ಸ್ಟಾರ್ ನಿರ್ಮಾಪಕ ಹಾಗೂ ನಟನ ವಿರುದ್ಧ ವಂಚನೆ ಪ್ರಕರಣ ದಾಖಲು
ತೆಲುಗು ಚಿತ್ರರಂಗದ ಸ್ಟಾರ್ ನಿರ್ಮಾಪಕ ಬೆಲ್ಲಂಕೊಂಡ ಸುರೇಶ್ ಹಾಗೂ ಅವರ ಪುತ್ರ, ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ವಿರುದ್ಧ ಹಣ ವಂಚನೆ ದೂರು ದಾಖಲಾಗಿದ್ದು, ಎಫ್ಐಆರ್ ಸಹ ನಮೂದಾಗಿದೆ.
ಹೈದಬಾರಾದ್ ಪೊಲೀಸ್ ಠಾಣೆಯಲ್ಲಿ ಅಪ್ಪ ಮಗನ ವಿರುದ್ಧ ದೂರು ದಾಖಲಾಗಿದ್ದು, ಖಾಸಗಿ ಹಣಕಾಸು ಸಂಸ್ಥೆಯೊಂದಕ್ಕೆ 85 ಲಕ್ಷ ರುಪಾಯಿ ಹಣ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವಿ.ಎಲ್.ಶ್ರವಣ್ ಕುಮಾರ್ ಎಂಬುವರು ಈ ದೂರು ದಾಖಲಿಸಿದ್ದಾರೆ.
2018 ಬೆಲ್ಲಂಕೊಂಡ ಸುರೇಶ್ ಹಾಗೂ ಶ್ರೀನಿವಾಸ್ ಸಿನಿಮಾ ನಿರ್ಮಾಣ ಮಾಡಲೆಂದು ವಿ.ಎಲ್.ಶ್ರವಣ್ ಕುಮಾರ್ ಅವರಿಂದ ಕಂತುಗಳಲ್ಲಿ ಹಣ ಪಡೆದು ತಮ್ಮನ್ನು ಸಿನಿಮಾದ ಸಹ ನಿರ್ಮಾಪಕನಾಗಿ ಸೇರಿಸಿಕೊಳ್ಳುತ್ತೇವೆ ಎಂದಿದ್ದರು. ಆದರೆ ಸಹ ನಿರ್ಮಾಪಕನಾಗಿಯೂ ಸೇರಿಸಿಕೊಳ್ಳಲಿಲ್ಲ ಹಾಗೂ ತಮ್ಮ ಹಣವನ್ನೂ ವಾಪಸ್ ನೀಡಿಲ್ಲ ಎಂದು ಶ್ರವಣ್ ಕುಮಾರ್ ಆರೋಪಿಸಿದ್ದಾರೆ.

ಹೈದರಾಬಾದ್ನ ಸಿಸಿಎಸ್ ಪೊಲೀಸ್ ಠಾಣೆಯಲ್ಲಿ ಶ್ರವಣ್ ಕುಮಾರ್ ದೂರು ದಾಖಲಿಸಿದ್ದು, ಐಪಿಸಿ ಸೆಕ್ಷನ್ 406, 417, 420, 120 ಬಿ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಬೆಲ್ಲಂಕೊಂಡ ಸುರೇಶ್ ಹಾಗೂ ಸಾಯಿ ಶ್ರೀನಿವಾಸ್ ಅವರಿಗೆ ಈಗಾಗಲೇ ಸಮನ್ಸ್ ಜಾರಿ ಮಾಡಲಾಗಿದ್ದು ಶೀಘ್ರದಲ್ಲಿಯೇ ಅಪ್ಪ-ಮಗನ ವಿಚಾರಣೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಲ್ಲಂಕೊಂಡ ಸುರೇಶ್ ತೆಲುಗು ಚಿತ್ರರಂಗದ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರು. ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್, ರವಿತೇಜ, ಗೋಪಿಚಂದ್, ಜೂ ಎನ್ಟಿಆರ್ ಸೇರಿದಂತೆ ಹಲವು ಸ್ಟಾರ್ ನಟರ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.
2004 ರಲ್ಲಿ ನಟ ಬಾಲಕೃಷ್ಣ, ನಿರ್ಮಾಪಕ ಬೆಲ್ಲಂಕೊಂಡ ಸುರೇಶ್ ಹಾಗೂ ಸತ್ಯನಾರಾಯಣ ಚೌಧರಿ ಮೇಲೆ ಅವರ ಮನೆಯಲ್ಲಿಯೇ ಬಂದೂಕಿನಿಂದ ಗುಂಡು ಹಾರಿಸಿದ್ದರು. ಇಬ್ಬರೂ ಪ್ರಾಣಾಪಾಯದಿಂದ ಪಾರಾದರು. ಆ ಘಟನೆ ಬಹುದೊಡ್ಡ ವಿವಾದವಾಗಿತ್ತು.


Click it and Unblock the Notifications











