ಒಂದೇ ಕಥಾವಸ್ತುವಿದ್ದರೂ ಅಖಂಡಗೆ ಗೆಲುವು, ಆಚಾರ್ಯಗೆ ಸೋಲು, 5 ಕಾರಣಗಳು
ನಂದಮೂರಿ ಬಾಲಕೃಷ್ಣ ನಾಯಕನಟನಾಗಿ ಬೋಯಪಾಟಿ ಸೀನು ನಿರ್ದೇಶನದಲ್ಲಿ ತೆರೆಕಂಡು ಯಶಸ್ಸನ್ನು ಪಡೆದ ಚಿತ್ರ 'ಅಖಂಡ'. ಕಳೆದ ವರ್ಷ ಬಿಡುಗಡೆಯಾಗಿ ಬಾಕ್ಸಾಫೀಸ್ ನಲ್ಲಿ ಭರ್ಜರಿ ಹಣ ಗಳಿಕೆ ಮಾಡಿತು. 'ಅಖಂಡ' ಮೂಲಭೂತವಾಗಿ ಹಿಂದೂ ಧಾರ್ಮಿಕ ಸಂಸ್ಕಾರ, ದೇವಾಲಯಗಳ ಸಂರಕ್ಷಣೆ, ಸಂಸ್ಕೃತಿ, ಸಂಪ್ರದಾಯಗಳ ವಿಚಾರವನ್ನು ಹೇಳುವ ಕಥೆ. ಇದರಲ್ಲಿ 'ಅಖಂಡ'ನಾಗಿ ಅಘೋರ ಪಾತ್ರದಲ್ಲಿ ಬಾಲಕೃಷ್ಣ ಅದ್ಭುತವಾಗಿ ನಟಿಸಿದ್ದಾರೆ.
ಕಳೆದ ಕೆಲವು ವಾರಗಳ ಹಿಂದೆ ಚಿರಂಜೀವಿ ಮತ್ತು ರಾಮ್ ಚರಣ್ ತೇಜ ಅಭಿನಯದಲ್ಲಿ ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬಂದ 'ಆಚಾರ್ಯ' ಚಿತ್ರ ಬಿಡುಗಡೆಯಾಗಿದೆ. 'ಅಖಂಡ' ಚಿತ್ರದಂತೆ 'ಆಚಾರ್ಯ' ಚಿತ್ರದ ಮೂಲ ವಿಚಾರ ಕೂಡ ದೇವಾಲಯಗಳ ಆಸ್ತಿಪಾಸ್ತಿಗಳ ಸಂರಕ್ಷಣೆ, ಧರ್ಮದ ಸಂರಕ್ಷಣೆ.
'ಅಖಂಡ' ಭರ್ಜರಿ ಯಶಸ್ಸನ್ನು ಕಂಡರೆ, 'ಆಚಾರ್ಯ' ಹೀನಾಯ ಸೋಲನ್ನು ಕಂಡಿದೆ. ಹಾಗಾದರೆ 'ಅಖಂಡ' ಗೆಲುವಿಗೆ ಕಾರಣವಾದ ಅಂಶಗಳು ಮತ್ತು 'ಆಚಾರ್ಯ' ಸೋಲಿಗೆ ಪ್ರಮುಖವಾಗಿ ಕಾರಣವಾದ ಆ ಐದು ಅಂಶಗಳು ಯಾವುದು ಎಂಬ ವಿಶ್ಲೇಷಣೆ ಇಲ್ಲಿದೆ.

ಎರಡು ಚಿತ್ರಗಳ ಮೂಲ ವಿಷಯ ಒಂದೇ, ಆದರೆ ಪ್ರಸ್ತುತಿ ಬೇರೆ
'ಅಖಂಡ'- 'ಆಚಾರ್ಯ' ಎರಡು ಚಿತ್ರಗಳ ಮೂಲ ಕಥಾವಸ್ತು ಒಂದೇ ಆಗಿದೆ. ಎರಡರಲ್ಲೂ ಕೂಡ ದೇವಾಲಯಗಳು ಮತ್ತು ಅದರ ಸಂರಕ್ಷಣೆಯ ಸುತ್ತಲೇ ಹೆಣೆಯಲಾಗಿದೆ. ಎರಡರಲ್ಲೂ ಕಥೆ ನಡೆಯುವ ಧಾಟಿಯಿಂದಲೇ ಪ್ರೇಕ್ಷಕ ಮೊದಲೇ ಮುಂದೆ ಏನಾಗುತ್ತದೆ ಅಂತ ಊಹಿಸಿ ಬಿಡುತ್ತಾನೆ. ಕಥಾವಸ್ತು ಅಷ್ಟರಮಟ್ಟಿಗೆ ಹಳೆಯದೇ ಆಗಿದೆ. 'ಅಖಂಡ' ಚಿತ್ರದಲ್ಲಿ ಬಾಲಕೃಷ್ಣ 'ಅಘೋರ' ನಾಗಿ ಅವತರಿಸಿ ದುಷ್ಟಶಕ್ತಿಗಳ ವಿರುದ್ಧ ಹೋರಾಡುತ್ತಾನೆ. ಅದೇ 'ಆಚಾರ್ಯ' ಚಿತ್ರದಲ್ಲಿ ನಕ್ಸಲೈಟ್ ಸಿದ್ಧಾಂತವಾದಿ ದುಷ್ಟಶಕ್ತಿಗಳ ವಿರುದ್ಧ ಧರ್ಮ ಯುದ್ಧ ಸಾರುತ್ತಾನೆ. ಮೂಲಭೂತವಾಗಿ 'ಅಖಂಡ -ಆಚಾರ್ಯ' ಎರಡರಲ್ಲೂ ಕೂಡ ಮೊದಲಾರ್ಧ ಸಿಕ್ಕಾಪಟ್ಟೆ ಮಂದಗತಿಯಲ್ಲಿ ಸಾಗುತ್ತದೆ. ಆದರೆ 'ಅಖಂಡ'ದ ದ್ವಿತೀಯಾರ್ಧದಲ್ಲಿ ಬಾಲಕೃಷ್ಣ ಅಘೋರನಾಗಿ ಎಂಟ್ರಿ ತೆಗೆದುಕೊಳ್ಳುವುದರೊಂದಿಗೆ ಕಥೆ ತೀವ್ರ ವೇಗಗತಿಯಲ್ಲಿ ಮುಂದುವರೆಯುತ್ತದೆ. ಅದೇ 'ಆಚಾರ್ಯ' ವಿಚಾರದಲ್ಲಿ ನೋಡುವುದಾದರೆ ದ್ವಿತೀಯಾರ್ಧದಲ್ಲಿ ರಾಮಚರಣ್ ಎಂಟ್ರಿಯೊಂದಿಗೆ ಕಥಾ ನಿರೂಪಣೆ ಮತ್ತಷ್ಟು ಮಂದ ಗತಿಯನ್ನು ಹಿಡಿಯುತ್ತದೆ.

ಅಖಂಡ ಡೈಲಾಗ್ಸ್ ಸೂಪರ್- ಆಚಾರ್ಯ ಡೈಲಾಗ್ಸ್ ನೀರಸ
ಮಾಸ್ ಸಿನಿಮಾ ಅಂದಾಗ ಅಲ್ಲಿ ಡೈಲಾಗ್ಸ್ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಮಾಸ್ ಪ್ರೇಕ್ಷಕರು ತಮ್ಮ ನೆಚ್ಚಿನ ನಾಯಕನ ಬಾಯಿಂದ ಪವರ್ ಫುಲ್ ಡೈಲಾಗ್ ಗಳನ್ನು ನಿರೀಕ್ಷಿಸುತ್ತಾರೆ. ಬಾಲಕೃಷ್ಣ ಒಂದಡೆ ರೈತನ ಪಾತ್ರದಲ್ಲಿ, ಮತ್ತೊಂದೆಡೆ ಅಘೋರನ ಪಾತ್ರದಲ್ಲಿ ಅದ್ಭುತವಾದ ಡೈಲಾಗ್ ಗಳನ್ನು ಪ್ರೇಕ್ಷಕರಿಗೆ ಉಣಬಡಿಸುತ್ತಾರೆ. ಅದರಲ್ಲೂ ಹಿಂದೂ ಧರ್ಮ ಮತ್ತು ದೇವಾಲಯಗಳ ಬಗ್ಗೆ ಅವರ ಬಾಯಿಂದ ಬರುವ ಪ್ರತಿಯೊಂದು ಡೈಲಾಗ್ ಕೂಡ ಥಿಯೇಟರ್ ನಲ್ಲಿದ್ದ ಪ್ರೇಕ್ಷಕರನ್ನು ಹುಚ್ಚೆದ್ದು ಕೇಕೆ ಹಾಕುವಂತೆ ಮಾಡಿತ್ತು. ಆದರೆ 'ಆಚಾರ್ಯ' ಚಿತ್ರದಲ್ಲಿ ಇಂತಹ ಒಂದು ಬಲವಾದ ಸಂಭಾಷಣೆಯ ಕೊರತೆ ಇಡೀ ಚಿತ್ರವನ್ನು ಕಾಡಿದೆ. 'ಆಚಾರ್ಯ' ಪವರ್ ಫುಲ್ ಸಂಭಾಷಣೆಗಳು ಇಲ್ಲದೆ ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಪೂರ್ತಿಯಾಗಿ ಸೋತಿದೆ.

ಮೂಲ ಕಥಾವಸ್ತುವಿಗೆ ಅಖಂಡ ಬದ್ಧನಾಗಿದ್ದ
'ಅಖಂಡ' ಚಿತ್ರದ ಆರಂಭದಿಂದ ಅಂತ್ಯದವರೆಗೂ ಒಂದು ವಿಚಾರ ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಅದು ಆಲಯಗಳು, ಅವುಗಳ ಒಳಗಿನ ಅವ್ಯವಹಾರಗಳು, ಮಠಾಧಿಪತಿಗಳು ಮತ್ತು ರಾಜಕಾರಣಿಗಳ ನಡುವಿನ ಹೊಂದಾಣಿಕೆಯಿಂದ ಧರ್ಮವನ್ನು ಮತ್ತು ನಂಬಿಕೆಯನ್ನು ಹೇಗೆ ವಿನಾಶದ ಅಂಚಿಗೆ ತೆಗೆದುಕೊಂಡು ಹೋಗುತ್ತಿದೆ. ಇಂತಹ ಸಮಯದಲ್ಲಿ ಧರ್ಮದ ರಕ್ಷಣೆ ಹೇಗೆ ನಡೆಯುತ್ತದೆ. ವಿನಾಶ ಕಾಲದಲ್ಲಿ ಧರ್ಮ ಸಂರಕ್ಷಣೆಗೆ ಯಾರು ಮುಂದೆ ಬರುತ್ತಾರೆ ಮತ್ತು ಹೇಗೆ ಅದನ್ನು ರಕ್ಷಿಸುತ್ತಾರೆ. ಈ ವಿಚಾರಗಳನ್ನು ಪ್ರಧಾನವಾಗಿಟ್ಟುಕೊಂಡು ಕಥೆಯನ್ನು ಒಟ್ಟಾರೆ ರೂಪಿಸಲಾಗಿದೆ. ಆದರೆ 'ಆಚಾರ್ಯ' ಚಿತ್ರದಲ್ಲಿ ಈ ತರದ ಒಂದು ನೇರ ವಿಷಯಕ್ಕೆ ಬದ್ಧವಾಗಿ ಅದು ನಡೆಯುವುದಿಲ್ಲ. ಧರ್ಮಸ್ಥಳಿ ಮತ್ತು ಅದರ ದೇವಾಲಯದ ಆಸ್ತಿಪಾಸ್ತಿ ಮೇಲೆ ಬೇರೊಬ್ಬರ ಕಣ್ಣು ಬೀಳುವುದು ಇದರ ವಿರುದ್ಧ ಹೋರಾಟಕ್ಕಾಗಿ ಆಚಾರ್ಯನ ಆಗಮನ. ಇದರೊಳಗೆ ನಕ್ಸಲ್ ಸಿದ್ಧಾಂತ ಜೊತೆಗೆ ಗಿರಿಜನರ ಸಂರಕ್ಷಣೆಯ ವಿಚಾರ ಹೀಗೆ ದಿಕ್ಕುದೆಸೆ ಇಲ್ಲದೆ ಚಿತ್ರ ಎಲ್ಲಿಂದಲೋ ಎಲ್ಲಿಗೋ ಹೋಗುತ್ತದೆ. ಇಡೀ ಚಿತ್ರ ಮೈನ್ ಟ್ರ್ಯಾಕ್ ಗಿಂತ ಸೈಡ್ ಟ್ರ್ಯಾಕ್ ಗಳಲ್ಲಿ ಚಲಿಸುವುದೇ ಹೆಚ್ಚು. ಹೀಗಾಗಿ ಎಲ್ಲೋ ಒಂದು ಕಡೆ ಚಿತ್ರಕಥೆ ಯಾವುದೊಂದನ್ನು ಕೂಡ ಸರಿಯಾಗಿ ಹೇಳುವುದಕ್ಕೆ ವಿಫಲವಾಗುತ್ತದೆ.

ಮಾಸ್ ಪ್ರೇಕ್ಷಕರಿಗೆ ಹತ್ತಿರವಾದ 'ಅಖಂಡ'- ದೂರವಾದ 'ಆಚಾರ್ಯ'
'ಅಖಂಡ' ಚಿತ್ರದ ಭರ್ಜರಿ ಯಶಸ್ವಿಗೆ ಕಾರಣವಾದ ಅಂಶಗಳಲ್ಲಿ ಬಹುಮುಖ್ಯವಾದದ್ದು ಅದರಲ್ಲಿನ ಮಾಸ್ ಎಲಿಮೆಂಟ್ ಗಳು. ಅಖಂಡವಾಗಿ ಬಾಲಕೃಷ್ಣ ಎಂಟ್ರಿಗೆ ಅದ್ಭುತವಾದ ರೆಸ್ಪಾನ್ಸ್ ಸಿಗುತ್ತದೆ. ಆ ಸಮಯದಲ್ಲಿ ಅದರ ಬ್ಯಾಕ್ಗ್ರೌಂಡ್ ಸ್ಕೋರ್ ಕೂಡಾ ಪ್ರೇಕ್ಷಕರಲ್ಲಿ ಗೂಸ್ ಬಂಪ್ಸ್ ಉಂಟು ಮಾಡುತ್ತದೆ. ಇಡೀ ಚಿತ್ರಮಂದಿರ 'ಬಾಲಯ್ಯ... ಬಾಲಯ್ಯ...' ಅಂತ ಕೂಗಿ ಕೇಕೆಹಾಕಿ ಖುಷಿ ಪಡುತ್ತದೆ. ಆದರೆ ಅಂಥದೊಂದು ಎಂಟ್ರಿ ನಿಮಗೆ 'ಆಚಾರ್ಯ' ದಲ್ಲಿ ಕಾಣುವುದಿಲ್ಲ. ಅಖಂಡ ಟೈಟಲ್ ಸಾಂಗ್ ಆಗಬಹುದು, 'ಜೈ ಜೈ ಬಾಲಯ್ಯ' ಹಾಡು ಇರಬಹುದು ಸಾಕಷ್ಟು ಮಾಸ್ ಜೊತೆಗೆ ಜನಪ್ರಿಯ ಹಾಡುಗಳಾಗಿ ಚಿತ್ರದ ಯಶಸ್ಸಿಗೆ ಒಂದು ಕಾರಣವಾಗಿದೆ. ಅವುಗಳ ಚಿತ್ರೀಕರಣ ಕೂಡ ನೋಡುಗನಿಗೆ ಮುದಕೊಡುವಂತೆ ಇದೆ.
'ಆಚಾರ್ಯ'ದಲ್ಲಿ ಇಂತಹ ಯಾವುದೇ ಒಂದು ಆಕರ್ಷಣೀಯವಾದ ಹಾಡು ಇಲ್ಲ. ಒಂದೆರಡು ಹಾಡು ಕೇಳಲು ಇಂಪಾಗಿದ್ದರೂ ಅವುಗಳ ಚಿತ್ರೀಕರಣ ಮಾತ್ರ ನೀರಸವಾಗಿದೆ.

ಫ್ಯಾಮಿಲಿ ಆಡಿಯನ್ಸ್ ಗೆ ಕನೆಕ್ಟ್ ಆಗಲಿಲ್ಲ 'ಆಚಾರ್ಯ'
'ಅಖಂಡ' ಚಿತ್ರ ಕೇವಲ ಮಾಸ್ ಆಡಿಯನ್ಸ್ ಅಂತಲ್ಲ ಫ್ಯಾಮಿಲಿ ಆಡಿಯನ್ಸ್ ಗೆ ಕೂಡ ಕನೆಕ್ಟ್ ಆಯ್ತು. ಕರೋನಾ ಸಮಯದಲ್ಲಿ ಕೂಡ ಫ್ಯಾಮಿಲಿ ಆಡಿಯನ್ಸ್ ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಗಳಿಗೆ ಹೋಗಿ ಚಿತ್ರ ವೀಕ್ಷಣೆ ಮಾಡಿದ್ದಾರೆ. ಇದಕ್ಕೆ ಕಾರಣವೆಂದರೆ ಚಿತ್ರ ಧಾರ್ಮಿಕ ವಿಚಾರದ ಜೊತೆಗೆ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಅಂಶಗಳನ್ನು ಒಳಗೊಂಡಿತ್ತು. ಹಾಡುಗಳು, ಡೈಲಾಗ್ಸ್ , ಮಾಸ್ ಎಂಟರ್ಟೈನ್ಮೆಂಟ್ , ಫ್ಯಾಮಿಲಿ ಸೆಂಟಿಮೆಂಟ್ ಇದೆಲ್ಲವು ಸೇರಿ 'ಅಖಂಡ' ದೊಡ್ಡ ಮಟ್ಟದಲ್ಲಿ ಯಶಸ್ಸಿಗೆ ಕಾರಣವಾಯಿತು. ಮೊದಲ ದಿನದ ಮೊದಲ ಶೋ ಇಂದಲೇ ಚಿತ್ರಕ್ಕೆ ಸೂಪರ್ ಹಿಟ್ ಟಾಕ್ ಬಂತು. ಬಾಲಕೃಷ್ಣ ಕೆರಿಯರ್ ನಲ್ಲಿ ದೊಡ್ಡ ಯಶಸ್ಸಿನ ಚಿತ್ರವಾಗಿ 'ಅಖಂಡ' ಮಿಂಚಿತು. ಆದರೆ 'ಆಚಾರ್ಯ' ಚಿತ್ರದಲ್ಲಿ ಈ ತರದ ಕಂಪ್ಲೀಟ್ ಫ್ಯಾಮಿಲಿ ಪ್ಯಾಕೇಜ್ ಕೊರತೆಯೇ ಕಾಣುತ್ತಿದೆ. ಚಿತ್ರ ನೀರಸವಾದ ನಿರೂಪಣೆಯ ಜೊತೆಗೆ ಫ್ಯಾಮಿಲಿ ಆಡಿಯನ್ಸ್ ಗೆ ಕನೆಕ್ಟ್ ಆಗುವಂತ ಅಂಶಗಳ ಕೊರತೆ ದೊಡ್ಡದಾಗಿ ಎದ್ದು ಕಾಣುತ್ತದೆ. ಹೀಗಾಗಿ ಮೊದಲ ದಿನದ ಮೊದಲ ಶೋ ಇಂದಲೇ ಫ್ಲಾಪ್ ಚಿತ್ರ ಎಂಬ ಹಣೆಪಟ್ಟಿ ಕಟ್ಟಲಾಯಿತು. ಚಿತ್ರ ಕೊನೆಗೆ ಡಿಸಾಸ್ಟರ್ ಎನಿಸಿಕೊಂಡಿತು.


Click it and Unblock the Notifications











