗೆ ವರ್ಗಾವಣೆ ಆಗಿತ್ತು. ಅಲ್ಲಿಂದ ಮುಂದೆ ತಂದೆಗೆ ದೇವರ ಮೇಲೆ ಭಕ್ತಿ ಮೂಡಿತ್ತು. ಮುಂದೆ ಚೆನ್ನೈ ಫಿಲ್ಮ್ ಇನ್ಸಿಟ್ಯೂಟ್ನಲ್ಲಿ ಕಲಿಯಲು ಹೋದೆ. ಅಲ್ಲಿಗೆ ಹೋಗುವಾಗ ಅಪ್ಪ ಆಂಜನೇಯ ಲಾಕೆಟ್ ಕೊಟ್ಟಿದ್ದರು. ಅಲ್ಲಿ ಕಲಿಯುತ್ತಿದ್ದಂತೆ ಅವಕಾಶಗಳು ಬರಲು ಆರಂಭವಾಯಿತು ಎಂದು ಮೆಗಾಸ್ಟಾರ್ ತಿಳಿಸಿದ್ದರು.


Click it and Unblock the Notifications











