'ವಾರಣಾಸಿ'ಯಲ್ಲಿ ಹನುಮಂತನನ್ನು ಟೀಕಿಸಿದ ರಾಜಮೌಳಿಗೆ ಸಂಕಷ್ಟ ; ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಅಭಿವ್ಯಕ್ತಿ ಮನುಷ್ಯನ ಮೂಲಭೂತ ಗುಣ. ಮಾನವನ ಹಕ್ಕುಗಳಿಗೆ ಈ ಅಭಿವ್ಯಕ್ತಿ ಸ್ವಾತಂತ್ರ್ಯವೇ ಅಡಿಪಾಯ. ಅದೇ ಮಾನವನ ಅಸ್ತಿತ್ವದ ಬೇರು. ಆದರೆ ಈಗೀಗ .. ಅಭಿವ್ಯಕ್ತಿ ಹೆಸರಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವುದು, ಧಾರ್ಮಿಕ ವ್ಯಕ್ತಿತ್ವಗಳ ಅವಹೇಳನವನ್ನು ಮಾಡುವುದು ಕೂಡ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವಾಗಿ ದಿನ ಬೆಳಗಾದರೆ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ವಿವಾದಕ್ಕೆ ಎಡೆ ಮಾಡಿಕೊಡುತ್ತಿವೆ.
ಇದಕ್ಕೆ ಸದ್ಯ ರಾಜಮೌಳಿ ಸುತ್ತ ಮುತ್ತ ಎದ್ದಿರುವ ವಿವಾದದ ಹುತ್ತ ಮತ್ತೊಂದು ಉದಾಹರಣೆ. ಹೌದು, ಎಲ್ಲರಿಗೆ ಗೊತ್ತಿರುವಂತೆ ವಾರಣಾಸಿ ಚಿತ್ರದ ಕಾರ್ಯಕ್ರಮ ಮೊನ್ನೆ ಅದ್ದೂರಿಯಾಗಿ ನಡೆಯಿತು. ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಈ ಅದ್ಧೂರಿ ಕಾರ್ಯಕ್ರಮಕ್ಕೆ ನಿರ್ಮಾಪಕರು ನೀರಿನಂತೆ ಹಣ ಖರ್ಚು ಮಾಡಿದ್ದರು. ಅಸಂಖ್ಯಾತ ತೆಲುಗು ಚಿತ್ರ ರಸಿಕರು ಈ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಬಂದಿದ್ದರು.

ಇನ್ನೇನು ''ವಾರಣಾಸಿ'' ಚಿತ್ರದ ಶೀರ್ಷಿಕೆಯನ್ನು ನೆರೆದ ಜನಸ್ತೋಮದ ಎದುರು ಅನಾವರಣ ಮಾಡಬೇಕು, ಅಷ್ಟರಲ್ಲಿ.. ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಆಗ ಕೋಪಗೊಂಡ ರಾಜಮೌಳಿ ಸುಮ್ಮನೆ ಇರಲಾರದೇ ದೇವರ ಬಗ್ಗೆ ಮಾತನಾಡಿದ್ದರು. ದೇವರ ಮೇಲೆ ನನಗೆ ನಂಬಿಕೆ ಇಲ್ಲ ಎಂದು ಹೇಳಿದ್ದರು.
ಇಷ್ಟೇ ಅಲ್ಲ ಮಾತು ಮುಂದುವರೆಸಿದ ರಾಜಮೌಳಿ, ನನ್ನ ತಂದೆ ವಿಜಯೇಂದ್ರ ಪ್ರಸಾದ್ ಟೆನ್ಶನ್ ಮಾಡಿಕೊಳ್ಳಬೇಡ, ಎಲ್ಲವನ್ನೂ ಹನುಮ ನೋಡಿಕೊಳ್ಳುತ್ತಾನೆ, ಹಿಂದೆ ನಿಂತು ನಡೆಸುತ್ತಾನೆ ಎಂದು ಹೇಳಿದ್ದರು. ಆದರೆ, ತಾಂತ್ರಿಕ ದೋಷದಿಂದ ಕಾರ್ಯಕ್ರಮ ನಿಂತು ಹೋಯ್ತು. ಈ ರೀತಿಯಾ ಅವನು (ಹನುಮಂತ ) ನಡೆಸುವುದು ಎಂಬ ಕೋಪ ನನಗೆ ಬಂತು ಎಂದು ಹೇಳಿದ್ದರು.
ಇನ್ನು ನನ್ನ ಪತ್ನಿ ರಮಾಗೆ ಹನುಮಾನ್ ಎಂದರೆ ಬಹಳ ಇಷ್ಟ. ಅವಳು ಸ್ನೇಹಿತನಂತೆ ಹನುಮಂತನ ಜೊತೆ ಮಾತನಾಡುತ್ತಿರುತ್ತಾಳೆ ಎಂದು ಹೇಳಿದ್ದ ರಾಜಮೌಳಿ ಆದರೆ ಹೀಗೇಕೆ ಆಯಿತು ಎಂದು ನನಗೆ ಅವಳ ಮೇಲೆ ಕೂಡ ಕೋಪ ಬಂತು ಎಂದು ಹೇಳಿದ್ದರು.
ರಾಜಮೌಳಿಯ ಈ ಮಾತು ಹಲವರನ್ನು ಕೆರಳಿಸಿತ್ತು. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ರಾಜಮೌಳಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ''ವಾರಣಾಸಿ'' ಚಿತ್ರವನ್ನು ಬಹಿಷ್ಕರಿಸಬೇಕೆಂಬ ಕೂಗು ಕೂಡ ಕೇಳಿ ಬಂದಿತ್ತು.

ಈಗ ರಾಷ್ಟ್ರೀಯ ವಾನರ ಸೇನಾ ಸಂಘಟನೆ ರಾಜಮೌಳಿ ವಿರುದ್ದ ಕಿಡಿ ಕಾರಿದೆ. ಹನುಮಂತನ ಕುರಿತು ರಾಜಮೌಳಿ ನೀಡಿದ ಹೇಳಿಕೆಗಳು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಿವೆ ಎಂದು ಹೇಳಿರುವ ಸಂಘಟನೆ ರಾಜಮೌಳಿ ವಿರುದ್ದ ಹೈದರಾಬಾದ್ನ ಸರೂರ್ನಗರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದೆ.
ರಾಜಮೌಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ರಾಷ್ಟ್ರೀಯ ವಾನರ ಸೇನಾ ಸಂಘಟನೆ, ಭವಿಷ್ಯದಲ್ಲಿ ಯಾರೂ ಹಿಂದೂ ದೇವರುಗಳ ಬಗ್ಗೆ ಅಸಭ್ಯ ಹೇಳಿಕೆಗಳನ್ನು ನೀಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಚಿತ್ರರಂಗದಲ್ಲಿ ಹಿಂದೂ ದೇವರುಗಳನ್ನು ಅಗೌರವಿಸುವ ಪ್ರವೃತ್ತಿ ಈಗೀಗ ತುಂಬಾ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಪೊಲೀಸರು ಸದ್ಯ ದೂರು ದಾಖಲಿಸಿಕೊಂಡಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾದ ಹಿನ್ನೆಲೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆ, ರಾಜಮೌಳಿ ಬಹಿರಂಗ ಕ್ಷಮೆ ಕೇಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಇನ್ನುಳಿದಂತೆ ಆರ್ಆರ್ಆರ್ ಚಿತ್ರದ ಪ್ರಚಾರದ ಸಮಯದಲ್ಲಿ ಕೂಡ ದೇವರ ಕುರಿತು ಮಾತನಾಡಿದ್ದ ರಾಜಮೌಳಿ, "ನಾನು ದೇವರು ಅಥವಾ ಧರ್ಮವನ್ನು ಯಾವ ರೀತಿ ಬಿಂಬಿಸಲಾಗಿದೆಯೋ ಅದನ್ನು ನಂಬುವುದಿಲ್ಲ. ದೇವರನ್ನು ಒಪ್ಪುತ್ತೀರಾ ಅಂದ್ರೆ ಗೊತ್ತಿಲ್ಲ. ನಮ್ಮನ್ನೆಲ್ಲಾ ಮೀರಿದ ಶಕ್ತಿವೊಂದಿದೆ, ಅದೇ ದೇವರು ಎಂದು ತಿಳಿದವರು ಹೇಳ್ತಾರೆ. ಆ ಬಗ್ಗೆ ನನಗೆ ಗೊತ್ತಿಲ್ಲ" ಎಂದು ಹೇಳಿದ್ದರು.


Click it and Unblock the Notifications











