ವೇದಿಕೆಯಲ್ಲೇ ಕುಡಿದು ನಟಿ ಅಂಜಲಿ ಜೊತೆ ನಟ ಬಾಲಕೃಷ್ಣ ದುರ್ವತನೆ?
ತೆಲುಗು ನಟ, ಹಿಂದೂಪುರ ಶಾಸಕ ಬಾಲಕೃಷ್ಣ ತಮ್ಮ ಬಿಹೇವಿಯರ್ ಇಂದ ಕೆಲವೊಮ್ಮೆ ಸುದ್ದಿ ಆಗುತ್ತಿರುತ್ತಾರೆ. ಅಭಿಮಾನಿಗಳ ಜೊತೆ ಬಾಲಯ್ಯ ವರ್ತನೆ ಕೂಡ ಆಗಾಗ್ಗೆ ವಿವಾದಕ್ಕೆ ಕಾರಣವಾಗಿದೆ. ತಳ್ಳಾಟ ನೂಕಾದ ವೇಳೆ ಬಾಲಕೃಷ್ಣ ಕೆಂಡಾಮಂಡಲವಾಗಿ ಅಭಿಮಾನಿ ಕೆನ್ನೆಗೆ ಹೊಡೆದಿರುವ ಘಟನೆಗಳು ನಡೆದಿತ್ತು.
ಬಾಲಯ್ಯ ತಮ್ಮ ನಡವಳಿಕೆಯಿಂದ ಇದೀಗ ಮತ್ತೊಮ್ಮೆ ವಿವಾದ ಸೃಷ್ಟಿಸಿಕೊಂಡಿದ್ದಾರೆ. ಇತ್ತೀಚೆಗೆ 'ಗ್ಯಾಂಗ್ಸ್ ಆಫ್ ಗೋದಾವರಿ' ಚಿತ್ರದ ಪ್ರೀ ರಿಲೀಸ್ ಈವೆಂಟ್ಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆದರೆ ವೇದಿಕೆ ಮೇಲೆ ನಟಿ ಅಂಜಲಿ ಅವರನ್ನು ತಳ್ಳಿದ ಘಟನೆ ನಡೆದಿದೆ. ಅಷ್ಟೇ ಅಲ್ಲ, ವೇದಿಕೆ ಬಳಿ ನೀರಿನ ಬಾಟಲ್ನಲ್ಲಿ ಮದ್ಯ ಸೇವಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಕಾರ್ಯಕ್ರಮದಲ್ಲಿ ಮದ್ಯ ಸೇವಿಸಿ ಬಾಲಕೃಷ್ಣ ವೇದಿಕೆಯಲ್ಲಿ ನಟಿ ಅಂಜಲಿ ಜೊತೆ ಆ ರೀತಿ ನಡೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಸದ್ಯ ಇದೇ ವಿಚಾರ ಟಾಲಿವುಡ್ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಬಾಲಯ್ಯ ವರ್ತನೆಯನ್ನು ಪ್ರತಿಪಕ್ಷ ನಾಯಕರು ಟೀಕಿಸುತ್ತಿದ್ದಾರೆ. ವಿಶ್ವಕ್ ಸೇನ್ ನಟನೆಯ 'ಗ್ಯಾಂಗ್ಸ್ ಆಫ್ ಗೋದಾವರಿ' ಸಿನಿಮಾ ಈವೆಂಟ್ ನಿನ್ನೆ ರಾತ್ರಿ(ಮೇ 28) ನಡೆಯಿತು.
ಇಡೀ 'ಗ್ಯಾಂಗ್ಸ್ ಆಫ್ ಗೋದಾವರಿ' ತಂಡ ವೇದಿಕೆ ಏರಿತ್ತು. ಪಕ್ಕದಲ್ಲಿದ್ದ ನಟಿ ಅಂಜಲಿಯನ್ನು ಪಕ್ಕಕ್ಕೆ ಸರಿಯುವಂತೆ ಬಾಲಯ್ಯ ಹೇಳಿದರು. ಆಕೆ ಕೊಂಚ ಮಾತ್ರ ಜರುಗುತ್ತಿದ್ದಂತೆ ಬಾಲಯ್ಯ ದಿಢೀರನ್ ಆಕೆಯನ್ನು ತಳ್ಳಿದ್ದಾರೆ. ಇದನ್ನು ನಿರೀಕ್ಷಿಸದ ಆಕೆ ಒಂದು ಕ್ಷಣ ಶಾಕ್ ಆಗಿದ್ದಾರೆ. ಇಬ್ಬರ ನಡುವೆ ಇದ್ದ ನೇಹಾ ಶೆಟ್ಟಿ ಕೂಡ ಒಂದು ಕ್ಷಣ ಅವಕ್ಕಾಗಿದ್ದರು. ಆದರೆ ಅಂಜಲಿ ಮುಗುಳ್ನಗೆಯಿಂದ ಅದನ್ನು ಅಲ್ಲಿಗೆ ತಣ್ಣಗಾಗುವಂತೆ ಮಾಡಿದರು.
ಬಳಿಕ ಬಾಲಯ್ಯ, ಅಂಜಲಿ ಜೊತೆ ಮಾತನಾಡಿ ಹೈಫೈ ಕೊಟ್ಟಿದ್ದಾರೆ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ವಿಷಯ ಇಷ್ಟೇ ಆಗಿದ್ದರೆ ಪರವಾಗಿಲ್ಲ. ಕಾರ್ಯಕ್ರಮದ ಆರಂಭದಲ್ಲಿ ಬಾಲಕೃಷ್ಣ ಬಂದು ವೇದಿಕೆ ಮುಂಭಾಗದಲ್ಲಿ ಕುಳಿತ್ತಿದ್ದರು. ಈ ವೇಳೆ ಅವರ ಕಾಲಿನ ಬಳಿ ನೀರಿನ ಬಾಟಲ್ ಇತ್ತು. ಜೊತೆಗೆ ಮದ್ಯ ತುಂಬಿದ ಸಣ್ಣ ಬಾಟಲ್ ಸಹ ಇರುವುದು ವೈರಲ್ ಆಗ್ತಿದೆ.
ಕಾರ್ಯಕ್ರಮದ ನಡುವೆ ಕೂಡ ಬಾಲಕೃಷ್ಣ ಮಧ್ಯ ಸೇವಿಸಿದ್ದಾರೆ. ಕುಡಿದು ವೇದಿಕೆ ಏರಿ ನಟಿ ಅಂಜಲಿ ಜೊತೆ ಈ ರೀತಿ ವರ್ತಿಸಿದ್ದಾರೆ ಎಂದು ಕೆಲವರು ಎರಡೂ ವೀಡಿಯೋಗಳನ್ನು ವೈರಲ್ ಮಾಡುತ್ತಿದ್ದಾರೆ. ಇನ್ನು ಬಾಲಯ್ಯ ವೇದಿಕೆಯಲ್ಲಿ ಬಿಲ್ಡಪ್ ಡೈಲಾಗ್ಗಳನ್ನು ಬಿಟ್ಟಿದ್ದಾರೆ. ಇದೆಲ್ಲಾ ಎಣ್ಣೆ ಏಟು ಎಂದು ಕೆಲವರು ವ್ಯಂಗ್ಯವಾಡುತ್ತಿದ್ದಾರೆ.
ಈ ಹಿಂದೆ ಕೂಡ ಕಾರ್ಯಕ್ರಮಗಳಲ್ಲಿ ಬಾಲಕೃಷ್ಣ ಮಾತುಗಳು ಚರ್ಚೆ ಹುಟ್ಟಾಕ್ಕಿತ್ತು. 'ಅಕ್ಕಿನೇನಿ ತೊಕ್ಕಿನೇನಿ' ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಅಕ್ಕಿನೇನಿ ಫ್ಯಾಮಿಲಿ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದರು. ಇನ್ನು ಕೃಷ್ಣ ಚೈತನ್ಯ ನಿರ್ದೇಶನದ 'ಗ್ಯಾಂಗ್ಸ್ ಆಫ್ ಗೋದಾವರಿ' ಚಿತ್ರದಲ್ಲಿ ವಿಶ್ವಕ್ ಸೇನ್ ಜೊತೆ ಅಂಜಲಿ, ನೇಹಾ ಶೆಟ್ಟಿ ನಟಿಸಿದ್ದಾರೆ.
ಈ ವಾರವೇ 'ಗ್ಯಾಂಗ್ಸ್ ಆಫ್ ಗೋದಾವರಿ' ಸಿನಿಮಾ ತೆರೆಗೆ ಬರಲಿದೆ. ಈ ಬಾರಿ ಹಿಂದೂಪುರ ಶಾಸಕರಾಗಿ ಮತ್ತೊಮ್ಮೆ ಬಾಲಯ್ಯ ಸ್ಪರ್ಧಿಸಿದ್ದಾರೆ. ಎರಡು ಬಾರಿ ಗೆದ್ದು ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ವರ್ಷ ಬಾಲಕೃಷ್ಣ ನಟನೆಯ 'ಭಗವಂತ್ ಕೇಸರಿ' ಸಿನಿಮಾ ತೆರೆಗೆ ಬಂದಿತ್ತು. ಶ್ರೀಲೀಲಾ ಕೂಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಸದ್ಯ ಬಾಬಿ ನಿರ್ದೇಶನದ ಇನ್ನು ಹೆಸರಿಡದ ಚಿತ್ರದಲ್ಲಿ ಬಾಲಯ್ಯ ನಟಿಸುತ್ತಿದ್ದಾರೆ.


Click it and Unblock the Notifications











