ಮತ್ತೆ ಸುದ್ದಿಯಲ್ಲಿ ಚಿರಂಜೀವಿ ಕುಟುಂಬ: ಅಳಿಯನ ವಿರುದ್ಧ ದೂರು
ಮೆಗಾಸ್ಟಾರ್ ಚಿರಂಜೀವಿ ಕುಟುಂಬಕ್ಕೆ ಆಂಧ್ರ, ತೆಲಂಗಾಣಗಳಲ್ಲಿ ಕೋಟ್ಯಂತರ ಅಭಿಮಾನಿಗಳಿದ್ದಾರೆ. ತೆಲುಗು ರಾಜ್ಯಗಳ ಜನ ಬಹಳ ಗೌರವಾದರಗಳನ್ನು ಈ ಕುಟುಂಬಕ್ಕೆ ನೀಡುತ್ತಾರೆ. ಅದಕ್ಕೆ ತಕ್ಕಂತೆಯೇ ಒಳ್ಳೆಯ ಸಿನಿಮಾಗಳ ಜೊತೆಗೆ ಸಾಕಷ್ಟು ಸಾಮಾಜಿಕ ಕಾರ್ಯದಲ್ಲಿಯೂ ಈ ಕುಟುಂಬದವರು ತೊಡಗಿಕೊಂಡಿದ್ದಾರೆ.
ಅದರ ಜೊತೆಗೆ ಕೆಲವು ವಿವಾದಗಳೂ ಸಹ ಮೆಗಾಸ್ಟಾರ್ ಕುಟುಂಬಕ್ಕೆ ಅಂಟಿಕೊಂಡಿವೆ. ಚಿರಂಜೀವಿ ಮಗಳ ಮದುವೆ ಪುರಾಣ, ಪವನ್ ಕಲ್ಯಾಣ್ ಸರಣಿ ಮದುವೆ, ಪವನ್ ಕಲ್ಯಾಣ್-ಚಿರಂಜೀವಿ ಮುಗಿಸು, ಚಿರಂಜೀವಿ ಸಹೋದರ ನಾಗಬಾಬು, ಚಿರಂಜೀವಿ ಮಗನ ನಡುವಿನ ಕೋಲ್ಡ್ ವಾರ್ ಹೀಗೆ ಕೆಲವು ಸಮಸ್ಯೆಗಳು ಇವರ ಕುಟುಂಬದಲ್ಲಿವೆ.
ಇದೀಗ ಚಿರಂಜೀವಿ ಸಹೋದರ ನಾಗಬಾಬು ಅಳಿಯನ ವಿರುದ್ಧ ಪೊಲೀಸ್ ದೂರು ದಾಖಲಾಗಿರುವುದು ಸುದ್ದಿಯಾಗಿದೆ. ನಾಗಬಾಬು ಮಗಳು ನಿಹಾರಿಕಾ ಇತ್ತೀಚೆಗಷ್ಟೆ ವಿವಾಹವಾಗಿದ್ದರು. ನಿಹಾರಿಕ ಪತಿ ಜೊನ್ನಲಗಡ ಚೈತನ್ಯ ವಿರುದ್ಧ ಇಂದು ಬೆಳಿಗ್ಗೆ ದೂರು ದಾಖಲಾಗಿದೆ.
ಹೈದರಾಬಾದ್ನ ಶೇಕ್ಪೇಟ್ನಲ್ಲಿರುವ ಟೆನ್ಸಿಸಾ ಅಪಾರ್ಟ್ಮೆಂಟ್ನ ಕೆಲವು ನಿವಾಸಿಗಳು ನಿಹಾರಿಕ ಪತಿ ಚೇತನ್ಯ ಜೊನ್ನಲಗಡ ವಿರುದ್ಧ ಇಂದು ಬೆಳಿಗ್ಗೆ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಚೈತನ್ಯ ನಿನ್ನೆ (ಆಗಸ್ಟ್ 04) ರ ಮಧ್ಯರಾತ್ರಿ ಅಪಾರ್ಟ್ಮೆಂಟ್ನಲ್ಲಿ ಗಲಾಟೆ ಮಾಡಿ ಇತರ ನಿವಾಸಿಗಳಿಗೆ ತೊಂದರೆ ಕೊಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಚೈತನ್ಯ ಸಹ ಅಪಾರ್ಟ್ಮೆಂಟ್ ನಿವಾಸಿಗಳ ವಿರುದ್ಧ ದೂರು ನೀಡಿದ್ದಾರೆ ಎಂದು ಕೆಲವು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಅರ್ಧರಾತ್ರಿ ಮನೆಯ ಬಾಗಿಲು ಬಡಿದರು: ಚೈತನ್ಯ
ಘಟನೆ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಜೊನ್ನಲಗಡ ಚೈತನ್ಯ, ''ನಿನ್ನೆ ರಾತ್ರಿ ಅಪಾರ್ಟ್ಮೆಂಟ್ ನಿವಾಸಿಗಳು ಕೆಲವರು ನನ್ನ ಫ್ಲ್ಯಾಟ್ಗೆ ಬಂದು ಜೋರಾಗಿ ಬಾಗಿಲು ತಟ್ಟಿ ಗಲಾಟೆ ಮಾಡಲು ಆರಂಭಿಸಿದರು. ನಾನು ಬಾಗಿಲು ತೆರೆಯದೆ ಮೊದಲು ಪೊಲೀಸರಿಗೆ ವಿಷಯ ತಿಳಿಸಿದೆ. ನಂತರ ಅಪಾರ್ಟ್ಮೆಂಟ್ ಮಾಲೀಕರಿಗೆ ವಿಷಯ ತಿಳಿಸಿ ಅವರನ್ನು ಸ್ಥಳಕ್ಕೆ ಬರಲು ಹೇಳಿದೆ'' ಎಂದು ಘಟನೆಯನ್ನು ವಿವರಿಸಿದ್ದಾರೆ.

ಸಿಸಿಟಿವಿ ದೃಶ್ಯಗಳನ್ನು ಪೊಲೀಸರಿಗೆ ನೀಡಿದ್ದ ಚೈತನ್ಯ
''ರಾತ್ರೊರಾತ್ರಿ ನನ್ನ ಫ್ಲ್ಯಾಟ್ಗೆ ನುಗ್ಗಿದ ಸುಮಾರು 20 ಮಂದಿ ಅಪಾರ್ಟ್ಮೆಂಟ್ ನಿವಾಸಿಗಳು ನನ್ನ ವಿರುದ್ಧ ಜಗಳ ಆರಂಭಿಸಿದರು. ನಾನು ಆ ಅಪಾರ್ಟ್ಮೆಂಟ್ನಲ್ಲಿ ವಾಣಿಜ್ಯ ಉದ್ದೇಶಕ್ಕೆ ಕಚೇರಿ ತೆರೆದಿದ್ದೆ. ಅದೇ ಉದ್ದೇಶಕ್ಕಾಗಿ ಅಲ್ಲಿ ಫ್ಲ್ಯಾಟ್ ಖರೀದಿಸಿದ್ದೆ. ಆದರೆ ನಾನು ಅಲ್ಲಿ ಕಚೇರಿ ತೆರೆಯಬಾರದು. ಅಪಾರ್ಟ್ಮೆಂಟ್ ಬಿಟ್ಟು ತೆರಳಬೇಕು ಎಂದು ಅವರು ಒತ್ತಾಯಿಸಿದರು. 20 ಮಂದಿ ಅಪಾರ್ಟ್ಮೆಂಟ್ ನಿವಾಸಿಗಳು ನನ್ನ ಫ್ಲ್ಯಾಟ್ ಒಳಗೆ ಬಂದು ಗಲಾಟೆ ಎಬ್ಬಿಸಿದ ಸಿಸಿಟಿವಿ ದೃಶ್ಯಗಳನ್ನು ಬಂಜಾರ ಹಿಲ್ಸ್ ಪೊಲೀಸರಿಗೆ ನಾನು ನೀಡದ್ದೇನೆ'' ಎಂದು ಚೈತನ್ಯ ಹೇಳಿದ್ದಾರೆ.

ಆಗಸ್ಟ್ 10ರಂದು ಅಪಾರ್ಟ್ಮೆಂಟ್ ಖಾಲಿ
''ನಾನು ವಾಣಿಜ್ಯ ಉದ್ದೇಶಕ್ಕೆ ಫ್ಲ್ಯಾಟ್ ಖರೀದಿಸಿರುವುದನ್ನು ಅಪಾರ್ಟ್ಮೆಂಟ್ ಮಾಲೀಕ ಇತರ ನಿವಾಸಿಗಳಿಗೆ ತಿಳಿಸಿರಲಿಲ್ಲ ಹಾಗಾಗಿ ಅಲ್ಲಿ ಸಮಸ್ಯೆಯಾಯಿತು. ಆದರೆ ಇಂದು (ಆಗಸ್ಟ್ 05) ಬಂಜಾರಾ ಹಿಲ್ಸ್ ಪೊಲೀಸರು ಹಾಗೂ ಅಪಾರ್ಟ್ಮೆಂಟ್ ಮಾಲೀಕರ ಮಧ್ಯಸ್ಥಿಕೆಯಿಂದಾಗಿ ಸಮಸ್ಯೆ ಬಗೆಹರಿದಿದೆ'' ಎಂದಿದ್ದಾರೆ ಚೈತನ್ಯ. ಪರಸ್ಪರ ಇಬ್ಬರೂ ಒಬ್ಬರ ಮೇಲೊಬ್ಬರು ನೀಡಿದ್ದ ದೂರುಗಳನ್ನು ವಾಪಸ್ ಪಡೆದಿದ್ದಾರೆ. ಇದೇ ತಿಂಗಳ 10ರಂದು ಅಪಾರ್ಟ್ಮೆಂಟ್ ಖಾಲಿ ಮಾಡುತ್ತಿರುವುದಾಗಿ ಸಹ ಚೈತನ್ಯ ಹೇಳಿದ್ದಾರೆ.

ಮೆಗಾ ಕುಟುಂಬದ ಅಳಿಯ ಚೈತನ್ಯ ಯಾರು?
ಉದ್ಯಮಿ ಆಗಿರುವ ಚೈತನ್ಯ ತಂದೆ ಪ್ರಭಾಕರ್ ಆಂಧ್ರ ಪೊಲೀಸ್ ಇಲಾಖೆಯಯಲ್ಲಿ ಐಜಿಪಿ. ಅವರ ತಾಯಿ ಗೃಹಿಣಿ. ಜುಲೈ 27, 1990 ರಲ್ಲಿ ಹುಟ್ಟಿರುವ ಚೈತನ್ಯ, ಗಣಿತ ವಿಷಯದಲ್ಲಿ ಎಂಎಸ್ಸಿ ಮಾಡಿದ್ದಾರೆ. ಅದೂ ಭಾರತದ ಪ್ರತಿಷ್ಟಿತ ವಿವಿಗಳಲ್ಲಿ ಒಂದಾದ ಟಾಟಾ ಇನ್ಸ್ಟಿಟ್ಯೂಟ್ನಿಂದ. ವ್ಯವಹಾರ ಶಾಸ್ತ್ರ ಹಾಗೂ ತಂತ್ರ ವಿಷಯದಲ್ಲಿ ಎಂಬಿಎ ಸಹ ಮಾಡಿದ್ದಾರೆ. ಆ ನಂತರ ಸೂರ್ಯಾ ಎಲಿಕ್ಸೈರ್ಸ್ ಸಂಸ್ಥೆಯಲ್ಲಿ ಉದ್ಯೋಗ ಆರಂಭಿಸಿದ ಚೈತನ್ಯ, ಆ ನಂತರ ಆಂಧ್ರ ಸರ್ಕಾರದ ಕೆಪಿಎಂಜಿ ಕಾರ್ಯಕ್ರಮದ ವ್ಯವಸ್ಥಾಪಕರಾಗಿ ಕೆಲಸ ಮಾಡಿದರು. ಟೆಕ್ ಮಹೀಂದ್ರಾ ದಲ್ಲಿ ಸಹ ಕೆಲ ಕಾಲ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ. ನೆಕ್ಸ್ಲೆ ಇಂಡಿಯಾ, ಐಬಿಎಂ, ಏರ್ಟೆಲ್ ಇನ್ನೂ ಹಲವು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದಾರೆ ಚೈತನ್ಯ. ವರದಿ ಪ್ರಕಾರ ಅವರ ವಾರ್ಷಿಕ ಮೌಲ್ಯ 4 ಕೋಟಿಯಂತೆ. ಚೈತನ್ಯ ಹಾಗೂ ನಾಗಬಾಬು ಮಗಳು ನಿಹಾರಿಕಾ ಕಳೆದ ವರ್ಷ ಡಿಸೆಂಬರ್ನಲ್ಲಿ ಜೈಪುರದಲ್ಲಿ ಅದ್ಧೂರಿಯಾಗಿ ವಿವಾಹವಾದರು.


Click it and Unblock the Notifications











