ಥಾಯ್ಲೆಂಡ್ನಲ್ಲಿ ನರೇಶ್- ಪವಿತ್ರಾ ಲೋಕೇಶ್: ಎಮೋಷನಲ್ ಪೋಸ್ಟ್ ವೈರಲ್
ತೆಲುಗು ನಟ ನರೇಶ್ ಹಾಗೂ ಕನ್ನಡ ಪವಿತ್ರಾ ಲೋಕೇಶ್ ಸಹಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ಇಬ್ಬರೂ ಒಪ್ಪಿಕೊಂಡಿದ್ದಾರೆ. ಇಬ್ಬರಿಗೆ ಡಿವೋರ್ಸ್ ನೀಡಿ ಮೂರನೇ ಮದುವೆ ಆಗಿರುವ ನರೇಶ್ ಸದ್ಯ ಪವಿತ್ರಾ ಲೋಕೇಶ್ ಜೊತೆಗೆ ಜೀವನ ನಡೆಸುತ್ತಿದ್ದಾರೆ. ಇದೇ ವಿಚಾರ ಕೆಲ ದಿನಗಳ ಹಿಂದೆ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಅದೆಲ್ಲದಕ್ಕೂ ಬಳಿಕ ಬ್ರೇಕ್ ಬಿದ್ದಿತ್ತು.
ನರೇಶ್ ಈಗಾಗಲೇ ಮೂರನೇ ಪತ್ನಿ ರಮ್ಯಾ ರಘುಪತಿಯವರಿಂದ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ರಮ್ಯಾ ಡಿವೋರ್ಸ್ ನೀಡಲು ಒಪ್ಪುತ್ತಿಲ್ಲ. ತಮ್ಮದೇ ನಿಜ ಜೀವನದ ಘಟನೆಗಳನ್ನು ಆಧರಿಸಿ 'ಮತ್ತೆ ಮದುವೆ' ಎನ್ನುವ ಸಿನಿಮಾ ಮಾಡಿ ನರೇಶ್ ನಟಿಸಿದ್ದರು. ಪವಿತ್ರಾ ಲೋಕೇಶ್ ಕೂಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ರಮ್ಯಾ ರಘುಪತಿ ಅವರನ್ನು ಟಾರ್ಗೆಟ್ ಮಾಡಿಯೇ ನರೇಶ್ ಈ ಸಿನಿಮಾ ಮಾಡಿದ್ದರು.

'ಮತ್ತೆ ಮದುವೆ' ಸಿನಿಮಾ ಗೆಲ್ಲಲಿಲ್ಲ. ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿದ್ದ ಸಿನಿಮಾ ಸೋತಿತ್ತು. ಈ ಸಿನಿಮಾ ಬಿಡುಗಡೆಗೆ ಹಾಗೂ ಬಳಿಕ ಓಟಿಟಿ ಸ್ಟ್ರೀಮಿಂಗ್ಗೂ ರಮ್ಯಾ ರಘುಪತಿ ತಡೆ ಕೋರಿ ಕೋರ್ಟ್ ಕದ ತಟ್ಟಿದ್ದರು. ಆದರೂ ಸಿನಿಮಾ ತೆರೆಕಂಡಿತ್ತು. ಬಹಳ ದಿನಗಳ ಬಳಿಕ ನರೇಶ್ ಸೋಶಿಯಲ್ ಮೀಡಿಯಾದಲ್ಲಿ ಎಮೋಷನಲ್ ಪೋಸ್ಟ್ ಮಾಡಿದ್ದಾರೆ. ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ಸಂಭ್ರಮ ಹಂಚಿಕೊಂಡಿದ್ದಾರೆ.
ಗೋಲ್ಡನ್ ಜ್ಯುಬಿಲಿ ಇಯರ್ ಸಂದರ್ಭದಲ್ಲಿ ತಮ್ಮ ಜೀವನದ ಎಲ್ಲಾ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಕಷ್ಟದಲ್ಲಿದ್ದಾಗ ಜೊತೆಯಲ್ಲಿ ನಿಂತವರನ್ನು ನೆನೆದಿದ್ದಾರೆ. ಖಿನ್ನತೆಗೆ ಒಳಗಾದಾಗ ತನಗೆ ಸ್ಫೂರ್ತಿ ನೀಡಿದ ಹಾಡಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಪವಿತ್ರಾ ಲೋಕೇಶ್ ಜೊತೆಗೆ ಥೈಲ್ಯಾಂಡ್ನಲ್ಲಿ ಕಳೆದ ಸುಂದರ ಕ್ಷಣಗಳ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.
"ನಾನು ನನ್ನ ಜೀವನದಲ್ಲಿ ಸಂಕಷ್ಟದಲ್ಲಿದ್ದಾಗ, ಈ ಒಂದು ಹಾಡು ನನಗೆ ಸ್ಫೂರ್ತಿ ನೀಡಿತು. ಆ ಸಮಯದಲ್ಲಿ ನಾನು ನನ್ನ ಕರಿಯರ್ ಕಳೆದುಕೊಂಡೆ. ನಾನು ಆರ್ಥಿಕ ಸಮಸ್ಯೆ ಎದುರಿಸಿದೆ. ನನ್ನ ಆತ್ಮೀಯರು ನನ್ನನ್ನು ಅಗಲಿದ್ದರು. ಕ್ಷುಲ್ಲಕ ಪ್ರಕರಣದಲ್ಲಿ ಸಂಬಂಧಿಕರಿಂದ ಕಿರಿಕಿರಿ, ಜೋಕರ್ನಿಂದ ತೊಂದರೆ ಎದುರಾದರೂ ನನ್ನ ಬೆಂಬಲಕ್ಕೆ ನಿಂತಿದ್ದು ನನ್ನ ತಾಯಿ ಮತ್ತು ಸ್ನೇಹಿತ ವಿಜಯ್ ವಾಧ್ವಾ ಮಾತ್ರ.

ಈಗ ಈ ರೀತಿ ಬದಲಾಗಿದ್ದೇನೆ. ಈ ಹಾಡು ನನಗೆ ಸ್ಫೂರ್ತಿ ನೀಡಿದ್ದು ಮಾತ್ರವಲ್ಲ. ಮತ್ತೆ ಬಲವಾಗಿ ಎದ್ದು ನಿಲ್ಲುವಂತೆ ಮಾಡಿದೆ. ಈಗಲೂ ಪ್ರೇರೇಪಿಸುತ್ತದೆ. ಈಗ ನಾನು ನನ್ನ ವೃತ್ತಿಜೀವನದ 50ನೇ ವರ್ಷದಲ್ಲಿದ್ದೇನೆ. ಈ ಮಹತ್ತರವಾದ ಮೈಲಿಗಲ್ಲನ್ನು ಸಾಧಿಸಲು ನನಗೆ ತುಂಬಾ ಸಹಾಯ ಮಾಡಿದ ಎಲ್ಲರಿಗೂ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ" ಎಂದು ನರೇಶ್ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ತೆಲುಗಿನ ಖ್ಯಾತ ನಟಿ ವಿಜಯ ನಿರ್ಮಲಾ ಪುತ್ರ ನರೇಶ್. ಕೆ. ಎಸ್ ಮೂರ್ತಿ ಎಂಬುವವರನ್ನು ಮದುವೆಯಾಗಿ ಅವರ ಅಗಲಿಕೆ ಬಳಿಕ ವಿಜಯ ನಿರ್ಮಲಾ, ನಟ ಕೃಷ್ಣ ಕೈ ಹಿಡಿದರು. ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ನರೇಶ್ ಸಂಬಂಧಿಕರು. ಇನ್ನು 1972ರಲ್ಲಿ 'ಪಂಡಂಟಿ ಕಾಪುರಂ' ಚಿತ್ರದಲ್ಲಿ ಬಾಲನಟನಾಗಿ ನರೇಶ್ ಮೊದಲಿಗೆ ನಟಿಸಿದ್ದರು. 1982ರಲ್ಲಿ 'ನಾಲುಗು ಸ್ಥಂಭಲಾಟ' ಚಿತ್ರದಲ್ಲಿ ಹೀರೊ ಆಗಿ ನಟಿಸಿದರು. ಒಂದಷ್ಟು ಸಿನಿಮಾಗಳಲ್ಲಿ ಲೀಡ್ ರೋಲ್ಗಳಲ್ಲಿ ನಟಿಸಿದ ನರೇಶ್ ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದರು.
ಕೆಲ ಸಿನಿಮಾಗಳಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಪೋಷಕ ಪಾತ್ರಗಳಲ್ಲಿ ನಟಿಸಿದರು. ಇದೇ ವೇಳೆ ಇಬ್ಬರ ನಡುವೆ ಸ್ನೇಹ ಶುರುವಾಗಿತ್ತು. ಬಳಿಕ ಅದು ಪ್ರೀತಿಗೆ ತಿರುಗಿತ್ತು. ಈಗಾಗಲೇ ಇಬ್ಬರು ಮದುವೆ ಆಗಿದ್ದಾರೆ ಎಂದು ರಮ್ಯಾ ರಘುಪತಿ ಆರೋಪಿಸಿದ್ದರು. ಆದರೆ ರಮ್ಯಾ ರಘುಪತಿಯಿಂದ ಡಿವೋರ್ಸ್ ಸಿಗದ ಕಾರಣ ನರೇಶ್ ಮದುವೆ ವಿಚಾರ ಬಹಿರಂಗಪಡಿಸುತ್ತಿಲ್ಲ ಎನ್ನಲಾಗ್ತಿದೆ.


Click it and Unblock the Notifications











