BREAKING: ಚಿತ್ರಸಾಹಿತಿ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ನಿಧನ
ತೆಲುಗು ಚಿತ್ರರಂಗದ ಜನಪ್ರಿಯ ಚಿತ್ರ ಸಾಹಿತಿ ಸಿರಿವೆನ್ನಲ ಸೀತಾರಾಮಶಾಸ್ತ್ರಿ ಇಂದು (ನವೆಂಬರ್ 30) ನಿಧನ ಹೊಂದಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.
ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಸೀತಾರಾಮಶಾಸ್ತ್ರಿಯವರನ್ನು ಸಿಕಂದರಾಬಾದ್ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಇಂದು ಸಂಜೆ 4:07 ನಿಮಿಷಕ್ಕೆ ಅವರು ನಿಧನ ಹೊಂದಿದ್ದಾರೆ.
ನ್ಯುಮೋನಿಯಾ ಆಗಿದ್ದ ಅವರನ್ನು ನವೆಂಬರ್ 24ರಂದೇ ಅವರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಐಸಿಯುನಲ್ಲಿಟ್ಟು ಇಸಿಎಂಓ ಬಳಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಇಂದು ಅವರು ಅಸುನೀಗಿದ್ದಾರೆ.

ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ನಿಧನಕ್ಕೆ ತೆಲುಗು ಚಿತ್ರರಂಗದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿರುವ ಪ್ರಕಾಶ್ ರೈ, 'ಜಗತ್ತೆಲ್ಲ ಕುಟುಂಬ ನಿಮಗೆ, ನೀವಿಲ್ಲದ ಏಕಾಂಗಿ ಜೀವನ ನಮ್ಮದು. ನಿಮ್ಮ ಅಗಲಿಕೆ ಸರಿತೂಗಲಾರದ ನಷ್ಟ. ನಮ್ಮ ಜೀವನಗಳಿಗೆ ನೀವು ಕಾವ್ಯಾತ್ಮಕ ದೃಷ್ಟಿಕೋನ ನೀಡಿದಿರಿ'' ಎಂದಿದ್ದಾರೆ.
ಪ್ರಕಾಶ್ ರೈ ಮಾತ್ರವೇ ಅಲ್ಲದೆ ಹಲವು ತೆಲುಗು ಚಿತ್ರನಟರು, ರಾಜಕಾರಣಿಗಳು ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
1986ರ 'ಸಿರಿವೆನ್ನೆಲ' ಸಿನಿಮಾ ಮೂಲಕ ಗೀತ ಸಾಹಿತಿಯಾಗಿ ವೃತ್ತಿ ಆರಂಭಿಸಿದ ಸೀತಾರಾಮಶಾಸ್ತ್ರಿ, ಹಲವು ದಶಕಗಳಿಂದ ತೆಲುಗು ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಸಾವಿರಾರು ಗೀತೆಗಳನ್ನು ಸಿನಿಮಾಗಳಿಗಾಗಿ ರಚಿಸಿರುವ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿಯವರ ಸಾಧನೆ ಗುರುತಿಸಿ ಕೇಂದ್ರ ಸರ್ಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಜೊತೆಗೆ ಹಲವು ಬಾರಿ ಫಿಲಂ ಫೇರ್, ನಂದಿ ಪ್ರಶಸ್ತಿಗಳನ್ನು ಸಹ ಪಡೆದುಕೊಂಡಿದ್ದಾರೆ.
3000 ಕ್ಕೂ ಹೆಚ್ಚು ಸಿನಿಮಾ ಹಾಡುಗಳನ್ನು ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ಬರೆದಿದ್ದಾರೆ. 1986ರ 'ಸಿರಿವೆನ್ನೆಲ' ಸಿನಿಮಾದಿಂದ ಆರಂಭಿಸಿ ಇದೀಗ ಬಿಡುಗಡೆ ಆಗಲಿರುವ 'ಆರ್ಆರ್ಆರ್' ಸಿನಿಮಾದ ವರೆಗೆ ಸಾವಿರಾರು ಸಿನಿಮಾಗಳಿಗೆ ಸಿರಿವೆನ್ನೆಲ ಅವರು ಹಾಡುಗಳನ್ನು ಬರೆದಿದ್ದಾರೆ. ಸಿರಿವೆನ್ನಲ ಅವರು ತೆಲುಗು ಚಿತ್ರರಂಗದ ಬಹುತೇಕ ಎಲ್ಲ ನಾಯಕ ನಟರುಗಳಿಗೂ ಹಾಡುಗಳನ್ನು ಬರೆದಿದ್ದಾರೆ. ಪೌರಾಣಿಕ, ಐತಿಹಾಸಿಕ, ಪ್ರೇಮಕತೆ, ಆಕ್ಷನ್, ಹಾರರ್ ಎಲ್ಲ ಮಾದರಿಯ ಸಿನಿಮಾಗಳಿಗೂ ಹಾಡುಗಳನ್ನು ರಚಿಸಿದ್ದಾರೆ.


Click it and Unblock the Notifications











