"ನನ್ನ ಅಸಿಸ್ಟೆಂಟ್ ಎಡವಟ್ಟಿನಿಂದ ಬಾಲಯ್ಯ ವಿಗ್ ಹಾರಿತ್ತು, ತಕ್ಷಣ ಗರಂ ಆಗ್ಬಿಟ್ರು": ಕೆ. ಎಸ್ ರವಿಕುಮಾರ್
ರಗಡ್ ಪಾತ್ರಗಳು, ಮಾಸ್ ಡೈಲಾಗ್ಸ್ನಿಂದ ತೆಲುಗು ನಟ ಬಾಲಕೃಷ್ಣ ಸಿನಿರಸಿಕರ ಮನಗೆದ್ದಿದ್ದಾರೆ. ಬಾಲಯ್ಯಗೆ ಸದಾ ಮೂಗಿನ ಮೇಲೆ ಕೋಪ ಎಂದು ಕೆಲವರು ಹೇಳುತ್ತಿರುತ್ತಾರೆ. ಸಾರ್ವಜನಿಕವಾಗಿ ಕೆಲವೊಮ್ಮೆ ಅಭಿಮಾನಿಗಳ ಮೇಲೂ ಗರಂ ಆಗಿರುವ ಉದಾಹರಣೆಗಳಿವೆ. ಇನ್ನು ಸಿನಿಮಾ ಸೆಟ್ನಲ್ಲಿ ಬಾಲಕೃಷ್ಣ ಹೇಗಿರುತ್ತಾರೆ ಎಂದು ತಮಿಳು ನಿರ್ದೇಶಕ ಕೆ. ಎಸ್ ರವಿಕುಮಾರ್ ಬಿಚ್ಚಿಟ್ಟಿದ್ದಾರೆ.
ಸೆಟ್ನಲ್ಲಿ ಬಾಲಕೃಷ್ಣ ಯಾರದರೂ ತಮ್ಮನ್ನು ನೋಡಿ ನಕ್ಕರೆ ಸಹಿಸುವುದಿಲ್ಲ. ಕೂಡಲೇ ಕರೆದು ಹೊಡೆದುಬಿಡುತ್ತಾರೆ ಎಂದು ಕೆ. ಎಸ್ ರವಿಕುಮಾರ್ ಹೇಳಿದ್ದಾರೆ. ಇದೇ ಕಾರಣಕ್ಕೆ ತಮಿಳು ನಿರ್ದೇಶಕನನ್ನು ಬಾಲಯ್ಯ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. ಆತನಿಗೆ ಕರೆದು ಅವಕಾಶ ಕೊಟ್ಟ ನಟನ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ನಲ್ಲಿ ಬಾಲಯ್ಯ ಕುರಿತು ಕೆ. ಎಸ್ ರವಿಕುಮಾರ್ ಹೇಳಿಕೆ ವೈರಲ್ ಆಗುತ್ತಿದೆ.

'ಗಾರ್ಡಿಯನ್' ಎನ್ನುವ ತಮಿಳು ಸಿನಿಮಾ ಸುದ್ದಿಗೋಷ್ಠಿಯಲ್ಲಿ ಕೆ. ಎಸ್ ರವಿಕುಮಾರ್ ಭಾಗಿ ಆಗಿದ್ದರು. ಈ ವೇಳೆ ವೇದಿಕೆಯಲ್ಲಿ ಮಾತನಾಡುತ್ತಾ ಬಾಲಯ್ಯ ವಿಚಾರ ಪ್ರಸ್ತಾಪ ಮಾಡಿದ್ದಾರೆ. "ಬಾಲಕೃಷ್ಣ ಚಿತ್ರಕ್ಕೆ ಕೆಲಸ ಮಾಡುವಾಗ ಚಿತ್ರೀಕರಣದ ವೇಳೆ ಯಾರಾದರೂ ನಗುತ್ತಿರುವಂತೆ ಕಂಡರೆ ಸಹಿಸುತ್ತಿರಲಿಲ್ಲ. ತನ್ನನ್ನು ನೋಡಿ ನಗುತ್ತಿದ್ದಾನೆ ಎಂದುಕೊಳ್ಳುತ್ತಿದ್ದರು. ಆತ ಯಾಕೆ ನಗುತ್ತಿದ್ದಾನೆ ಎಂದು ಗರಂ ಆಗಿಬಿಡುತ್ತಿದ್ದರು. ನಗುವ ವ್ಯಕ್ತಿಯನ್ನು ಕರೆದು ಹೊಡೆದುಬಿಡುತ್ತಿದ್ದರು" ಎಂದಿದ್ದಾರೆ.
"ಒಂದು ಸಿನಿಮಾ ಚಿತ್ರೀಕರಣದ ವೇಳೆ ಫ್ಯಾನ್ ನನ್ನ ಕಡೆ ತಿರುಗಿಸುವಂತೆ ನನ್ನ ಅಸಿಸ್ಟೆಂಟ್ ಶರವಣನ್ಗೆ ಹೇಳಿದೆ. ಆತ ಅಚಾನಕ್ ಆಗಿ ಬಾಲಯ್ಯ ಕಡೆ ತಿರುಗಿಸಿಬಿಟ್ಟಿದ್ದ. ಇದರಿಂದ ಬಾಲಕೃಷ್ಣ ಹಾಕಿಕೊಂಡಿದ್ದ ವಿಗ್ ಅತ್ತ ಇತ್ತ ಹೋಗಿತ್ತು. ಇದನ್ನು ನೋಡಿ ಶರವಣನ್ ಕೊಂಚ ನಕ್ಕ. ಅದನ್ನು ನೋಡಿ ಬಾಲಯ್ಯ ಗರಂ ಆಗಿಬಿಟ್ಟರು. ಏಯ್ ಯಾಕೆ ನಗುತ್ತಿದ್ದೀಯಾ? ಎಂದು ಕಿರುಚಿದರು. ಅವರು ಎಲ್ಲಿ ಶರವಣನ್ನ ಕರೆದು ಹೊಡೆಯುತ್ತಾರೋ ಎಂದು ನಾನೇ ಹೋಗಿ ಸರ್, ಆತ ನಮ್ಮ ಅಸಿಸ್ಟೆಂಟ್ ಅಂತ ಸಮಾಧಾನ ಮಾಡುವ ಪ್ರಯತ್ನ ಮಾಡಿದೆ.

"ಬಾಲಕೃಷ್ಣ ಮಾತ್ರ ನನ್ನ ಮಾತು ಕೇಳಲಿಲ್ಲ. ಇಲ್ಲ, ಇಲ್ಲ. ಆತ ನಮ್ಮ ವಿರೋಧಿ ಗ್ಯಾಂಗ್. ನೋಡು ಈಗ ಕೂಡ ನಗುತ್ತಿದ್ದಾನೆ" ಎಂದರು. ಆದರೂ ಕೂಡ ಬಾಲಯ್ಯಗೆ ಸಮಾಧಾನವಾಗಲಿಲ್ಲ. ಕೂಡಲೇ ಶರವಣನ್ಗೆ ಇಲ್ಲಿ ಇರಬೇಡ ಹೋಗು ಎಂದು ಹೇಳಿ ಕಳುಹಿಸಿದೆ" ಎಂದು ಕೆ. ಎಸ್ ರವಿಕುಮಾರ್ ಹೇಳಿದ್ದಾರೆ. ಇದನ್ನು ಕೇಳಿ ವೇದಿಕೆ ಮೇಲಿದ್ದವರು ನಕ್ಕಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಬಾಲಕೃಷ್ಣ ನಟಿಸಿದ 'ಜೈಸಿಂಹ' ಹಾಗೂ 'ರೂಲರ್' ಸಿನಿಮಾಗಳನ್ನು ಕೆ. ಎಸ್ ರವಿಕುಮಾರ್ ನಿರ್ದೇಶಿಸಿದ್ದರು. ಇಂತಹ ಎರಡು ಸಿನಿಮಾಗಳಿಗೆ ಕರೆದು ಅವಕಾಶ ಕೊಟ್ಟ ಬಾಲಯ್ಯ ಬಗ್ಗೆ ಬಹಿರಂಗವಾಗಿ ಈ ರೀತಿ ಮಾತನಾಡುವುದು ಸರೀನಾ? ಎಂದು ನಟಸಿಂಹ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ನಿಜ ಹೇಳಬೇಕು ಅಂದರೆ ಬಾಲಯ್ಯ ಸಖತ್ ಸೈಲೆಂಟ್ ಆಗಿ ಇರುತ್ತಾರೆ. ಆದರೆ ಕೋಪಗೊಂಡರೆ ಮಾತ್ರ ಸುಮ್ಮನಿರುವವರಲ್ಲ. ಕೆಲವೊಮ್ಮೆ ಹಿಂದು ಮುಂದು ನೋಡದೇ ಹೊಡೆದುಬಿಡುತ್ತಾರೆ. ಸಾರ್ವಜನಕವಾಗಿ ಬಾಲಯ್ಯ ಈ ರೀತಿ ನಡೆದುಕೊಂಡಿರುವ ವಿಡಿಯೋಗಳು ವೈರಲ್ ಆಗಿತ್ತು. ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿ ಮೊಬೈಲ್ ಕಿತ್ತು ಬಿಸಾಕಿರುವ ಉದಾಹರಣೆ ಕೂಡ ಇದೆ. ಇತ್ತೀಚೆಗೆ ಎನ್ಟಿಆರ್ ಘಾಟ್ನಲ್ಲಿ ಜ್ಯೂ. ಎನ್ಟಿಆರ್ ಬ್ಯಾನರ್ ನೋಡಿ ಗರಂ ಆಗಿದ್ದರು. ಕೂಡಲೇ ತೆಗೆಯುವಂತೆ ಬಹಿರಂಗವಾಗಿಯೇ ಆದೇಶ ನೀಡಿದ್ದ ವಿಡಿಯೋ ವೈರಲ್ ಆಗಿತ್ತು.


Click it and Unblock the Notifications










