ಕರ್ನಾಟಕದಲ್ಲಿ ತೆಲುಗು ಚಿತ್ರ ವೀರಸಿಂಹ ರೆಡ್ಡಿ ವಿಜಯಯಾತ್ರೆ

ಈ ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡ ಸ್ಟಾರ್ ಚಿತ್ರಗಳ ಪೈಕಿ ನಂದಮೂರಿ ಬಾಲಕೃಷ್ಣ ನಟನೆಯ ವೀರಸಿಂಹ ಕೂಡ ಒಂದು. ಚಿತ್ರ ಜನವರಿ 12ರಂದು ಬಿಡುಗಡೆಗೊಂಡು ಮೊದಲನೇ ದಿನ ಬರೋಬ್ಬರಿ 54 ಕೋಟಿ ಗಳಿಸುವ ಮೂಲಕ ಈ ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡ ಚಿತ್ರಗಳಲ್ಲಿ ಮೊದಲನೇ ದಿನ ಅತಿಹೆಚ್ಚು ಗಳಿಸಿದ ಚಿತ್ರ ಎನಿಸಿಕೊಂಡಿತು.
ಕರ್ನಾಟಕದಲ್ಲಿಯೂ ಒಳ್ಳೆಯ ಆರಂಭ ಪಡೆದುಕೊಂಡ ಈ ಚಿತ್ರ ಒಳ್ಳೆಯ ಪ್ರದರ್ಶನವನ್ನು ಕಾಣುತ್ತಿದೆ. ಇನ್ನು ಈ ಚಿತ್ರದಲ್ಲಿ ಖಳ ನಾಯಕನಾಗಿ ಕನ್ನಡದ ಸ್ಟಾರ್ ನಟ ದುನಿಯಾ ವಿಜಯ್ ಅಭಿನಯಿಸಿದ್ದು, ಪ್ರತಾಪ್ ರೆಡ್ಡಿ ಪಾತ್ರದಲ್ಲಿ ಮಿಂಚಿದ್ದಾರೆ. ಈ ಮೂಲಕ ದುನಿಯಾ ವಿಜಯ್ ಟಾಲಿವುಡ್ ಪ್ರವೇಶ ಮಾಡಿದ್ದು, ನಟನ ಅಭಿನಯಕ್ಕೆ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗಿವೆ.
ಇನ್ನು ಚಿತ್ರ ಯಶಸ್ಸು ಗಳಿಸಿದ ಬೆನ್ನಲ್ಲೇ ಚಿತ್ರದ ನಿರ್ದೇಶಕ ಗೋಪಿಚಂದ್ ಮಲಿನೇನಿ ಹಾಗೂ ದುನಿಯಾ ವಿಜಯ್ ಕರ್ನಾಟಕದ ಕೋಲಾರ ನಗರದಲ್ಲಿ ರೋಡ್ ಶೋ ಮಾಡುವ ಮೂಲಕ ವಿಜಯ ಯಾತ್ರೆಯನ್ನು ಆರಂಭಿಸಿದ್ದಾರೆ. ಕೋಲಾರದಲ್ಲಿ ತೆಲುಗು ಪ್ರೇಕ್ಷಕರು ಹೇರಳವಾಗಿದ್ದು, ಅಲ್ಲಿಯೂ ಚಿತ್ರದ ಕ್ರೇಜ್ ದೊಡ್ಡ ಮಟ್ಟದಲ್ಲಿಯೇ ಇದೆ.
ದುನಿಯಾ ವಿಜಯ್ ಹಾಗೂ ಚಿತ್ರದ ನಿರ್ದೇಶಕ ಭಾಗವಹಿಸಿದ್ದ ಈ ವಿಜಯ ಯಾತ್ರೆಯಲ್ಲಿ ಸಂಕ್ರಾಂತಿ ಹಬ್ಬದ ದಿನದಂದು ಜನರು ದೊಡ್ಡ ಮಟ್ಟದಲ್ಲಿಯೇ ಸೇರಿದ್ದರು. ದುನಿಯಾ ವಿಜಯ್ ಹಾಗೂ ಗೋಪಿಚಂದ್ ಅವರಿಗೆ ಹಾರ ಹಾಕಿ ಮತ್ತು ಅವರ ಮೇಲೆ ಹೂ ಮಳೆ ಸುರಿಸಿದ ಅಭಿಮಾನಿಗಳು ಜೈಕಾರ ಹಾಕಿ ಅವರನ್ನು ಸ್ವಾಗತಿಸಿದರು. ಈ ವಿಜಯ ಯಾತ್ರೆಯ ಚಿತ್ರಗಳನ್ನು ದುನಿಯಾ ವಿಜಯ್ ಹಾಗೂ ಮೈತ್ರಿ ಮೂವಿ ಮೇಕರ್ಸ್ ತಮ್ಮ ಅಧಿಕೃತ ಟ್ವಿಟರ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಕೋಲಾರದಲ್ಲಿ ಈ ವಿಜಯ ಯಾತ್ರೆಯನ್ನು ಮಾಡಿರುವ ವೀರಸಿಂಹ ರೆಡ್ಡಿ ತಂಡ ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ನಗರಗಳಲ್ಲೂ ವಿಜಯ ಯಾತ್ರೆ ಮಾಡುವ ಸಾಧ್ಯತೆಯಿದೆ.


Click it and Unblock the Notifications











