"ದರ್ಶನ್ ಆನೆ.. ನಾಯಿಗಳು ಬೊಗಳುತ್ತಿವೆ ಅಂತ ಸುಮ್ಮನಾಗಿದ್ರೆ ಇಷ್ಟೆಲ್ಲಾ ಆಗ್ತಿರಲಿಲ್ಲ": ಆರ್ಜಿವಿ
ನಟ ದರ್ಶನ್ ಬಂಧನ ವಿಚಾರದ ಬಗ್ಗೆ ಸ್ಯಾಂಡಲ್ವುಡ್ ತಾರೆಯರು ಪ್ರತಿಕ್ರಿಯಿಸುತ್ತಿಲ್ಲ. ನಟಿ ರಮ್ಯಾ ಮಾತ್ರ ಈ ಬಗ್ಗೆ ಮಾತನಾಡುತ್ತಿದ್ದಾರೆ. ಇನ್ನುಳಿದಂತೆ ಪರಭಾಷಾ ಕಲಾವಿದರು, ತಂತ್ರಜ್ಞರು ಈ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ತಮಿಳು ನಟಿ ಕಸ್ತೂರಿ ತೆಲುಗು ಸಂದರ್ಶನದಲ್ಲಿ ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಮಾತನಾಡಿದ್ದರು. ದರ್ಶನ್ ಮಾಡಿದ್ದು ತಪ್ಪೇ ಆದರೆ ರೇಣುಕಾಸ್ವಾಮಿ ಮಾಡಿದ್ದು ಸರೀನಾ? ಎಂದು ಪ್ರಶ್ನಿಸಿದ್ದರು. ಸೆಲೆಬ್ರೆಟಿಗಳನ್ನು ಟ್ರೋಲ್ ಮಾಡುವುದು, ಕೆಟ್ಟ ಮೆಸೇಜ್ ಕಳುಹಿಸಿ ಕಿರುಕುಳ ಕೊಡುವುದು ಜಾಸ್ತಿಯಾಗಿದೆ. ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಮೆಸೇಜ್ ಮಾಡಿ ಕಿರುಕುಳ ಕೊಟ್ಟಿದ್ದ. ಆತನಿಗೆ ಬುದ್ಧಿ ಕಲಿಸಲು ದರ್ಶನ್ ಮುಂದಾದಾಗ ಈ ಆಚಾತುರ್ಯ ನಡೆದಿದೆ ಎಂದಿದ್ದರು.

ಖ್ಯಾತ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಸಹ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಟ್ವೀಟ್ ಮಾಡಿದ್ದರು. ಇದೀಗ ಸಂದರ್ಶನವೊಂದರಲ್ಲಿ ವಿವರವಾಗಿ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಕೋಪದ ಕೈಗೆ ಬುದ್ಧಿ ಕೊಟ್ಟಾಗ ನಡೆದಿರುವಂತಹ ಘಟನೆ ಇದು. ಕೆಟ್ಟ ಮೆಸೇಜ್ ಬಂದಾಗ ಬೇಸರವಾಗುತ್ತದೆ. ಪ್ರಕರಣದ ಇನ್ನು ತನಿಖೆ ಹಂತದಲ್ಲಿದೆ. ಹಾಗಾಗಿ ಹೆಚ್ಚು ಮಾತನಾಡಲ್ಲ. ಆದರೆ ಮಾಧ್ಯಮಗಳಲ್ಲಿ ಏನು ಬರುತ್ತಿದೆ ಅದರ ಬಗ್ಗೆ ಮಾತನಾಡ್ತೀನಿ. ಅವರು ಪ್ಲ್ಯಾನ್ ಮಾಡಿ ಕೊಲೆ ಮಾಡಿದರು ಎಂದು ನನಗೆ ಅನ್ನಿಸಲ್ಲ" ಎಂದಿದ್ದಾರೆ.
"ನಾನು ಒಬ್ಬ ಪವರ್ಫುಲ್ ವ್ಯಕ್ತಿಯಾಗಿದ್ದಾಗ ಇಂತಹ ಕೆಟ್ಟ ಮೆಸೇಜ್ ಬಂದರೆ ತಡೆಯಲು ಸಾಧ್ಯವಿಲ್ಲ. ತಕ್ಷಣ ದೊಡ್ಡದಾಗಿ ಪ್ರತಿಕ್ರಿಯಿಸುತ್ತೀನಿ. ಆತ ಎದುರಿಗೆ ಇದ್ದರೆ ಕೆನ್ನೆಗೆ ಬಾರಿಸುತ್ತೀನಿ. ಬೈಯ್ತೀನಿ, ಹೊಡೀತಿನಿ. ಆತ ನನ್ನ ಎದುರಿಗೆ ಇಲ್ಲದಿದ್ದರೆ ಕೆಲವರನ್ನು ಬಳಸಿಕೊಂಡು ಅವನಿಗೆ ಬುದ್ಧಿ ಕಲಿಸುತ್ತೀನಿ. ಇದೇ ರೀತಿ ಈ ಘಟನೆ ಆರಂಭವಾಗಿದೆ. ಪವಿತ್ರಾಗೆ ಮೆಸೇಜ್ ಬಂತು. ಆಕೆ ದರ್ಶನ್ಗೆ ಹೇಳಿದಳು. ಆತನಿಗೆ ಫ್ಯಾನ್ಸ್ ಕ್ಲಬ್ ಇತ್ತು. ಆ ಮೂಲಕ ಒಂದು ಚೈನ್ ರೀತಿ ಇದೆಲ್ಲಾ ನಡೀತು. ಆದರೆ ಅದು ಈ ಹಂತಕ್ಕೆ ಹೋಗುತ್ತದೆ ಎಂದು ಯಾರು ಅಂದುಕೊಂಡಿರಲಿಲ್ಲ"
"ನಾನು ಒಂದು ಟ್ವೀಟ್ ಸಹ ಮಾಡಿದ್ದೆ. ಸಿನಿಮಾಗಳಲ್ಲಿ ಸ್ಕ್ರೀನ್ಪ್ಲೇ ಬರೆದು ಚಿತ್ರೀಕರಣ ಮಾಡ್ತೀವಿ. ಕೆಲವೊಮ್ಮೆ ಶೂಟಿಂಗ್ ನಡುನಡುವೆ ಕೆಲವರು ಸ್ಕ್ರೀನ್ಪ್ಲೇ ಬರೆಯುತ್ತಾರೆ. ಆದರೆ ಈ ಘಟನೆಯಲ್ಲಿ ಸಿನ್ಮಾ ಬಿಡುಗಡೆ ಬಳಿಕ ಸ್ಕ್ರೀನ್ಪ್ಲೇ ಬರೆಯಲು ಹೋಗಿದ್ದಾರೆ. ಅಂದ್ರೆ ಕೊಲೆ ಬಳಿಕ ಶವ ಏನು ಮಾಡೋದು, ಪೊಲೀಸರಿಗೆ ಏನು ಹೇಳುವುದು ಎಂದು ನಂತರ ಸ್ಕ್ರೀನ್ ಪ್ಲೇ ಬರೆಯಲು ಹೋಗಿದ್ದಾರೆ. ಅದು ಸಾಧ್ಯವಾಗಲಿಲ್ಲ" ಎಂದು ವರ್ಮಾ ಹೇಳಿದ್ದಾರೆ.
"ಟ್ರೋಲ್ ಎನ್ನುವುದು ಇತ್ತೀಚೆಗೆ ಜೀವನದ ಭಾಗವಾಗಿಬಿಟ್ಟಿದೆ. ನಾನು ಏನೇ ಪೋಸ್ಟ್ ಮಾಡಿದರೂ 90ರಷ್ಟು ಕೆಟ್ಟ ಕಾಮೆಂಟ್ಸ್ ಬರುತ್ತವೆ. ಅದನ್ನು ಗಂಭೀರವಾಗಿ ಪರಿಗಣಿಸುವುದೇ ದೊಡ್ಡ ತಪ್ಪು. ರೇಣುಕಾಸ್ವಾಮಿ ಇದಕ್ಕೂ ಮುನ್ನ ಪವಿತ್ರಾ ಗೌಡಗೆ ಆಗಲಿ, ದರ್ಶನ್ಗೆ ಆಗಲಿ ಏನು ಮಾಡಲಿಲ್ಲ. ಪವಿತ್ರಾ ಗೌಡ ಆ ಮೆಸೇಜ್ ನೋಡಿ ನಕ್ಕು ಸುಮ್ಮನಾಗಿದ್ದರೆ ಏನು ಆಗುತ್ತಿರಲಿಲ್ಲ. ಆತ ಯಾವುದೋ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದವನು. ಆ ಮೆಸೇಜ್ ಅನ್ನು ಗಂಭೀರವಾಗಿ ತೆಗೆದುಕೊಂಡಿದ್ದಕ್ಕೆ ಈ ಹಂತಕ್ಕೆ ಹೋಗಿದೆ"
"ಆನೆ ನಡೆದು ಹೋಗುವಾಗ ನಾಯಿಗಳು ಬೊಗಳುತ್ತವೆ. ಆದರೆ ಆನೆ ತಲೆಕೆಡಿಸಿಕೊಳ್ಳಲ್ಲ. ಟ್ರೋಲರ್ಸ್ ವಿಚಾರದಲ್ಲಿ ಇದನ್ನೇ ಮಾಡಬೇಕು. ದರ್ಶನ್ ಸೂಪರ್ ಸ್ಟಾರ್. ಆತ ಕೋಟಿ ಕೋಟಿ ಹಣ ಸಂಪಾದಿಸುತ್ತಾನೆ. ಆತನ ಸಿನಿಮಾಗಳು ಕೋಟಿ ಕೋಟಿ ಕಲೆಕ್ಷನ್ ಮಾಡುತ್ತವೆ. ಆದರೆ ಈಗ ಆತನ ಜೀವನ ರಿಸ್ಕ್ನಲ್ಲಿದೆ. ಪ್ರಕರಣದ ತೀರ್ಪು ಏನಾಗುತ್ತದೋ ಗೊತ್ತಿಲ್ಲ. ಆದರೆ ಯಾರೋ ಒಬ್ಬ ವ್ಯಕ್ತಿ ಒಂದು ಮೆಸೇಜ್ ಮಾಡಿದ್ದಕ್ಕೆ ಇಷ್ಟೆಲ್ಲಾ ಆಯ್ತು ಅನ್ನೋದು ನನಗೆ ತಮಾಷೆ ಅನ್ನಿಸ್ತಿದೆ"

"ರೇಣುಕಾಸ್ವಾಮಿ ಬಹಳ ಸಣ್ಣಗೆ ಇದ್ದ. ಎಷ್ಟು ಆತನನ್ನು ಹೊಡೆಯಲು ಸಾಧ್ಯ. ಆತ ಕೂಡ ಹೇಗೆ ಪ್ರತಿಕ್ರಿಯಿಸಿದ ಎನ್ನುವುದು ಗೊತ್ತಿಲ್ಲ. ದರ್ಶನ್ ಆಪ್ತರು, ಫ್ಯಾನ್ಸ್ ರೇಣುಕಾಸ್ವಾಮಿಗೆ ಹೊಡೆದಿದ್ದಾರೆ. ಆಗ ಆತ ಹೇಗೆ ರಿಯಾಕ್ಟ್ ಮಾಡಿದ ಎನ್ನುವುದು ಆತನಿಗೆ ಹೆಚ್ಚು ಹೊಡೆಯಲು ಪ್ರೇರೇಪಿರಬಹುದು. ಕೊನೆಗೆ ಆತ ಸತ್ತ. ಆಮೇಲೆ ಏನು ಮಾಡೋದು ಗೊತ್ತಾಗಲಿಲ್ಲ. ನಟ ದರ್ಶನ್ ಸಹ ಆ ಜಾಗಕ್ಕೆ ಹೋಗಿ ಬಂದಿದ್ದಾರೆ. ಆ ಗೊಂದಲದಲ್ಲಿ ನಾಲ್ಕು ಜನರನ್ನು ಕಳುಹಿಸಿ ಸೆರೆಂಡರ್ ಆಗಲು ಹೇಳಿದ್ದಾರೆ. ಆಗ ಎಲ್ಲರ ಟೆನ್ಷನ್ ಹೇಗಿದ್ದಿರಬಹುದು ಎಂದು ನಾನು ಊಹಿಸಬಲ್ಲೆ" ಎಂದಿದ್ದಾರೆ.
"ಅಭಿಮಾನಿಗಳು ನೆಚ್ಚಿನ ನಟನ ಸಿನಿಮಾ ನೋಡುತ್ತಾರೆ. ಅವ್ರು ಬೇರೆ. ಅವ್ರು ಸ್ಟಾರ್ ನಟನ ಸಂಪರ್ಕಕ್ಕೆ ಬರಲ್ಲ. ಆದರೆ ಫ್ಯಾನ್ಸ್ ಕ್ಲಬ್ನವರು ನಟನ ಸಂಪರ್ಕದಲ್ಲಿರುತ್ತಾರೆ. ಅವ್ರು ನಟನ ಸಿನಿಮಾ ಕಾರ್ಯಕ್ರಮಗಳಿಗೆ ಬರ್ತಾರೆ, ಸಿನಿಮಾ ರಿಲೀಸ್ ವೇಳೆ ಥಿಯೇಟರ್ ಮುಂದೆ ಸಂಭ್ರಮಾಚರಣೆ ಮಾಡ್ತಾರೆ, ಹುಟ್ಟುಹಬ್ಬ ಆಚರಿಸುತ್ತಾರೆ. ಅವ್ರು ನಟನಿಗೆ ಚೇಲಾಗಳ ರೀತಿ ಇರ್ತಾರೆ. ಅಂತವರಿಗೆ ನೆಚ್ಚಿನ ನಟನನ್ನು ಮೆಚ್ಚಿಸುವ ಅವಕಾಶ ಸಿಕ್ಕರೆ ಬಳಸಿಕೊಳ್ಳುತ್ತಾರೆ. ದರ್ಶನ್ ಅವರಿಗೆ ಹೇಳಿದಾಗ ನಮ್ಮ ದೇವರು ಹೇಳಿದ್ದಾರೆ ಈ ಕೆಲಸ ಮಾಡಬೇಕು ಎಂದು ಮಾಡಿದ್ದಾರೆ. ನಮ್ಮ ಬಾಸ್ ಎಲ್ಲಾ ನೋಡಿಕೊಳ್ಳುತ್ತಾರೆ ಎಂದುಕೊಂಡಿದ್ದಾರೆ" ಎಂದು ಆರ್ಜಿವಿ ವಿವರಿಸಿದ್ದಾರೆ.


Click it and Unblock the Notifications










