ಪವನ್ 'ಉಸ್ತಾದ್ ಭಗತ್ ಸಿಂಗ್' ಟೀಸರ್ಗೆ ಚುನಾವಣಾ ಆಯೋಗ ಅನುಮತಿ ಬೇಕಾ? ಅಷ್ಟಕ್ಕೂ ಅಂಥಾದ್ದೇನಿದೆ?
ತೆಲುಗು ನಟ, ರಾಜಕೀಯ ಮುಖಂಡ ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಆಕ್ಷನ್ ಪ್ಯಾಕ್ಡ್ ಝಲಕ್ ಅಭಿಮಾನಿಗಳ ಮನಗೆದ್ದಿದೆ. ಸೋಶಿಯಲ್ ಮೀಡಿಯಾ ಟ್ರೆಂಡಿಂಗ್ನಲ್ಲಿದೆ. ಹರೀಶ್ ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ಕನ್ನಡ ನಟಿ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ.
ಕಾರಣಾಂತರಗಳಿಂದ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಬಿಡುಗಡೆ ತಡವಾಗುತ್ತಿದೆ. ಪವನ್ ಕಲ್ಯಾಣ್ ರಾಜಕೀಯ ಚಟುವಟಿಕೆಗಳಲ್ಲಿ ಹೆಚ್ಚು ಗುರ್ತಿಸಿಕೊಳ್ಳುತ್ತಿರುವುದರಿಂದ ಸಿನಿಮಾ ಚಿತ್ರೀಕರಣಕ್ಕೆ ಕಾಲ್ಶೀಟ್ ಕೊಡಲು ಸಾಧ್ಯವಾಗುತ್ತಿಲ್ಲ. ಕಳೆದ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಜನಸೇನಾನಿ ಹೀನಾಯವಾಗಿ ಸೋತಿದ್ದರು. ಇದೀಗ ಆಂಧ್ರದಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ.

ಈಗಾಗಲೇ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ. ಮತದಾನ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ನಿಯಮ ಉಲ್ಲಂಘಿಸಿದರೆ ರಾಜಕೀಯ ಪಕ್ಷಗಳು ತಕ್ಕ ಬೆಲೆ ತೆರಬೇಕಾಗುತ್ತದೆ. ನಟ ಪವನ್ ಕಲ್ಯಾಣ್ ತಮ್ಮ ಜನಸೇನಾ ಪಕ್ಷದ ಅಭ್ಯರ್ಥಿಗಳ ಜೊತೆಗೆ ತಾವು ಸ್ಪರ್ಧೆಗೆ ಇಳಿಯುತ್ತಿದ್ದಾರೆ. ಇಂತಹ ಸಮಯದಲ್ಲೇ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಟೀಸರ್ ರಿಲೀಸ್ ಮಾಡಿದ್ದಾರೆ. ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ಅಬ್ಬರಿಸಿದ್ದಾರೆ.
'ಉಸ್ತಾದ್ ಭಗತ್ ಸಿಂಗ್' ಚಿತ್ರದ ಚಿತ್ರೀಕರಣ ಇನ್ನು ಮುಗಿದಿಲ್ಲ. ಟೀಸರ್ ಬಿಡುಗಡೆಗೆ ಕಾರಣವೇ ಇರಲಿಲ್ಲ. ಆದರೆ ತಮ್ಮ ಚುನಾವಣಾ ಪ್ರಚಾರಕ್ಕಾಗಿ ಪವರ್ ಸ್ಟಾರ್ ಈ ಟೀಸರ್ ಬಳಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಟೀಸರ್ನಲ್ಲಿರುವ ಡೈಲಾಗ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಅಂದಹಾಗೆ ಪವನ್ ಕಲ್ಯಾಣ್ ಸ್ಥಾಪಿಸಿರುವ ಜನಸೇನಾ ಪಕ್ಷದ ಚಿಹ್ನೆ ಟೀ ಗ್ಲಾಸ್. ಇದನ್ನೇ ಬಳಸಿಕೊಂಡು ಒಂದು ಡೈಲಾಗ್ ಟೀಸರ್ನಲ್ಲಿದೆ.
ಕಳೆದ ಬಾರಿ ಜನಸೇನಾ ಪಕ್ಷ ಹೀನಾಯವಾಗಿ ಸೋತಿತ್ತು. ಜಗನ್ ಮೋಹನ್ ರೆಡ್ಡಿ ನೇತೃತ್ವ ವೈಎಸ್ಆರ್ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಿತ್ತು. ಆ ಪಕ್ಷದ ಚಿಹ್ನೆ ಫ್ಯಾನ್. ಹಾಗಾಗಿ ಫ್ಯಾನ್ ಗಾಳಿಗೆ ಗ್ಲಾಸ್ ಒಡೆದು ಹೋಯಿತು ವ್ಯಂಗ್ಯ ಮಾಡಿ ಟ್ರೋಲ್ ಮಾಡಿದ್ದರು. ಸದ್ಯ 'ಉಸ್ತಾದ್ ಭಗತ್ ಸಿಂಗ್' ಟೀಸರ್ನಲ್ಲಿ ಇದಕ್ಕೆ ಪವನ್ ಕೌಂಟರ್ ಕೊಟ್ಟಿದ್ದಾರೆ. "ಗಾಜು ಒಡೆದಷ್ಟು ಅದರ ಮತ್ತಷ್ಟಯ ಮೊನಚಾಗುತ್ತದೆ" ಎನ್ನುವ ಡೈಲಾಗ್ ಇದೆ.

ಮತ್ತೊಂದು ಸನ್ನಿವೇಶದಲ್ಲಿ "ಒಂದು ನೆನಪಿಟ್ಟುಕೋ, ಗ್ಲಾಸ್ ಅಂದ್ರೆ ಸೈಜ್ ಅಲ್ಲ, ಸೈನ್ಯ. ಕಾಣಿಸದ ಸೈನ್ಯ" ಎಂದು ಪವರ್ ಸ್ಟಾರ್ ಅಬ್ಬರಿಸಿದ್ದಾರೆ. ಮೇಲ್ನೋಟಕ್ಕೆ ಪವನ್ ಕಲ್ಯಾಣ್ ತಮ್ಮ ಪಕ್ಷದ ಪ್ರಚಾರಕ್ಕಾಗಿಯೇ ಈ ಟೀಸರ್ ಬಳಸಿಕೊಂಡಿವುದು ಗೊತ್ತಾಗುತ್ತಿದೆ. ಇದೇ ವಿಚಾರದ ಆಂಧ್ರ ರಾಜ್ಯ ಚುನಾವಣೆ ಪ್ರಧಾನ ಅಧಿಕಾರಿ ಮುಖೇಶ್ ಕುಮಾರ್ ಮೀನಾ ಇದೀಗ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಮುಖೇಶ್ ಕುಮಾರ್ ಉತ್ತರಿಸಿದ್ದಾರೆ. "ನಾನು ಇನ್ನೂ ಟೀಸರ್ ನೋಡಿಲ್ಲ. ಅದನ್ನು ನೋಡಿದ ನಂತರ ಚುನಾವಣಾ ಪ್ರಚಾರದ ರೀತಿ ಇದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುತ್ತೇವೆ. I ಈ ರೀತಿ ಪ್ರಚಾರ ಮಾಡುವುದು ತಪ್ಪಲ್ಲ. ಆದರೆ ಅನುಮತಿ ಪಡೆಯಬೇಕು. ರಾಜಕೀಯ ಪ್ರಚಾರದಂತೆ ಕಂಡರೆ ನೋಟಿಸ್ ನೀಡಿ ಅನುಮತಿ ಪಡೆದುಕೊಳ್ಳುವಂತೆ ಹೇಳುತ್ತೇವೆ" ಎಂದಿದ್ದಾರೆ.
ಮತ್ತೊಂದು ಕಡೆ ಟೀಸರ್ನಲ್ಲಿರುವ ಡೈಲಾಗ್ ಬಗ್ಗೆ ಪವನ್ ಕಲ್ಯಾಣ್ ಮಾತನಾಡಿದ್ದಾರೆ. "ನಿರ್ದೇಶರು ಬಹಳ ಬಲವಂತ ಮಾಡಿದರು, ಅವರು ಹೇಳಿದಂತೆ ಹೇಳಿದ್ದೇನೆ ಅಷ್ಟೆ" ಎಂದಿದ್ದಾರೆ. ಒಟ್ಟಾರೆ 'ಉಸ್ತಾದ್ ಭಗತ್ ಸಿಂಗ್' ಟೀಸರ್ ಆಂಧ್ರ ರಾಜಕಾರಣದಲ್ಲಿ ಕೂಡ ಸದ್ದು ಮಾಡುತ್ತಿದೆ. ಪಿಠಾಪುರಂ ವಿಧಾನಸಭೆ ಕ್ಷೇತ್ರದಿಂದ ಪವನ್ ಕಲ್ಯಾಣ್ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.


Click it and Unblock the Notifications











