ಶ್ರೀಲೀಲಾ ಜೊತೆ ಶೂಟಿಂಗ್ ಅಷ್ಟೊಂದು ಕಷ್ಟನಾ? ನಗುತ್ತಲೇ ಕಂಪ್ಲೇಟ್ ಲಿಸ್ಟ್ ಕೊಟ್ಟ ನಿತಿನ್!
ಬೆಂಗಳೂರು ಬೆಡಗಿ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಮಹೇಶ್ ಬಾಬು, ಪವನ್ ಕಲ್ಯಾಣ್ರಂತಹ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ನಟಿಸಬೇಕಿದ್ದ ಸಿನಿಮಾ ಶ್ರೀಲೀಲಾ ಪಾಲಾಗಿತ್ತು.
ನಿತಿನ್ ನಟನೆಯ 'ಎಕ್ಸ್ಟ್ರಾಡಿನರಿಮ್ಯಾನ್' ಚಿತ್ರಕ್ಕೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆ ಆಗಿದ್ದರು. ಸಿನಿಮಾ ಮುಹೂರ್ತ ಮುಗಿಸಿ ಒಂದಷ್ಟು ಸನ್ನಿವೇಶಗಳಲ್ಲಿ ಕೂಡ ನಟಿಸಿದ್ದರು. ಬಳಿಕ ದಿಢೀರನೆ ಆಗಿ ಸಿನಿಮಾದಿಂದ ಹೊರಬಂದಿದ್ದರು. ಬಾಲಿವುಡ್ನಲ್ಲಿ ಹೆಚ್ಚು ಬ್ಯುಸಿಯಾಗಿದ್ದರಿಂದ ತೆಲುಗು ಚಿತ್ರಕ್ಕೆ ಕಾಲ್ಶೀಟ್ ಕೊಡೋಕೆ ಆಗದ ಕಾರಣಕ್ಕೆ ಈ ಸಿನಿಮಾ ಬಿಟ್ಟಿದ್ದರು ಎನ್ನಲಾಗಿತ್ತು.

ರಶ್ಮಿಕಾ ಅವಕಾಶ ಶ್ರೀಲೀಲಾ ಪಡೆದುಕೊಂಡಿದ್ದು ನೋಡಿ ರಶ್ಮಿಕಾಗೆ ಪರ್ಯಾಯವಾಗಿ ಶ್ರೀಲೀಲಾ ಚಿತ್ರರಂಗದಲ್ಲಿ ಶ್ರೀ ಮೆರೆಯುತ್ತಿದ್ದಾರೆ ಅಂತೆಲ್ಲಾ ಸುದ್ದಿಯಾಗಿತ್ತು. ಇದೀಗ ಶ್ರೀಲೀಲಾ ಬಗ್ಗೆ ನಗುನಗುತ್ತಾ ನಟ ನಿತಿನ್ ಕಂಪ್ಲೆಂಟ್ ಮಾಡಿದ್ದಾರೆ. ಇತ್ತೀಚೆಗೆ ಚಿತ್ರದ ಸಾಂಗ್ ರಿಲೀಸ್ ಕಾರ್ಯಕ್ರಮ ನಡೀತು. ಈ ವೇಳೆ ನಿತಿನ್ಗೆ ಶ್ರೀಲೀಲಾ ಜೊತೆ ನಟಿಸಿದ ಅನುಭವ ಹೇಗಿತ್ತು? ಎನ್ನುವ ಪ್ರಶ್ನೆ ಎದುರಾಗಿತ್ತು.
"ಆಕೆಯ ಜೊತೆ ಕೆಲಸ ಮಾಡುವುದು ಬಹಳ ಚಾಲೆಂಜಿಂಗ್ ಅಂತ ಹೇಳಬೇಕು. ಆಕೆ ಡೇಟ್ಸ್ ಕೊಡುವುದೇ ದೊಡ್ಡ ಚಾಲೆಂಜ್. ಶೂಟಿಂಗ್ಗೆ ಬಂದರೆ ಅದಕ್ಕೆ ತಕ್ಕಂತೆ ಶೂಟಿಂಗ್ ಅಡ್ಜೆಸ್ಟ್ ಮಾಡುವುದೇ ಮತ್ತೊಂದು ಚಾಲೆಂಜ್. ಆಕೆ ಡೇಟ್ಸ್ ಕೊಟ್ಟಾಗ ಅದು ಅರ್ಧ ದಿನನಾ? ಎರಡು ಗಂಟೆನಾ? ಮೂರು ಗಂಟೆನಾ? ಎನ್ನುವುದು ಮತ್ತೊಂದು ಚಾಲೆಂಜ್ ಆದ್ರೆ, ಆ ಸಮಯದಲ್ಲಿ ಸನ್ನಿವೇಶಗಳನ್ನು ಹೇಗೆ ಚಿತ್ರೀಕರಿಸಬೇಕು ಎನ್ನುವ ನಿರ್ದೇಶಕರಿಗೆ ದೊಡ್ಡ ಚಾಲೆಂಜ್" ಎಂದಿದ್ದಾರೆ.
"ಈಗ ಪ್ರಮೋಷನ್ಗೆ ಬರಬೇಕಿತ್ತು. ನಾಳೆ ಬರ್ತಾಳಂತೆ. ಆಕೆ ಬರ್ತಾಳಾ? ಬರಲ್ವಾ? ನಾಳೆ ಬರ್ತಾಳಾ? ಇಲ್ವಾ? ಅನ್ನೋದು ನಮಗೆ ದೊಡ್ಡ ಚಾಲೆಂಜ್ ಎಂದು ನಗುತ್ತಲೇ ನಟ ನಿತಿನ್ ಅಸಲಿ ಸಂಗತಿ ಬಿಚ್ಚಿಟ್ಟಿದ್ದಾರೆ. ಪ್ರತಿಕ್ಷಣ ಆಕೆಯಿಂದ ಚಾಲೆಂಜ್ ಎದುರಿಸುವಂತಾಗಿದೆ ಎಂದಿದ್ದಾರೆ.
ಇಷ್ಟೇ ಅಲ್ಲ. ವೆಂಕಿ ಕುಡುಮುಲ ನಿರ್ದೇಶನದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಾಯಕಿ ಎಂದು ಭಾವಿಸಲಾಗಿತ್ತು. ಆದರೆ ಅವರ ಬದಲಿಗೆ ಶ್ರೀಲೀಲಾ ಅವರನ್ನು ತೆಗೆದುಕೊಳ್ಳಲಾಗುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ನಿತಿನ್, "ಶ್ರೀಲೀಲಾಳಿಂದ ನಾವು ಈ ಸಿನಿಮಾದಲ್ಲಿ ಅನುಭವಿಸಿದ್ದೇವೆ. ವೆಂಕಿಗೆ ಆ ಅನುಭವ ಇಲ್ಲ. ಆತ ಕೂ ಅನುಭವಿಸುತ್ತಾನೆ" ಎಂದು ಹೇಳಿ ನಕ್ಕಿದ್ದಾರೆ.
ಬಳಿಕ ಮಾತು ಮುಂದುವರೆಸಿದ ನಿತಿನ್ "ಶ್ರೀಲೀಲಾ ಜೊತೆ ನಟಿಸಿದ್ದು ಒಳ್ಳೆ ಅನುಭವ. ಆಕೆ ಚೆನ್ನಾಗಿ ನಟಿಸುತ್ತಾಳೆ. ಡ್ಯಾನ್ಸ್ ಚೆನ್ನಾಗಿ ಮಾಡ್ತಾರೆ. ಆಕೆಯ ಸ್ಪೀಡಿಗೆ ಸಮನಾಗಿ ಡ್ಯಾನ್ಸ್ ಮಾಡಲು ನಾನು ಸಹ ಕಷ್ಟಪಡುವಂತಾಯಿತು. ಆಕೆಯನ್ನು ಮ್ಯಾಚ್ ಮಾಡಲು ನಾನು ಶ್ರಮಿಸಿದೆ. ಡ್ಯಾನ್ಸ್ ಮಾಡದಿದ್ದರೆ ನಿತಿನ್ ಕತೆ ಮುಗೀತು ಎಂದುಕೊಳ್ಳುತ್ತಾರೆ. ಆ ಭಯದಿಂದ ಕಷ್ಟಬಿದ್ದು ಡ್ಯಾನ್ಸ್ ಮಾಡುವಂತಾಯಿತು" ಎಂದಿದ್ದಾರೆ.
ಅದ್ಯಾಕೋ ಇದ್ದಕ್ಕಿದಂತೆ ಟಾಲಿವುಡ್ನಲ್ಲಿ ಶ್ರೀಲೀಲಾ ಕ್ರೇಜ್ ಕಮ್ಮಿ ಆಗ್ತಿದೆ. ಇತ್ತೀಚೆಗೆ ನಟಿಸಿದ 2 ಸಿನಿಮಾಗಳು ಸೋಲುಂಡವು. ಬಾಲಕೃಷ್ಣ ಮಗಳ ಪಾತ್ರದಲ್ಲಿ ನಟಿಸಿದ್ದ 'ಭಗವಂತ್ ಕೇಸರಿ' ಕೊಂಚ ಮಟ್ಟಿಗೆ ಹೆಸರು ತಂದುಕೊಟ್ಟರೂ ಬಾಕ್ಸಾಫೀಸ್ನಲ್ಲಿ ಸಿನಿಮಾ ಮುಗ್ಗರಿಸಿತ್ತು. 'ಸ್ಕಂದ' ಹಾಗೂ 'ಆದಿಕೇಶವ' ಸಿನಿಮಾಗಳು ಬಂದೋಗಿದ್ದು ಗೊತ್ತಾಗಲಿಲ್ಲ.
ಸದ್ಯ ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ಹಾಗೂ ಪವನ್ ಕಲ್ಯಾಣ್ ನಟನೆಯ ಉಸ್ತಾದ್ ಭಗತ್ ಸಿಂಗ್ ಸಿನಿಮಾಗಳಲ್ಲಿ ಶ್ರೀ ನಟಿಸುತ್ತಿದ್ದಾರೆ. ಇನ್ನುಳಿದಂತೆ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ರಾಜಕೀಯ ಮುಖಂಡ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ನಟನೆಯ 'ಜ್ಯೂನಿಯರ್' ಚಿತ್ರಕ್ಕೂ ಶ್ರೀಲೀಲಾ ನಾಯಕಿಯಾಗಿದ್ದಾರೆ.


Click it and Unblock the Notifications











