ನೀರಿನ ಸಂರಕ್ಷಣೆ ಬಳಿಕ ವಿದ್ಯುತ್ ಉಳಿತಾಯ, ದುಂದು ವೆಚ್ಚಕ್ಕೆ ಕಡಿವಾಣದ ಬಗ್ಗೆ ಚಿರು ಸಲಹೆ
ಬೆಂಗಳೂರಿನ ನೀರಿನ ಸಮಸ್ಯೆ ಬಗ್ಗೆ ಇತ್ತೀಚೆಗೆ ತೆಲುಗು ನಟ ಮೆಗಾಸ್ಟಾರ್ ಚಿರಂಜೀವಿ ಪ್ರತಿಕ್ರಿಯಿಸಿದ್ದರು. ನೀರನ್ನು ಹೇಗೆ ಸಂರಕ್ಷಿಸಬೇಕು. ಅದಕ್ಕಾಗಿ ಏನು ಮಾಡಬೇಕು. ಬೆಂಗಳೂರಿನ ತಮ್ಮ ಫಾರ್ಮ್ಹೌಸ್ನಲ್ಲಿ ನೀರಿನ ಸಂರಕ್ಷಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಕನ್ನಡದಲ್ಲೇ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಪರಿಹಾರ ಸೂಚಿಸಿದ್ದರು.
ಇದೀಗ ಮಧ್ಯಮ ತರಗತಿ ಜನರು ದುಂದು ವೆಚ್ಚಕ್ಕೆ ಕಡಿವಾಣ ಹೇಗೆ ಹಾಕುವುದು ಎನ್ನುವ ಬಗ್ಗೆ ಮಾತನಾಡಿದ್ದಾರೆ. ಶ್ರೀಮಂತರಾದರೂ ಅನಗತ್ಯ ಖರ್ಚು ಮಾಡಬಾರದು. ಎಲ್ಲಾ ವಸ್ತುಗಳನ್ನು ಸರಿಯಾದ ರೀತಿ ಬಳಸಿಕೊಳ್ಳಬೇಕು. ಹಣವಿದೆ ಎನ್ನುವ ಕಾರಣಕ್ಕೆ ಬೇಕಾಬಿಟ್ಟಿ ಆಡಬಾರದು. ಉಳಿತಾಯದ ಬಗ್ಗೆ ಯೋಚಿಸಬೇಕು. ನಾನು ಇವತ್ತಿಗೂ ಅದೇ ರೀತಿ ಬದುಕುತ್ತಿದ್ದೇನೆ ಎಂದು ಹೇಳಿದ್ದಾರೆ. ಚಿರಂಜೀವಿ ಹೇಳಿಕೆ ವೈರಲ್ ಆಗುತ್ತಿದೆ.

ಕಾರ್ಯಕ್ರಮವೊಂದರಲ್ಲಿ ನಟರಾದ ಚಿರಂಜೀವಿ ಹಾಗೂ ವಿಜಯ್ ದೇವರಕೊಂಡ ಭಾಗಿ ಆಗಿದ್ದರು. ಇಬ್ಬರೂ ಕೆಲವೊತ್ತು ವೇದಿಕೆ ಮೇಲೆ ಕೂತು ಸಾಕಷ್ಟು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ಚಿರಂಜೀವಿ ಬೆಂಗಳೂರಿನ ನೀರಿನ ಸಮಸ್ಯೆ ಬಗ್ಗೆ ಮತ್ತೆ ಮಾತನಾಡಿದ್ದಾರೆ. ಸ್ನಾನಕ್ಕೆ ಬಳಸುವ ಸೋಪು, ಶಾಂಪೂವನ್ನು ಉತ್ಕೃಷ್ಟವಾಗಿ ಬಳಸಿಕೊಳ್ಳಬೇಕು, ವಿದ್ಯುತ್ ಉಳಿತಾಯ ಮಾಡಬೇಕು ಎಂದು ಚಿರಂಜೀವಿ ಈ ವೇಳೆ ಹೇಳಿದ್ದಾರೆ. ವಿಜಯ್ ದೇವರಕೊಂಡ ಕೂಡ ಇದಕ್ಕೆ ದನಿಗೂಡಿಸಿದ್ದಾರೆ.
ವಿಜಯ್ ದೇವರಕೊಂಡ ಮಾತನಾಡುತ್ತಾ ಕಳೆದ 10 ವರ್ಷಗಳಲ್ಲಿ ನನ್ನ ಜೀವನ ಸಾಕಷ್ಟು ಬದಲಾಗಿದೆ. ಆದರೂ ನಾನು ಮಧ್ಯ ವರ್ಗದ ಕುಟುಂಬದಿಂದ ಬಂದವನು. ಇವತ್ತಿಗೂ ಕೆಲ ಅಭ್ಯಾಸಗಳು ಮೊದಲಿನಂತೆಯೇ ಇದೆ. ಇವತ್ತಿಗೂ ಸ್ನಾನ ಮಾಡುವಾಗ ಶಾಂಪೂ ಡಬ್ಬಾ ಖಾಲಿ ಆದರೆ ಅದಕ್ಕೆ ನೀರು ಹಾಕಿ ಅಲ್ಲಾಡಿಸಿ ಅದನ್ನು ಬಳಸುತ್ತೇನೆ. ಅದನ್ನು ಇವತ್ತಿಗೂ ನಾನು ಬಿಟ್ಟಿಲ್ಲ. ನೀವು ಇದೇ ರೀತಿ ಯಾವ ಅಭ್ಯಾಸ ಇನ್ನು ರೂಢಿಸಿಕೊಂಡಿದ್ದೀರಾ? ಎಂದು ಚಿರುನ ಕೇಳಿದ್ದಾರೆ.

"ನಮ್ಮ ಮನೆಯಲ್ಲಿ ಲೈಟ್ಗಳನ್ನು ಆನ್ ಮಾಡಿ ಎಲ್ಲರೂ ಹೊರಟುಬಿಡುತ್ತಾರೆ. ನಾನು ಹೋಗಿ ಎಲ್ಲಾ ಆಫ್ ಮಾಡಿಕೊಂಡು ಬರುತ್ತೇನೆ. ಗೀಸರ್ ಆನ್ ಮಾಡಿ ಸ್ನಾನ ಮಾಡಿ ಹೊರಟು ಹೋಗ್ತಾರೆ. ನಾನು ಹುಡುಕಿಕೊಂಡು ಹೋಗಿ ಆಫ್ ಮಾಡುತ್ತೇನೆ. ಟೆನ್ಷನ್ ಹೆಚ್ಚಾಗಿ ಇತ್ತೀಚೆಗೆ ಮೊಬೈಲ್ ಫೋನ್ನಲ್ಲೇ ಆಪ್ ಅಳವಡಿಸಿಕೊಂಡಿದ್ದೇನೆ. ಅದನ್ನು ನೋಡಿ ವ್ಯರ್ಥವಾಗಿ ಉರಿಯುತ್ತಿರುವ ಲೈಟ್, ಫ್ಯಾನ್ಸ್, ಗೀಸರ್ ಆಫ್ ಮಾಡುತ್ತೇನೆ."
"ಇತ್ತೀಚೆಗೆ ರಾಮ್ಚರಣ್ ಬ್ಯಾಂಕಾಕ್ ಹೊರಟ. ಆತನ ಫ್ಲೋರ್ ಕ್ಲೋಸ್ ಮಾಡುವ ವೇಳೆ ಆಪ್ ನೋಡಿದೆ. ನಾಲ್ಕೈದು ಲೈಟ್ ಉರಿಯುತ್ತಿತ್ತು. ಬೈದುಕೊಂಡು ಎಲ್ಲಾ ಆಫ್ ಮಾಡಿದೆ. ಇದನ್ನು ಮಧ್ಯಮ ವರ್ಗದ ಮನಸ್ಥಿತಿ ಎನ್ನುತ್ತಾರೆ. ನೀನು ಶ್ಯಾಂಪು ಬಗ್ಗೆ ಹೇಳಿದೆ. ನಾನು ಬಳಸಿ ಬಹುತೇಕ ಖಾಲಿಯಾದ, ಮುರಿದ ಸೋಪ್ ಎಲ್ಲಾ ಸೇರಿಸಿ ಒಟ್ಟಿಗೆ ಅದನ್ನು ಒತ್ತಿ ಮತ್ತೆ ಸೋಪ್ ರೀತಿ ಮಾಡಿ ಬಳಸುತ್ತೇನೆ" ಎಂದು ಚಿರಂಜೀವಿ ನಕ್ಕಿದ್ದಾರೆ.
"ಬೆಂಗಳೂರಿನಲ್ಲಿ ಇತ್ತೀಚೆಗೆ ಮನೆ ಕಟ್ಟಿಸಿದೆವು. ಅಲ್ಲಿನ ನೀರಿನ ಸಮಸ್ಯೆ ಹೇಗಿದೆ ಎಂದು ಗೊತ್ತು. ಅಲ್ಲಿ ನೀರು ಇಂಗು ಗುಂಡಿಗಳನ್ನು ವರ್ಷದ ಮಾಡಿಸಿದೆ. ಈ ಬಗ್ಗೆ ಇತ್ತೀಚೆಗೆ ಟ್ವೀಟ್ ಮಾಡಿದೆ. ಎಲ್ಲರೂ ಇದನ್ನು ಪಾಲಿಸಿದರೆ ಪ್ರತಿಯೊಬ್ಬರೂ ನೀರನ್ನು ಸಂರಕ್ಷಿಸಿ ಬಳಸಬಹುದು. ಚಿರಂಜೀವಿ, ವಿಜಯ್ ದೇವರಕೊಂಡ ಸ್ಟಾರ್ಸ್ ಆಗಿರಬಹುದು. ಆದರೆ ನಾವು ಈ ರೀತಿ ಶ್ಯಾಂಪು, ಸೋಪು ವ್ಯರ್ಥ ಮಾಡದೇ ಬಳಸುತ್ತೇವೆ. ವಿದ್ಯುತ್ ಉಳಿತಾಯ ಮಾಡುತ್ತೇವೆ. ಎಲ್ಲರೂ ಇದನ್ನು ಪಾಲಿಸಬೇಕು. ಅದು ನಮ್ಮ ಕರ್ತವ್ಯ" ಎಂದು ಚಿರು ಹೇಳಿದ್ದಾರೆ.


Click it and Unblock the Notifications










