ಚಿರಂಜೀವಿ ನಟನೆಯ 'ಲೂಸಿಫರ್' ತೆಲುಗು ರಿಮೇಕ್ ಗೆ ಹೊಸ ನಿರ್ದೇಶಕ ಎಂಟ್ರಿ
ಮೆಗಾ ಸ್ಟಾರ್ ಚಿರಂಜೀವಿ ಸದ್ಯ ಆಚಾರ್ಯ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಬಳಿಕ ಚಿರಂಜೀವಿ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಿದ್ದು, ಈಗಾಗಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಚಿರಂಜೀವಿ ಜೊತೆ ನಾಯಕಿಯಾಗಿ ಕಾಜಲ್ ಅಗರ್ವಾಲ್ ಕಾಣಿಸಿಕೊಳ್ಳುತ್ತಿದ್ದಾರೆ.
ಮದುವೆ ಬಳಿಕ ಚಿತ್ರೀಕರಣಕ್ಕೆ ಹಾಜರಾದ ಕಾಜಲ್ ಅವರನ್ನು ಚಿರಂಜೀವಿ ಮತ್ತು ತಂಡ ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ. ಆಚಾರ್ಯ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿರುವಾಗಲೇ, ಮೆಗಾಸ್ಟಾರ್ ನಟನೆಯ ಲೂಸಿಫರ್ ಸಿನಿಮಾದ ಬಗ್ಗೆಯೂ ಚರ್ಚೆ ಜೋರಾಗಿ ನಡೆಯುತ್ತಿದೆ. ಹೌದು, ಮಲಯಾಳಂನ ಸೂಪರ್ ಹಿಟ್ ಸಿನಿಮಾ ಲೂಸಿಫರ್ ರಿಮೇಕ್ ನಲ್ಲಿ ಚಿರಂಜೀವಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿರಂಜೀವಿ ಅವರ 153ನೇ ಸಿನಿಮಾ ಲೂಸಿಫರ್ ಚಿತ್ರದ ನಿರ್ದೇಶನದ ಹೊಣೆ ಯಾರು ಹೊತ್ತುಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅನೇಕರಲ್ಲಿತ್ತು. ಇದೀಗ ಈ ಕುತೂಹಲಕ್ಕೆ ತೆರೆಬಿದ್ದಿದೆ. ಚಿತ್ರಕ್ಕೆ ತಮಿಳಿನ ಖ್ಯಾತ ನಿರ್ದೇಶಕ ಮೋಹನ್ ರಾಜ ಆಕ್ಷನ್ ಕಟ್ ಹೇಳುವುದು ಅಧಿಕೃತವಾಗಿದೆ.

ಮೋಹನ್ ರಾಜ, 2001ರಲ್ಲಿ ತೆಲುಗಿನಲ್ಲಿ ಹನುಮಾನ್ ಜಂಕ್ಷನ್ ಎನ್ನುವ ಸಿನಿಮಾಗೆ ನಿರ್ದೇಶನ ಮಾಡಿದ್ದರು. ಈ ಸಿನಿಮಾದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಇದೀಗ ಮತ್ತೆ ತೆಲುಗು ಚಿತ್ರರಂಗಕ್ಕೆ ವಾಪಸ್ ಆಗಿರುವುದು ಚಿರಂಜೀವಿ ಅಭಿಮಾನಿಗಳಿಗೆ ಸಂತಸ ತಂದಿದೆ. ಈ ಸಿನಿಮಾಗೂ ಮೊದಲು ಮೋಹನ್ ರಾಜ, ಚಿರಂಜೀವಿ ನಟನೆಯ ಹಿಟ್ಲರ್ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಆದರೀಗ ಚಿರಂಜೀವಿ 153ನೇ ಸಿನಿಮಾಗೆ ನಿರ್ದೇಶನ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಅಂದಹಾಗೆ ಈ ಮೊದಲು ಲೂಸಿಫರ್ ಚಿತ್ರಕ್ಕೆ ಸಾಹೋ ಖ್ಯಾತಿಯ ನಿರ್ದೇಶಕ ಸುಜಿತ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಹೇಳಲಾಗಿತ್ತು. ಬಳಿಕ ವಿವಿ ವಿನಾಯಕ್ ನಿರ್ದೇಶಕ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದರೀಗ ನಿರ್ದೇಶನದ ಜವಾಬ್ದಾರಿ ಮೋಹನ್ ರಾಜ ಪಾಲಾಗಿದೆ.
ಅಂದಹಾಗೆ ಲೂಸಿಫರ್ ಸಿನಿಮಾದ ಬಗ್ಗೆ ಚರ್ಚೆ ಅನೇಕ ತಿಂಗಳಿಂದ ನಡೆಯುತ್ತಿದೆ. ಸಿನಿಮಾ ಅಧಿಕೃತವಾಗಿ ಸಂಕ್ರಾಂತಿ ಬಳಿಕ ಪ್ರಾರಂಭವಾಗಲಿದೆ. ಚಿತ್ರಕ್ಕೆ ರಾಮ್ ಚರಣ್ ಒಡೆತನದ ಕೊನಿಡೆಲ ಪ್ರೊಡಕ್ಷನ್ ಹಾಗೂ ಎನ್ ವಿ ಆರ್ ಸಿನಿಮಾ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.


Click it and Unblock the Notifications











