ಬಾಲಯ್ಯ ಹುಟ್ಟುಹಬ್ಬಕ್ಕೆ ಯುವರಾಜ್ ಸಿಂಗ್ ಸ್ಪೆಷಲ್ ವಿಶ್; ಇಬ್ಬರನ್ನು ಆತ್ಮೀಯರನ್ನಾಗಿ ಮಾಡಿದ್ದು ಆ ಒಂದು ಒಳ್ಳೆಯ ಕಾರಣ
ಜೂನ್ 10, ಇಂದು ನಂದಮೂರಿ ಬಾಲಕೃಷ್ಣ ತಮ್ಮ 63ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತೆಲುಗು ಚಿತ್ರರಂಗದ ಈ ಹಿರಿಯ ನಟನ ಹುಟ್ಟುಹಬ್ಬಕ್ಕೆ ಚಿತ್ರರಂಗದ ವಿವಿಧ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಶುಭ ಕೋರಿದ್ದಾರೆ.
ಇನ್ನು ಬಾಲಕೃಷ್ಣ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನೆಚ್ಚಿನ ನಟನ ಫೋಟೊಗಳನ್ನು ಪೋಸ್ಟ್ ಮಾಡಿ ಶುಭ ಕೋರುತ್ತಿದ್ದಾರೆ ಹಾಗೂ ಇನ್ನೂ ಕೆಲ ಅಭಿಮಾನಿಗಳು ಸಾರ್ವಜನಿಕ ಸ್ಥಳಗಳಲ್ಲಿ ಅನ್ನದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಹೀಗೆ ಒಂದೆಡೆ ಅಭಿಮಾನಿ ಬಳಗ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರೆ, ಮತ್ತೊಂದೆಡೆ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಬಾಲಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಇನ್ನು ಸಿನಿಮಾ ಮಾತ್ರವಲ್ಲದೇ ಬೇರೆ ಕ್ಷೇತ್ರಗಳಲ್ಲಿಯೂ ಬಾಲಕೃಷ್ಣ ಸ್ನೇಹಿತರನ್ನು ಹೊಂದಿದ್ದು, ಕ್ರೀಡಾ ಕ್ಷೇತ್ರದ ಪ್ರಮುಖರು ಸಹ ಬಾಲಕೃಷ್ಣ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.
ವಿಶ್ವಕಪ್ ಹೀರೊ ಎಂದೇ ಖ್ಯಾತಿಯನ್ನು ಪಡೆದುಕೊಂಡಿರುವ ಯುವರಾಜ್ ಸಿಂಗ್ ಸಹ ಬಾಲಕೃಷ್ಣ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. 'ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ನಂದಮೂರಿ ಬಾಲಕೃಷ್ಣ ಸರ್. ನೀವು ನಿಮ್ಮ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಪರಿಣಾಮ ಬೀರಿದ್ದೀರ ಹಾಗೂ ಜೊತೆಗೆ ಎಲ್ಲರಿಗೂ ಸ್ಫೂರ್ತಿಯಾಗಿದ್ದೀರ. ಈ ವರ್ಷ ನಿಮ್ಮ ಪಾಲಿಗೆ ಚೆನ್ನಾಗಿರಲಿ. ಹುಟ್ಟುಹಬ್ಬದ ಶುಭಾಶಯಗಳು, ನಂದಮೂರಿ ಬಾಲಕೃಷ್ಣ" ಎಂದು ಯುವರಾಜ್ ಸಿಂಗ್ ಬರೆದುಕೊಂಡಿದ್ದಾರೆ.
ಇನ್ನು ಯುವರಾಜ್ ಸಿಂಗ್ ಹಾಗೂ ತೆಲುಗು ನಟ ನಂದಮೂರಿ ಬಾಲಕೃಷ್ಣ ನಡುವೆ ಇಷ್ಟರ ಮಟ್ಟಿಗಿನ ಬಾಂಧವ್ಯ ಹಾಗೂ ಆತ್ಮೀಯತೆ ಇರಲು ಕಾರಣ 2015ರಲ್ಲಿ ಈ ಇಬ್ಬರೂ ಕ್ಯಾನ್ಸರ್ ವಿರುದ್ಧ ಹೋರಾಡಬೇಕು ಎಂಬ ಮನಸ್ಥಿತಿಯನ್ನು ಹೊಂದಿದ್ದದ್ದು. ಹೌದು, ಯುವರಾಜ್ ಸಿಂಗ್ ಕ್ಯಾನ್ಸರ್ ಗೆದ್ದು ಬಂದ ನಂತರ 'ಯುವಿಕ್ಯಾನ್' ಎಂಬ ಎನ್ಜಿಒ ಆರಂಭಿಸಿ, ಅದರ ಅಡಿಯಲ್ಲಿ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬೇಕಾದ ಮೊತ್ತವನ್ನು ನಿಧಿ ಸಂಗ್ರಹಿಸುವ ಮೂಲಕ ಗಳಿಸಲು ಆರಂಭಿಸಿದ್ದರು.
ಇತ್ತ ನಂದಮೂರಿ ಬಾಲಕೃಷ್ಣ ಬಸವತಾರಕಂ ಇಂಡೋ ಅಮೆರಿಕನ್ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಅಧ್ಯಕ್ಷನಾಗಿದ್ದು, ಇದರ ಅಡಿಯಲ್ಲಿ ಬಾಲಯ್ಯ ಅದೆಷ್ಟೋ ಕ್ಯಾನ್ಸರ್ ರೋಗಿಗಳನ್ನು ಮಹಾಮಾರಿಯಿಂದ ರಕ್ಷಿಸಿದ್ದಾರೆ. ಹೀಗೆ 2015ರಲ್ಲಿ ಯುವರಾಜ್ ಸಿಂಗ್ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ಬಾಲಕೃಷ್ಣ ಅವರ ಬಸವತಾರಕಂ ಇಂಡೋ ಅಮೆರಿಕನ್ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಜತೆ ಕೈಜೋಡಿಸಿದರು.
ಅಂದಿನಿಂದ ಯುವ ರಾಜ್ ಸಿಂಗ್ ಹಾಗೂ ಬಾಲಕೃಷ್ಣ ಪರಿಚಯವಿದ್ದು, ಇಬ್ಬರ ನಡುವೆ ಆತ್ಮೀಯತೆ ಇದೆ. ಯುವರಾಜ್ ಸಿಂಗ್ ಬಾಲಕೃಷ್ಣ ಜತೆಗಿನ ಫೋಟೊ ಹಂಚಿಕೊಂಡು ಹುಟ್ಟುಹಬ್ಬಕ್ಕೆ ಶುಭಕೋರಿ ಪ್ರತೀ ವರ್ಷ ಪೋಸ್ಟ್ ಮಾಡುತ್ತಾ ಇರುತ್ತಾರೆ.
ಇನ್ನು ಯುವರಾಜ್ ಸಿಂಗ್ ಹಂಚಿಕೊಂಡಿರುವ ಈ ಫೋಟೊದಲ್ಲಿ ಬಾಲಕೃಷ್ಣ ಅವರ ಮುಖ ಎಡಿಟಿಂಗ್ ವೇಳೆ ಹಾಳಗಿರುವುದು ನೋಡಿದ ಕೂಡಲೇ ಕಂಡುಬರುತ್ತಿದ್ದು ಅದರ ಕುರಿತಾಗಿ ಕಾಮೆಂಟ್ ಹಾಗೂ ಟ್ರೋಲ್ಗಳು ಹರಿದಾಡಿವೆ.
ಇನ್ನು ತಮಿಳು ನಟ ಶರತ್ ಕುಮಾರ್ ಪುತ್ರಿ ವರಲಕ್ಷ್ಮಿ ಶರತ್ ಕುಮಾರ್ ಸಹ ಬಾಲಕೃಷ್ಣ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. "ಗಾಡ್ ಆಫ್ ಮಾಸಸ್ ನಂದಮೂರಿ ಬಾಲಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಲವ್ ಯೂ ಸರ್.. ಹೆಚ್ಚುಕಾಲ ಚೆನ್ನಾಗಿ ಬಾಳಿ. ಜನರಿಗೆ ನೀವು ಮಾಡಿದ ಉತ್ತಮ ಕೆಲಸಕ್ಕಾಗಿ ದೇವರು ನಿಮ್ಮನ್ನು ಹರಸಲಿ" ಎಂದು ವರಲಕ್ಷ್ಮಿ ಶರತ್ ಕುಮಾರ್ ಬರೆದುಕೊಂಡು ಬಾಲಕೃಷ್ಣ ಅವರ ಜತೆಗಿನ ತಮ್ಮ ಫೋಟೊಗಳನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











