ಜ್ಯೂ.ಎನ್.ಟಿ.ಆರ್ ಜೊತೆ ಪ್ರಶಾಂತ್ ನೀಲ್ ಮಾಡಬೇಕಿದ್ದ ಚಿತ್ರದ ಕಥೆ ಏನಾಯ್ತು ?
ಮಾರುಕಟ್ಟೆಯ ವ್ಯಾಪ್ತಿಯನ್ನು ಮೀರಿ ಹಣ ಮತ್ತು ವರ್ಷಗಳಿಕೆ ಲೆಕ್ಕ ಇಡದೇ ಚಿತ್ರ ಮಾಡಿ ಗೆದ್ದವರು ಪ್ರಶಾಂತ್ ನೀಲ್. ಉಗ್ರಂ ಎಂಬ ಒಂದೇ ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ಸೌಂಡ್ ಮಾಡಿದ ಪ್ರಶಾಂತ್ ನೀಲ್ ಕೆ.ಜಿ.ಎಫ್ ಚಿತ್ರದ ಮೂಲಕ ಭಾರತದ ಸ್ಟಾರ್ ಡೈರೆಕ್ಟರ್ ಲಿಸ್ಟ್ಗೆ ಸೇರಿದರು.
ಇವರ ಪ್ರಭೆ ಹೇಗಿದೆ ಅಂದರೆ ಸೌತ್ ಇಂಡಿಯಾದಲ್ಲಿ ರಾಜಮೌಳಿ ಅವರನ್ನು ಹೊರತು ಪಡಿಸಿದರೆ ಯಾರಾದರೂ ಶ್ರೇಷ್ಠ ನಿರ್ದೇಶಕ ಇದ್ದರೆ ಅದು ಪ್ರಶಾಂತ್ ನೀಲ್ ಮಾತ್ರ ಅನ್ನುವ ಮಾತುಗಳು ಕೇಳಿ ಬರ್ತಿವೆ. ಇದಕ್ಕೆ ಪೂರಕವಾಗಿ ಕನ್ನಡ ಚಿತ್ರರಂಗದಿಂದ ಕಣ್ಮರೆಯಾಗಿರುವ ಪ್ರಶಾಂತ್ ನೀಲ್ ತೆಲುಗು ಚಿತ್ರರಂಗದಲ್ಲಿಯೇ ಬಿಡಾರ ಹೂಡಿದ್ದಾರೆ. ಅಲ್ಲಿನ ಸ್ಟಾರ್ಗಳಿಗೆ ಚಿತ್ರವನ್ನು ಮಾಡುತ್ತಿದ್ದಾರೆ.

ಆ ಪೈಕಿ ಜ್ಯೂನಿಯರ್ ಎನ್.ಟಿ.ಆರ್ ಚಿತ್ರ ಕೂಡ ಒಂದು. ಆದರೆ ಈ ಚಿತ್ರ ಘೋಷಣೆಯಷ್ಟೇ ಆಗಿದೆ. ನಾಲ್ಕು ವರ್ಷವಾದರೂ ಕೂಡ ಚಿತ್ರದ ಚಿತ್ರೀಕರಣ ಶುರುವಾಗಿಲ್ಲ. ಸಹಜವಾಗಿ ಇದರಿಂದ ಜ್ಯೂ.ಎನ್.ಟಿ.ಆರ್ ಅಭಿಮಾನಿಗಳು ಬೇಸರಗೊಂಡಿದ್ದು ಇದೆ. ಕಾಲ ಕಾಲಕ್ಕೆ ತಮ್ಮ ಅಸಮಾಧಾನ ಹೊರ ಹಾಕಿದ್ದು ಇದೆ. ಆದರೆ ಈಗ ಜ್ಯೂ.ಎನ್.ಟಿ.ಆರ್ ಅಭಿಮಾನಿಗಳಿಗೆ ಪ್ರಶಾಂತ್ ನೀಲ್ ಖುಷಿಯ ಸಮಾಚಾರ ಕೊಡಲು ಸಿದ್ಧರಾಗಿದ್ಧಾರೆ. ಹಾಗೂ ಹೀಗೂ ದೊಡ್ಡ ಮನಸು ಮಾಡಿ ಜ್ಯೂ.ಎನ್.ಟಿ.ಆರ್ ಜೊತೆಗಿನ ತಮ್ಮ ಚಿತ್ರದ ಚಿತ್ರೀಕರಣವನ್ನು ಶುರು ಮಾಡುತ್ತಿದ್ದಾರೆ. ಹೀಗೊಂದು ಸುದ್ದಿ ಸದ್ಯ ಹೈದರಾಬಾದ್ನಲ್ಲಿ ಕೇಳಿ ಬರುತ್ತಿದೆ.
ಆ ಪ್ರಕಾರ ಮುಂದಿನ ವಾರದಿಂದ ಅಂದರೆ ಫೆಬ್ರವರಿ 17ರಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ವಿಕಾರಾಬಾದ್ ಕಾಡಿನಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದ್ದು ಸದ್ಯ ಜ್ಯೂ.ಎನ್.ಟಿ.ಆರ್ ಅನುಪಸ್ಥಿತಿಯಲ್ಲಿ ಚಿತ್ರದ ಚಿತ್ರೀಕರಣವನ್ನು ಪ್ರಶಾಂತ್ ನೀಲ್ ಶುರು ಮಾಡಲಿದ್ದಾರೆ. ಹೃತಿಕ್ ರೋಷನ್ ಅವರ ಜೊತೆ ಸದ್ಯ ವಾರ್ 2 ಚಿತ್ರದ ಚಿತ್ರೀಕರಣದಲ್ಲಿರುವ ಜ್ಯೂ.ಎನ್.ಟಿ.ಆರ್ ವಾರದ ನಂತರ ಬಂದು ಪ್ರಶಾಂತ್ ನೀಲ್ ಮತ್ತು ತಂಡವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ.
ಇನ್ನು ಪ್ರಶಾಂತ್ ನೀಲ್ ಈ ಕಡೆ ಜ್ಯೂ.ಎನ್.ಟಿ.ಆರ್ ಚಿತ್ರಕ್ಕೆ ಚಾಲನೆ ನೀಡಲು ಮುಂದಾದ ಬೆನ್ನಲ್ಲೇ ಸಲಾರ್ 2 ಚಿತ್ರದ ಕಥೆ ಏನಾಯ್ತು ಎನ್ನುವ ಪ್ರಶ್ನೆಯನ್ನು ಸದ್ಯ ಪ್ರಶಾಂತ್ ನೀಲ್ಗೆ ಅನೇಕರು ಕೇಳುತ್ತಿದ್ದಾರೆ. ಯಾಕೆಂದರೆ ಈ ಹಿಂದೆ ಖುದ್ದು ಪ್ರಶಾಂತ್ ನೀಲ್ ಸಲಾರ್ ಮೊದಲ ಭಾಗ ನನಗೆ ಖುಷಿ ನೀಡಿಲ್ಲ ಆದರೆ ಎರಡನೇ ಭಾಗ ನನ್ನ ವೃತ್ತಿ ಬದುಕಿನ ಅತ್ಯುತ್ತಮ ಚಿತ್ರವಾಗಿರಲಿದೆ ಎಂದು ಹೇಳಿದ್ದರು. ಆದರೆ ಈಗ ಜ್ಯೂ.ಎನ್.ಟಿ.ಆರ್ ಚಿತ್ರವನ್ನು ಶುರು ಮಾಡಲು ಹೊರಟಿದ್ದಾರೆ. ಹೀಗಾಗಿ ಒಂದು ಕಡೆ ಪ್ರಭಾಸ್ ಮತ್ತೊಂದು ಕಡೆ ಜ್ಯೂ.ಎನ್.ಟಿ.ಆರ್ ನಡುವೆ ಸಿಲುಕಿಕೊಂಡು ಪ್ರಶಾಂತ್ ನೀಲ್ ಒದ್ದಾಡುತ್ತಿದ್ದಾರೆ ಎನ್ನುವ ಮಾತು ಕೂಡ ಸದ್ಯ ಕೇಳಿ ಬರುತ್ತಿದೆ.
ಇನ್ನುಳಿದಂತೆ ಪ್ರಶಾಂತ್ ನೀಲ್ ಮತ್ತು ಜ್ಯೂ.ಎನ್.ಟಿ.ಆರ್ ಸಂಗಮಕ್ಕೆ ಸಾಕ್ಷಿಯಾಗಲಿರುವ ಚಿತ್ರದಲ್ಲಿ ಕೂಡ ರುಕ್ಮಿಣಿ ವಸಂತ್ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚುವುದು ನೂರಕ್ಕೆ ನೂರು ಸತ್ಯ ಎನ್ನುವ ಸುದ್ದಿ ಕೂಡ ಇದೆ. ಇನ್ನು ಪ್ರಶಾಂತ್ ನೀಲ್ ಸಿನಿಮಾ ಅಂದರೆ ಆ ಸಿನಿಮಾ ಎರಡು ಭಾಗಗಳಲ್ಲಿ ಬರಲೇಬೇಕು ಎಂಬ ಅಲಿಖಿತ ನಿಯಮ ಇದೆ. ಈ ಚಿತ್ರಕ್ಕೂ ಕೂಡ ಈ ನಿಯಮ ಅನ್ವಯವಾಗುವ ಸಾಧ್ಯತೆ ಇದೆ. ಜ್ಯೂ.ಎನ್.ಟಿ.ಆರ್ ಅಭಿನಯದ ಈ ಚಿತ್ರ ಕೂಡ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಂಡವಾಳ ಹೂಡಲಿದೆ. ಮುಂದಿನ ವರ್ಷ ಸಂಕ್ರಾಂತಿಗೆ ಚಿತ್ರ ತೆರೆಗೆ ಬರಲಿದೆ ಎನ್ನುವ ಸುದ್ದಿ ಕೂಡ ಹಬ್ಬಿದೆ.


Click it and Unblock the Notifications











