ಕೆಜಿಎಫ್ ನಾಯಕನನ್ನು ನಾಯಿಗೆ ಹೋಲಿಸಿದ್ದ ತೆಲುಗು ನಿರ್ದೇಶಕನಿಂದ ಕ್ಷಮೆಯಾಚನೆ; ಆದ್ರೂ ಕೆಜಿಎಫ್ ಡಬ್ಬಾ ಸಿನಿಮಾವಂತೆ!
ಕೆಲವೊಮ್ಮೆ ಸಂದರ್ಶನದಲ್ಲಿ ಭಾಗವಹಿಸುವ ಸೆಲೆಬ್ರಿಟಿಗಳು ಮಿತಿ ಮೀರಿ ಮಾತನಾಡಿ ಇಕ್ಕಟ್ಟಿಗೆ ಸಿಲುಕಿಕೊಂಡ ಹಲವಾರು ಘಟನೆಗಳು ಜರುಗಿವೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ತೆಲುಗಿನ ನಿರ್ದೇಶಕ ವೆಂಕಟೇಶ್ ಮಹಾ. ಪ್ರೇಮ ದ ಜರ್ನಲಿಸ್ಟ್ ಎಂಬ ಯುಟ್ಯೂಬ್ ಚಾನೆಲ್ನಲ್ಲಿ ನಡೆದ ನಿರ್ದೇಶಕರ ರೌಂಡ್ ಟೇಬಲ್ ಚರ್ಚೆಯಲ್ಲಿ ಭಾಗವಹಿಸಿದ್ದ ವೆಂಕಟೇಶ್ ಮಹಾ ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್ನ ಚಿತ್ರ ಕೆಜಿಎಫ್ ಬಗ್ಗೆ ತೀರ ಕೆಳಮಟ್ಟದ ಪದಗಳನ್ನು ಬಳಸಿ ಮಾತನಾಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
ಕೆಜಿಎಫ್ ಚಿತ್ರದ ಬಗ್ಗೆ ಮಾತನಾಡಿದ್ದ ವೆಂಕಟೇಶ್ ಮಹಾ ಎಲ್ಲಿಯೂ ಸಹ ಆ ಚಿತ್ರದ ಹೆಸರನ್ನು ಉಲ್ಲೇಖಿಸಿರಲಿಲ್ಲ. ಆದರೆ ಚಿತ್ರದ ಕಥೆಯನ್ನು ಹೇಳಿ ಆ ಚಿತ್ರವನ್ನು ಹೀನಾಯವಾಗಿ ಟ್ರೋಲ್ ಮಾಡಿದ್ದರು. ವೆಂಕಟೇಶ್ ಮಹಾ ಮೊದಲಿಗೆ ಕೆಜಿಎಫ್ ಚಿತ್ರದಲ್ಲಿ ಬರುವ ತಾಯಿ ಪಾತ್ರವನ್ನು ಟ್ರೋಲ್ ಮಾಡಿದರು. ಇಡೀ ಪ್ರಪಂಚದಲ್ಲಿ ಯಾವ ತಾಯಿಯಾದರೂ ದೊಡ್ಡವನಾದ ಮೇಲೆ ಒಳ್ಳೆಯ ಹೆಸರು ಮಾಡು, ನಾಲ್ಕು ಜನರಿಗೆ ಅನ್ನ ಹಾಕು ಎಂದು ಮಗನಿಗೆ ಸಲಹೆ ನೀಡುತ್ತಾಳೆ, ಆದರೆ ಇಲ್ಲಿ ಈ ಮಹಾತಾಯಿ ದೊಡ್ಡ ಮಟ್ಟದಲ್ಲಿ ಚಿನ್ನ, ಹಣ ಸಂಪಾದಿಸು ಎಂದು ಹೇಳುತ್ತಾಳೆ ಎಂದು ಟೀಕಿಸಿದ್ದಾರೆ.

ಇನ್ನೂ ಮುಂದುವರಿದು ಮಾತನಾಡಿದ ವೆಂಕಟೇಶ್ ಮಹಾ ತಾಯಿ ಮಾತಿನಂತೆ ಆತ ಕೆಲಸಗಾರರ ಸಹಾಯ ಪಡೆದುಕೊಂಡು ಲೋಡ್ಗಟ್ಟಲೆ ಚಿನ್ನವನ್ನು ಹೊರತೆಗೆದು ಆ ಜನರಿಗೆ ಮನೆಗಳನ್ನು ನೀಡಿ, ಆ ಚಿನ್ನವನ್ನೆಲ್ಲಾ ತೆಗೆದುಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿಬಿಡುತ್ತಾನೆ, ಎಂತಹ ಕಂತ್ರಿ ನಾಯಿ ಇರಬೇಡ ಆತ, ಇಂತಹ ಕಂತ್ರಿ ನಾಯಿಯ ಕಥೆಯನ್ನು ಸಿನಿಮಾ ಮಾಡಿದ್ದಾರೆ, ಅದನ್ನು ನೋಡಿ ನಾವು ಚಪ್ಪಾಳೆ ತಟ್ಟಿ ಗೆಲ್ಲಿಸುತ್ತೇವೆ ಎಂದಿದ್ದಾರೆ.
ಹೀಗೆ ಕೆಜಿಎಫ್ ನಾಯಕ ರಾಕಿ ಭಾಯ್ ಅನ್ನು ವೆಂಕಟೇಶ್ ಮಹಾ ಕಂತ್ರಿ ನಾಯಿ ಎಂದು ಹೇಳಿದ್ದು, ಕೆಜಿಎಫ್ ಅಭಿಮಾನಿಗಳು ಹಾಗೂ ಯಶ್ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿತ್ತು. ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ ಯಶ್ ಫ್ಯಾನ್ಸ್ ಹಾಗೂ ಸಿನಿ ರಸಿಕರು ವೆಂಕಟೇಶ್ ಮಹಾಗೆ ಕಾಮೆಂಟ್ಗಳ ಮೂಲಕ ಚಾಟಿ ಬೀಸಿ ಚಳಿ ಬಿಡಿಸಿದರು. ಸಾವಿರಾರು ಟ್ವೀಟ್ಗಳನ್ನು ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಹೀಗೆ ತಾನು ನೀಡಿದ ಹೇಳಿಕೆಯಿಂದ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ ವೆಂಕಟೇಶ್ ಮಹಾ ತನ್ನ ತಪ್ಪಿನ ಅರಿವಾಗಿ ನೆಟ್ಟಿಗರಲ್ಲಿ ಕ್ಷಮೆ ಯಾಚಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ವೆಂಕಟೇಶ್ ಮಹಾ ಈ ವಿಡಿಯೊದಲ್ಲಿ ಕೆಜಿಎಫ್ ಕುರಿತು ತಾನು ಮಾತನಾಡುವಾಗ ಬಳಸಿದ ಪದಗಳು ತಪ್ಪು ಎಂದು ಹೇಳಿಕೊಂಡಿದ್ದಾರೆ. ಆದರೆ ತನ್ನ ಅಭಿಪ್ರಾಯದಲ್ಲಿ ಮಾತ್ರ ಯಾವುದೇ ಬದಲಾವಣೆ ಇಲ್ಲ ಎಂದೂ ಸಹ ಹೇಳಿಕೊಂಡಿದ್ದಾರೆ.
" ಹಾಯ್ ಎಲ್ರಿಗೂ ನಮಸ್ಕಾರ. ಇತ್ತೀಚೆಗೆ ಒಂದು ಸಂದರ್ಶನದ ಒಂದು ಸಂದರ್ಭದಲ್ಲಿ ನಾನು ವ್ಯಕ್ತಪಡಿಸಿದ ಅಭಿಪ್ರಾಯ ಹಲವಾರು ಮಂದಿಗೆ ಇಷ್ಟವಾಗಿಲ್ಲ ಎಂಬ ವಿಷಯ ನನಗೆ ತಿಳಿಯಿತು. ಆ ವಿಷಯದ ಕುರಿತು ಮಾತನಾಡಲು ಈ ದಿನ ನಾನು ನಿಮ್ಮ ಮುಂದೆ ಬಂದಿದ್ದೇನೆ. ನಾನು ನನ್ನ ಅಭಿಪ್ರಾಯವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿಲ್ಲ. ಈಗಲೂ ನಾನು ನನ್ನ ಅಭಿಪ್ರಾಯದ ಜತೆ ನಿಲ್ಲುತ್ತೇನೆ. ಆದರೆ ಒಂದು ಸಂದರ್ಭದಲ್ಲಿ ನಾನು ಬಳಸಿದ ಭಾಷೆ ಸರಿಯಾಗಿ ಇರಲಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಿದ್ದೇನೆ. ಓರ್ವ ಜವಾಬ್ದಾರಿಯುತ ನಿರ್ದೇಶಕನಾಗಿ ಅಂತಹ ಪದ ಬಳಕೆಯನ್ನು ಮಾಡಬಾರದಿತ್ತು. ಇದು ಸಿನಿಮಾ ಇಷ್ಟಪಡುವ ಹಲವಾರು ಮಂದಿಗೆ ಬೇಸರ ತಂದಿದೆ. ಮೊದಲಾಗಿ ಇದು ಒಂದು ನಿರ್ದಿಷ್ಟ ಭಾಷೆ ಅಥವಾ ಇಂಡಸ್ಟ್ರಿಯನ್ನು ಹೀಯಾಳಿಸಲು ಆಡಿದ ಮಾತುಗಳಲ್ಲ. ಅದೇ ವಿಡಿಯೊದಲ್ಲಿ ಮತ್ತೊಂದು ಕನ್ನಡ ಚಿತ್ರವನ್ನು ಹೊಗಳಿದ್ದೇನೆ. ಮತ್ತೆ ಹೇಳುತ್ತಿದ್ದೇನೆ, ಇದು ನನ್ನ ಅಭಿಪ್ರಾಯವಷ್ಟೇ, ಚಿತ್ರಗಳು ಹೇಗೆ ಎಂದು ಹೇಳುವ ಹಕ್ಕು ನನಗಿದೆ" ಎಂದು ಹೇಳಿದ್ದಾರೆ.
ಈ ಮೂಲಕ ವೆಂಕಟೇಶ್ ಮಹಾ ಓರ್ವ ನಿರ್ದೇಶಕನಾಗಿ ತಾನು ನೀಡಿದ ಹೇಳಿಕೆಗೆ ಕ್ಷಮೆ ಕೇಳಿದ್ದು, ಕೆಜಿಎಫ್ ಚಿತ್ರದ ಬಗ್ಗೆ ತನ್ನ ಅಭಿಪ್ರಾಯ ಅದೇ, ಆದರೆ ಕೆಟ್ಟ ಪದಗಳನ್ನು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ ಕ್ಷಮೆ ಕೋರುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.


Click it and Unblock the Notifications











