ವೇದಿಕೆ ಮೇಲೆ ಸಮಂತಾಗೆ ಪ್ರಪೋಸ್ ಮಾಡಿದ ಅಭಿಮಾನಿ ; ಪತಿ ರಾಜ್ ನಿಡಿಮೋರು ಮಾಡಿದ್ದೇನು?
ಸೆಲೆಬ್ರೆಟಿಗಳೂ ಅಭಿಮಾನಿಗಳ ಸೆಲ್ಫಿ ಸಮಸ್ಯೆಗಳಿಂದ ಈಗೀಗ ಪ್ರತಿದಿನವೂ ನರಳುವಂತಾಗಿದೆ. ಸಿನಿಮಾ ತಾರೆಯರು ಎಲ್ಲಿ ಹೋದರೂ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದು ಅವರ ಸ್ವಾತಂತ್ರ್ಯ ಹರಣವನ್ನು ಮಾಡುತ್ತಲೇ ಇರುತ್ತಾರೆ. ಸಾಕಷ್ಟು ಸೆಲೆಬ್ರೆಟಿಗಳು ಇದರ ಸಲುವಾಗಿ ಪಬ್ಲಿಕ್ಕಿಗೆ ತಲೆ ಹಾಕುವುದೂ ಕಡಿಮೆ.
ಇನ್ನೂ ಕೆಲವರು ಬಾಡಿಗಾರ್ಡ್ ಗಳನ್ನಿಟ್ಟುಕೊಂಡು ಅವೆಲ್ಲವನ್ನೂ ಅವಾಯ್ಡ್ ಮಾಡುತ್ತಲೇ ಇರುತ್ತಾರೆ. ಆದರೂ ಕೂಡ ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೊನೆ ಪಕ್ಷ ತಮ್ಮದೇ ಚಿತ್ರದ ಕಾರ್ಯಕ್ರಮದಲ್ಲಿ ಆದರೂ ನೆಮ್ಮದಿಯಿಂದ ಭಾಗವಹಿಸೋಣ ಅಂದರೆ ಸೆಲೆಬ್ರೇಟಿಗಳಿಗೆ ಅದು ಕೂಡ ಸಾಧ್ಯವಾಗುವುದಿಲ್ಲ. ಅಲ್ಲಿಯೂ ಕೂಡ ಅಭಿಮಾನದ ದಂಡು ಹಾಜರಾಗುತ್ತೆ. ಇದಕ್ಕೆ ಕೈಗನ್ನಡಿಯೇ ವೈರಲ್ ಆದ ಸಮಂತಾ ಅವರ ವಿಡಿಯೋ.

ಹೌದು, ಹೈದರಾಬಾದ್ಗಿಂತ ಇತ್ತೀಚೆಗೆ ಮುಂಬೈನಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುವ ಸಮಂತಾ, ಬಹಳ ವರ್ಷಗಳ ನಂತರ ನಾಯಕಿಯಾಗಿ ಮತ್ತೆ ತೆಲುಗು ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಬೇರೆ ಯಾರು ಹಣ ಹೂಡಲು ಮುಂದಾಗದ ಕಾರಣ.. ಅವಕಾಶವನ್ನು ನೀಡದ ಕಾರಣ.. ತಾವೇ ಖುದ್ದು ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಹೀಗೆ ಇವರು ಬಂಡವಾಳ ಹಾಕಿ ಅಭಿನಯಿಸಿರುವ ಚಿತ್ರದ ಹೆಸರು ''ಮಾ ಇಂಟಿ ಬಂಗಾರಂ''.
ಸದ್ಯ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಅಭಿಮಾನಿಯೊಬ್ಬರು ಭದ್ರತಾ ಕೋಟೆಯನ್ನು ದಾಟಿಕೊಂಡು ವೇದಿಕೆಯನ್ನೇರಿದ್ದಾರೆ. ಸಿನಿಮಾ ಶೈಲಿಯಲ್ಲಿ ಮಂಡಿಯೂರಿ ರೊಮ್ಯಾಂಟಿಕ್ ಆದ ಪ್ರಪೋಸ್ ಮಾಡಿದ್ದಾರೆ.
ಇನ್ನು ಸಾಮಾನ್ಯವಾಗಿ ತಮ್ಮ ಹತ್ತಿರ ಅಭಿಮಾನಿ ಬಂದರೆ, ಜಿರಳೆ ಕಂಡಂತೆ ಹೌಹಾರುತ್ತಾರೆ. ಕೋಪ ಮಾಡಿಕೊಳ್ಳುತ್ತಾರೆ. ತಮ್ಮ ಬಾಡಿಗಾರ್ಡ್ಗಳಿಗೆ ಕಣ್ಣಲ್ಲೇ ಸನ್ನೆ ನೀಡಿ ಅಭಿಮಾನಿಯನ್ನು ಅಲ್ಲಿಂದ ಓಡಿಸುತ್ತಾರೆ. ಆದರೆ, ಸಮಂತಾ ಇದ್ಯಾವುದು ಮಾಡಿಲ್ಲ. ಬದಲಿಗೆ ಅಭಿಮಾನಿಯ ಈ ಅಭಿಮಾನ ಸಮಂತಾ ಮೊಗದಲ್ಲಿ ನಗು ಮೂಡಿಸಿದೆ. ನಗುತ್ತಲೇ ಅಭಿಮಾನಿ ನೀಡಿದ ಹೂವನ್ನು ಸಮಂತಾ ಸ್ವೀಕರಿಸಿದ್ದಾರೆ.
ಪ್ರೇಮ ನಿವೇದನೆಯ ನಂತರ ಕೂಡ ಆ ಅಭಿಮಾನಿ ಅಲ್ಲಿಂದ ಹೋಗಿಲ್ಲ. ಬದಲಿಗೆ ಸೆಲ್ಫಿಗೆ ಮನವಿಯನ್ನು ಮಾಡಿದ್ದಾರೆ. ಸಮಂತಾ ಇದಕ್ಕೂ ಕೂಡ ಇಲ್ಲ ಎಂದಿಲ್ಲ. ಅಭಿಮಾನಿಯನ್ನು ಕರೆದೊಯ್ಯಲು ಬಂದ ಭದ್ರತಾ ಸಿಬ್ಬಂದಿಯನ್ನು ತಡೆದ ಸಮಂತಾ ನಗು ನಗುತ್ತಲೇ ಫೋಟೊಗೆ ಪೋಸ್ ನೀಡಿದ್ದಾರೆ.

ಸೆಲ್ಫಿ ಪಡೆದ ನಂತರ ಸಮಂತಾಗೆ ಧನ್ಯವಾದ ಹೇಳಿ ಅಭಿಮಾನಿ ಅಲ್ಲಿಂದ ಹೊರ ನಡೆದಿದ್ದಾರೆ. ಇನ್ನು ಈ ಲವ್ ಪ್ರಪೋಸಲ್ ಸನ್ನಿವೇಶ ನಡೆಯುವಾಗ ಸಮಂತಾ ಪಕ್ಕದಲ್ಲಿ ಅವರ ಪತಿದೈವ ರಾಜ್ ನಿಡಿಮೋರು ಕೂಡ ಇದ್ದರು. ಆದರೆ ಅವರು ಕೂಡ ಅಭಿಮಾನಿಯ ಈ ವರ್ತನೆಗೆ ಕೋಪ ಮಾಡಿಕೊಂಡಿಲ್ಲ. ಬದಲಿಗೆ ಸಮಾಧಾನದಿಂದ ಅಭಿಮಾನದ ಪರಾಕಾಷ್ಠೆ ಕಣ್ತುಂಬಿಕೊಂಡಿದ್ದಾರೆ. ನಸು ನಕ್ಕಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವರು ಸಮಂತಾ ಮತ್ತು ರಾಜ್ ನಿಡಿಮೋರು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ಧಾರೆ. ಇಬ್ಬರ ಸೌಜನ್ಯ ಮತ್ತು ತಾಳ್ಮೆಯನ್ನು ಕೊಂಡಾಡುತ್ತಿದ್ದಾರೆ.
ಅಂದ್ಹಾಗೇ ''ಮಾ ಇಂಟಿ ಬಂಗಾರಂ'' ಎಲ್ಲವೂ ಅಂದುಕೊಂಡತೆ ಆಗಿದ್ದರೆ ಮೇ 15ರಂದೇ ಬಿಡುಗಡೆಯಾಗಬೇಕಿತ್ತು. ಆದರೆ ಐಪಿಎಲ್ ಮತ್ತು ''ಪೆದ್ದಿ'' ಚಿತ್ರದ ಬಿಡುಗಡೆ ಹಿನ್ನೆಲೆ ಚಿತ್ರದ ಬಿಡುಗಡೆಯನ್ನು ಮುಂದೂಡಲಾಯ್ತು. ಸದ್ಯ ಈ ಚಿತ್ರ ಜೂನ್ 19ರಂದು ತೆರೆಗೆ ಬರುತ್ತಿದೆ.
ಇನ್ನುಳಿದಂತೆ ಚಿತ್ರಕ್ಕೆ ಈ ಹಿಂದೆ ಸಮಂತಾಗೆ ''ಓಹ್ ಬೇಬಿ'' ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕಿ ನಂದಿನಿ ರೆಡ್ಡಿ ನಿರ್ದೇಶನ ಇದೆ. ''ಕಾಂತಾರ''ದ ಕುಲಶೇಖರ ಗುಲ್ಶನ್ ದೇವಯ್ಯ ಕೂಡ ಈ ಚಿತ್ರದಲ್ಲಿದ್ಧಾರೆ. ಇಷ್ಟೇ ಅಲ್ಲ ನಮ್ಮ ಕನ್ನಡದ ದಿಗಂತ್ ಕೂಡ ''ಮಾ ಇಂಟಿ ಬಂಗಾರಂ''ನಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದ್ಧಾರೆ. ಇನ್ನು ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿರುವುದು ವಿಶೇಷ.


Click it and Unblock the Notifications