Devara Trailer: ಯಂಗ್ ಟೈಗರ್ ದೇವ್'ವರ' ಡಬಲ್ ಧಮಾಕ; ಜಬರ್ದಸ್ತ್ ಟ್ರೈಲರ್, ಆದ್ರೆ..
ತೆಲುಗಿನ 'ದೇವರ' ಚಿತ್ರದ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಜ್ಯೂ. ಎನ್ಟಿಆರ್ ಡಬಲ್ ರೋಲ್ನಲ್ಲಿ ಅಬ್ಬರಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. ಸೆಪ್ಟೆಂಬರ್ 27ಕ್ಕೆ ಸಿನಿಮಾ ತೆರೆಗೆ ಬರಲಿದ್ದು ಚಿತ್ರದ ಪ್ರಚಾರ ಶುರುವಾಗಿದೆ. ಕೊರಟಾಲ ಶಿವ ನಿರ್ದೇಶನದ ಆಕ್ಷನ್ ಎಂಟರ್ಟೈನರ್ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ಮಿಂಚಿದ್ದಾರೆ.
ಸೂಪರ್ ಹಿಟ್ 'RRR' ಬಳಿಕ ಜ್ಯೂ. ಎನ್ಟಿಆರ್ ನಟಿಸುತ್ತಿರುವ ಸಿನಿಮಾ ಇದು. ಟೀಸರ್, ಸಾಂಗ್ಸ್ನಿಂದ ಗಮನ ಸೆಳೆದಿದ್ದ 'ದೇವರ' ಇದೀಗ ಟ್ರೈಲರ್ ಮೂಲಕ ಮತ್ತಷ್ಟು ನಿರೀಕ್ಷೆ ಹುಟ್ಟಾಕ್ಕಿದೆ. ಎರಡು ಭಾಗಗಳಾಗಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಸದ್ಯ ಮೊದಲ ಭಾಗ ಬಿಡುಗಡೆಗೆ ಸಜ್ಜಾಗಿದೆ. 'ಆಚಾರ್ಯ' ಹೀನಾಯ ಸೋಲಿನ ಬಳಿಕ ಶಿವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಪ್ರಕಾಶ್ ರಾಜ್ ವಾಯ್ಸ್ ಓವರ್ ಹಿನ್ನೆಲೆಯಲ್ಲಿ 'ದೇವರ' ಟ್ರೈಲರ್ ಶುರುವಾಗುತ್ತದೆ. ಜಬರ್ದಸ್ತ್ ಆಕ್ಷನ್ ಸನ್ನಿವೇಶಗಳು ಹುಬ್ಬೇರಿಸುವಂತಿದೆ. ಸಮುದ್ರದೊಂದಿಗೆ ಬದುಕು ಕಟ್ಟಿಕೊಂಡ ಒಂದು ಊರು. ಆ ಊರಿನ ಪರ ಧೈರ್ಯದಿಂದ ನಿಲ್ಲುವ ನಾಯಕ 'ದೇವರ' ಆಗಿ ಜ್ಯೂ. ಎನ್ಟಿಆರ್ ನಟಿಸಿದ್ದಾರೆ. 'ಭೈರ' ಎನ್ನುವ ಕ್ರೂರ ದರೋಡಕೋರನ ಪಾತ್ರದಲ್ಲಿ ಬಾಲಿವುಡ್ ನಟ ಸೈಫ್ ಅಲಿಖಾನ್ ಅಬ್ಬರಿಸಿದ್ದಾರೆ.
ತಂದೆ ದೇವರ ಮಗ ವರದ ಆಗಿ ಎರಡು ಪಾತ್ರಗಳಲ್ಲಿ ತಾರಕ್ ದರ್ಶನ ಕೊಟ್ಟಿದ್ದಾರೆ. ಈ ಹಿಂದೆ ಕೂಡ ಕೆಲ ಚಿತ್ರಗಳಲ್ಲಿ ಎರಡೆರಡು ಪಾತ್ರ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ದರು. ಬಹಳ ದಿನಗಳ ಬಳಿಕ ಮತ್ತೆ ಅದೇ ಪ್ರಯತ್ನ ಮಾಡುತ್ತಿದ್ದಾರೆ. ವರದನ ಪ್ರೇಯಸಿಯಾಗಿ ಶ್ರೀದೇವಿ ಪುತ್ರಿ ಮಿಂಚಿದ್ದಾರೆ. ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ಗಳಿಂದ ಟ್ರೈಲರ್ ಅಭಿಮಾನಿಗಳ ಮನಗೆದ್ದಿದೆ. ಜೊತೆಗೆ ಖಡಕ್ ಡೈಲಾಗ್ಸ್ ಹೈಲೆಟ್ ಎನಿಸಿಕೊಂಡಿದೆ.
ಭೈರ ಕ್ರೂರ ಗ್ಯಾಂಗ್ ಕಟ್ಟಿಕೊಂಡು ದರೋಡೆ ಮಾಡುತ್ತಿರುತ್ತಾನೆ. ಈ ಹಾದಿಯಲ್ಲಿ ಸಾಕಷ್ಟು ಜನರನ್ನು ಕೊಲ್ಲುತ್ತಿರುತ್ತಾನೆ. ಅಮಾಯಕರ ಪರ ನಿಂತು ಆತನ ಗ್ಯಾಂಗ್ಗೆ ದೇವರ ಸಿಂಹಸ್ವಪ್ನವಾಗಿ ಕಾಡುತ್ತಿರುತ್ತಾನೆ. ಅವನನ್ನು ನೇರವಾಗಿ ಎದುರಿಸಲು ಸಾಧ್ಯವಿಲ್ಲ ಅಂತ ಭೈರ ಕುತಂತ್ರ ಮಾಡಿ ಊರಿನಿಂದ ದೂರ ಮಾಡಿರುತ್ತಾನೆ.
ದೇವರ ಅಲ್ಲಿಂದ ಕಣ್ಮರೆ ಆದ ಬಳಿಕ ಆತನ ಮಗ ವರದ ಎಂಟ್ರಿ ಆಗುತ್ತದೆ. ತಂದೆ ಬಹಳ ಧೈರ್ಯವಂತನಾದರೆ ಮಗ ದೊಡ್ಡ ಪುಕ್ಕಲ. 'ಅವನಿಗೆ ಅವರಪ್ಪನ ರೂಪ ಬಂದಿದೆ ಆದರೆ ರಕ್ತ ಬಂದಿಲ್ಲ' ಎಂದು ನಾಯಕಿ ಹೇಳುವ ಡೈಲಾಗ್ ಕೂಡ ಇದೆ. ಹಾಗಾದರೆ ದೇವರ ಎಲ್ಲಿಗೆ ಹೋದ? ಹೇಗೆ ವಾಪಸ್ ಬರ್ತಾನೆ? ಎನ್ನುವುದೇ ಸಿನಿಮಾ ಕಥೆ ಎನ್ನುವುದು ಟ್ರೈಲರ್ ನೋಡಿದರೆ ಅರ್ಥವಾಗುತ್ತದೆ. ಕೊನೆ ಸನ್ನಿವೇಶದಲ್ಲಿ ತಿಮಿಂಗಲ ಮೇಲೆ ಸವಾರಿ ಮಾಡುತ್ತಾ ಬಂದಂತೆ ದೇವರ ಎಂಟ್ರಿ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ.

'ದೇವರ' ಟ್ರೈಲರ್ ಚಿಂದಿ ಎನ್ನುವಂತಿದೆ. ಆದರೆ ಬೇರೆ ನಟರ ಫ್ಯಾನ್ಸ್ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಆದರೂ ಕೆಲವೇ ನಿಮಿಷಗಳಲ್ಲಿ ಲಕ್ಷ ಲಕ್ಷ ವೀವ್ಸ್ ಸಾಧಿಸಿ ದಾಖಲೆ ಬರೆದಿದೆ. ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಶ್ರೀಕಾಂತ್, ಪ್ರಕಾಶ್ ರಾಜ್, ಮುರಳಿ ಶರ್ಮಾ, ಅಜಯ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಯುವಸುಧಾ ಆರ್ಟ್ಸ್ ಹಾಗೂ ಎನ್ಟಿಆರ್ ಆರ್ಟ್ಸ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿವೆ. ರತ್ನವೇಲು ಛಾಯಾಗ್ರಹಣ ಹಾಗೂ ಅನಿರುದ್ದ್ ರವಿಚಂದರ್ ಸಂಗೀತ 'ದೇವರ' ಚಿತ್ರಕ್ಕಿದೆ. ಎನ್ಟಿಆರ್ ಇನ್ಟೆನ್ಸ್ ಆಕ್ಟಿಂಗ್ ಚಿತ್ರಕ್ಕೆ ಪ್ಲಸ್ ಆಗಲಿದೆ. ಚಿತ್ರದಲ್ಲಿ ದ್ವಿಪಾತ್ರ ಅಲ್ಲ ತ್ರಿಪಾತ್ರದಲ್ಲಿ ತಾರಕ್ ನಟಿಸಿದ್ದಾರೆ ಎಂದು ಕೆಲವರು ಊಹಿಸುತ್ತಿದ್ದಾರೆ. ಸೀಕ್ವೆಲ್ನಲ್ಲಿ ಆ ಸರ್ಪ್ರೈಸ್ ರಿವೀಲ್ ಆಗಬಹುದು ಎಂದು ಅಂದಾಜಿಸುತ್ತಿದ್ದಾರೆ.
ಬಹಳ ಅದ್ಧೂರಿಯಾಗಿ 'ದೇವರ' ಸಿನಿಮಾ ನಿರ್ಮಾಣವಾಗಿದೆ. ಮುಂಬೈನಲ್ಲಿ ಟ್ರೈಲರ್ ರಿಲೀಸ್ ಈವೆಂಟ್ ನಡೆಯಿತು. ಪ್ರಚಾರಕ್ಕಾಗಿ ಚಿತ್ರತಂಡ ದೇಶದ ಬೇರೆ ಬೇರೆ ನಗರಗಳಿಗೆ ಭೇಟಿ ಕೊಡಲಿದೆ. ಹೈದರಾಬಾದ್ನಲ್ಲಿ ಪ್ರೀ ರಿಲೀಸ್ ಈವೆಂಟ್ ಪ್ಲ್ಯಾನ್ ಮಾಡಲಾಗುತ್ತಿದೆ. ಟ್ರೈಲರ್ ಸೂಪರ್ ಎನಿಸಿದರೂ ನಿರ್ದೇಶಕ ಮೇಲೆ ನಂಬಿಕೆ ಇಲ್ಲ ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ.


Click it and Unblock the Notifications











