"ಲಿಟಲ್ ಮೆಗಾ ಪ್ರಿನ್ಸೆಸ್ಗೆ ಸ್ವಾಗತ".. ಮೊಮ್ಮಗಳ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ ಎಮೋಷನಲ್ ಪೋಸ್ಟ್
ಮದುವೆ ಆಗಿ 11 ವರ್ಷಗಳ ನಂತರ ತೆಲುಗು ನಟ ರಾಮ್ಚರಣ್ ಹಾಗೂ ಉಪಾಸನಾ ದಂಪತಿ ಈಗ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದಾರೆ. ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಮೆಗಾ ಫ್ಯಾಮಿಲಿಗೆ ಸಂತಸ ಮನೆ ಮಾಡಿದೆ. ಈಗಾಗಲೇ ಚಿರಂಜೀವಿ ಆಸ್ಪತ್ರೆಗೆ ಭೇಟಿ ನೀಡಿ ಮೊಮ್ಮಗಳನ್ನು ನೋಡಿ ಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ನಿನ್ನೆಯೇ ಉಪಾಸನಾ ಹೆರಿಗೆಗಾಗಿ ಹೈದರಾಬಾದ್ನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮುಂಜಾನೆ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ, ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ. ಸುದ್ದಿ ಕೇಳುತ್ತಿದ್ದಂತೆ ಅಭಿಮಾನಿಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ Mega Princess ಹ್ಯಾಷ್ಟ್ಯಾಗ್ ವೈರಲ್ ಆಗ್ತಿದೆ. ಕಳೆದ ಡಿಸೆಂಬರ್ನಲ್ಲಿ ಮೊದಲಿಗೆ ಚಿರಂಜೀವಿ ತಮ್ಮ ಸೊಸೆ ಉಪಾಸನಾ ಗರ್ಭಿಣಿ ಆಗಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಕೊನಿದೇಲ ಹಾಗೂ ಕಮಿಮೇನಿ ಫ್ಯಾಮಿಲಿ ಸದಸ್ಯರೆಲ್ಲಾ ಒಬ್ಬೊಬ್ಬರಾಗಿ ಹೋಗಿ ರಾಮಚರಣ್- ಉಪಾಸನಾ ಮಗಳನ್ನು ನೋಡಿ ಬರುತ್ತಿದ್ದಾರೆ. ಚಿರು ಹಾಗೂ ಪತ್ನಿ ಸುರೇಖಾ ಜೊತೆಗೆ ರಾಮ್ಚರಣ್ ಸಹೋದರಿಯರಾದ ಶ್ರೀಜಾ ಹಾಗೂ ಸುಶ್ಮಿತಾ ಆಸ್ಪತ್ರೆಗೆ ಹೋಗಿ ಬಂದಿರುವ ಫೋಟೊಗಳು, ವಿಡಿಯೋಗಳು ವೈರಲ್ ಆಗುತ್ತಿದೆ. ಸಾಕಷ್ಟು ಜನ ಅಭಿಮಾನಿಗಳು ಆಸ್ಪತ್ರೆ ಮುಂದೆ ಜಮಾಯಿಸಿ ಸಂಭ್ರಮಿಸುತ್ತಿದ್ದಾರೆ. ಪೊಲೀಸರ ಬಿಗಿ ಭದ್ರತೆ ಒದಗಿಸಲಾಗಿದೆ.
ಮೆಗಾಸ್ಟಾರ್ ಚಿರಂಜೀವಿ ಟ್ವೀಟ್
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚಿರಂಜೀವಿ ಟ್ವೀಟ್ಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಸದ್ಯ ಮೊಮ್ಮಗಳ ಆಗಮನದ ಬಗ್ಗೆ "ಲಿಟಲ್ ಮೆಗಾ ಪ್ರಿನ್ಸೆಸ್ಗೆ ಸ್ವಾಗತ.. ನಿನ್ನ ಆಗಮನದ ಮೂಲಕ ಮೆಗಾ ಫ್ಯಾಮಿಲಿಗೆ ಸಂತಸ ತಂದಿದ್ದೀಯಾ. ನಿನ್ನ ತಂದೆ-ತಾಯಿ ಚರಣ್ ಮತ್ತು ಉಪಾಸನಾ ಸದಾ ಎಲ್ಲರ ಆಶೀರ್ವಾದ ಇರುತ್ತದೆ. ಅಜ್ಜ- ಅಜ್ಜಿಯಾಗಿ ನಮಗೂ ಸಂತೋಷ ಮತ್ತು ಹೆಮ್ಮೆ ಇದೆ" ಎಂದು ಚಿರು ಟ್ವೀಟ್ ಮಾಡಿದ್ದಾರೆ.

10 ವರ್ಷ ಮಕ್ಕಳ ಬೇಡ ಎಂದು ನಿರ್ಧಾರ
ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಉಪಾಸನಾ 10 ವರ್ಷ ಮಕ್ಕಳು ಬೇಡ ಎಂದು ನಿರ್ಧರಿಸಿದ್ದಾಗಿ ಹೇಳಿದ್ದರು. "ಮದುವೆ ಆದಾಗಲೇ ನಾನು ಚರಣ್ 10 ವರ್ಷಗಳ ಕಾಲ ಮಕ್ಕಳು ಬೇಡ ಎಂದು ನಿರ್ಧರಿಸಿದ್ದೆವು. ನಾವು ತೆಗೆದುಕೊಂಡ ನಿರ್ಧಾರಕ್ಕೆ ಬದ್ದರಾಗಿ ಇದ್ದೆವು. ಈಗ ಇಬ್ಬರೂ ನಮ್ಮ ನಮ್ಮ ಕ್ಷೇತ್ರದಲ್ಲೇ ಉನ್ನತಮಟ್ಟದಲ್ಲಿ ಇದ್ದೇವೆ. ಆರ್ಥಿಕವಾಗಿ ಸ್ಥಿರಗೊಂಡಿದ್ದೇವೆ. ನಮ್ಮ ಮಕ್ಕಳನ್ನು ಯಾವುದೇ ಕೊರತೆ ಇಲ್ಲದೇ ಪೋಷಿಸಲು ಸಿದ್ಧರಿದ್ದೇವೆ. ಹಾಗಾಗಿ ಈಗ ಮಕ್ಕಳು ಮಾಡಿಕೊಳ್ಳುತ್ತಿದ್ದೇವೆ" ಎಂದಿದ್ದರು.
ಹೊಕ್ಕುಳ ಬಳ್ಳಿ ರಕ್ತ ಶೇಖರಣೆ
ವೈದ್ಯಕೀಯ ಹಿನ್ನೆಲೆ ಇರುವ ಕುಟುಂಬದಿಂದ ಬಂದ ಉಪಾಸನಾ ತಮ್ಮ ಮಗುವಿನ ಬಗ್ಗೆ ಸಾಕಷ್ಟು ಕನಸು ಕಂಡಿದ್ದಾರೆ. ಹೆರಿಗೆ ವಿಚಾರವಾಗಿ ಮಗುವಿನ ಭವಿಷ್ಯದ ವಿಚಾರವಾಗಿ ಸಾಕಷ್ಟು ಮುಂಜಾಗ್ರತೆ ಕೈಗೊಂಡಿದ್ದರು. ತನ್ನ ಮಗುವಿನ ಹೊಕ್ಕುಳ ಬಳ್ಳಿ ರಕ್ತವನ್ನು ಶೇಖರಿಸಿ ಇಡಲು ತೀರ್ಮಾನಿಸಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಮಾಹಿತಿ ಹಂಚಿಕೊಂಡಿದ್ದರು. ಹೊಕ್ಕುಳ ಬಳ್ಳಿ ರಕ್ತ ಶೇಖರಣೆ ಯಾಕೆ? ಅದರ ಮಹತ್ವ ಏನು ಎನ್ನುವುದನ್ನು ವಿವರಿಸಿದ್ದರು.
ಸಿನಿಮಾ ಚಿತ್ರೀಕರಣಕ್ಕೆ ಚರನ್ ಬ್ರೇಕ್
ಸದ್ಯ ರಾಮ್ಚರಣ್ 'ಗೇಮ್ ಚೇಂಜರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಂಕರ್ ನಿರ್ದೇಶನದ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಆದರೆ ಕಳೆದ ಕೆಲ ದಿನಗಳಿಂದ ಶೂಟಿಂಗ್ಗೆ ಬ್ರೇಕ್ ಹಾಕಿ ಪತ್ನಿ ಜೊತೆ ಕಾಲ ಕಳೆಯುತ್ತಿದ್ದರು. ಇನ್ನು ಉಪಾಸನಾ ಹೆರಿಗೆ ನಂತರ ಕೂಡ ಒಂದಷ್ಟು ದಿನ ಆಕೆ ಜೊತೆ ಕಳೆಯಲು ತೀರ್ಮಾನಿಸಿದ್ದಾರೆ. ಇನ್ನೆರಡು ತಿಂಗಳು ಚಿತ್ರೀಕರಣ ಹೋಗದಿರಲು ಮನಸ್ಸು ಮಾಡಿದ್ದಾರೆ.


Click it and Unblock the Notifications











