ಮಹೇಶ್ ಬಾಬುಗೆ ಶಾಕ್ ನೀಡಿದ ಇಡಿ, ಟಾಲಿವುಡ್ ಪ್ರಿನ್ಸ್ ಮಾಡಿದ ತಪ್ಪೇನು ?
ಹಣ ಎಂದರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ಚಿತ್ರರಂಗದವರು ಕೂರುವುದಕ್ಕೆ, ನಿಲ್ಲುವುದಕ್ಕೆ ಹಣ ಪಡೆಯುತ್ತಾರೆ. ಇನ್ನು ಜಾಹೀರಾತು ಕೂಡ ಅಷ್ಟೇ. ಸಾಮಾಜಿಕ ಪ್ರಜ್ಞೆ .. ಮನುಜ ಸೂಕ್ಷ್ಮತೆ..ಮತ್ತು ಸಂವೇದನೆ ಮರೆತು ಕಾಸು ಸಿಗುತ್ತೆ ಅನ್ನುವ ಕಾರಣಕ್ಕೆ ಹಣದಾಸೆಗೆ ಸಮಾಜಕ್ಕೆ ಅಪಾಯಕಾರಿಯಾದ ಉತ್ಪನ್ನಗಳ ಜಾಹೀರಾತುಗಳನ್ನು ಇಲ್ಲಿ ಅನೇಕರು ಮಾಡುತ್ತಾರೆ.
ಇನ್ನು ಕೆಲವರು ಜಾಹೀರಾತು ಕಂಪನಿಗಳ ಪೂರ್ವಾಪರ ತಿಳಿಯದೇ ಕೇವಲ ಹಣ ಸಿಗುತ್ತೆ ಎಂಬ ಕಾರಣಕ್ಕೆ ಅವರು ಹೇಳಿದಂತೆ ಅಭಿನಯಿಸಿ ಬಂದು ಬಿಡುತ್ತಾರೆ. ಆದರೆ ಹೀಗೆ ಮಾಡಿದಾಗ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದೇ ಹೆಚ್ಚು. ಇದಕ್ಕೆ ಮಹೇಶ್ ಬಾಬು ಸದ್ಯದ ಉದಾಹರಣೆ.

ಹೌದು, ಮಹೇಶ್ ಬಾಬು, ತೆಲುಗು ಚಿತ್ರರಂಗದ ಪ್ರಿನ್ಸ್. ವಿವಾದಗಳಿಂದ ಸದಾ ಒಂದು ಮೈಲಿ ದೂರ ಇರುವ ಮಹೇಶ್ ಬಾಬು ಸದಾ ಕಾಲ ತಾವಾಯ್ತು, ತಮ್ಮ ಕೆಲಸವಾಯ್ತು, ತಮ್ಮ ಮನೆ ಆಯ್ತು ಎಂದುಕೊಂಡು ಇರುತ್ತಾರೆ. ಇಂಥಾ ಮಹೇಶ್ ಬಾಬುಗೆ ಈಗ ಇಡಿ ಶಾಕ್ ನೀಡಿದೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಹೌದು, ಅಸಲಿಗೆ ಮಹೇಶ್ ಬಾಬು ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಜಾಹೀರಾತಿನಲ್ಲಿ ಮಹೇಶ್ ಬಾಬು ನಟಿಸಿದ್ದರು. ಕೇವಲ ಮಹೇಶ್ ಬಾಬು ಮಾತ್ರವಲ್ಲ ಪತ್ನಿ ನಮ್ರತಾ ಶಿರೋಡ್ಕರ್ ಮತ್ತು ಇವರ ಮಕ್ಕಳು ಕೂಡ ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.
ಇನ್ನು, ಸ್ಟಾರ್ ಹೂಡಿಕೆ ಮಾಡಲು ಕರೆ ನೀಡಿದಾಗ ಅನೇಕರು ಹೂಡಿಕೆ ಮಾಡಲು ಮುಂದೆ ಬರುವ ಸಾಧ್ಯತೆ ಇರುತ್ತೆ. ಈ ಜಾಹೀರಾತು ಮಾಡಿದ ನಂತರ ಕೂಡ ಹೀಗೆ ಹೂಡಿಕೆಯಲ್ಲಿ ಹೆಚ್ಚಳವಾಗಿದೆಯಾ ಗೊತ್ತಿಲ್ಲ. ಆದರೆ ಏಪ್ರಿಲ್ 16ರಂದು ಇಡಿ ಅಧಿಕಾರಿಗಳು ಹೈದರಾಬಾದ್ನಲ್ಲಿರುವ ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಕಚೇರಿಗಳ ಮೇಲೆ ಮತ್ತು ಈ ಕಂಪನಿಗಳ ಮುಖ್ಯಸ್ಥರಾದ ನರೇಂದ್ರ ಸುರಾನ ಮತ್ತು ಸತೀಶ್ ಚಂದ್ರ ಗುಪ್ತಾ ಮನೆಗಳ ಮೇಲೆ ದಾಳಿ ಮಾಡಿದ್ದರು.
ಆಗ ಸುರಾನ್ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ನಲ್ಲಿ ಸಾಕಷ್ಟು ಅಕ್ರಮಗಳು ನಡೆದಿರೋದು ಬೆಳಕಿಗೆ ಬಂದಿತ್ತು. ಒಂದೇ ಪ್ಲಾಟ್ನ ಬೇರೆ ಬೇರೆಯವರಿಗೆ ತೋರಿಸಿ ನೊಂದಣಿ ಮಾಡಿಕೊಡುವ ಭರವಸೆಯನ್ನು ನೀಡಿ ಅನೇಕ ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಹಣ ಮುಂಗಡವಾಗಿ ಪಡೆದಿರುವ ವಿಚಾರ ಹೊರ ಬಂದಿತ್ತು. 100 ಕೋಟಿಗೂ ಅಧಿಕ ಹಣದ ಅವ್ಯವಹಾರ ನಡೆದಿರುವುದು ಇಡಿ ಅಧಿಕಾರಿಗಳ ಗಮನಕ್ಕೆ ಬಂದಿತ್ತು.
ಇನ್ನು ಈ ಜಾಹೀರಾತಿನಲ್ಲಿ ಅಭಿನಯಿಸಲು ಮಹೇಶ್ ಬಾಬು 5.9 ಕೋಟಿ ಸಂಭಾವನೆ ಪಡೆದಿದ್ದರು ಎಂದು ಇಡಿ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ವರದಿಯಾಗಿದೆ. ಇನ್ನು ಈ 5.9 ಕೋಟಿಯಲ್ಲಿ 3.4 ಕೋಟಿಯನ್ನು ಮಹೇಶ್ ಬಾಬು ಚೆಕ್ ಮೂಲಕ ಪಡೆದಿದ್ದರೆ ಬಾಕಿ ಉಳಿದ 2.5 ಕೋಟಿ ಹಣವನ್ನು ಕ್ಯಾಶ್ ರೂಪದಲ್ಲಿ ಪಡೆದಿದ್ದಾರೆ. ಈ ಹಿನ್ನೆಲೆ ಈ ಅಕ್ರಮ ವ್ಯವಹಾರದಲ್ಲಿ ಮಹೇಶ್ ಬಾಬು ಕೂಡ ಭಾಗಿಯಾಗಿದ್ದಾರಾ ಎಂದು ತನಿಖೆಯನ್ನು ಮಾಡಲಿರುವ ಇಡಿ ಅಧಿಕಾರಿಗಳು, ಮಹೇಶ್ ಬಾಬುಗೆ ಪಡೆದ ಸಂಭಾವನೆಯ ವಿಚಾರವಾಗಿ ಕೂಡ ಪ್ರಶ್ನೆಗಳನ್ನು ಕೇಳಲಿದ್ದಾರೆ.
ಸದ್ಯ ಮಹೇಶ್ ಬಾಬು, ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ಬ್ಯುಸಿಯಾಗಿದ್ದು ವಿಚಾರಣೆಗೆ ಇದೇ 28ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ಜಾರಿ ಮಾಡಿದೆ. ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಕಚೇರಿಗಳಿಂದ ಹಲವು ಮಹತ್ವದ ದಾಖಲೆಗಳನ್ನು ಕೂಡ ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಪಡೆದಿದೆ. ಮಹೇಶ್ ವಿಚಾರಣೆಗೆ ಹಾಜರಾದ ನಂತರ ಇನ್ನಷ್ಟು ವಿವರಗಳು ಹೊರ ಬೀಳಲಿವೆ.


Click it and Unblock the Notifications











