ಅದೇ ನಂಗೆ ಬೆಸ್ಟ್; ಸುದೀಪ್ ಸಿನಿಮಾ ಆಯ್ಕೆ ಮಾಡಿದ್ದೇಕೆ ರಾಜಮೌಳಿ?
ಭಾರತದ ಸಿನಿಮಾಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋದವರು ಎಸ್. ಎಸ್ ರಾಜಮೌಳಿ. ಒಂದಕ್ಕಿಂತ ಒಂದು ಅದ್ಭುತ ಸಿನಿಮಾಗಳನ್ನು ಜಕ್ಕಣ್ಣ ಮಾಡ್ತಾ ಬರ್ತಿದ್ದಾರೆ. ಮುಂದೆ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಮಹೇಶ್ ಬಾಬು ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಇಷ್ಟು ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ದೇಶಿಸಿದ ಮೌಳಿ ಬೆಸ್ಟ್ ಸಿನಿಮಾ ಯಾವ್ದು ಗೊತ್ತಾ?
ತಂದೆ ವಿಜಯೇಂದ್ರ ಪ್ರಸಾಸ್ ಸಿನಿಮಾ ಬರಹಗಾರರಾಗಿದ್ದರು. ಸೋದರ ಸಂಬಂಧಿ ಎಂ. ಎಂ ಕೀರವಾಣಿ ಸಂಗೀತ ನಿರ್ದೇಶಕರಾಗಿ ಸದ್ದು ಮಾಡುತ್ತಿದ್ದರು. ರಾಜಮೌಳಿ ಸಹ ನಿರ್ದೇಶಕರಾಗಿ ಸಿನಿಮಾ, ಕಿರುತೆರೆ ಧಾರಾವಾಹಿಗಳನ್ನು ಕೆಲಸ ಆರಂಭಿಸಿದ್ದರು. ಮುಂದೆ 'ಸ್ಟೂಡೆಂಟ್ ನಂಬರ್ 1' ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದರು. ಮೊದಲ ಸಿನಿಮಾ ಸಕ್ಸಸ್ ಕಂಡಿತ್ತು.

ಬಳಿಕ ಒಂದೊಂದೇ ಸಿನಿಮಾಗಳನ್ನು ಮಾಡುತ್ತಾ ತಮ್ಮ ಕ್ರೇಜ್ ಹೆಚ್ಚಿಸಿಕೊಳ್ಳುತ್ತಾ ಸಾಗಿದರು. ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುತ್ತಾ ಬಂದರು. ತೆಲುಗು ಸಿನಿಮಾಗಳ ಖದರ್ ಹೆಚ್ಚಿಸಿದರು. ಸೋಲಿಲ್ಲದ ಸರದಾರ ಎನಿಸಿಕೊಂಡರು. ದೊಡ್ಡ ಸಿನಿಮಾ ಮಾಡಿ ಗೆದ್ದ ಬಳಿಕ ಒಂದು ಸಣ್ಣ ಸಿನಿಮಾ ಮಾಡಿ ಕೂಡ ಗೆದ್ದು ತೋರಿಸಿದರು. ಅವರ ಸಿನಿಮಾಗಳಿಗೆಲ್ಲಾ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆಯುತ್ತಾ ಬಂದರು.
'ಛತ್ರಪತಿ', 'ಯಮದೊಂಗ', 'ಮಗಧೀರ', 'ಈಗ', 'ಬಾಹುಬಲಿ-'1', 'ಬಾಹುಬಲಿ-'2' ಹಾಗೂ 'ಆರ್ಆರ್ಆರ್' ಸಿನಿಮಾಗಳನ್ನು ನಿರ್ದೇಶಿಸಿ ತೆಲುಗು ಮಾತ್ರವಲ್ಲ ಪರಭಾಷಾ ಸಿನಿರಸಿಕರ ಮನಗೆದ್ದರು. ತೆರೆಮೇಲೆ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದರು. ಅಸಾಧ್ಯವನ್ನು ಸಾಧಿಸಿದರು. 'ಬಾಹುಬಲಿ' ಸರಣಿ ಮಾಡಿ ಪ್ಯಾನ್ ಇಂಡಿಯಾ ಹಾಗೂ ಸೀಕ್ವೆಲ್ ಸಿನಿಮಾ ಟ್ರೆಂಡ್ ಹುಟ್ಟು ಹಾಕಿದರು. 'ಆರ್ಆರ್ಆರ್' ಚಿತ್ರವನ್ನು ಜೇಮ್ಸ್ ಕ್ಯಾಮರೂನ್ ಸೇರಿದಂತೆ ಹಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ನೋಡಿ ಹೊಗಳಿದ್ದರು.
SSMB29 ಚಿತ್ರಕ್ಕೆ ಈಗ ಜಕ್ಕಣ್ಣ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಹೇಶ್ ಬಾಬು, ಪ್ರಿಯಾಂಖ ಚೋಪ್ರಾ, ಪೃಥ್ವಿರಾಜ್ ಸುಕುಮಾರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಚಿತ್ರಿಸಿ ಹಾಲಿವುಡ್ ಮಟ್ಟದಲ್ಲಿ ತೆರೆಗೆ ತರುವ ಸನ್ನಾಹದಲ್ಲಿದ್ದಾರೆ. ಇತ್ತೀಚೆಗೆ 'ಜ್ಯೂನಿಯರ್' ಚಿತ್ರದ ಪ್ರೀ ರಿಲೀಸ್ ಈವೆಂಟ್ನಲ್ಲಿ ಮೌಳಿ ಭಾಗವಹಿಸಿದ್ದರು. ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಕೂಡ ಅವರು ಹಾಜರಾಗಿದ್ದರು.

ಕಿರೀಟಿ ಹಾಗೂ ಶ್ರೀಲೀಲಾ ನಟನೆಯ 'ಜ್ಯೂನಿಯರ್' ಸಿನಿಮಾ ಈ ವಾರ ತೆರೆಗೆ ಬರಲಿದೆ. ಚಿತ್ರದ ಪ್ರೀ ರಿಲೀಸ್ ಈವೆಂಟ್ನಲ್ಲಿ ಮಾತನಾಡುತ್ತಾ ಮೌಳಿ ನನ್ನ ಸಿನಿಮಾಗಳಲ್ಲೇ ಬೆಸ್ಟ್ ಸಿನಿಮಾ 'ಈಗ' ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಬಜೆಟ್, ಸ್ಟಾರ್ಕಾಸ್ಟ್ ಕಾರಣಕ್ಕೆ 'ಬಾಹುಬಲಿ' ಹಾಗೂ 'ಆರ್ಆರ್ಆರ್' ಚಿತ್ರಗಳಿಗಿಂತ 'ಈಗ' ಸಣ್ಣ ಸಿನಿಮಾ ಇರಬಹುದು. ಆದರೆ ಸಿನಿಮಾ ಆಗಿ ಟೆಕ್ನಿಕಲಿ ಅದ್ಭುತ ಪ್ರಯತ್ನ. ಕನ್ನಡ ನಟ ಕಿಚ್ಚ ಸುದೀಪ್ ನಟನೆಯನ್ನಂತೂ ಮರೆಯೋಕೆ ಸಾಧ್ಯವಿಲ್ಲ.
2012ರಲ್ಲಿ 'ಈಗ' ಸಿನಿಮಾ ತೆರೆಗೆ ಬಂದಿತ್ತು. ಆಗ ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಅವಕಾಶ ಇರಲಿಲ್ಲ. ಹಾಗಾಗಿ ಕನ್ನಡಕ್ಕೆ ಡಬ್ ಆಗಿ ಬಂದಿರಲಿಲ್ಲ. ಇನ್ನುಳಿದಂತೆ ತೆಲುಗು, ತಮಿಳು ಭಾಷೆಗಳಿಗೆ ಸಿನಿಮಾ ಡಬ್ ಆಗಿ ಸದ್ದು ಮಾಡಿತ್ತು. ಒಂದು ಸಣ್ಣ ನೊಣವನ್ನು ಇಟ್ಟುಕೊಂಡು ರಾಜಮೌಳಿ ಅದ್ಭುತ ಸಿನಿಮಾ ಮಾಡಿ ಗೆದ್ದಿದ್ದರು. ವೈಟ್ ಕಾಲರ್ ವಿಲನ್ ಆಗಿ ಕನ್ನಡ ನಟ ಸುದೀಪ್ ಅಬ್ಬರಿಸಿದ್ದರು.
'ಈಗ' ಚಿತ್ರದಲ್ಲಿ ಕಿಚ್ಚನ ನಟನೆಯನ್ನು ಮರೆಯೋಕೆ ಸಾಧ್ಯವಿಲ್ಲ. ಈ ಪಾತ್ರವನ್ನು ಸುದೀಪ್ ಬಿಟ್ಟರೆ ಬೇರೆ ಯಾರಿಂದಲೂ ಮಾಡೋಕೆ ಸಾಧ್ಯವಿಲ್ಲ ಎಂದು ಸ್ವತಃ ರಾಜಮೌಳಿ ಹೇಳಿಬಿಟ್ಟಿದ್ದರು. ಅಷ್ಟರಮಟ್ಟಿಗೆ ಆ ಪಾತ್ರಕ್ಕೆ ಸುದೀಪ್ ನ್ಯಾಯ ಒದಗಿಸಿದ್ದರು. ಇನ್ನು ಸಿಜಿಯಲ್ಲಿ ನೊಣವನ್ನು ಜಕ್ಕಣ್ಣ ತೋರಿಸಿದ್ದ ಪರಿಯೇ ಅದ್ಭುತವಾಗಿತ್ತು. ಇನ್ನು ಒಂದರ್ಥದಲ್ಲಿ ಆ ಚಿತ್ರದ ಹೀರೊ ಸುದೀಪ್ ಎನ್ನಬಹುದು. ಅಷ್ಟರಮಟ್ಟಿಗೆ ಸ್ಕ್ರೀನ್ಸ್ಪೇಸ್ ಅವರಿಗೆ ಸಿಕ್ಕಿತ್ತು.


Click it and Unblock the Notifications











