ಕಾಮಿಡಿ ಸೀನ್ ತೋರಿಸುತ್ತಾ ಮಹಿಳೆಯ ಮೆದುಳು ಶಸ್ತ್ರಚಿಕಿತ್ಸೆ; ಯಾವುದು ಆ ಸಿನಿಮಾ?
ನಟನೆ ವಿಚಾರಕ್ಕೆ ಬಂದರೆ ಅಳಿಸುವುದಕ್ಕಿಂತ ನಗಿಸುವುದು ಬಹಳ ಕಷ್ಟ. ಕಾಮಿಡಿ ನೋಡಿದಷ್ಟು ಸುಲಭ ಅಲ್ಲ. ಸರಿಯಾದ ಟೈಮಿಂಗ್ ಇಲ್ಲದೇ ಹೋದರೆ ಜನ ನಗುವುದಿಲ್ಲ. ತಮ್ಮ ನ್ಯೂನ್ಯತೆಗಳನ್ನೇ ಪಾಸಿಟಿವ್ ಆಗಿ ತೆಗೆದುಕೊಂಡು ಕೆಲ ಕಲಾವಿದರು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಾರೆ.
ತೆಲುಗು ಹಾಸ್ಯನಟ ಬ್ರಹ್ಮಾನಂದಂ. ತಮ್ಮ ಕುಳ್ಳಗಿನ ದೇಹ, ಡೊಳ್ಳು ಹೊಟ್ಟೆ, ವಿಭಿನ್ನ ಮ್ಯಾನರಿಸಂನಿಂದ ಪ್ರೇಕ್ಷಕರನ್ನು ನಗಿಸುವ ಜಾದೂಗಾರ. ಬ್ರಹ್ಮಾನಂದಂ ಕಾಮಿಡಿಯಿಂದಲೇ ಎಷ್ಟೋ ಸಿನಿಮಾಗಳು ಗೆದ್ದಿರುವ ಉದಾಹರಣೆಗಳಿವೆ. ದಶಕಗಳಿಂದ ತೆಲುಗಿನ ನೂರಾರು ಸಿನಿಮಾಗಳಲ್ಲಿ ನಟಿಸಿ ಬ್ರಹ್ಮಾನಂದಂ ಕಮಾಲ್ ಮಾಡಿದ್ದಾರೆ. ಒಂದ್ಕಾಲದಲ್ಲಿ ಬಹುಬೇಡಿಕೆಯ ಹಾಸ್ಯನಟನಾಗಿ ಅವರು ಸದ್ದು ಮಾಡಿದ್ದರು.

ಇತ್ತೀಚಿನ ವರ್ಷಗಳಲ್ಲಿ ಬ್ರಹ್ಮಾನಂದಂ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. ಆದರೂ ಅವರ ಮೀಮ್ಸ್, ಕಾಮಿಡಿ ಸೀನ್ಸ್ ಜನರ ಮನಗೆಲ್ಲುತ್ತಿದೆ. ಇನ್ನು ಯೂಟ್ಯೂಬ್ನಲ್ಲಿ ಅವರು ಕಾಮಿಡಿ ವೀಡಿಯೋಗಳಿಗೆ ದೊಡ್ಡ ಅಭಿಮಾನಿ ಬಳಗವಿದೆ, ಮಿಲಿಯನ್ಗಟ್ಟಲೆ ವೀಡಿಯೋಗಳು ವೀವ್ಸ್ ಸಾಧಿಸುತ್ತಿವೆ. ಇದೀಗ ಬ್ರಹ್ಮಾನಂದಂ ಕಾಮಿಡಿ ವೀಡಿಯೋ ತೋರಿಸುತ್ತಾ ವೈದ್ಯರು ಮಹಿಳೆಯೊಬ್ಬರಿಗೆ ಕ್ರಾನಿಯೊಟೊಮಿ ಸರ್ಜರಿ ಮಾಡಿದ್ದಾರೆ.
ತೊಂಡಂಗಿ ಮಂಡಲದ ಎ.ಕೊತಪಲ್ಲಿಯ ಎ. ಅನಂತಲಕ್ಷ್ಮಿ ಎಂಬ 55 ವರ್ಷದ ಮಹಿಳಿಗೆ ಹೀಗೆ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಆಕೆಯ ಬಲಗೈ ಮತ್ತು ಕಾಲಿನ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದುಬಾರಿ ಎಂದು ಆಕೆಯ್ನು ಕಾಕಿನಾಡದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತೀಚೆಗೆ ತಲೆನೋವು, ದೇಹದ ಬಲಭಾಗದಲ್ಲಿ ಮರಗಟ್ಟುವಿಕೆ ಸಮಸ್ಯೆಯಿಂದ ಆಸ್ಪತ್ರೆಗೆ ಬಂದಿದ್ದರು. ಮೆದುಳಿನ ಎಡಭಾಗದಲ್ಲಿ ಗಡ್ಡೆ ಇರುವುದು ಪರೀಕ್ಷೆಯಲ್ಲಿ ಗೊತ್ತಾಗಿತ್ತು.

ಅರಿವಳಿಕೆ ತಜ್ಞರ ಮೇಲ್ವಿಚಾರಣೆಯಲ್ಲಿ ವೈದ್ಯರು ಅನಂತಲಕ್ಷ್ಮಿ ಅವರಿಗೆ ಕಡಿಮೆ ಅರವಳಿಕೆ ನೀಡಿ ಎಚ್ಚರವಾಗಿರಿಸಿಕೊಂಡು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಕೆ ವಿಚಲಿತರಾಗದೇ ಆರಾಮವಾಗಿ ಇರಲು ತೆಲುಗಿನ 'ಅದುರ್ಸ್' ಚಿತ್ರದ ಕಾಮಿಡಿ ದೃಶ್ಯಗಳನ್ನು ತೋರಿಸಲಾಗಿದೆ. ತಾರಕ್ ಹಾಗೂ ಬ್ರಹ್ಮಾನಂದಂ ಕಾಮಿಡಿ ನೋಡುತ್ತಾ ಆಕೆ ಸರ್ಜರಿ ಬಗ್ಗೆ ಅರಿವಿಲ್ಲದೇ ಆರಾಮಾಗಿ ಇದ್ದರು. ಇದಕ್ಕೆ ಸಂಬಂಧಿಸಿದ ಸಣ್ಣ ವೀಡಿಯೋ ವೈರಲ್ ಆಗುತ್ತಿದೆ.
ಮಂಗಳವಾರ(ಸೆಪ್ಟೆಂಬರ್ 17) ಅನಂತಲಕ್ಷ್ಮಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಯಿತು. ಆಕೆ ಎರಡೂವರೆ ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ಸಮಯದಲ್ಲಿ ಕಾಮಿಡಿ ದೃಶ್ಯ ನೋಡುತ್ತಾ ಆರಾಮಾಗಿ ಇದ್ದರು. ಇನ್ನೊಂದು ವಾರದಲ್ಲಿ ಆಕೆ ಡಿಸ್ಚಾರ್ಜ್ ಆಗಿಲಿದ್ದಾರೆ. ಇಂತಹ ಸರ್ಜರಿ ಇದೇ ಮೊದಲೇನಲ್ಲ. ರೋಗಿ ಪಿಟೀಲು ನುಡಿಸುವಾಗ, ಗಿಟಾರ್ ನುಡಿಸುವಾಗಲೂ ಇಂತಹ ಶಸ್ತ್ರಚಿಕಿತ್ಸೆ ನಡೆಸಿರುವ ಉದಾಹರಣೆಯಿದೆ. ಆದರೆ ಕಾಕಿನಾಡದ ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹ ಶಸ್ತ್ರಚಿಕಿತ್ಸೆ ಇದೇ ಮೊದಲು ಎನ್ನಲಾಗಿದೆ.
ಅವೇಕ್ ಕ್ರಾನಿಯೊಟಮಿ ಮಾಡುವಾಗ ದೃಷ್ಟಿ, ಚಲನೆ ಅಥವಾ ಸಂವಹನಕ್ಕೆ ಕಾರಣವಾದ ಮೆದುಳಿನ ಪ್ರಮುಖ ಪ್ರದೇಶಗಳಿಗೆ ಹಾನಿಯಾಗದಂತೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವಾಗ ರೋಗಿಯು ಜಾಗೃತನಾಗಿರಬೇಕು. ಕಾರ್ಯವಿಧಾನದ ಸಮಯದಲ್ಲಿ ರೋಗಿಯ ಪ್ರತಿಕ್ರಿಯೆಗಳು ವೈದ್ಯರು ಸರಿಯಾದ ಜಾಗಕ್ಕೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ ಕ್ರಿಯಾತ್ಮಕ ಜಾಗಕ್ಕೆ ಹಾನಿಯಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಇಂತಹ ಪ್ರಯತ್ನ ಮಾಡಲಾಗುತ್ತದೆ.
2010ರಲ್ಲಿ ಬಂದಿದ್ದ 'ಅದುರ್ಸ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ಜ್ಯೂ. ಎನ್ಟಿಆರ್ ದ್ವಿಪಾತ್ರದಲ್ಲಿ ನಟಿಸಿದ್ದರು. ಅದರಲ್ಲೂ ಪುರೋಹಿತ ಚಾರಿ ಪಾತ್ರದಲ್ಲಿ ತಾರಕ್ ನಟನೆಗ ಗಮನ ಸೆಳೆದಿತ್ತು. ಬ್ರಹ್ಮಾನಂದಂ ಹಾಗೂ ತಾರಕ್ ಕಾಮಿಡಿ ಸನ್ನಿವೇಶಗಳು ಪ್ರೇಕ್ಷಕರನ್ನು ಬಹಳ ರಂಜಿಸಿತ್ತು. ಇವತ್ತಿಗೂ ಅಭಿಮಾನಿಗಳು ಆ ಸಿನಿಮಾ ಸೀಕ್ವೆಲ್ ಮಾಡುವಂತೆ ಕೇಳುತ್ತಿದ್ದಾರೆ.


Click it and Unblock the Notifications











