ಜೂನ್ ಒಂದರಿಂದ ಚಿತ್ರಮಂದಿರಗಳು ಬಂದ್, ಕಾರಣವೇನು ?
ವ್ಯಾಪಾರವಾಗುತ್ತದೋ ಇಲ್ಲವೋ ? ತಮ್ಮ ಚಿತ್ರ ಚಿತ್ರಮಂದಿರಕ್ಕೆ ಬಂದಮೇಲೆ ಏನಾಗುತ್ತದೋ ಗೊತ್ತಿರೋದಿಲ್ಲ. ಆದರೂ ಕೋಟಿ ಕೋಟಿ ಹಣ ಸುರಿದು ಸಿನಿಮಾ ಮಾಡುವ ಅನೇಕ ನಿರ್ಮಾಪಕರು ಭಾರತೀಯ ಚಿತ್ರರಂಗದಲ್ಲಿದ್ದಾರೆ. ಇಡೀ ಬದುಕನ್ನೇ ಪಣಕ್ಕಿಟ್ಟು ಚಿತ್ರ ನಿರ್ಮಾಣ ಮಾಡುವ ಇಂಥ ಒಬ್ಬೊಬ್ಬ ನಿರ್ಮಾಪಕರಿಂದ ನೂರಾರು ಜನ ಕಾರ್ಮಿಕರ ಮನೆಯಲ್ಲಿ ಅನ್ನ ಬೇಯುತ್ತದೆ, ದೀಪ ಉರಿಯುತ್ತದೆ. ಆದರೆ, ಬದಲಾದ ಈ ಕಾಲದಲ್ಲಿ
ನಿರ್ಮಾಪಕರ ಮನೆ ದೀಪವೇ ಆರುವಂತಹ ವಾತಾವರಣ ನಿರ್ಮಾಣವಾಗಿದೆ. ಗಗನಕ್ಕೇರಿರುವ ಸ್ಟಾರ್ಗಳ ಸಂಭಾವನೆ, ಚಿತ್ರಮಂದಿರದ ಸಮಸ್ಯೆ, ಪ್ರೇಕ್ಷಕರ ಕೊರತೆ, ಓಟಿಟಿ ವೇದಿಕೆಯ ಹಾವಳಿ, ಚಿತ್ರರಂಗದ ಖರ್ಚು ವೆಚ್ಚ, ಸರ್ಕಾರದ ತೆರಿಗೆ ನೀತಿ, ಹೀಗೆ ಹತ್ತು ಹಲವು ಸವಾಲುಗಳಿಂದ ಅನೇಕ ನಿರ್ಮಾಪಕರ ಬದುಕು ಬೀದಿಗೆ ಬಂದಿದೆ.

ಇದಕ್ಕೆ ಪುರಾವೆ ಎನ್ನುವಂತೆ ಕಳೆದ ವರ್ಷದ ಅಂತ್ಯದಲ್ಲಿ ಲಾಭ-ನಷ್ಟದ ಲೆಕ್ಕವನ್ನು ಹಂಚಿಕೊಂಡಿದ್ದ ಮಲಯಾಳಂ ಚಿತ್ರರಂಗದ ನಿರ್ಮಾಪಕರ ಸಂಘ ಹೂಡಿಕೆ ಮಾಡಲಾಗಿದ್ದ ₹1000 ಕೋಟಿಯಲ್ಲಿ ಕೇವಲ ₹300 ಕೋಟಿ ಮಾತ್ರ ಮರಳಿ ಬಂದಿದೆ. ಬಾಕಿ ಉಳಿದ ₹700 ಕೋಟಿ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಕೊಚ್ಚಿಕೊಂಡು ಹೋಗಿದೆ ಎಂದು ಹೇಳಿತ್ತು. 2025ರ ಜೂನ್ ಒಂದರಿಂದ ಚಿತ್ರಮಂದಿರ ಬಂದ್ ಮಾಡುವುದಾಗಿ ಹೇಳಿತ್ತು.
ಇದೀಗ ತಮ್ಮ ಮಾತಿಗೆ ಬದ್ಧವಾಗಿರುವ ಮಲಯಾಳಂ ಚಿತ್ರರಂಗ ಜೂನ್ 1 ರಿಂದ ಚಿತ್ರಮಂದಿರದ ಬಾಗಿಲು ಹಾಕಲು ಮುಂದಾಗಿದೆ. ಇನ್ನು, ಕೇವಲ ಮಲಯಾಳಂ ಚಿತ್ರರಂಗ ಮಾತ್ರವಲ್ಲ. ತೆಲುಗು ಚಿತ್ರರಂಗ ಕೂಡ ಹತ್ತು ಹಲವು ಸಮಸ್ಯೆಗಳಿಂದ ನರಳುತ್ತಿದೆ. ಹೀಗಾಗಿಯೇ ಮಲಯಾಳಂ ಚಿತ್ರರಂಗದವರ ಹಾದಿಯಲ್ಲಿಯೇ ನಡೆಯುವ ತೀರ್ಮಾನಕ್ಕೆ ಬಂದಿರುವ ಚಿತ್ರ ಪ್ರದರ್ಶಕರು, ಜೂನ್ 1 ರಂದು ಪ್ರತಿಭಟನೆಗೆ ಕರೆ ನೀಡಿದ್ದಾರೆ. ಜೂನ್ 1ರಿಂದ ಈಸ್ಟ್ ಗೋಧಾವರಿ ಭಾಗದ ಎಲ್ಲ ಚಿತ್ರಮಂದಿರಗಳನ್ನು ಬಂದ್ ಮಾಡಲು ಮುಂದಾಗಿದ್ದಾರೆ.
ಇನ್ನು ಒಂದು ವೇಳೆ ತೆಲುಗು ಪ್ರದರ್ಶಕರು ಮತ್ತು ವಿತರಕರು ತಮ್ಮ ನಿರ್ಧಾರ ಬದಲಿಸದೇ ಇದ್ದರೆ ತೆಲುಗು ಚಿತ್ರಪ್ರೇಮಿಗಳಿಗೆ ಭಾರೀ ನಿರಾಸೆಯಾಗಲಿದೆ. ಯಾಕೆಂದರೆ ಜೂನ್ನಲ್ಲಿ ದೊಡ್ಡ ದೊಡ್ಡ ತೆಲುಗು ಚಿತ್ರಗಳು ಬಿಡುಗಡೆಯಾಗಲಿವೆ. ಆ ಪೈಕಿ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ವಿಶ್ವಂಭರ, ರವಿತೇಜಾ ಮತ್ತು ನಿತಿನ್ ಅವರ ಚಿತ್ರಗಳು ಕೂಡ ಇವೆ. ಹೀಗಾಗಿ ಚಿತ್ರಮಂದಿರದ ಬಂದ್ ವಿಚಾರದ ಕುರಿತು ತೆಲುಗು ಚಿತ್ರರಂಗದಲ್ಲಿ ಈಗ ಭಾರೀ ಚರ್ಚೆ ಶುರುವಾಗಿದೆ.
ಅಂದ್ಹಾಗೇ ತೆಲುಗು ವಿತರಕರು ಆಂಧ್ರ ಪ್ರದೇಶ ಮತ್ತು ತೆಲಂಗಾಣವನ್ನು ನಿಜಾಮ್, ಸೀಡೆಡ್, ಆಂಧ್ರ ಮತ್ತು ಈಸ್ಟ್ ಗೋಧಾವರಿ ಎಂದು ಹೀಗೆ ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿಕೊಂಡಿದ್ದಾರೆ. ಆ ಪೈಕಿ ಈಸ್ಟ್ ಗೋಧಾವರಿಯ ಪ್ರದರ್ಶಕರು ವಿತರಕರಲ್ಲಿ ಸದ್ಯ ನೀಡುತ್ತಿರುವ ಬಾಡಿಗೆ ಸಾಲುತ್ತಿಲ್ಲ, ಹೆಚ್ಚು ನೀಡುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ.
ಆದರೆ ವಿತರಕ ವಲಯ ಪ್ರದರ್ಶಕರ ಮನವಿಗೆ ಕವಡೆ ಕಾಸಿನ ಕಿಮ್ಮುತ್ತು ನೀಡಿಲ್ಲ. ಬದಲಿಗೆ ಲಾಭ ಹಂಚಿಕೆ ಮಾಡೆಲ್ನಲ್ಲಿ ಚಿತ್ರಗಳನ್ನು ವಿತರಣೆ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ಒಪ್ಪದ ಪ್ರದರ್ಶಕರು ಚಿತ್ರಮಂದಿರಗಳನ್ನು ಜೂನ್ 1ರಿಂದ ಬಂದ್ ಮಾಡುವುದಾಗಿ ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಸದ್ಯ ಕೇರಳ ಮತ್ತು ಆಂಧ್ರದ ಈಸ್ಟ್ ಗೋದಾವರಿಯಲ್ಲಿ ಚಿತ್ರಮಂದಿರಗಳನ್ನು ಜೂನ್ ಒಂದರಿಂದ ಮುಚ್ಚುವ ತೀರ್ಮಾನ ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಾ ? ತಮ್ಮ ನಿರ್ಧಾರವನ್ನು ಮಲಯಾಳಂ ಚಿತ್ರ ನಿರ್ಮಾಪಕರು ಬದಲಿಸುತ್ತಾರಾ ? ಆಂಧ್ರದಲ್ಲಿ ವಿತರಕರು ಮತ್ತು ಪ್ರದರ್ಶಕರ ನಡುವಿನ ಬಿಕ್ಕಟ್ಟು ಶಮನವಾಗುತ್ತಾ ಎನ್ನುವುದನ್ನು ನೋಡಬೇಕಿದೆ.


Click it and Unblock the Notifications











