ಪ್ರಭಾಸ್, ನನ್ನ ಕಾಂಬಿನೇಷನ್ ಸಿನಿಮಾ ಬಜೆಟ್ 300 ಕೋಟಿ ರೂ. ಎಂದ ನಿರ್ದೇಶಕ
ಬಾಹುಬಲಿ ಪ್ರಭಾಸ್ ಒಂದಕ್ಕಿಂತ ಒಂದು ಅದ್ಧೂರಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 200 ಕೋಟಿ ರೂ. ಬಜೆಟ್ ಇಲ್ಲದೇ ಯಂಗ್ ರೆಬಲ್ ಸ್ಟಾರ್ ಸಿನಿಮಾ ಮಾಡೋದು ಕಷ್ಟ ಎನ್ನುವಂತಾಗಿಬಿಟ್ಟಿದೆ. 'ಕಲ್ಕಿ' ಸಿನಿಮಾ ಬಜೆಟ್ 500 ಕೋಟಿ ರೂ. ದಾಟುತ್ತದೆ ಎನ್ನಲಾಗ್ತಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಭಾಸ್ ಸಿನಿಮಾಗಳು ಸದ್ದು ಮಾಡುತ್ತವೆ. ಚಿತ್ರವೊಂದಕ್ಕೆ ಸಲಾರ್ ನಟ 100 ಕೋಟಿ ರೂ. ಸಂಭಾನವೆ ಪಡೆಯುತ್ತಾರೆ ಎನ್ನಲಾಗುತ್ತದೆ. ಹಾಗಾಗಿ ಸಹಜವಾಗಿಯೇ ಒಟ್ಟಾರೆ ಸಿನಿಮಾ ಬಜೆಟ್ ಜಾಸ್ತಿ ಆಗುತ್ತದೆ. ಪ್ರಭಾಸ್ ನಂಬಿ ಎಷ್ಟೇ ಬಂಡವಾಳ ಹಾಕಿದರೂ ವಾಪಸ್ ಬರುತ್ತದೆ ಎನ್ನುವ ವಾದ ಚಿತ್ರರಂಗದಲ್ಲಿದೆ.

ಸದ್ಯ ಪ್ರಭಾಸ್ 'ಕಲ್ಕಿ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 'ರಾಜಾ ಸಾಬ್' ಎನ್ನುವ ಮತ್ತೊಂದು ಸಿನಿಮಾ ಕೆಲಸಗಳು ನಡೀತಿದೆ. ಬಳಿಕ 'ಸಲಾರ್' ಸೀಕ್ವೆಲ್ನಲ್ಲಿ ನಟಿಸುವ ಬಗ್ಗೆ ಚರ್ಚೆ ನಡೀತಿದೆ. ಕಳೆದ ವರ್ಷ ಡಿಸೆಂಬರ್ 22ಕ್ಕೆ 'ಸಲಾರ್' ಪಾರ್ಟ್-1 ತೆರೆಗಪ್ಪಳಿಸಿ ಗೆದ್ದಿತ್ತು. ಸತತ 3 ಫ್ಲಾಪ್ ಕೊಟ್ಟಿದ್ದ ಯಂಗ್ ರೆಬಲ್ ಸ್ಟಾರ್ ಕೊನೆಗೂ ಗೆದ್ದು ಬೀಗಿದ್ದರು. ಪ್ರಶಾಂತ್ ನೀಲ್ 'ಸಲಾರ್' ಸೀಕ್ವೆಲ್ ಪ್ಲ್ಯಾನ್ ಮಾಡುತ್ತಿದ್ದಾರೆ.
'ಕಲ್ಕಿ' ಹಾಗೂ 'ಸಲಾರ್-2' ಬಿಟ್ಟು ಮತ್ತೆರಡು ಸಿನಿಮಾಗಳು ಲೈನ್ ಅಪ್ ಆಗುತ್ತಿದೆ. ಅದರಲ್ಲೂ 'ಅನಿಮಲ್' ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಈ ಬಗ್ಗೆ ಸಂದೀಪ್ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಸದ್ಯ ಗಲಾಟ ಪ್ಲಸ್ ಯೂಟ್ಯೂಬ್ ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಸಂದೀಪ್ ರೆಡ್ಡಿ ವಂಗಾ ಹಾಗೂ ಪ್ರಭಾಸ್ ಕಾಂಬಿನೇಷನ್ನಲ್ಲಿ 'ಸ್ಪಿರಿಟ್' ಎನ್ನುವ ಸಿನಿಮಾ ಮೂಡಿ ಬರಲಿದೆ. ಚಿತ್ರದಲ್ಲಿ ಪ್ರಭಾಸ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ. ಇದೇ ವರ್ಷ ಡಿಸೆಂಬರ್ನಲ್ಲಿ ಸಿನಿಮಾ ಚಿತ್ರೀಕರಣ ಶುರುವಾಗುತ್ತದೆ ಎಂದು ನಿರ್ದೇಶಕರು ಹೇಳುತ್ತಾ ಬರುತ್ತಿದ್ದಾರೆ. ಸೆಟ್ಟೇರುವುದಕ್ಕೂ ಮುನ್ನವೇ ಈ ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ.

"ಕೋವಿಡ್ ಬಳಿಕ ಪ್ರಭಾಸ್ ನನ್ನ ಬಳಿ ಒಂದು ಸಿನಿಮಾ ಮಾಡೋಣ ಅಂತ ಬಂದರು. ಹಾಲಿವುಡ್ ಸಿನಿಮಾವೊಂದನ್ನು ರೀಮೆಕ್ ಮಾಡುವ ಐಡಿಯಾ ಕೊಟ್ಟರು. ನಾನು ಬೇಡ. ವರ್ಕ್ ಆಗಲ್ಲ, ಒರಿಜಿನಲ್ ಸಿನಿಮಾ ಮಾಡೋಣ ಎಂದೆ. 'ಸ್ಪಿರಿಟ್' ಚಿತ್ರದಲ್ಲಿ ಅವರ ಪಾತ್ರ ಏನು ಎಂದು ಹೇಳಿದೆ. ಅವರಿಗೆ ಇಷ್ಟವಾಯಿತು. ಕೂಡಲೇ ಸಿನಿಮಾ ಮಾಡಲು ಒಪ್ಪಿದರು" ಎಂದು ಸಂದೀಪ್ ರೆಡ್ಡಿ ವಂಗಾ ಹೇಳಿದ್ದಾರೆ.
"60ರಷ್ಟು ಸ್ಕ್ರಿಪ್ಟ್ ಕೆಲಸ ಮುಗಿದಿದೆ. ಸ್ಪಿರಿಟ್ ಚಿತ್ರದ ಬಜೆಟ್ 300 ಕೋಟಿ ರೂ.ಗೂ ಅಧಿಕ. ನಿರ್ಮಾಪಕರು ಒಪ್ಪಿದ್ದಾರೆ. ಪ್ರಭಾಸ್ ಸಿನಿಮಾಗೆ ಇಷ್ಟು ಬಂಡವಾಳ ಬೇಕಾಗುತ್ತದೆ. ನಿರ್ಮಾಪಕರು ಸೇಫ್ ಆಗುತ್ತಾರೆ. ಪ್ರಭಾಸ್, ನನ್ನ ಕಾಂಬಿನೇಷನ್ ಆಗಿರುವುದರಿಂದ ಸ್ಯಾಟಲೈಟ್, ಡಿಜಿಟಲ್ ರೈಟ್ಸ್ ಕೂಡ ಬರುತ್ತದೆ. 150 ಕೋಟಿ ರೂ. ಓಪನಿಂಗ್ ಆಗುತ್ತದೆ. ಹೀಗೆ ಲೆಕ್ಕಾಚಾರ ಇರುತ್ತದೆ" ಎಂದಿದ್ದಾರೆ.
ನಟ ಪ್ರಭಾಸ್ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಸೀತಾರಾಮಂ' ಸಿನಿಮಾ ನಿರ್ದೇಶಕ ಹನು ರವಿಪೂಡಿ ಜೊತೆ ಕೈ ಜೋಡಿಸಲು ಸಿದ್ಧರಾಗಿದ್ದರು. ಈ ಚಿತ್ರದಲ್ಲಿ ಐತಿಹಾಸಿಕ ಕಥೆಯನ್ನು ಹೇಳುವ ಪ್ರಯತ್ನ ನಡೀತಿದೆ. ಸದ್ಯ ಪ್ರಭಾಸ್ ನಟನೆಯ 'ಕಲ್ಕಿ' ಸಿನಿಮಾ ರಿಲೀಸ್ ಡೇಟ್ ಬಗ್ಗೆ ಭಾರೀ ಗೊಂದಲ ಏರ್ಪಟ್ಟಿದೆ. ಮೇ 9ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಆದರೆ ಚುನಾವಣೆ ಹಿನ್ನೆಲೆ ದಿನಾಂಕ ಬದಲಾಗುವ ಸಾಧ್ಯತೆಯಿದೆ.


Click it and Unblock the Notifications











