ಪವನ್ ಕಲ್ಯಾಣ್ ವಿಚಿತ್ರ ವರ್ತನೆಗಳನ್ನು ಬಹಿರಂಗಗೊಳಿಸಿದ ಅಣ್ಣ ಮೆಗಾಸ್ಟಾರ್ ಚಿರಂಜೀವಿ
okತೆಲುಗು ಚಿತ್ರರಂಗ ಹಾಗೂ ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ನಂದಮೂರಿ ಕುಟುಂಬ ಹಾಗೂ ಮೆಗಾ ಕುಟುಂಬ ಅಥವಾ ಕೋನಿಡೆಲ ಕುಟುಂಬ ಮಿಂಚುತ್ತಿವೆ. ಎರಡೂ ಕುಟುಂಬದ ಸದಸ್ಯರ ನಡುವೆ ಪರಸ್ಪರ ಆತ್ಮೀಯತೆ ಇದೆ, ತುಸು ಮುನಿಸು-ವಿರಸಗಳೂ ಇವೆ.
ನಂದಮೂರಿ ಕುಟುಂಬದ ಹಲವರು ಈಗಾಗಲೇ ಸಕ್ರಿಯ ರಾಜಕೀಯದಲ್ಲಿದ್ದಾರೆ. ಚಂದ್ರಬಾಬು ನಾಯ್ಡು ಮಾಜಿ ಸಿಎಂ ಸಹ ಹೌದು. ಆದರೆ ಮೆಗಾ ಫ್ಯಾಮಿಲಿಗೆ ರಾಜಕೀಯ ಇನ್ನೂ ಒಲಿದಿಲ್ಲ. ನಟ ಚಿರಂಜೀವಿ ರಾಜಕೀಯ ಪಕ್ಷ ಕಟ್ಟಿದರಾದರೂ ಬೆಳೆಸಲಾಗಲಿಲ್ಲ. ತಾವು ಒಮ್ಮೆ ಕೇಂದ್ರ ಮಂತ್ರಿಯಾಗಿದ್ದರು, ಬಳಿಕ ಈಗ ರಾಜಕೀಯದಿಂದ ದೂರ ಉಳಿದಿದ್ದಾರೆ. ಈ ನಡುವೆ ಅವರ ಸಹೋದರ ಪವನ್ ಕಲ್ಯಾಣ್ ರಾಜಕೀಯ ಜರ್ನಿ ಶುರು ಮಾಡಿದ್ದು, ಅಣ್ಣನಿಗಿಂತ ತುಸು ಭಿನ್ನ ಹಾದಿಯಲ್ಲಿ ನಡೆಯುತ್ತಿದ್ದಾರೆ.
ಈ ನಡುವೆ ನಟ ಚಿರಂಜೀವಿ, ಟಾಕ್ ಶೋ ಒಂದರಲ್ಲಿ ತಮ್ಮ ಸಹೋದರ ಪವನ್ ಕಲ್ಯಾಣ್ ಬಗ್ಗೆ ಅವರ ವ್ಯಕ್ತಿತ್ವದ ಬಗ್ಗೆ ರಾಜಕೀಯದ ಬಗ್ಗೆ ಇನ್ನಿತರೆ ಹಲವು ವಿಷಯಗಳನ್ನು ಮಾತನಾಡಿದ್ದಾರೆ. ಆದರೆ ಚಿರಂಜೀವಿ ಮಾತುಗಳು ಸಹೋದರನ ವ್ಯಕ್ತಿತ್ವದಲ್ಲಿ ಸಮಸ್ಯೆಗಳಿದ್ದವು ಎಂಬುದನ್ನೇ ಸೂಚ್ಯವಾಗಿ ಹೇಳುತ್ತಿರುವಂತಿದೆ.

ಪವನ್ ಕಲ್ಯಾಣ್ ವಿಚಿತ್ರ ವರ್ತನೆ ಬಗ್ಗೆ ಚಿರು ಮಾತು
ಗಾಯಕಿ ಸ್ಮಿತಾ ನಡೆಸಿಕೊಡುತ್ತಿರುವ ಹೊಸ ಟಾಕ್ ಶೋನ ಮೊದಲ ಅತಿಥಿಯಾಗಿದ್ದ ನಟ ಚಿರಂಜೀವಿ ಶೋನಲ್ಲಿ ಸಹೋದರ ಪವನ್ ಕಲ್ಯಾಣ್ನ ವಿಚಿತ್ರ ವರ್ತನೆಗಳ ಬಗ್ಗೆ ಮಾತನಾಡಿದ್ದು, ''ಮೊದಲಿಗೆ ನನ್ನ ಮಕ್ಕಳಾದ ರಾಮ್ ಚರಣ್-ಸುಷ್ಮಿತಾ ಚಿಕ್ಕವರಿದ್ದಾಗ. ಅವರಿಬ್ಬರ ಬಳಿಯೂ ಪವನ್ ಕಲ್ಯಾಣ್ ಜಾಡಿ ಹೇಳುತ್ತಿದ್ದ, ಆಗ ಅವರಿಬ್ಬರೂ ಕಿತ್ತಾಡಲು ಆರಂಭಿಸುತ್ತಿದ್ದರು. ಅದನ್ನು ನೋಡಿ ವಿಕೃತ ಆನಂದವನ್ನು ಪವನ್ ಕಲ್ಯಾಣ್ ಪಡೆಯುತ್ತಿದ್ದ ಎಂದು ನಗುತ್ತಲೇ ಹೇಳಿದ್ದಾರೆ ಚಿರಂಜೀವಿ. ಆ ಬಳಿಕ ನನ್ನ ಪತ್ನಿ ಸುರೇಖ ಬಂದು, ಏನಿದು ಎಂದರೆ ಅವರು ಆಟವಾಡುತ್ತಿದ್ದಾರೆ ಎನ್ನುತ್ತಿದ್ದ, ಆಗ ಸುರೇಖ, ಇದು ಆಟವಲ್ಲ, ರಾಕ್ಷಸ ಆಟ ಎಂದು ಬೈಯ್ಯುತ್ತಿದ್ದಳು'' ಎಂದಿದ್ದಾರೆ.

ಪವನ್ ನಕ್ಸಲೈಟ್ ಆಗಿಬಿಡುತ್ತಾನೆಂದು ಭಯವಾಗಿತ್ತು: ಚಿರಂಜೀವಿ
ಪವನ್ ಕಲ್ಯಾಣ್ರ ವಿಚಿತ್ರ ಸ್ವಭಾವದ ಬಗ್ಗೆಯೂ ಮಾತನಾಡಿರುವ ಚಿರಂಜೀವಿ, ''ಪವನ್ ಕಲ್ಯಾಣ್ ಎಲ್ಲಿ ನಕ್ಸಲೈಟ್ ಆಗಿಬಿಡುತ್ತಾನೋ ಎಂದು ಒಂದು ಸಮಯದಲ್ಲಿ ಭಯವಾಗಿತ್ತು. ಅವನು ಒಂದು ಸಮಯದಲ್ಲಿ ಗನ್ಗಳೊಟ್ಟಿಗೆ ಹೆಚ್ಚು ಆಟವಾಡುತ್ತಿದ್ದ. ನಾನು ಹೊರ ದೇಶಗಳಿಗೆ ಎಲ್ಲಿಗಾದರೂ ಚಿತ್ರೀಕರಣಕ್ಕೆ ಹೋದಾಗ ಏನು ತೆಗೆದುಕೊಂಡು ಬರಲಿ ಎಂದು ಕೇಳಿದರೆ, ಅಲ್ಲಿಂದ ಬಂದೂಕು ತೆಗೆದುಕೊಂಡು ಬಾ, ಇಲ್ಲಿ ಸಿಗುತ್ತಿಲ್ಲ ಎಂದು ಹೇಳುತ್ತಿದ್ದ. ಇಲ್ಲೆಲ್ಲ ಆಟವಾಡುವ ಬಂದೂಕು ಸಿಗುತ್ತವೆ, ಅಲ್ಲಿಂದ ಸೆಮಿ ಆಟೊಮೆಟಿಕ್ ಗನ್ ತೆಗೆದುಕೊಂಡು ಬಾ ಎನ್ನುತ್ತಿದ್ದ'' ಎಂದು ನೆನಪು ಮಾಡಿಕೊಂಡಿದ್ದಾರೆ ಚಿರಂಜೀವಿ.

ಸಣ್ಣ ವಯಸ್ಸಿನಿಂದಲೇ ಬಂದಿರುವ ಗುಣಗಳು: ಚಿರಂಜೀವಿ
ಪವನ್ ಕಲ್ಯಾಣ್ ನಟನಾಗಿ ಇಷ್ಟವಾ ಅಥವಾ ರಾಜಕಾರಣಿಯಾಗಿಯಾ? ಎಂಬ ಪ್ರಶ್ನೆಗೆ ತಮ್ಮನನ್ನು ಹೊಗಳಿ ಸಹ ಮಾತನಾಡಿರುವ ಚಿರಂಜೀವಿ, ಸಣ್ಣ ವಯಸ್ಸಿನಿಂದಲೇ ಅವನಿಗೆ ಜನಪರ ಕಾಳಜಿ ಹೆಚ್ಚು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದ, ಅನ್ಯಾಯವನ್ನು ಪ್ರತಿಭಟಿಸುತ್ತಿದ್ದ ಇವೆಲ್ಲವೂ ಅವನಿಗೆ ಸಣ್ಣ ವಯಸ್ಸಿನಿಂದಲೇ ಬಂದಿವೆ ಎಂದಿರುವ ಚಿರಂಜೀವಿ, ಪವನ್ರ ಅಭಿಮಾನಿಗಳನ್ನು ಸಹ ಹೊಗಳಿದ್ದು, ಅವರು ಕೇವಲ ಅಭಿಮಾನಿಗಳಲ್ಲ ಅವರು ಭಕ್ತರು, ಎಲ್ಲರಿಗೂ ಅಭಿಮಾನಿಗಳಿದ್ದರೆ, ಪವನ್ಗೆ ಭಕ್ತರಿದ್ದಾರೆ. ಪವನ್ ರಾಜಕಾರಣಿಯಾಗಿ ಜನರಿಗೆ ಅವಶ್ಯಕತೆ ಇದೆ. ಪವನ್ ರಾಜಕಾರಣಿಯಾಗಿ ಸಫಲವಾಗಬೇಕು ಎಂದಿದ್ದಾರೆ ಚಿರಂಜೀವಿ.

ರಾಜಕೀಯದಲ್ಲಿ ಸಕ್ರಿಯ ಪವನ್ ಕಲ್ಯಾಣ್
ಪವನ್ ಕಲ್ಯಾಣ್ 'ಜನಸೇನ' ಹೆಸರಿನ ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದಾರೆ. ಸಿನಿಮಾಗಳನ್ನು ನಟಿಸುವ ಜೊತೆಗೆ ರಾಜಕೀಯದಲ್ಲಿಯೂ ಬಹಳ ಸಕ್ರಿಯರಾಗಿದ್ದಾರೆ. ಇದೀಗ ಆಂಧ್ರದ ವಿಧಾನಸಭೆ ಚುನಾವಣೆ ಹತ್ತಿರ ಬಂದಿದ್ದು, ಚುನಾವಣೆಯ ಮೇಲೆ ಪ್ರಭಾವ ಬೀರಲು ಸಜ್ಜಾಗಿದ್ದಾರೆ. 'ವಾರಾಹಿ' ಹೆಸರಿನ ಭಾರಿ ವಾಹವನ್ನು ಚುನಾವಣಾ ಪ್ರಚಾರಕ್ಕಾಗಿ ತಯಾರು ಮಾಡಿಕೊಂಡಿದ್ದಾರೆ. ಈಗಾಗಲೇ ಚಂದ್ರಬಾಬು ನಾಯ್ಡು ಜೊತೆಗೆ ಕೈ ಜೋಡಿಸಿರುವ ಪವನ್ ಕಲ್ಯಾಣ್, ಆಂಧ್ರ ಸಿಎಂ ಜಗನ್ ಅವರನ್ನು ಕುರ್ಚಿಯಿಂದ ಇಳಿಸಲು ಸಕಲ ಸಜ್ಜಾಗಿದ್ದಾರೆ.


Click it and Unblock the Notifications











