ತಮಿಳು, ತೆಲುಗಿಗೆ ಕನ್ನಡದ ವಿಷ್ಣುವರ್ಧನ ರೀಮೇಕ್?
ದ್ವಾರಕೀಶ್ ನಿರ್ಮಿಸಿದ್ದ ವಿಷ್ಣುವರ್ಧನ ಚಿತ್ರ ಮತ್ತೆ ಸುದ್ದಿಯಾಗುತ್ತಿದೆ. ಕಾರಣ ತಮಿಳು ನಟ ವಿಜಯ್ ಈ ಚಿತ್ರವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಈ ಮೊದಲು ಸಾಕಷ್ಟು ಪರಭಾಷೆಯ ನಟರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದರು. ಕನ್ನಡದಲ್ಲೂ ಅಷ್ಟೇ, ಪ್ರೇಕ್ಷಕರು ಹಾಗೂ ವಿಮರ್ಶಕರು ಎಲ್ಲರೂ ವಿಷ್ಣುವರ್ಧನ ಚಿತ್ರಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ತೆಲುಗಿನ ಜನಪ್ರಿಯ ನಟ ರವಿತೇಜಾ ಈ ಚಿತ್ರವನ್ನು ಮೆಚ್ಚಿ ಅದನ್ನು ತೆಲುಗಿನಲ್ಲಿ ರೀಮೇಕ್ ಮಾಡಿ ನಟಿಸಲು ಸಜ್ಜಾಗಿದ್ದರು. ಆದರೆ ಆ ಕಾಲವಿನ್ನೂ ಕೂಡಿ ಬಂದಿಲ್ಲ. ಅಷ್ಟರಲ್ಲೇ ತಮಿಳು ನಟ ವಿಜಯ್ ಚಿತ್ರವನ್ನು ಮೆಚ್ಚಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಅದನ್ನು ತಮಿಳಿಗೆ ರೀಮೇಕ್ ಮಾಡುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದಾರೆ.
ನಿರ್ಮಾಪಕ ದ್ವಾರಕೀಶ್ ವಿಷ್ಣುವರ್ಧನ ಯಶಸ್ಸಿನಿಂದ ಎಂದೋ ಹೊರಬಂದಿದ್ದಾರೆ. ಅವರೀಗ ಪ್ರಿಯಾಮಣಿ ನಾಯಕಿ ಪ್ರಧಾನ ಚಿತ್ರ 'ಚಾರುಲತಾ' ನಿರ್ಮಾಣದಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಗಿಯುವ ಹಂತದಲ್ಲಿದ್ದು ಇನ್ನೇನು ಸದ್ಯದಲ್ಲೇ ಡಬ್ಬಿಂಗ್ ಪ್ರಾರಂಭವಾಗಲಿದೆ. ಮುಂದಿನ ತಿಂಗಳ ಕೊನೆಯ ಹೊತ್ತಿಗೆ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ.
ಸುದೀಪ್ ನಾಯಕತ್ವದ ವಿಷ್ಣುವರ್ಧನ ಚಿತ್ರ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾದ ಸಿನಿಮಾ. ಸುದೀಪ್ ಮೊದಲ ಬಾರಿಗೆ ತಮ್ಮ ರೆಬೆಲ್ ಇಮೇಜನ್ನು ಬಿಟ್ಟು ಹಾಸ್ಯ ಆಧಾರಿತ ಚಿತ್ರವೊಂದರಲ್ಲಿ ನಟಿಸಿದ್ದರು. ಅದರಲ್ಲೂ ವಿಭಿನ್ನ ಪಾತ್ರದಲ್ಲಿ ಸುದೀಪ್ ಅಭಿನಯ ಎಲ್ಲರ ಮೆಚ್ಚುಗೆ ಗಳಿಸಿತ್ತು. ನಿರ್ಮಾಪಕ ದ್ವಾರಕೀಶ್ ಜೇಬು ಕೂಡ ಭರ್ತಿಯಾಗಿತ್ತು.
ವಿಷ್ಣುವರ್ಧನ್ ಚಿತ್ರವೀಗ ನೆರೆಯ ಎರಡು ಭಾಷೆಗಳಲ್ಲಿ ರೀಮೇಕ್ ಆಗುವ ಸಾಧ್ಯತೆ ದಟ್ಟವಾಗಿದೆ. ತೆಲಗು ನಟ ರವಿತೇಜಾ ತೆಲುಗಿನಲ್ಲಿ ಹಾಗೂ ತಮಿಳು ನಟ ವಿಜಯ್ ತಮಿಳಿನಲ್ಲಿ ನಟಿಸುವುದು ಬಹತೇಕ ಖಚಿತ. ಆಪ್ತಮಿತ್ರದ ನಂತರ ದ್ವಾರಕೀಶ್ ನಿರ್ಮಿಸಿದ ಚಿತ್ರ ವಿಷ್ಣುವರ್ಧನ ಹಿಟ್ ದಾಖಲಿಸಿತ್ತು. ಈಗಿನ ಚಾರುಲತಾ ಏನಾಗಲಿದೆ ಎಂಬುದೀಗ ಕುತೂಹಲ ವಿಷಯ. (ಒನ್ ಇಂಡಿಯಾ ಕನ್ನಡ)


Click it and Unblock the Notifications











