ತೆಲುಗು ಚಿತ್ರರಂಗದ 'ನಾಯಕ' ಚಿರಂಜೀವಿ: ಮುಖಭಂಗವಾದರೂ ಒಪ್ಪಿಕೊಳ್ಳಲು ಸಿದ್ಧವಿಲ್ಲ ವಿರೋಧಿಗಳು
ಕನ್ನಡ ಸಿನಿಮಾರಂಗದಲ್ಲಿ ಡಾ ರಾಜ್ಕುಮಾರ್ ಅವರು ಜೀವಂತ ಇದ್ದಷ್ಟು ಕಾಲ ಅವರೇ ಚಿತ್ರರಂಗದ ನಂಬರ್ ಒನ್ ನಟ ಮತ್ತು ಸಿನೆಮಾರಂಗದ ಹಿರಿಯಣ್ಣ ಕೂಡ ಆಗಿದ್ದರು. ಅವರ ಮಾತೇ ಅಂತಿಮವಾಗಿತ್ತು. ಮುಂದೆ ರೆಬೆಲ್ ಸ್ಟಾರ್ ಅಂಬರೀಶ್ ಆ ಸ್ಥಾನದಲ್ಲಿ ಬಂದು ಸಿನಿಮಾರಂಗದ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು ಮತ್ತು ಅವರ ಮಾತು ಕೂಡ ಅಷ್ಟೇ ಗಟ್ಟಿಯಾಗಿ ನಡೆಯುತ್ತಿತ್ತು. ಈಗ ಕನ್ನಡ ಸಿನಿಮಾರಂಗ ಒಂದು ರೀತಿಯಲ್ಲಿ ಕವಲುದಾರಿ ಹಿಡಿದಿದೆ ಆದರೂ ಕೂಡ ಇಲ್ಲಿ ಪ್ರಸ್ತುತ ಹಿರಿಯಣ್ಣ ಶಿವಣ್ಣ ಅಂತಲೇ ಹೇಳಬೇಕು. ಕನ್ನಡ ಸಿನಿಮಾ ರಂಗದ ಯಾವುದೇ ಆಗುಹೋಗುಗಳ ಮೇಲೆ ಕೂಡ ಈಗ ಶಿವಣ್ಣ ಅವರ ಮಾತು ಅಂತಿಮವಾಗಿದೆ.
ಇದು ಕನ್ನಡ ಸಿನಿಮಾರಂಗದ ಕಥೆಯಾದರೆ ಪಕ್ಕದ ಟಾಲಿವುಡ್ನಲ್ಲಿ ಪರಿಸ್ಥಿತಿ ಇದಕ್ಕೆ ಭಿನ್ನವಾಗಿದೆ. ದಿವಂಗತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಜನಪ್ರಿಯ ನಾಯಕ ನಟ ಎನ್.ಟಿ.ರಾಮರಾವ್ ಅವರು ರಾಜಕೀಯ ಪ್ರಸ್ಥಾನಕ್ಕೆ ಮೊದಲು ಸಿನಿಮಾರಂಗದ ಹಿರಿಯಣ್ಣ ಆಗಿದ್ದರು. ಆನಂತರ ಒಂದಷ್ಟು ಸಮಯ ಸೂಪರ್ ಸ್ಟಾರ್ ಕೃಷ್ಣ ಅವರು ಚಿತ್ರರಂಗವನ್ನು ಮುನ್ನಡೆಸಿದರು ಅಂತಿಮವಾಗಿ ಸುದೀರ್ಘ ಸುಮಾರು 25 ವರ್ಷ ತೆಲುಗು ಸಿನಿಮಾ ರಂಗದ ಎಲ್ಲವೂ ತಾನಾಗೆ ಚಿತ್ರರಂಗದ ಹಿರಿಯಣ್ಣನಾಗಿ ಸಿನಿಮಾರಂಗವನ್ನು ಮುನ್ನಡೆಸಿದವರು ಹಿರಿಯ ನಿರ್ಮಾಪಕ- ನಿರ್ದೇಶಕ ನಟ ದಾಸರಿ ನಾರಾಯಣರಾವ್.
ಗೆದ್ದು ಬಂದ ಮೆಗಾಸ್ಟಾರ್: ಜಗನ್ ಮನಸ್ಸು ಬದಲಾಯಿಸಿದ ಚಿರಂಜೀವಿ
ದಾಸರಿ ನಾರಾಯಣರಾವ್ ನಿಧನವಾಗಿ ಸುಮಾರು ಐದು ವರ್ಷ ಆಗುತ್ತಿದೆ. ಆದರೆ ಈ ಸಮಯದಲ್ಲಿ ಹುಟ್ಟಿಕೊಂಡಿರುವ ಪ್ರಶ್ನೆ ಸಿನೆಮಾರಂಗದ ಹಿರಿಯಣ್ಣ ಯಾರು? ಇದೇ ಪ್ರಶ್ನೆ ಪರೋಕ್ಷವಾಗಿ ಚಿರಂಜೀವಿ ಮತ್ತು ಹಿರಿಯ ನಟ ಮೋಹನ್ ಬಾಬು ಮತ್ತೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿರುವುದು. ಹಾಗೆ ನೋಡಿದರೆ ಮೋಹನ್ ಬಾಬು ತುಂಬಾ ಮುಂಗೋಪಿ. ಇತರ ಕಲಾವಿದರಿಗೆ ಕನಿಷ್ಠ ಗೌರವವನ್ನೂ ಕೊಡುವುದಿಲ್ಲ. ಎಲ್ಲರ ಬಗ್ಗೆ ಕೇವಲವಾಗಿ ಮಾತನಾಡುವ ವ್ಯಕ್ತಿ ಎಂಬ ಆರೋಪ ಮೊದಲಿನಿಂದಲೂ ಅವರ ಮೇಲೆ ಕೇಳಿ ಬರುತ್ತಲೇ ಇದೆ.
ಆದರೆ ಚಿರಂಜೀವಿ ಇದಕ್ಕೆ ತದ್ವಿರುದ್ಧ, ಎಲ್ಲರನ್ನೂ ಗೌರವದಿಂದ ನೋಡುವ ಮತ್ತು ಎಲ್ಲರಿಂದಲೂ ಗೌರವವನ್ನು ಪಡೆದಿರುವ ವ್ಯಕ್ತಿ. ಎನ್.ಟಿ.ರಾಮರಾವ್ ನಂತರ ತೆಲುಗು ಸಿನಿಮಾ ರಂಗದಲ್ಲಿ ನಂಬರ್ 1 ನಟನಾಗಿ ಇಂದಿಗೂ ಕೂಡ ಉಳಿದಿರುವ ಚಿರಂಜೀವಿ, ಮಧ್ಯೆ ಒಂದಷ್ಟು ಕಾಲ ರಾಜಕೀಯಕ್ಕೆ ಹೋಗಿ ಕೈಸುಟ್ಟುಕೊಂಡು ಬಿಟ್ಟರೆ ಉಳಿದಂತೆ ಯಾವುದೇ ತರದ ವಿವಾದಗಳಿಗೆ ಸಿಲುಕದ ವ್ಯಕ್ತಿತ್ವ ಚಿರಂಜೀವಿ ಅವರದು.

'ಮಾ' ಚುನಾವಣೆ ಪರೋಕ್ಷವಾಗಿ ಚಿರಂಜೀವಿಗೆ ಸೋಲು
ಚಿರಂಜೀವಿ ಅವರನ್ನೇ ಸಿನಿಮಾರಂಗ ಬಹುತೇಕ ಹಿರಿಯಣ್ಣನ ಸ್ಥಾನದಲ್ಲಿಟ್ಟು ನೋಡುತ್ತಿದೆ. ಆದರೆ ಇದು ಮೋಹನ್ ಬಾಬು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಸಮಯಕ್ಕೆ ಸರಿಯಾಗಿ ಇತ್ತೀಚೆಗೆ ಅಂದರೆ ಸುಮಾರು ಮೂರು ತಿಂಗಳ ಹಿಂದೆ ತೆಲುಗು ಚಲನಚಿತ್ರ ಕಲಾವಿದರ ಸಂಘ 'ಮಾ'(MAA) ಚುನಾವಣೆ ನಡೆಯಿತು. ಚಿರಂಜೀವಿ ಅವರು ಪ್ರಕಾಶ್ ರೈ ಅವರಿಗೆ ಬೆಂಬಲವನ್ನು ಕೊಟ್ಟರು. ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಮೋಹನ್ ಬಾಬು ಅಧ್ಯಕ್ಷ ಸ್ಥಾನಕ್ಕೆ ತನ್ನ ಮಗ ಮಂಚು ವಿಷ್ಣು ಅವರನ್ನು ನಿಲ್ಲಿಸಿ ಪರೋಕ್ಷವಾಗಿ ಚಿರಂಜೀವಿ ವಿರುದ್ಧ ಸಮರ ಸಾರಿದರು. ಕಮ್ಮ ಜನಾಂಗವೇ ಹೆಚ್ಚಿಗೆ ಇರುವ ತೆಲುಗು ಸಿನಿಮಾರಂಗದಲ್ಲಿ ಅದೇ ಸಮುದಾಯದ ಬಹುತೇಕ ಮತಗಳನ್ನು ಕೂಡ ತನ್ನ ಮಗನ ಕಡೆಗೆ ತಂದುಕೊಡುವುದರಲ್ಲಿ ಕೂಡ ಅವರು ಯಶಸ್ವಿಯಾದರು. ಇಲ್ಲಿ ಮಂಚು ವಿಷ್ಣು ಗೆಲುವು ಪರೋಕ್ಷವಾಗಿ ಮೋಹನ್ ಬಾಬು, ಚಿರಂಜೀವಿ ವಿರುದ್ಧ ಗೆದ್ದ ಗೆಲುವು ಅಂತಲೇ ವಿಶ್ಲೇಷಣೆ ಮಾಡಲಾಗುತ್ತದೆ.

ಆಂಧ್ರ ಸರ್ಕಾರ ವರ್ಸಸ್ ತೆಲುಗು ಸಿನಿಮಾ ರಂಗ
ಇದೇ ಸಮಯದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಆಂಧ್ರ ಸರ್ಕಾರ ವರ್ಸಸ್ ತೆಲುಗು ಸಿನಿಮಾ ರಂಗ ವಿಷಯ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ತಾರಕಕ್ಕೇರಿದೆ. ಟಿಕೆಟ್ ದರ ನಿಗದಿಯ ವಿಷಯದಲ್ಲಿ ಉಂಟಾದ ಸಂಘರ್ಷದಿಂದ ಹೈರಾಣಾಗಿದ್ದ ಸಿನಿಮಾರಂಗಕ್ಕೆ ಮತ್ತೆ ಹಿರಿಯಣ್ಣನಾಗಿ ನಿಂತಿರುವುದು ಚಿರಂಜೀವಿ. ಇತ್ತೀಚೆಗಷ್ಟೇ ಚಿರಂಜೀವಿ ಅವರ ನೇತೃತ್ವದಲ್ಲಿ ಮಹೇಶ್ ಬಾಬು-ಪ್ರಭಾಸ್-ಎಸ್ಎಸ್ ರಾಜಮೌಳಿ ನೇತೃತ್ವದ ಒಂದು ತಂಡವು ಮುಖ್ಯಮಂತ್ರಿ ಜಗನ್ ಅವರನ್ನು ಭೇಟಿ ಮಾಡಿ ಬಂದ ಮೇಲೆ ಬಹುತೇಕ ಸಿನಿಮಾರಂಗದ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆಯುವ ವಿಶ್ವಾಸವನ್ನು ಖುದ್ದು ತೆಲುಗು ಸಿನಿಮಾ ರಂಗದ ಹಿರಿಯರು ವ್ಯಕ್ತಪಡಿಸಿದ್ದಾರೆ.

ಅವಮಾನದಿಂದ ಪಾರಾಗಲು ಸಿಎಂ ಅನ್ನು ಭೇಟಿಯಾದ ಬಂದ ಅಪ್ಪ-ಮಗ
ಇತ್ತೀಚೆಗೆ ಚಿರಂಜೀವಿ ನೇತೃತ್ವದಲ್ಲಿ ಸಿನಿಮಾ ರಂಗದ ಹಿರಿಯ ನಟರ ತಂಡ (ಬಾಲಕೃಷ್ಣ ಅವರನ್ನು ಹೊರತುಪಡಿಸಿ) ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿ ಬಂದಮೇಲೆ ಬಹುತೇಕ ಸಿನಿಮಾರಂಗದ ಹಿರಿಯ ನಿರ್ಮಾಪಕರು ನಿರ್ದೇಶಕರು ನಟರು ಒಕ್ಕೊರಲಿನಿಂದ ಹೇಳುತ್ತಿರುವುದು ಚಿರಂಜೀವಿ ಅವರೇ ಸಿನಿಮಾರಂಗದ ಹಿರಿಯಣ್ಣ ಅಂತ. ಸಮಸ್ಯೆ ಬಗೆಹರಿಸಲು ಚಿರಂಜೀವಿ ಅವರು ತೆಗೆದುಕೊಳ್ಳುತ್ತಿರುವ ಕಾಳಜಿಯನ್ನು ಟಾಲಿವುಡ್ ಅಪಾರವಾಗಿ ಕೊಂಡಾಡುತ್ತಿದೆ. ಅಲ್ಲಿಗೆ ಮೋಹನ್ ಬಾಬು ಅವರ ಕೈಯಲ್ಲಿ ಹಿರಿಯಣ್ಣನ ಪಾತ್ರವಿದೆ ಅಂತ ಭಾವಿಸಿದ್ದ ಕೆಲವರಿಗೆ ಅಸಮಾಧಾನದ ಜೊತೆಗೆ ಪರೋಕ್ಷವಾಗಿ ಅವಮಾನವು ಕೂಡ ಆಗಿದೆ. ಅಲ್ಲದೆ ಸಿನಿಮಾರಂಗದ ಅನೇಕ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ನಡೆಯುತ್ತಿರುವ ಈ ಎಲ್ಲಾ ಪ್ರಯತ್ನಗಳಲ್ಲಿ ಮೋಹನ್ ಬಾಬು ಅವರನ್ನು ಸಂಪೂರ್ಣವಾಗಿ ಸಿನಿಮಾರಂಗ ದೂರವಿಟ್ಟ ವ್ಯವಹರಿಸುತ್ತಿದೆ.
ಮಗ 'ಮಾ' ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿದ್ದರು ಕೂಡ ಅಪ್ಪ-ಮಗ ಇತ್ತೀಚಿನ ದಿನಗಳಲ್ಲಿ ತೀರಾ ನಿರ್ಲಕ್ಷಕ್ಕೆ ಒಳಗಾಗುತ್ತಿದ್ದಾರೆ. ಆಂಧ್ರ ಮುಖ್ಯಮಂತ್ರಿಗೆ ಹತ್ತಿರದ ಬಂಧು ಕೂಡ ಆಗಿರುವ ತನ್ನ ಮಗ ಅಧ್ಯಕ್ಷರಾಗಿದ್ದರು ಕೂಡ ಚಿರಂಜೀವಿ ನೇತೃತ್ವದ ಸಮಿತಿಯ ಮುಂದೆ ತನ್ನ ಮಗನ ಪಾತ್ರ ಕಿರಿದಾಗುತ್ತಿದೆ ಎಂದು ಭಾವಿಸಿದ ಮೋಹನಬಾಬು ಮಗನ ಜೊತೆಯಲ್ಲಿ ನೇರವಾಗಿ ವಿಜಯವಾಡ ಗೆ ಹೋಗಿ ಆಂಧ್ರ ಸಿನಿಮಾಟೋಗ್ರಫಿ ಮಂತ್ರಿಗಳಾದ ನಾನಿ ಅವರನ್ನು ಭೇಟಿ ಮಾಡಿ ತಾವು ವಿವಾದವನ್ನು ಪರಿಷ್ಕರಿಸುವುದರಲ್ಲಿ ಸಾಕಷ್ಟು ಪ್ರಯತ್ನಿಸುತ್ತಿರುವ ಸಂದೇಶವನ್ನು ಹರಿದು ಬಿಡಲು ಯತ್ನಿಸಿದರು. ಆದರೆ ಇದರ ಬಗ್ಗೆ ಸ್ಪಷ್ಟೀಕರಣ ಕೊಟ್ಟ ಮಂತ್ರಿಗಳು 'ಇದು ಕೇವಲ ವೈಯಕ್ತಿಕ ಭೇಟಿಯಾಗಿತ್ತು ಮತ್ತು ಅವರು ನನ್ನನ್ನು ಭೇಟಿಯಾಗಲು ಬಯಸಿದ್ದರಿಂದ ಅಪಾಯಿಂಟ್ಮೆಂಟ್ ಕೊಟ್ಟಿದ್ದೆ ಅಂತ ಹೇಳುವ ಮೂಲಕ ಅಪ್ಪ-ಮಗ ಏನೋ ಸಾಧಿಸಿ ಬಂದಿವಿ ಅಂತ ಫೋಸ್ ಕೊಡುವುದಕ್ಕೆ ಅವಕಾಶ ಕೂಡ ಇಲ್ಲದಂತೆ ಮಾಡಿಬಿಟ್ಟರು.

ಮೋಹನ್ ಬಾಬು ಬೆಂಬಲಿಗರೇ ಒಪ್ಪುತ್ತಿಲ್ಲ
ಮೋಹನ್ ಬಾಬು ಎಲ್ಲವೂ ತಾನಾಗಿಯೇ ಚಿತ್ರರಂಗವನ್ನು ಮುನ್ನಡೆಸುವ ನಾಯಕನಾಗಬೇಕೆಂದು ಬಯಸುತ್ತಾರೆ. ಆದರೆ ಅವರಿಗೆ MAA ಚುನಾವಣೆಯಲ್ಲಿ ಸಮರ್ಥನೆ ಕೊಟ್ಟಂತಹವರು ಕೂಡ ಈ ವಿಚಾರದಲ್ಲಿ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಬಹುತೇಕ ಹಿರಿಯ ನಿರ್ಮಾಪಕರು ನಿರ್ದೇಶಕರು ಮತ್ತು ಸ್ಟಾರ್ ನಟರು ಚಿರಂಜೀವಿ ಅವರನ್ನೇ ನಾಯಕನಾಗಿ ಒಪ್ಪಿಕೊಂಡಿದ್ದಾರೆ. ಈ ಬೆಳವಣಿಗೆಗಳನ್ನು ಮೋಹನ್ ಬಾಬು ಅವರ ಜೊತೆಗೆ ಅವರ ಬೆಂಬಲಿಗರಿಗೂ ಕೂಡ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪೂರಕವಾಗಿ ಎಂಬಂತೆ ಚಿರಂಜೀವಿ ನೇತೃತ್ವದ ತಂಡ ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿ ಬಂದಮೇಲೆ ಚಿರಂಜೀವಿ ಬಗ್ಗೆ ಮೂಡಿರುವ ಅಭಿಪ್ರಾಯದಿಂದ ಕಂಗಾಲಾಗಿರುವ ಈ ತಂಡ ಮೋಹನ್ ಬಾಬು ಪರವಾಗಿ ಬ್ಯಾಟ್ ಬೀಸಲು ಮುಂದಾಗಿದೆ. ಮೋಹನ್ ಬಾಬು ಅವರ ಮುಂಬರುವ 'ಸನ್ ಆಫ್ ಇಂಡಿಯಾ' ಚಿತ್ರದ ಪ್ರೀ ರಿಲೀಸ್ ಸಮಾರಂಭದಲ್ಲಿ ಮೋಹನ್ ಬಾಬು ಅವರ ಹಿರಿಮೆಯ ಬಗ್ಗೆ ಮಾತನಾಡುತ್ತಾ ಮೋಹನ್ ಬಾಬು ತಂಡದ ಪ್ರಮುಖ ಸದಸ್ಯ ಮತ್ತು ಮಾಜಿ MAA ಅಧ್ಯಕ್ಷ ನರೇಶ್ ಕುತೂಹಲಕಾರಿ ಹೇಳಿಕೆಗಳನ್ನು ನೀಡಿದ್ದಾರೆ.

ಹೊಗಳಿಕೆಯಲ್ಲಿ ತೊಡಗಿರುವ ನರೇಶ್
"ತೆಲುಗಿನಲ್ಲಿ ದೊಡ್ಡ ಹೀರೋಗಳಿದ್ದಾರೆ. ದೊಡ್ಡ ಖಳನಾಯಕರಿದ್ದಾರೆ. ಉತ್ತಮ ಪಾತ್ರ ಕಲಾವಿದರಿದ್ದಾರೆ. ಆದರೆ ಇದೆಲ್ಲದರ ಸಂಪೂರ್ಣತೆ ಮೋಹನ್ ಬಾಬು ಅವರಲ್ಲಿದೆ, ಅವರು ನಮ್ಮ ತೆಲುಗು ಸಿನಿಮಾ ರಂಗದ ಅಣ್ಣ. ಇದು ಇತಿಹಾಸ ಇರುವವರೆಗೂ ಬದಲಾಗುವುದಿಲ್ಲ. ಅವರ ಲಕ್ಷ್ಮಿ ಪ್ರಸನ್ನ ಕಚೇರಿಗೆ ಹೋದರೆ ಅವರು ಸಿಂಹಾಸನದ ಮೇಲೆ ರಾಜನಂತೆ ಕುಳಿತಿರುತ್ತಾರೆ. ಕಛೇರಿಯಲ್ಲಿ ಸದಾ ಒಂದು ಕಥೆ ಸಿದ್ಧವಾಗುತ್ತಿರುತ್ತದೆ. ವಿಷ್ಣು ಬಲ ಭುಜ ಇದ್ದಂತೆ. ಹತ್ತು ಮಂದಿಗೆ ಅನ್ನ ಕೊಡುತ್ತಾರೆ. ಮೋಹನ್ ಬಾಬು ಸಿನಿಮಾಗಾಗಿ ಬದುಕುವವರಲ್ಲ. ಸಿನಿಮಾಗಾಗಿಯೇ ಹುಟ್ಟಿದವರು. ಈ ವಿಷಯವನ್ನು ಹೆಮ್ಮೆಯಿಂದ ಹೇಳುವಾಗ, ರೈತ ಕುಟುಂಬದಲ್ಲಿ ಜನಿಸಿದ ಮೋಹನ್ ಬಾಬು ಶಿಕ್ಷಕರಾಗಿ ಬೆಳೆದು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಏಕೈಕ ನಟ. ಅಂತಹ ವ್ಯಕ್ತಿಯೊಂದಿಗೆ ನಮಗೆ ಸಂಬಂಧವಿದೆ ಎಂದು ಹೇಳಲು ಇದು ನಿಜವಾಗಿಯೂ ಹೆಮ್ಮೆಯ ಸಂಗತಿಯಾಗಿದೆ. ಮೋಹನ್ ಬಾಬು ಮಾತಿಗೆ ನಿಲ್ಲುವ ವ್ಯಕ್ತಿ. ವಿಷ್ಣು ಜೊತೆಗೆ ಮೋಹನ್ ಬಾಬು ಕುಟುಂಬ ಚಿತ್ರರಂಗಕ್ಕೆ ಅರ್ಪಿಸಿ ಕೊಂಡಿದೆ"ಎಂದು ಪ್ರಶಂಸೆಯ ಸುರಿಮಳೆಗೈದಿದ್ದಾರೆ ನರೇಶ್.

ತೆಲುಗು ಚಿತ್ರರಂಗ ಏನೆನ್ನುತ್ತದೆ?
ಅತ್ತ ಮೋಹನ್ ಬಾಬು ತಂಡ ಮೋಹನ್ ಬಾಬು ಅವರೇ ಸಿನಿಮಾರಂಗದ ಅಣ್ಣ ಅಂತ ಬ್ಯಾಂಡ್ ಹೊಡಿತಾ ಇದೆ, ಆದರೆ ಸಿನಿಮಾರಂಗ ಮಾತ್ರ ಚಿರಂಜೀವಿ ಅವರೇ ಟಾಲಿವುಡ್ ನ ಹಿರಿಯಣ್ಣ ಅಂತ ಹೇಳುತ್ತಿದೆ. 'ಚಿರಂಜೀವಿ ಒಂದು ಘನತೆ ಉಳ್ಳ ವ್ಯಕ್ತಿತ್ವ, ಅವರು ಎಲ್ಲರ ಜೊತೆಯಲ್ಲೂ ಕೂಡ ವಿಶ್ವಾಸದಿಂದ ಮಾತನಾಡುತ್ತಾರೆ. ಹಿರಿಯರು-ಕಿರಿಯರು ಇಬ್ಬರಿಗೂ ಕೂಡ ಸಮಾನವಾಗಿ ಗೌರವ ಕೊಡುತ್ತಾರೆ. ಹೀಗಾಗಿಯೇ ಎಲ್ಲರೂ ಕೂಡ ಚಿರಂಜೀವಿ ಅವರನ್ನು ಪ್ರೀತಿಸುವುದು ಮತ್ತು ಗೌರವಿಸುವುದು. ಅವರ ಮಾತನ್ನು ಕೇವಲ ಸಿನಿಮಾರಂಗ ಮಾತ್ರವಲ್ಲ ರಾಜಕಾರಣಿಗಳು ಕೂಡ ತೆಗೆದುಹಾಕುವುದಿಲ್ಲ. ಯಾರು ಏನೇ ಹೇಳಿಕೊಂಡರೂ ಕೂಡ ಇಂದು ಟಾಲಿವುಡ್ನ ನಾಯಕತ್ವ ಇರುವುದು ಚಿರಂಜೀವಿ ಅವರ ಕೈಯಲ್ಲಿ, ಅದನ್ನು ಅವರು ಬಯಸಿ ಪಡೆದಿದ್ದು ಅಲ್ಲ ಸಿನಿಮಾ ರಂಗವೇ ಅವರ ಕೈಗೆ ಕೊಟ್ಟಿರುವುದು ಇದನ್ನು ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ' ಎನ್ನುತ್ತಾರೆ ಬಹುತೇಕ ತೆಲುಗು ಸಿನಿಮಾ ರಂಗದ ಮಂದಿ.


Click it and Unblock the Notifications











