ಆ ವಿಚಾರದಲ್ಲಿ ಮೆಗಾಸ್ಟಾರ್ ಚಿರಂಜೀವಿಗೆ ಮಾದರಿಯಾದ ದರ್ಶನ್; ಅದು ಹೇಗೆ?
ಒಂದು ಸಿನಿಮಾ ಗೆಲ್ಲುವುದು ಅಷ್ಟು ಸುಲಭ ಅಲ್ಲ. ಒಳ್ಳೆ ಸಿನಿಮಾ ಮಾಡಿದರೂ ನೆಗೆಟಿವ್ ಕಾಮೆಂಟ್ಸ್ ಕಾರಣಕ್ಕೆ ಸಿನಿಮಾಗಳು ಸಂಕಷ್ಟ ಎದುರಿಸುವ ವಾತಾವರಣ ನಿರ್ಮಾಣವಾಗಿದೆ. ಚಿತ್ರರಂಗಕ್ಕೆ ಪೈರಸಿ ಮಾತ್ರವಲ್ಲ, ನೆಗೆಟಿವ್ ರಿವ್ಯೂ ಹಾಗೂ ರೇಟಿಂಗ್ ಕೂಡ ಸಂಕಷ್ಟ ತಂದೊಡ್ಡುತ್ತಿದೆ. ಇದರಿಂದ ಫಿಲ್ಮ್ ಮೇಕರ್ಸ್ ನಷ್ಟ ಅನುಭವಿಸುವಂತಾಗಿತ್ತು. ನೆಗೆಟಿವ್ ರಿವ್ಯೂ, ರೇಟಿಂಗ್ಗೆ ಬ್ರೇಕ್ ಹಾಕಲು ಕರಸತ್ತು ನಡೆಯುತ್ತಲೇ ಇತ್ತು.
ತೆಲುಗಿನಲ್ಲಿ ಚಿರಂಜೀವಿ ನಟನೆಯ 'ಮನ ಶಂಕರ ವರಪ್ರಸಾದ್ ಗಾರು' ಸಿನಿಮಾ ಬಿಡುಗಡೆ ಆಗಿದೆ. ಅನಿಲ್ ರಾವಿಪುಡಿ ನಿರ್ದೇಶನದ ಈ ಕಾಮಿಡಿ ಎಂಟರ್ಟೈನರ್ ಚಿತ್ರದಲ್ಲಿ ನಯನತಾರಾ, ವೆಂಕಟೇಶ್ ಕೂಡ ನಟಿಸಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಬಿಡುಗಡೆ ಆಗುತ್ತಿರುವ ಚಿತ್ರಕ್ಕೆ ನೆಗೆಟಿವ್ ರಿವ್ಯೂ, ರೇಟಿಂಗ್ ಕೊಡದಂತೆ ನ್ಯಾಯಾಲಯದಿಂದ ಸ್ಟೇ ತರಲಾಗಿದೆ. ಈ ಟ್ರೆಂಡ್ ಮೊದಲಿಗೆ ಕನ್ನಡ ಚಿತ್ರರಂಗದಲ್ಲೇ ಶುರುವಾಗಿತ್ತು. ದರ್ಶನ್ ನಟನೆಯ 'ಡೆವಿಲ್' ಚಿತ್ರಕ್ಕೆ ಇದೇ ರೀತಿ ನ್ಯಾಯಾಲಯದಿಂದ ಚಿತ್ರತಂಡ ಆದೇಶ ತಂದಿತ್ತು.

ಆನ್ಲೈನ್ ಟಿಕೆಟ್ ಬುಕ್ಕಿಂಗ್ ಆಪ್ ಬುಕ್ಮೈ ಮೈ ಶೋನಲ್ಲಿ ಚಿತ್ರಕ್ಕೆ ರಿವ್ಯೂ ಹಾಗೂ ರೇಟಿಂಗ್ ನೀಡುವ ಅವಕಾಶ ಇದೆ. ಟಿಕೆಟ್ ಬುಕ್ ಮಾಡಿದವರು ಸಿನಿಮಾ ನೋಡಿದ ಬಳಿಕ ತಮ್ಮ ಅಭಿಪ್ರಾಯ ತಿಳಿಸಬಹುದು. ಇದನ್ನು ನೋಡಿ ಪ್ರೇಕ್ಷಕರು ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡುತ್ತಾರೆ. ಆದರೆ ಕೆಲವರು ಬೇಕೆಂದೇ ನೆಗೆಟಿವ್ ರಿವ್ಯೂ, ರೇಟಿಂಗ್ ಕೊಡುತ್ತಾರೆ ಎನ್ನುವ ಆರೋಪ ಇದೆ. ಹಾಗಾಗಿ 'ಡೆವಿಲ್' ಚಿತ್ರತಂಡ ನ್ಯಾಯಾಲಯದಿಂದ ಆದೇಶ ತಂದು ಬುಕ್ ಮೈ ಶೋನಲ್ಲಿ ರೇಟಿಂಗ್ ಕೊಡುವ ಅವಕಾಶಕ್ಕೆ ಬ್ರೇಕ್ ಹಾಕಿತ್ತು. ಇದೀಗ 'ಮನ ಶಂಕರ ವರಪ್ರಸಾದ್ ಗಾರು' ಚಿತ್ರತಂಡ ಕೂಡ ಇದೇ ಪ್ರಯತ್ನ ಮಾಡಿದೆ.
ಸಿನಿಮಾ ನೋಡಿದವರು ಬುಕ್ಮೈ ಶೋನಲ್ಲಿ ರಿವ್ಯೂ ಮಾಡಲು ಸಾಧ್ಯವಾಗ್ತಿಲ್ಲ. "ಕೋರ್ಟ್ ಆದೇಶದಂತೆ ರೇಟಿಂಗ್ ಹಾಗೂ ವಿಮರ್ಶೆಯನ್ನು ನಿಷ್ಕ್ರಿಯಗೊಳಿಸಲಾಗಿದೆ" ಎನ್ನುವ ಸಂದೇಶ ಬರ್ತಿದೆ. ಇತ್ತೀಚೆಗೆ ಬಿಡುಗಡೆ ಆಗಿದ್ದ 'ದಿ ರಾಜಾಸಾಬ್' ಚಿತ್ರಕ್ಕೆ ಬುಕ್ಮೈ ಶೋನಲ್ಲಿ ರಿವ್ಯೂ ಮಾಡಲು ಅವಕಾಶ ಇದೆ. ಆದರೆ 'ಮನ ಶಂಕರ ವರಪ್ರಸಾದ್ ಗಾರು' ಚಿತ್ರಕ್ಕೆ ಆ ಅವಕಾಶ ಸಿಕ್ತಿಲ್ಲ. 'ಡೆವಿಲ್' ಬಳಿಕ ಕನ್ನಡದಲ್ಲಿ ಸುದೀಪ್ ನಟನೆಯ 'ಮಾರ್ಕ್' ಹಾಗೂ ಅರ್ಜುನ್ ಜನ್ಯಾ ನಿರ್ದೇಶನದ '45' ಚಿತ್ರಗಳಿಗೂ ಇದೇ ರೀತಿ ನ್ಯಾಯಾಲಯದಿಂದ ಆದೇಶ ತರಲಾಗಿತ್ತು.

ಸಿನಿಮಾ ಚೆನ್ನಾಗಿದ್ದರೆ ಜನ ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡುತ್ತಾರೆ. ಯಾರು ಕೂಡ ಬುಕ್ಮೈ ಶೋ ರಿವ್ಯೂ, ರೇಟಿಂಗ್ ನೋಡಿ ಸಿನಿಮಾ ನೋಡಲು ಮುಂದಾಗುವುದಿಲ್ಲ. ಇದೆಲ್ಲ ವ್ಯರ್ಥ ಪ್ರಯತ್ನ ಎಂದು ಹೇಳುವವರು ಇದ್ದಾರೆ. ಚಿತ್ರಕ್ಕೆ ಬರುವ ನೆಗೆಟಿವ್ ಕಾಮೆಂಟ್ಸ್ ಎಲ್ಲವೂ ಫೇಕ್ ಎನ್ನುವುದಕ್ಕೆ ಹೇಗೆ ಸಾಧ್ಯ. ಹಾಗಿದ್ದರೆ ಎಲ್ಲಾ ಸಿನಿಮಾಗಳಿಗೂ ನೆಗೆಟಿವ್ ಕಾಮೆಂಟ್ಸ್ ಮಾಡಿ ಸೋಲಿಸಬಹುದು ಅಲ್ಲವೇ? ಬುಕ್ಮೈ ಶೋ ರಿವ್ಯೂ ತಡೆದರೂ ಜನ ಮಾತನಾಡುವುದು, ಟ್ವಿಟ್ಟರ್, ಇನ್ಸ್ಟಾಗ್ರಾಮ್, ಫೇಸ್ಬುಕ್ನಲ್ಲಿ ರಿವ್ಯೂ ಮಾಡುವುದನ್ನು ತಡೆಯೋಕೆ ಆಗುತ್ತಾ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಆದರೆ 'ಮನ ಶಂಕರ ವರಪ್ರಸಾದ್ ಗಾರು' ಚಿತ್ರತಂಡದ ಪ್ರಯತ್ನಕ್ಕೆ ನಟ ವಿಜಯ್ ದೇವರಕೊಂಡ ಸೇರಿ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟರ ಫ್ಯಾನ್ಸ್ ವಾರ್ ಜಾಸ್ತಿ. ಹಾಗಾಗಿ ಹೀಗೆ ನೆಗೆಟಿವ್ ರಿವ್ಯೂ ಮಾಡುವವರ ಸಂಖ್ಯೆ ಹೆಚ್ಚು ಎನ್ನುವ ಆರೋಪ ಕೇಳಿಬರುತ್ತದೆ. ಈ ಬಗ್ಗೆ ಕೆಲ ನಿರ್ಮಾಪಕರು ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ನೆಗೆಟಿವ್ ರಿವ್ಯೂ ಕಾರಣಕ್ಕೆ ನಮ್ಮ ಸಿನಿಮಾ ಸೋಲ್ತು ಎನ್ನುವವರು ಇದ್ದಾರೆ. ಹಾಗಾಗಿ 'ಮನ ಶಂಕರ ವರಪ್ರಸಾದ್ ಗಾರು' ಚಿತ್ರತಂಡದ ಪ್ರಯತ್ನವನ್ನು ಬೇರೆ ನಿರ್ಮಾಪಕರು ಅನುಸರಿಸುವ ಸಾಧ್ಯತೆಯಿದೆ. ಇದು ಸಿನಿಮಾ ಗೆಲ್ಲಲು ಸಹಾಯವಾಗುತ್ತಾ ಕಾದು ನೋಡಬೇಕಿದೆ.


Click it and Unblock the Notifications











