'ಮನ ಶಂಕರವರಪ್ರಸಾದ್ ಗಾರು' ಚಿತ್ರದಲ್ಲಿ ವೆಂಕಟೇಶ್ ಪಾತ್ರಕ್ಕೂ ಕರ್ನಾಟಕಕ್ಕೂ ಲಿಂಕ್ ಏನು?
ಅನಿಲ್ ರಾವಿಪುಡಿ ನಿರ್ದೇಶನದ ಕಾಮಿಡಿ ಎಂಟರ್ಟ್ರೈನರ್ 'ಮನ ಶಂಕರವರಪ್ರಸಾದ್ ಗಾರು' ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಾಕ್ಕಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಜನವರಿ 12ಕ್ಕೆ ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆ ವಿಕ್ಟರಿ ವೆಂಕಟೇಶ್ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ.
ಇದೊಂದು ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಆಗಿದ್ದು ಚಿರು- ವೆಂಕಿ ಕಾಂಬಿನೇಷನ್ ಕುತೂಹಲ ಮೂಡಿಸಿದೆ. ಈಗಾಗಲೇ ಟ್ರೈಲರ್, ಸಾಂಗ್ಸ್ ಹಿಟ್ ಆಗಿದೆ. ಚಿತ್ರದ ಝಲಕ್ಗಳಲ್ಲಿ ಚಿರು- ವೆಂಕಿ ಜೋಡಿ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಇನ್ನುಳಿದಂತೆ ನಯನತಾರಾ, ಕ್ಯಾಥರಿನ್ ತ್ರೆಷಾ, ಸಚಿನ್ ಖಡೇಕರ್, ಶರತ್ ಸಕ್ಸೇನಾ ಚಿತ್ರದಲ್ಲಿ ನಟಿಸಿದ್ದಾರೆ.

ಅನಿಲ್ ರಾವಿಪುಡಿ ಹಾಗೂ ವಿಕ್ಟರಿ ವೆಂಕಟೇಶ್ ಕಾಂಬಿನೇಷನ್ ಹಿಟ್ ಆಗಿದೆ. ಈ ಬಾರಿ ಚಿರಂಜೀವಿ ಹೀರೊ ಆಗಿ ನಟಿಸಿದ್ದರೆ ವೆಂಕಟೇಶ್ ಅತಿಥಿ ಪಾತ್ರದಲ್ಲಿ ಸಾಥ್ ಕೊಟ್ಟಿದ್ದಾರೆ. ವೆಂಕಿ ಪಾತ್ರ ಏನು ಎನ್ನುವುದನ್ನು ನಿರ್ದೇಶಕರು ಬಹಿರಂಗ ಪಡಿಸಿದ್ದಾರೆ. ಆ ಪಾತ್ರಕ್ಕೂ ಕರ್ನಾಟಕಕ್ಕೂ ನಂಟಿದೆ ಎಂದು ತಿಳಿಸಿದ್ದಾರೆ.
ಚಿತ್ರದ ಪ್ರೀ-ರಿಲೀಸ್ ಈವೆಂಟ್ನಲ್ಲಿ ಮಾತನಾಡಿದ ಅನಿಲ್ "ಚಿತ್ರದಲ್ಲಿ ವೆಂಕಟೇಶ್ ನಟಿಸಬೇಕು ಎಂದು ಹೇಳಿದ್ದೇ ಚಿರಂಜೀವಿ ಸರ್. ಸಿನಿಮಾ ಕಥೆ ಕೇಳಿದ ಬಳಿಕ ಈ ರೀತಿ ಟ್ವಿಸ್ಟ್ ಇದ್ದರೆ ಚೆನ್ನಾಗಿರುತ್ತದೆ ಅಂದ್ರು. ಹಾಗಾಗಿ ವೆಂಕಟೇಶ್ ಸರ್ ಪಾತ್ರ ಸೇರಿಸಿದೆ. ಇಬ್ಬರ ಕಾಂಬೋ ಪ್ರೇಕ್ಷಕರಿಗೆ ಹಬ್ಬದೂಟ. ಈ ಚಿತ್ರದಲ್ಲಿ ವೆಂಕಿ ಗೌಡ ಎಂಬ ಪಾತ್ರದಲ್ಲಿ ವೆಂಕಟೇಶ್ ನಟಿಸಿದ್ದಾರೆ. ಕರ್ನಾಟಕ ಮೂಲದ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಕರ್ನಾಟಕ ಹಿನ್ನೆಲೆಯ ವೆಂಕಿ ಗೌಡ ಆಗಿ ಪ್ರೇಕ್ಷಕರನ್ನು ರಂಜಿಸುತ್ತಾರೆ" ಎಂದು ತಿಳಿಸಿದ್ದಾರೆ.

ಸತತ ಸೋಲುಗಳಿಂದ ಕಂಗೆಟ್ಟ ಚಿರಂಜೀವಿ ಇದೀಗ ಫ್ಯಾಮಿಲಿ ಪ್ರೇಕ್ಷಕರನ್ನು ರಂಜಿಸಲು ಮನಸ್ಸು ಮಾಡಿದ್ದಾರೆ. ಅನಿಲ್ ನಿರ್ದೇಶನದ ಸಿನಿಮಾಗಳೆಲ್ಲಾ ಗೆದ್ದಿದೆ. ಅದರಲ್ಲೂ ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡಿ ಗೆಲ್ಲುತ್ತಾ ಬರ್ತಿದ್ದಾರೆ. ಕಳೆದ ವರ್ಷ 'ಸಂಕ್ರಾಂತಿಗೆ ವಸ್ತುನ್ನಾಂ' ಸಿನಿಮಾ ಮಾಡಿ ಬಾಕ್ಸಾಫೀಸ್ ಶೇಕ್ ಮಾಡಿದ್ದರು. 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಗೆದ್ದಿತ್ತು. ವೆಂಕಟೇಶ್ ಆ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದರು. ಈ ಬಾರಿ ವೆಂಕಿ ಗೌಡ ಆಗಿ ಅವರು ಕಮಾಲ್ ಮಾಡಲಿದ್ದಾರೆ.
'ಮನ ಶಂಕರವರಪ್ರಸಾದ್ ಗಾರು' ಆಲ್ಬಮ್ ಹಿಟ್ ಆಗಿದೆ. ಮುಖ್ಯವಾಗಿ 'ಮೀಸಾಲ ಪಿಲ್ಲ' ಸಾಂಗ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. 100 ಮಿಲಿಯನ್ಗೂ ಹೆಚ್ಚು ವೀವ್ಸ್ ಸಾಧಿಸಿ ದಾಖಲೆ ಬರೆದಿದೆ. ತೆಲುಗು ಸಿನಿಮಾಗಳು ಕರ್ನಾಟಕದಲ್ಲಿ ಕೂಡ ಸದ್ದು ಮಾಡುತ್ತವೆ. ಈ ಬಾರಿ ಸಂಕ್ರಾಂತಿಗೆ ಕನ್ನಡದ ಯಾವುದೇ ದೊಡ್ಡ ಸಿನಿಮಾ ಬಿಡುಗಡೆ ಆಗ್ತಿಲ್ಲ. ಹಾಗಾಗಿ ಪರಭಾಷಾ ಚಿತ್ರಗಳಿಗೆ ಇದು ವರದಾನ ಆಗಲಿದೆ.
ಈಗಾಗಲೇ ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಸಿನಿಮಾ ಬಿಡುಗಡೆಯಾಗಿದೆ. ಇನ್ನುಳಿದಂತೆ ತಮಿಳಿನ 'ಪರಾಶಕ್ತಿ' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಆದರೆ ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ರಿಲೀಸ್ ಮುಂದೂಡಲಾಗಿದೆ. ರವಿತೇಜಾ ಹಾಗೂ ಆಶಿಕಾ ರಂಗನಾಥ್ ನಟನೆಯ 'ಭರ್ತ ಮಹಾಶಯಲಕು ವಿಜ್ಞಪ್ತಿ' ಎಂಬ ಮತ್ತೊಂದು ಕಾಮಿಡಿ ಸಿನಿಮಾ ಕೂಡ ತೆರೆಗೆ ಬರ್ತಿದೆ.
ಸತತ ಸೋಲುಗಳಿಂದ ಕಂಗೆಟ್ಟ ಚಿರಂಜೀವಿ ಈ ಬಾರಿ ಅನಿಲ್ ರಾವಿಪುಡಿ ಜೊತೆ ಕೈಜೋಡಿಸಿ ಗೆಲ್ಲುವ ಲೆಕ್ಕಾಚಾರದಲ್ಲಿದ್ದಾರೆ. ಅಭಿಮಾನಿಗಳು ಕೂಡ ನೆಚ್ಚಿನ ನಟನನ್ನು ಒಂದೊಳ್ಳೆ ಚಿತ್ರದಲ್ಲಿ ನೋಡಲು ಉತ್ಸುಕರಾಗಿದ್ದಾರೆ. ಇನ್ನು ನಾಲ್ಕು ದಿನಗಳಲ್ಲಿ 'ಮನ ಶಂಕರವರಪ್ರಸಾದ್ ಗಾರು' ಸಿನಿಮಾ ಭವಿಷ್ಯ ನಿರ್ಧಾರ ಆಗಲಿದೆ.


Click it and Unblock the Notifications











