'ಕನ್ನಡ ಚಿತ್ರರಂಗದವರು ಅಸಹ್ಯ' ಎಂದಿದ್ದ ತೆಲುಗು ನಿರ್ದೇಶಕ ಯೂಟರ್ನ್
ಬೆರಳಿಕೆಯಷ್ಟು ಸಿನಿಮಾ ಮಾಡಿ 'ಹಿರಿಯ ನಿರ್ದೇಶಕ' ಎನಿಸಿಕೊಂಡು ಯಾವುದೋ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದ ಗೀತ ಕೃಷ್ಣ ಈಗ ಬುದ್ಧಿ ಕಲಿತಂತಿದೆ.
ಕೆಲವು ದಿನಗಳ ಹಿಂದೆ ತೆಲುಗಿನ 'ಸೋಷಿಯಲ್ ಟಿವಿ' ಹೆಸರಿನ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿದ್ದ ಗೀತ ಕೃಷ್ಣ ಎಂಬಾತ, ಕನ್ನಡ ಚಿತ್ರರಂಗದ ಬಗ್ಗೆ ತುಚ್ಚವಾಗಿ ಮಾತನಾಡಿದ್ದ. 'ಕನ್ನಡ ಚಿತ್ರರಂಗದವರು ಅಸಹ್ಯದ ಜನ, ಅಲ್ಲಿ ವಿಪರೀತ ಕಾಸ್ಟಿಂಗ್ ಕೌಚ್ ಇದೆ'' ಎಂದು ನಾಲಿಗೆ ಹರಿಬಿಟ್ಟಿದ್ದ.
ಗೀತ ಕೃಷ್ಣ ಹೇಳಿಕೆಗೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೆ ಈಗ ಹೇಳಿಕೆಯನ್ನು ಬದಲಾಯಿಸಿರುವ ಈ 'ಹಿರಿಯ ನಿರ್ದೇಶಕ', ನಾನು ಹಾಗೆ ಹೇಳಿಲ್ಲ, ನನ್ನ ಮಾತಿನ ಅರ್ಥ ಬೇರೆ, ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದೆಲ್ಲ ತಡಬಡಾಯಿಸಿದ್ದಾನೆ.

ಕನ್ನಡ ಚಿತ್ರರಂಗದ ಬಗ್ಗೆ ಏನೆಂದಿದ್ದ ಗೀತ ಕೃಷ್ಣ
''ಅಸಲಿಗೆ ಕಾಸ್ಟಿಂಗ್ ಕೌಚ್ ಹುಟ್ಟಿದ್ದೇ ತಮಿಳು ಚಿತ್ರರಂಗದಲ್ಲಿ, ಅವರಂಥಹಾ ಅಸಹ್ಯದ ಜನ ಇನ್ನೆಲ್ಲೂ ಇಲ್ಲ, ಕನ್ನಡದವರಂತೂ ಇನ್ನೂ ಅಸಹ್ಯದವರು, ಕೊಳಕು ಜನ. ಒಮ್ಮೆ ಒಂದು ಸಿನಿಮಾ ಚಿತ್ರೀಕರಣಕ್ಕೆ ಹೋಗಿದ್ದಾಗ ಒಬ್ಬ ಹುಡುಗಿ ಸಿಕ್ಕಳು, ಹೈದರಾಬಾದ್ಗೆ ಬಾ, ನನ್ನ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಇರು ಎಂದೇ, ಆಕೆ ನನ್ನನ್ನೇ ಬಲೆಗೆ ಬೀಳಿಸಿಕೊಳ್ಳಲು ಬಂದಲು, ನಾನು ಅಲ್ಲಿಂದ ಕೂಡಲೇ ವಿಮಾನ ನಿಲ್ದಾಣಕ್ಕೆ ಓಡಿ ಹೋದೆ. ಕನ್ನಡ ಚಿತ್ರರಂಗದ ಸಹವಾಸವೇ ನನಗೆ ಬೇಡ ಎಂದು ಓಡಿ ಬಂದೆ. ಕನ್ನಡ ಚಿತ್ರರಂಗದವರು ಬಹಳ ಅಸಹ್ಯ, ಅಲ್ಲಿ ವಿಪರೀತ ಕಾಸ್ಟಿಂಗ್ ಕೌಚ್ ಇದೆ'' ಎಂದಿದ್ದ ಗೀತ ಶಂಕರ್

ಬೇಸರ ವ್ಯಕ್ತಪಡಿಸಿದ್ದ ರಾಘವೇಂದ್ರ ರಾಜ್ಕುಮಾರ್
ಕನ್ನಡ ಚಿತ್ರರಂಗದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ನಿರ್ದೇಶಕ ಗೀತ ಶಂಕರ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು, ನಟ ರಾಘವೇಂದ್ರ ರಾಜ್ಕುಮಾರ್ ಸಹ ಈ ಬಗ್ಗೆ ಪ್ರತಿಕ್ರಿಯಿಸಿ, ''ನಮ್ಮ ಭಾಷೆ ಬೆಳೆಯುತ್ತಾ ಇದೆ. ಕನ್ನಡ ಭಾಷೆಯ ತಾಕತ್ತು ಏನೆಂಬುದು ಪ್ರಪಂಚದಾದ್ಯಂತದ ಜನಗಳಿಗೆ ಗೊತ್ತು. ಯಾರೋ ಮಾತನಾಡಿದ್ದರ ಬಗ್ಗೆ ನಾವು ಕಿವಿಗೊಡುವುದು ಬೇಡ. ಅವರು ಮಾತನಾಡುತ್ತಾ ಇರಲಿ, ನಾವು ಬೆಳೆಯುತ್ತಾ ಇರೋಣ. ನಾವು ಚೆನ್ನಾಗಿ ಬೆಳೆಯುತ್ತಿದ್ದೇವೆ ಎಂಬ ಕಾರಣಕ್ಕಾಗಿಯೇ ಅವರು ಮಾತನಾಡುತ್ತಿದ್ದಾರೆ'' ಎಂದಿದ್ದರು.

ಸ್ಪಷ್ಟನೆ ನೀಡಿರುವ ಗೀತ ಕೃಷ್ಣ
ವಿಷಯ ಗಂಭೀರವಾಗುತ್ತಿದ್ದಂತೆ ತನ್ನ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿರುವ ನಿರ್ದೇಶಕ ಗೀತ ಕೃಷ್ಣ, ''ಸಿನಿಮಾ ಅವಕಾಶಕ್ಕಾಗಿ ಮಂಚ ಏರುವ ಕೆಟ್ಟ ಚಾಳಿ ಎಲ್ಲ ಭಾಷೆಯ ಚಿತ್ರರಂಗದಲ್ಲೂ ಇದೆ. ತೆಲುಗು, ತಮಿಳು, ಹಿಂದಿಯಲ್ಲಿಯೂ ಈ ಅಭ್ಯಾಸ ಇದೆ. ನಾನು ಪ್ರತ್ಯೇಕವಾಗಿ ಕನ್ನಡ ಸಿನಿಮಾ ಉದ್ಯಮದ ಬಗ್ಗೆ ಮಾತನಾಡಿಲ್ಲ. ನನಗೆ ಆದ ಅನುಭವವನ್ನಷ್ಟೆ ನಾನು ಹೇಳಿದ್ದೇನೆ. ಎಲ್ಲ ಚಿತ್ರರಂಗದಲ್ಲಿಯೂ ಕಾಸ್ಟಿಂಗ್ ಕೌಚ್ ಇದೆ. ನನ್ನ ಹೇಳಿಕೆಯನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ, ಹೇಳಿಕೆ ತಿರುಚಲಾಗಿದೆ'' ಎಂದಿದ್ದಾನೆ.

ಈ ಗೀತ ಕೃಷ್ಣ ಯಾರು?
ಕನ್ನಡ ಚಿತ್ರರಂಗದ ಬಗ್ಗೆ ತುಚ್ಛವಾಗಿ ಮಾತನಾಡಿರುವ ಗೀತ ಕೃಷ್ಣ ಈವರೆಗೆ ನಿರ್ದೇಶಿಸಿರುವುದು ಎಂಟು ಸಿನಿಮಾಗಳಷ್ಟೆ. 1987 ರಲ್ಲಿ 'ಸಂಕೀರ್ತನ' ಹೆಸರಿನ ಸಿನಿಮಾದೊಂದಿಗೆ ತೆಲುಗು ಚಿತ್ರರಂಗ ಪ್ರವೇಶಿಸಿದ ಗೀತ ಕೃಷ್ಣ, ಆ ನಂತರ ಏಳು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾನೆ. 2013 ರಲ್ಲಿ ಬಿಡುಗಡೆ ಆದ 'ನಿಮಿದಂಗಲ್' ಹೆಸರಿನ ತಮಿಳು ಸಿನಿಮಾ ಈತನ ನಿರ್ದೇಶನದ ಕೊನೆಯ ಸಿನಿಮಾ. ಈತ ಕೆಲವು ಸಾಕ್ಷ್ಯಚಿತ್ರಗಳನ್ನು ಸಹ ನಿರ್ದೇಶನ ಮಾಡಿದ್ದಾನೆ.


Click it and Unblock the Notifications











