ನಟ, RSS ಸದಸ್ಯ, ಲೇಖಕ, ಪತ್ರಕರ್ತ ರಾವಿ ಕೊಂಡಲ ರಾವು ನಿಧನ: ಗಣ್ಯರ ಸಂತಾಪ
ತೆಲುಗು ಚಿತ್ರರಂಗದ ಖ್ಯಾತ ನಟ ರಾವಿ ಕೊಂಡಲ ರಾವು ಅವರು ಇಂದು ನಿಧನವಾಗಿದ್ದಾರೆ. ಹೃಧಯಾಘಾತದಿಂದ ಕೊನೆ ಉಸಿರೆಳೆದ ಅವರಿಗೆ 88 ವರ್ಷ ವಯಸ್ಸಾಗಿತ್ತು.
Recommended Video
ಕಳೆದ ಕೆಲ ದಿನಗಳಿಂದಲೂ ಅವರು ಹೈದರಾಬಾದ್ನ ಸೋಮಾಜಿಗುಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಮಂಗಳವಾರ ಸಂಜೆ ವೇಳೆಗೆ ಅವರು ಕೊನೆಯುಸಿರೆಳೆದರು. ಅವರಿಗೆ ಒಬ್ಬ ಪುತ್ರನಿದ್ದಾನೆ. ಇವರ ಪತ್ನಿ ರಾಧಾ ಕುಮಾರಿ ಸಹ ಖ್ಯಾತ ನಟಿಯಾಗಿದ್ದರು, ಅವರು 2012 ರಲ್ಲಿಯೇ ಕಾಲವಾದರು.
ಸುಮಾರು 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಕೊಂಡಲ ರಾವು ಅವರು ಹಲವಾರು ಸಿನಿಮಾಗಳಿಗೆ ಕತೆಗಾರರಾಗಿ, ಸಂಭಾಷಣೆಕಾರರಾಗಿ, ಸಹ ನಿರ್ಮಾಪಕ, ಸಹ ನಿರ್ದೇಶಕರಾಗಿ ಸಹ ಕೆಲವ ಮಾಡಿದ್ದಾರೆ. ರಾವಿ ಕೊಂಡಲ ರಾವು ಅವರ ನಿಧನಕ್ಕೆ ತೆಲುಗು ಸಿನಿಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

'ವಿಜಯ ಚಿತ್ರಂ' ಸಂಪಾದಕರಾಗಿ ಸಹ ಕಾರ್ಯ
ಬರಹಗಾರರೂ ಆಗಿದ್ದ ಕೊಂಡಲ ರಾವು ಅವರು ತೆಲುಗಿನ ಖ್ಯಾತ ಸಿನಿಮಾ ಪತ್ರಿಕೆ ಆಗಿದ್ದ 'ವಿಜಯ ಚಿತ್ರಂ ' ನ ಪ್ರಧಾನ ಸಂಪಾದರಾಗಿ ಸಹ ಕೆಲಸ ನಿರ್ವಹಿಸಿದ್ದರು. ಬರಹಗಾರರಾಗಿಯೂ ಖ್ಯಾತರಾಗಿದ್ದ ರಾವು, ಕೆಲವು ಪುಸ್ತಕಗಳನ್ನು ಸಹ ಹೊರತಂದಿದ್ದರು. ಒಂದು ವಾರದ ಹಿಂದೆಯಷ್ಟೆ ಆನ್ಲೈನ್ ಪತ್ರಿಕೆಗಾಗಿ ಲೇಖನವೊಂದನ್ನು ಬರೆದಿದ್ದರು.

ಹಲವು ಖ್ಯಾತ ಸಿನಿಮಾಗಳಿಗೆ ಕತೆ, ಸಂಭಾಷಣೆ ಬರೆದಿದ್ದಾರೆ
ತೆಲುಗು ಸಿನಿಮಾಉದ್ಯಮದ ಮೈಲಿಗಲ್ಲು ಸಿನಿಮಾ ಎನಿಸಿಕೊಳ್ಳುವ 'ಪೆಳ್ಳಿ ಪುಸ್ತಕಂ' ಅವರೇ ಬರೆದ ಕತೆ. 'ಭೈರವ ದ್ವೀಪಂ, ಶ್ರೀ ಕೃಷ್ಣಾರ್ಜುನ ಯುದ್ಧಂ, ಬೃಂದಾವನ' ಸಿನಿಮಾಗಳಿಗೆ ಸಂಭಾಷಣೆ ಸಹ ಬರೆದಿದ್ದರು. ನಟರಾಗಿ 600 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ ರಾವು.

ಮೂರು ತಿಂಗಳು ಜೈಲು ವಾಸ ಅನುಭವಿಸಿದ್ದರು
ರಾವು ಅವರು ಆರ್ಎಸ್ಎಸ್ ಸದಸ್ಯ ಸಹ ಆಗಿದ್ದರು. ಮಹಾತ್ಮಾ ಗಾಂಧಿ ಹತ್ಯೆ ನಂತರ ಆರ್ಎಸ್ಎಸ್ ಮೇಲೆ ಸರ್ಕಾರ ನಿಷೇಧ ಹೇರಿದಾಗ ಅದನ್ನು ಪ್ರತಿಭಟಿಸಿದ ಪರಿಣಾಮ ಮೂರು ತಿಂಗಳ ಕಾಲ ಅವರನ್ನು ರಾಜಮಂಡ್ರಿ ಜೈಲಿನಲ್ಲಿ ಇಡಲಾಗಿತ್ತು.

ತೆಲುಗು ಸಿನಿಗಣ್ಯರ ಸಂತಾಪ
ರಾವಿ ಕೊಂಡಲ ರಾವು ಅವರ ನಿಧನಕ್ಕೆ ತೆಲುಗು ಸಿನಿಗಣ್ಯರಾದ ಚಿರಂಜೀವಿ, ಪವನ್ ಕಲ್ಯಾಣ್, ನಾಗಾರ್ಜುನ, ಎನ್ಟಿಆರ್, ಬಾಲಕೃಷ್ಣ ಇನ್ನೂ ಹಲವರು ಸಂತಾಪ ಸೂಚಿಸಿದ್ದಾರೆ. ಆಂಧ್ರ ಸಿಎಂ ಜಗನ್ ಸಹ ತಮ್ಮ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications











