ಬಹಳ ಕಿರುಕುಳ ನೀಡುತ್ತಿದ್ದಾರೆ; ಪೊಲೀಸರ ಮೊರೆ ಹೋದ ಮೆಗಾ ಫ್ಯಾಮಿಲಿ ಸೊಸೆ ಲಾವಣ್ಯ ತ್ರಿಪಾಠಿ
ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಸಿನಿರಸಿಕರಿಗೆ ಚಿರಪರಿಚಿತ ಹೆಸರು. ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಅವರ ಮಗ ವರುಣ್ ತೇಜ್ ಕೂಡ ತಂದೆ ಹಾಗೂ ದೊಡ್ಡಪ್ಪನ ಹಾದಿಯಲ್ಲಿ ಚಿತ್ರರಂಗಕ್ಕೆ ಬಂದಿದ್ದಾರೆ. ನಟಿ ಲಾವಣ್ಯ ತ್ರಿಪಾಠಿ ಅವರನ್ನು ವರುಣ್ ಮದುವೆ ಆಗಿದ್ದು ದಂಪತಿಗೆ ಗಂಡು ಮಗು ಕೂಡ ಇದೆ.
ಲಾವಣ್ಯ ಇದ್ದಕ್ಕಿದಂತೆ ಪೊಲೀಸರ ಮೊರೆ ಹೋಗಿದ್ದಾರೆ. ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ತಮ್ಮನ್ನು ಟಾರ್ಗೆಟ್ ಮಾಡಿ ಪೋಸ್ಟ್, ಕಾಮೆಂಟ್ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಪರ್ಪುಲ್ ಕ್ರಿಯಾನ್00 ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ತನ್ನನ್ನು ತನ್ನ ಕುಟುಂಬ ಸದಸ್ಯರ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸೆಲೆಬ್ರೆಟಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಕಿರುಕುಳ ನೀಡುವುದು ಹೊಸದೇನು ಅಲ್ಲ. ಈ ಹಿಂದೆ ಕೂಡ ಇದೇ ರೀತಿ ಕೆಲ ನಟ, ನಟಿಯರು ಸೈಬರ್ ಪೊಲೀಸರಿಗೆ ದೂರು ನೀಡಿರುವ ಉದಾಹರಣೆಗಳಿವೆ. ಕೆಲ ದಿನಗಳ ಹಿಂದೆ ಚಿರಂಜೀವಿ ಬಗ್ಗೆ ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾಗ ಲಾವಣ್ಯ ತಿರುಗೇಟು ನೀಡಿದ್ದರು.
ಮೆಗಾ ಫ್ಯಾಮಿಲಿ ಸೊಸೆ ಲಾವಣ್ಯ ನೀಡಿದ ದೂರು ಆಧರಿಸಿ ಪೊಲೀಸರು ಐಟಿ ಕಾಯ್ದೆಯ ಸೆಕ್ಷನ್ 67 ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 78 ಮತ್ತು 79 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 'ಪರ್ಪುಲ್ ಕ್ರಿಯಾನ್00' ಹೆಸರಿನ ಇನ್ಸ್ಟಾಗ್ರಾಮ್ ಖಾತೆ ಹೊಂದಿರುವ ವ್ಯಕ್ತಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಜೊತೆಗೆ ಅಸಭ್ಯ ಪೋಸ್ಟ್ಗಳನ್ನು ಡಿಲೀಟ್ ಮಾಡಬೇಕು ಎಂದು ಪೊಲೀಸರ ಬಳಿ ಲಾವಣ್ಯ ಮನವಿ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯ ವೈಯಕ್ತಿಕ ಘನತೆಗೆ ಧಕ್ಕೆ ತರುವುದು ಗಂಭೀರ ವಿಷಯ ಎಂದು ನಟಿ ಲಾವಣ್ಯ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ. 2023, ನವೆಂಬರ್ 1ರಂದು ನಟಿ ಲಾವಣ್ಯ ಹಾಗೂ ವರುಣ್ ತೇಜ್ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಕಳೆದ ವರ್ಷ ಸೆಪ್ಟೆಂಬರ್ 10ರಂದು ದಂಪತಿ ಗಂಡು ಮಗುವನ್ನು ಬರಮಾಡಿಕೊಂಡಿದ್ದರು. ಇದು ಮೆಗಾ ಫ್ಯಾಮಿಲಿಗೆ ಸಂತಸ ತಂದಿತ್ತು.
ಇತ್ತೀಚೆಗೆ ಚಿರಂಜೀವಿ ಮಗ ರಾಮ್ಚರಣ್ ಹಾಗೂ ಪತ್ನಿ ಉಪಾಸನಾ ದಂಪತಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಒಂದು ಹೆಣ್ಣು ಹಾಗೂ ಒಂದು ಹೆಣ್ಣು ಮಗುವನ್ನು ಸ್ವಾಗತಿಸಿದ್ದರು. ಚಿರಂಜೀವಿ ಆಸ್ಪತ್ರೆಯಲ್ಲೇ ಸುದ್ದಿಗೋಷ್ಠಿ ನಡೆಸಿ ಸಂತಸ ಹಂಚಿಕೊಂಡಿದ್ದರು. ಈ ಬಗ್ಗೆ ನೆಟ್ಟಿಗರೊಬ್ಬರ ಟ್ವೀಟ್ ಬಗ್ಗೆ ಲಾವಣ್ಯ ಪ್ರತಿಕ್ರಿಯಿಸಿದ್ದರು. ಈ ಕಾಲದಲ್ಲಿ ಕೂಡ ಗಂಡುಮಗು ಬೇಕು, ವಂಶೋದ್ಧಾರ ಬೇಕು ಎನ್ನುತ್ತಾರೆ. ಗಂಡು ಮಗು ಹುಟ್ಟಿದ್ದಕ್ಕೆ ಸುದ್ದಿಗೋಷ್ಠಿ ಮಾಡಿ ಸಂಭ್ರಮಿಸುತ್ತಾರೆ ಎಂದು ಆತ ಬರೆದುಕೊಂಡಿದ್ದ. ಈ ಬಗ್ಗೆ ಲಾವಣ್ಯ ರಿಪ್ಲೇ ಮಾಡಿದ್ದರು.
"ಇಂತಹ ಸಂತೋಷದ ಸಮಯದಲ್ಲಿ ಬೇಡದ ಕೆಟ್ಟ ಟ್ವೀಟ್ಗಳನ್ನು ಓದುತ್ತೇನೆ ಎಂದು ನಾನು ಅಂದುಕೊಂಡಿರಲಿಲ್ಲ. ಚಿರಂಜೀವಿಯವರು ನಮ್ಮ ಕುಟುಂಬದ ಮಹಿಳೆಯರನ್ನು ಅದರಲ್ಲೂ ಮುಖ್ಯವಾಗಿ ಮೊಮ್ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆ ಅನ್ನೋದು ಯಾರಿಗೂ ಗೊತ್ತಿಲ್ಲ. ಚಿರಂಜೀವಿ ಅವರ ಬಗ್ಗೆ ತಿಳಿಯದೆ ಹೇಳಿಕೆಗಳನ್ನು ನೀಡಬೇಡಿ. ಅವರ ಬಗ್ಗೆ ಗೊತ್ತಿಲ್ಲದಿದ್ದರೆ ಸುಮ್ಮನಿರಿ" ಎಂದು ತಿರುಗೇಟು ಕೊಟ್ಟಿದ್ದರು.
ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಹುಟ್ಟಿ ಬೆಳೆದ ಲಾವಣ್ಯ 'ಅಂದಾಲ ರಾಕ್ಷಸಿ' ಎಂಬ ತೆಲಗು ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. 'ಮಿಸ್ಟರ್' ಎಂಬ ಚಿತ್ರದಲ್ಲಿ ವರುಣ್ ತೇಜ್ ಜೋಡಿಯಾಗಿ ನಟಿಸಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ ಶುರುವಾಗಿತ್ತು. ಬಳಿಕ ಅದು ಪ್ರೀತಿಯಾಗಿ ಬದಲಾಗಿ ಇಬ್ಬರೂ ಮದುವೆ ಆಗಿದ್ದರು.


Click it and Unblock the Notifications











