'ನಾರಪ್ಪ' ಚಿತ್ರೀಕರಣದ ಸಂದರ್ಭದಲ್ಲೇ ನಾಲ್ವರು ಬಲಿಯಾದರು: ನಿರ್ಮಾಪಕ
ತೆಲುಗಿನ ಸ್ಟಾರ್ ನಟ ವೆಂಕಟೇಶ್ ನಟಿಸಿರುವ 'ನಾರಪ್ಪ' ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ಒಟಿಟಿಗೆ ನೀಡಿದ್ದಕ್ಕೆ ವೆಂಕಟೇಶ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ನಾರಪ್ಪ' ಸಿನಿಮಾವನ್ನು ಸುರೇಶ್ ಪ್ರೊಡಕ್ಷನ್ನ ಸುರೇಶ್ ಬಾಬು ನಿರ್ಮಾಣ ಮಾಡಿದ್ದಾರೆ. ಸಿನಿಮಾವನ್ನು ತಾವು ಒಟಿಟಿ ನೀಡಲು ಕಾರಣವೇನು ಎಂದು ವಿವರಿಸುವ ಸಂದರ್ಭದಲ್ಲಿ ಸಿನಿಮಾಕ್ಕಾಗಿ ಚಿತ್ರತಂಡ ಪಟ್ಟ ಕಷ್ಟವನ್ನು ಸಹ ವರ್ಣಿಸಿದ್ದಾರೆ.
ತಮಿಳಿನ 'ಅಸುರನ್' ಸಿನಿಮಾದ ರೀಮೇಕ್ ಆದ 'ನಾರಪ್ಪ' ಸಿನಿಮಾದ ಚಿತ್ರೀಕರಣ 2020ರ ಜನವರಿ 20 ರಂದು ಪ್ರಾರಂಭವಾಗಿತ್ತು. ಆಗಿನ್ನೂ ಭಾರತಕ್ಕೆ ಕೊರೊನಾ ಕಾಲಿಟ್ಟಿರಲಿಲ್ಲ. ಆದರೆ ಆ ನಂತರ ಚಿತ್ರೀಕರಣ ಮುಂದುವರೆದಂತೆ ಕೊರೊನಾ ತೀವ್ರವಾಗಿ ಕಾಡಲಾರಂಭಿಸಿ ದೊಡ್ಡ ಸಮಸ್ಯೆಯನ್ನು ಚಿತ್ರತಂಡ ಎದುರಿಸಬೇಕಾಯಿತು.

ಚಿತ್ರೀಕರಣ ಸ್ಥಗಿತಗೊಳಿಸಿ ಓಡಿ ಹೋಗಿದ್ದೆವು: ಸುರೇಶ್ ಬಾಬು
''ಕೊರೊನಾ ತೀವ್ರ ಭೀತಿಯನ್ನು ಹುಟ್ಟಿಸಿದ್ದ ದಿನಗಳವು. ನಾವು ತಮಿಳುನಾಡಿನ ಊರೊಂದರಲ್ಲಿ ಚಿತ್ರೀಕರಣ ಮಾಡುತ್ತಿದ್ದೆವು. ಚಿತ್ರೀಕರಣ ಸ್ಥಳದಿಂದ ಆರು ಕಿ.ಮೀ ದೂರದಲ್ಲಿ ಎರಡು ಪಾಸಿಟಿವ್ ಪ್ರಕರಣಗಳು ಪತ್ತೆಯಾದವು. ಅದೇ ದಿನ ನಾವು ಭಯದಿಂದ ಚಿತ್ರೀಕರಣ ಅಂತ್ಯಗೊಳಿಸಿ ಅಲ್ಲಿಂದ ಓಡಿ ಹೋದೆವು'' ಎಂದಿದ್ದಾರೆ ನಿರ್ಮಾಪಕ ಸುರೇಶ್ ಬಾಬು.

ನಾಲ್ವರು ನಿಧನರಾದರು: ಸುರೇಶ್
''ಕೊರೊನಾ ಭೀತಿ ನಡುವೆಯೇ ಬಹಳ ಭಯದಿಂದ ಚಿತ್ರೀಕರಣ ಮಾಡಿದೆವು. ಸಕಲ ಮುನ್ನೆಚ್ಚರಿಕೆ ತೆಗೆದುಕೊಂಡೆವು ಆದರೂ ಸಹ ಚಿತ್ರತಂಡದ ನಾಲ್ಕು ಜನ ಕೊರೊನಾಕ್ಕೆ ಬಲಿಯಾಗಿಬಿಟ್ಟರು. ಇದು ಚಿತ್ರತಂಡದ ಮನೋಬಲವನ್ನು ಕುಗ್ಗಿಸಿಬಿಟ್ಟಿತು. ದೊಡ್ಡ ಆಘಾತವನ್ನು ತಂತು'' ಎಂದು ವಿವರಿಸಿದ್ದಾರೆ ಸುರೇಶ್.

ಆತಂಕದಿಂದಲೇ ಚಿತ್ರೀಕರಣ ಮುಗಿಸಿದೆವು: ಸುರೇಶ್
''ಇಡೀಯ ಚಿತ್ರೀಕರಣವನ್ನು ಆತಂಕದಿಂದಲೇ ಪೂರ್ಣ ಮಾಡಿದೆವು. ಕೊರೊನಾ ಆರಂಭದ ದಿನಗಳಂತೂ ನಮ್ಮ ಪಾಲಿಗೆ ಬಹಳ ಆತಂಕದ ದಿನಗಳಾಗಿದ್ದವು. ಆ ನಂತರ ಪ್ರಕರಣಗಳು ಹೆಚ್ಚಾದಗಲೂ ಬೇರೆ ರೀತಿಯ ಆತಂಕಗಳನ್ನು ಎದುರಿಸಿದೆವು. ಆದರೆ ಸದಾ ಕಾಲ ಮುನ್ನೆಚ್ಚರಿಕೆಯಂತೂ ಇದ್ದೇ ಇರುತ್ತಿತ್ತು'' ಎಂದಿದ್ದಾರೆ ಸುರೇಶ್.
Recommended Video

ಜುಲೈ 20ಕ್ಕೆ ಅಮೆಜಾನ್ ಪ್ರೈಂನಲ್ಲಿ 'ನಾರಪ್ಪ' ಬಿಡುಗಡೆ
'ನಾರಪ್ಪ' ಸಿನಿಮಾವು ತಮಿಳಿನಲ್ಲಿ ವೆಟ್ರಿಮಾರನ್ ನಿರ್ದೇಶಿಸಿದ್ದ 'ಅಸುರನ್' ಸಿನಿಮಾದ ರೀಮೇಕ್ ಆಗಿದೆ. ಸಿನಿಮಾದಲ್ಲಿ ವೆಂಕಟೇಶ್ ಜೊತೆಗೆ ಪ್ರಿಯಾಮಣಿ, ಕಾರ್ತಿಕ್ ರತ್ನಮ್, ರಾವ್ ರಮೇಶ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ಶ್ರೀಕಾಂತ್ ಅಡ್ಡಾಲ ನಿರ್ದೇಶನ ಮಾಡಿದ್ದಾರೆ. ಸಿನಿಮಾವು ಅಮೆಜಾನ್ ಪ್ರೈಂನಲ್ಲಿ ಜುಲೈ 20ಕ್ಕೆ ಬಿಡುಗಡೆ ಆಗಲಿದೆ.


Click it and Unblock the Notifications











