ಮಾ ಚುನಾವಣೆಯಲ್ಲಿ ಕಿತ್ತಾಟ: ಯಾರು ಏನು ಹೇಳಿದರು?
ತೆಲುಗು ಚಿತ್ರರಂಗದ ಕಲಾವಿದರ ಸಂಘ ಮಾ (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಚುನಾವಣೆಗೆ ಇಂದು ಮತದಾನ ನಡೆದಿದ್ದು, ಮತಗಟ್ಟೆಯು ರಣರಂಗವಾಗಿ ಮಾರ್ಪಟ್ಟಿದೆ.
ಪ್ರಕಾಶ್ ರೈ ಹಾಗೂ ಮಂಚು ವಿಷ್ಣು ನೇತೃತ್ವದ ಬಣಗಳು ಮಾ ಮೇಲಿನ ಹಿಡಿತಕ್ಕಾಗಿ ಪರಸ್ಪರ ಸ್ಪರ್ಧಿಸಿದ್ದು, ಇಷ್ಟು ದಿನ ಪರಸ್ಪರ ವಾಗ್ದಾಳಿ ನಡೆಸಿಕೊಂಡಿದ್ದವರು, ಇಂದು ಕೈ-ಕೈ ಮಿಲಾಯಿಸುವ ಹಂತ ತಲುಪಿದ್ದಾರೆ.
ಜುಬ್ಲಿ ಹಿಲ್ಸ್ನ ಶಾಲೆಯೊಂದರಲ್ಲಿ ಮಾ ಚುನಾವಣೆ ಮತದಾನ ನಡೆದಿದ್ದು, ಆರಂಭದಲ್ಲಿಯೇ ಎದುರಾಳಿ ಸಿಂಡಿಕೇಟ್ ಸದಸ್ಯರು ಪರಸ್ಪರ ಕಿತ್ತಾಡಿದ್ದಾರೆ. ಹಿರಿಯ ನಟ ಮೋಹನ್ ಬಾಬು ಅಂತೂ ಪೋಷಕ ನಟ ಬ್ಯಾನರ್ಜಿಗೆ ಕೊಲ್ಲುವುದಾಗಿ ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ಬಾರಿಯ ಮಾ ಚುನಾವಣೆಯಲ್ಲಿ ವೈಯಕ್ತಿಕ ವಾಗ್ದಾಳಿಗಳು, ವಿವಾದಾತ್ಮಕ ಹೇಳಿಕೆಗಳು ಹೆಚ್ಚಾಗಿರುವ ಬಗ್ಗೆ ಮತದಾನ ಮಾಡಲು ಬಂದ ಹಲವು ಸ್ಟಾರ್ ನಟರು ಸ್ಪಂದಿಸಿದ್ದಾರೆ.

ಪವನ್ ಕಲ್ಯಾಣ್ ಹೇಳಿದ್ದು ಹೀಗೆ?
ಬೆಳಿಗ್ಗೆಯೇ ಮತದಾನ ಮಾಡಿದ ನಟ ಪವನ್ ಕಲ್ಯಾಣ್, ''ಎಲ್ಲ ಒಟ್ಟು ಮಾಡಿದರೆ 900 ಮತಗಳಷ್ಟೆ ಮಾ ಚುನಾವಣೆಗೆ ಇದೆ. ಅಷ್ಟಕ್ಕೆ ಇಷ್ಟೋಂದು ವೈಯಕ್ತಿಕ ವಾಗ್ದಾಳಿಗಳು, ಕೆಟ್ಟ ರಾಜಕೀಯಗಳು ಏಕೆ'' ಎಂದು ಪವನ್ ಕಲ್ಯಾಣ್ ಪ್ರಶ್ನೆ ಮಾಡಿದ್ದಾರೆ. ಪವನ್ ಕಲ್ಯಾಣ್ ಹೇಳಿರುವಂತೆ 'ಮಾ' ಚುನಾವಣೆಗೆ ಮತದಾನ ಮಾಡುವ ಕಲಾವಿದರ ಸಂಖ್ಯೆ ಕೇವಲ 900 ಅಷ್ಟೆ.

ತೆಲಂಗಾಣದವರು ಆಂಧ್ರದಲ್ಲಿದ್ದಾರೆ
ನಟ ಸುಮನ್ ಮಾತನಾಡಿ, ''ಮಾ ಚುನಾವಣೆ ಹಿಂದಿನಿಂದಲೂ ಹೀಗೆ ಸ್ಪರ್ಧೆಯಿಂದ ಕೂಡಿರುತ್ತಿತ್ತು, ಆದರೆ ಈ ಬಾರಿ ತುಸು ಹೆಚ್ಚೇ ಆಗಿದೆ. ಹಿಂದೆಂದೂ ಇಷ್ಟೋಂದು ಟೀಕೆ, ವಿವಾದಗಳು ಕಂಡು ಬಂದಿರಲಿಲ್ಲ. ನಾನು 30 ವರ್ಷದಿಂದ ಉದ್ಯಮದಲ್ಲಿದ್ದೇನೆ ಇದೇ ಮೊದಲ ಬಾರಿಗೆ ಇಷ್ಟೋಂದು ವಿವಾದಗಳಿಂದ ಕೂಡಿದ ಚುನಾವಣೆ ನೋಡುತ್ತಿದ್ದೇನೆ ಎಂದಿದ್ದಾರೆ ಸುಮನ್. ಯಾವುದು ಏನೇ ಆಗಲಿ ನಾವೆಲ್ಲರೂ ಒಂದೇ ಕುಟುಂಬದವರು, ಚುನಾವಣೆ ನಂತರ ನಾವೆಲ್ಲರೂ ಒಂದೇ ಕುಟುಂಬದವರಾಗಿ ಇರುತ್ತೇವೆ ಎಂದಿದ್ದಾರೆ ಸುಮನ್. ನಾನ್ ಲೋಕಲ್, ಲೋಕಲ್ ಚರ್ಚೆಗೆ ಉತ್ತರಿಸಿದ ಸುಮನ್, ''ಆಂಧ್ರಪ್ರದೇಶ ಬೇರೆಯಾದ ಮೇಲೆ ತೆಲಂಗಾಣದಲ್ಲಿ ಹಲವು ಮಂದಿ ಆಂಧ್ರಪ್ರದೇಶದವರು ಇದ್ದಾರೆ ಅವರನ್ನು ನಾನ್ ಲೋಕಲ್ ಎನ್ನಲಾಗುತ್ತದೆಯೇ'' ಎಂದು ಪ್ರಶ್ನೆ ಮಾಡಿದ್ದಾರೆ.

ನಟಿ ರೋಜಾ ಬೇಸರ
ಶಾಸಕಿ ಹಾಗೂ ಕಲಾವಿದೆಯೂ ಆಗಿರುವ ನಟಿ ರೋಜಾ ಸಹ ಮತದಾನ ಮಾಡಿದ್ದು, ಚುನಾವಣೆಗಳು ತೀವ್ರ ಸ್ಪರ್ಧಾತ್ಮಕ ಆಗಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಕೇವಲ 900 ಮತಗಳ ಚುನಾವಣೆಗೆ ಈ ರೀತಿ ಕಿತ್ತಾಡಿದರೆ ಹೇಗೆ ಎಂದು ರೋಜಾ ಪ್ರಶ್ನೆ ಮಾಡಿದ್ದಾರೆ. ಪ್ರಕಾಶ್ ರೈ ಹಾಗೂ ಮಂಚು ವಿಷ್ಣು ಪರಸ್ಪರ ಆಲಿಂಗಿಸಿಕೊಂಡಿದ್ದು ಒಳ್ಳೆಯ ಬೆಳವಣಿಗೆ. ಯಾರೇ ಗೆದ್ದರು ತೆಲುಗು ಸಿನಿಮಾ ಕಾರ್ಮಿಕರಿಗೆ, ಕಲಾವಿದರಿಗೆ ಒಳ್ಳೆಯದಾಗಬೇಕು ಎಂದು ರೋಜಾ ಹೇಳಿದ್ದಾರೆ. ಲೋಕಲ್-ನಾನ್ ಲೋಕಲ್ ಚರ್ಚೆ ಬಗ್ಗೆ ಮಾತನಾಡಿದ ರೋಜಾ, ಸ್ಥಳೀಯರು, ಸ್ಥಳೀಯರಲ್ಲದವರು ಎಂಬ ಚರ್ಚೆಯೇ ಅನುಪಯುಕ್ತ ಹಾಗೆ ನೋಡಿದರೆ ಎಲ್ಲ ನಟಿಯರು ಸಹ ನಾನ್ ಲೋಕಲ್ಗಳೇ ಆಗಿದ್ದಾರೆ ಎಂದಿದ್ದಾರೆ ರೋಜಾ.

ಯಾರಿಗೆ ಮತ ಹಾಕಿದರು ಬಾಲಕೃಷ್ಣ?
ನಟ ನಂದಮೂರಿ ಬಾಲಕೃಷ್ಣ ಸಹ ಮತದಾನ ಮಾಡಿದ್ದು, ಮತದಾನದ ಬಳಿಕ ಮಾತನಾಡಿದ ಬಾಲಕೃಷ್ಣ, ''ಕಲಾವಿದರಿಗೆ ಯಾರು ಹೆಚ್ಚು ಸಹಾಯ ಮಾಡುತ್ತಾರೆ ಎಂದು ನನಗನಿಸಿದೆಯೋ ಅವರಿಗೆ ನಾನು ಮತ ಹಾಕಿದ್ದೇನೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಇಬ್ಬರೂ ಸಹ ಹಲವು ವರ್ಷಗಳಿಂದ ಉದ್ಯಮದಲ್ಲಿದ್ದಾರೆ ಕಲಾವಿದರಿಗೆ ಹಲವು ರೀತಿ ಸಹಾಯ ಮಾಡಿದ್ದಾರೆ. ಆದರೆ ಮತ ಒಬ್ಬರಿಗೆ ಮಾತ್ರ ಹಾಕಬೇಕಾದ್ದರಿಂದ ನನಗೆ ಬೆಸ್ಟ್ ಎನಿಸಿದ ವ್ಯಕ್ತಿಗೆ ಹಾಕಿದ್ದೇನೆ'' ಎಂದಿದ್ದಾರೆ ಬಾಲಕೃಷ್ಣ. ಎರಡೂ ಪ್ಯಾನೆಲ್ಗಳಲ್ಲಿಯೂ ಹಲವು ಒಳ್ಳೆಯ ವ್ಯಕ್ತಿಗಳಿದ್ದಾರೆ ಹಾಗಾಗಿ ನಾನು ಎರಡೂ ಪ್ಯಾನೆಲ್ಗಳಲ್ಲಿರುವ ನನ್ನ ಮೆಚ್ಚಿನ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದೇನೆ ಎಂದಿದ್ದಾರೆ.

ವೈಯಕ್ತಿಕ ಮಟ್ಟದ ಟೀಕೆಗಳು
ಮಾ ಚುನಾವಣೆಯ ಮತದಾನ ಇಂದು ಮಧ್ಯಾಹ್ನ ಮುಗಿದಿದ್ದು ಮತ ಎಣಿಕೆ ಆರಂಭವಾಗಿದೆ. ಸಿಂಡಿಕೇಟ್ ಮಾದರಿ ಚುನಾವಣೆ ಆಗಿರುವ ಕಾರಣ ಮತ ಎಣಿಕೆ ಹೆಚ್ಚು ಕಾಲ ನಡೆಯಲಿದ್ದು ಇಂದು ಮಧ್ಯ ರಾತ್ರಿ ವೇಳೆಗೆ ಫಲಿತಾಂಶ ಬರುವ ಸಂಭವ ಇದೆ. ಪ್ರಕಾಶ್ ರೈ ಹಾಗೂ ಮಂಚು ವಿಷ್ಣು ಎರಡೂ ಸಿಂಡಿಕೇಟ್ನವರು ಪರಸ್ಪರರ ಮೇಲೆ ತೀವ್ರ ವಾಗ್ದಾಳಿ ನಡೆಸಿಕೊಂಡಿದ್ದು, ವೈಯಕ್ತಿಕ ಮಟ್ಟದ ಟೀಕೆಗಳನ್ನು ಸಹ ಮಾಡಿದ್ದಾರೆ.


Click it and Unblock the Notifications











