ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಹಿಡಿದಿದ್ದು ಟಿವಿಕೆ ಧ್ವಜ ಅಲ್ಲ; ಕನ್ನಡ ಭುವನೇಶ್ವರಿ ಧ್ವಜ!
ತೆಲುಗು ನಟ ಪವನ್ ಕಲ್ಯಾಣ್ ಈಗ ಆಂಧ್ರದ ಉಪಮುಖ್ಯಮಂತ್ರಿ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಜನಪ್ರಿಯತೆ ಮೂಲಕ ಗಮನ ಸೆಳೆಯುತ್ತಿದ್ದಾರೆ. 10 ವರ್ಷಗಳ ಹಿಂದೆ ಜನಸೇನಾ ಪಕ್ಷ ಸ್ಥಾಪಿಸಿದ್ದ ಪವನ್ ಒಮ್ಮೆ ಏಕಾಂಗಿ ಹೋರಾಟ ನಡೆಸಿ ಸೋತಿದ್ದರು. ಆದರೆ ಕಳೆದ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಟಿಡಿಪಿ ಜೊತೆ ಮೈತ್ರಿ ಮಾಡಿಕೊಂಡು ಗೆದ್ದಿದ್ದರು.
ಕರ್ನಾಟಕ ಸರ್ಕಾರದ ಜೊತೆಗೂ ಪವನ್ ಉತ್ತಮ ಒಡನಾಟ ಹೊಂದಿದ್ದಾರೆ. ಕೆಲ ಸಭೆ ಸಮಾರಂಭದಲ್ಲಿ ಕನ್ನಡದಲ್ಲಿ ಒಂದೆರಡು ಮಾತುಗಳನ್ನು ಆಡಿ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ವೈಜಾಗ್ನಲ್ಲಿ ನಡೆದ ಜನಸೇನಾ ಪಕ್ಷದ ಸಮಾವೇಶದಲ್ಲಿ ಜನಸೇನಾನಿ ಕನ್ನಡ ಧ್ವಜ ಹಿಡಿದಿದ್ದರು. ಕೊರಳಲ್ಲಿ ಕನ್ನಡ ಶಾಲು ಧರಿಸಿದ್ದರು. ಆ ಫೋಟೊ, ವೀಡಿಯೋ ಸಖತ್ ವೈರಲ್ ಆಗುತ್ತಿದೆ.
ತಮಿಳು ನಟ ದಳಪತಿ ವಿಜಯ್ ಈಗಾಗಲೇ ರಾಜಕೀಯರಂಗ ಪ್ರವೇಶಿಸಿದ್ದಾರೆ. ತಮಿಳಗ ವೆಟ್ರಿ ಕಳಗಂ ಎಂಬ ಪಕ್ಷ ಸ್ಥಾಪಿಸಿದ್ದಾರೆ. ಪವನ್ ಹಾಗೂ ವಿಜಯ್ ನಡುವೆ ಸೈದ್ಧಾಂತಿಕ ಸಿದ್ಧಾಂತವಿದೆ. ಇತ್ತೀಚೆಗೆ ನಟ ವಿಜಯ್ ತಮ್ಮ ಪಕ್ಷದ ಸಮಾವೇಶದಲ್ಲಿ ಪರೋಕ್ಷವಾಗಿ ಪವನ್ ಕಲ್ಯಾಣ್ಗೆ ತಿರುಗೇಟು ನೀಡಿದ್ದಾರೆ ಎಂದು ಚರ್ಚೆ ನಡೆದಿತ್ತು. ಇದೆಲ್ಲದರ ನಡುವೆ ಪವನ್ ಕಲ್ಯಾಣ್ ತಮಿಳಗ ವೆಟ್ರಿ ಕಳಗಂ ಪಕ್ಷದ ಧ್ವಜ ಹಿಡಿದಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಇದ್ದಕ್ಕಿದಂತೆ ಟಿವಿಕೆ ಪಕ್ಷದ ಬಗ್ಗೆ ಪವನ್ಗೆ ಅಭಿಮಾನ ಬಂತಾ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಕೆಲವರ ತಪ್ಪು ಗ್ರಹಿಕೆಯಿಂದ ಈ ಗೊಂದಲ ಏರ್ಪಟ್ಟಿದೆ. ಕನ್ನಡ ಧ್ವಜ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಧ್ವಜದಲ್ಲಿ ಕೊಂಚ ಸಾಮ್ಯತೆ ಇದೆ. ಹಾಗಾಗಿ ಸಮಾವೇಶದಲ್ಲಿ ಪವನ್ ಕಲ್ಯಾಣ್ ಹಿಡಿದುಕೊಂಡಿದ್ದು ಟಿವಿಕೆ ಧ್ವಜ ಎಂದು ಕೆಲವರು ಭಾವಿಸಿದ್ದಾರೆ. ಆದರೆ ಅವರು ಹಿಡಿದುಕೊಂಡಿದ್ದು ಕನ್ನಡ ಧ್ವಜ. ಕೆಂಪು, ಹಳದಿ ಬಣ್ಣದ ಬಾವುಟದ ಮಧ್ಯದಲ್ಲಿ ಭುವನೇಶ್ವರಿ ತಾಯಿ ಚಿತ್ರವನ್ನು ನೋಡಬಹುದು. ಇನ್ನು ಕೊರಳಲ್ಲಿ ಕೆಂಪು, ಹಳದಿ ಶಾಲು ಹಾಕಿಕೊಂಡಿದ್ದರು.
ಕರ್ನಾಟಕದ ಕೆಲ ಪವನ್ ಕಲ್ಯಾಣ್ ಅಭಿಮಾನಿಗಳು ವೈಜಾಗ್ನಲ್ಲಿ ನಡೆದ ಜನಸೇನಾ ಪಕ್ಷದ ಸಮಾವೇಶದಲ್ಲಿ ಭಾಗಿ ಆಗಿದ್ದರು. ಹೀಗೆ ಅಭಿಮಾನಿಗಳು ವೇದಿಕೆ ಬಳಿ ಹೋಗಿ ಕನ್ನಡ ಧ್ವಜ, ಶಾಲು ಕೊಟ್ಟಿದ್ದರು. ಅದನ್ನು ಪವನ್ ಹಿಡಿದುಕೊಂಡಿದ್ದರು. ಇದೇ ಸಮಾವೇಶದಲ್ಲಿ ಮುಂದಿನ ದಿನಗಳಲ್ಲಿ ತಮ್ಮ ಜನಸೇನಾ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಬೆಳೆಯುತ್ತದೆ ಎಂದು ಪವನ್ ಹೇಳಿದ್ದಾರೆ. ಕರ್ನಾಟಕದಲ್ಲಿ ಇರುವ ಪಕ್ಷಗಳೇ ಸಾಕು, ತೆಲುಗಿನವರು ಇಲ್ಲಿ ಬರೋದು ಬೇಡ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಕರ್ನಾಟಕದಲ್ಲಿರುವ ಅವರ ಅಭಿಮಾನಿಗಳು ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಈ ಮೂಲಕ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
3 ತಿಂಗಳ ಹಿಂದೆ ಕರ್ನಾಟಕದಿಂದ ಆಂಧ್ರಕ್ಕೆ 5 ಕುಮ್ಕಿ ಆನೆಗಳನ್ನು ಕಳುಹಿಸಿಕೊಡಲಾಗಿತ್ತು. ಆನೆಗಳನ್ನು ಹಸ್ತಾಂತರಿಸುವ ಒಡಂಬಡಿಕೆಗೆ ಸಹಿ ಹಾಕಿ, ಆನೆಗಳನ್ನು ನೀಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಸಹ ಭಾಗಿ ಆಗಿದ್ದರು. ಆಂಧ್ರದ ಅರಣ್ಯ ಭಾಗದಲ್ಲಿ ಕಾಡು ಪ್ರಾಣಿಗಳು ಹಾಗೂ ಮಾನವ ಸಂಘರ್ಷ ತಪ್ಪಿಸಲು ತರಬೇತಿ ಪಡೆದ ಕುಮ್ಕಿ ಆನೆಗಳನ್ನು ಆಂಧ್ರ ಸರ್ಕಾರ ತೆಗೆದುಕೊಂಡಿದೆ. ಈ ಆನೆಗಳಿಗೆ ಏನೇ ಸಮಸ್ಯೆ ಆದರೂ ನಾನೇ ಹೊಣೆ ಎಂದು ಪವನ್ ಮಾತು ಕೊಟ್ಟಿದ್ದಾರೆ.


Click it and Unblock the Notifications











