ನಿರ್ಮಾಪಕನಿಗೆ ಬಹಿರಂಗ ಪತ್ರ ಬರೆದು ಎಚ್ಚರಿಕೆ ಕೊಟ್ಟ ರಾಮ್ಚರಣ್ ಫ್ಯಾನ್ಸ್
ಚಿತ್ರರಂಗದಲ್ಲಿ ಸೋಲು ಗೆಲುವು ಮಾಮೂಲು. ಗೆದ್ದಾಗ ಹಿಗ್ಗುವುದು, ಸೋತಾಗ ಕುಗ್ಗುವವರನ್ನು ನೋಡಿದ್ದೇವೆ. ಅಂತಿಮವಾಗಿ ಸಿನಿಮಾ ಬ್ಯುಸಿನೆಸ್. ರಿಸ್ಕ್ ಎಂದು ಗೊತ್ತಿದ್ದೂ ನಿರ್ಮಾಪಕ ಹಣ ಹಾಕುತ್ತಾನೆ. ಆದರೆ ಕಾರಣಾಂತರಗಳಿಂದ ಸಿನಿಮಾಗಳು ಸೋತು ಬಿಡುತ್ತವೆ. ಸೋತಾಗಲೇ ಭಿನ್ನಾಭಿಪ್ರಾಯಗಳು ಭುಗಿಲೇಳುತ್ತದೆ.
ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದಿದ್ದ ತೆಲುಗಿನ 'ಗೇಮ್ ಚೇಂಜರ್' ಸಿನಿಮಾ ಅಟ್ಟರ್ ಫ್ಲಾಪ್ ಆಗಿತ್ತು. ಭಾರೀ ಬಜೆಟ್ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಸಾಕಷ್ಟು ನಷ್ಟ ಅನುಭವಿಸಿತ್ತು. ಎಸ್ವಿಸಿ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಹಾಗು ಶಿರೀಷ್ ರೆಡ್ಡಿ ಚಿತ್ರಕ್ಕೆ ಹಣ ಹೂಡಿದ್ದರು. ಸಿನಿಮಾ ಸೋತಿದ್ದು ಗೊತ್ತೇಯಿದೆ. 'ಗೇಮ್ ಚೇಂಜರ್' ಸಿನಿಮಾ ತೆರೆಕಂಡ ನಾಲ್ಕು ದಿನಗಳ ಅಂತರದಲ್ಲಿ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಬಂದು ಬಾಕ್ಸಾಫೀಸ್ ಶೇಕ್ ಮಾಡಿತ್ತು.

'ಸಂಕ್ರಾಂತಿಕಿ ವಸ್ತುನ್ನಾಂ' ಚಿತ್ರವನ್ನು ಕೂಡ ಅದೇ ಸಂಸ್ಥೆ ನಿರ್ಮಾಣ ಮಾಡಿತ್ತು. ಹಾಗಾಗಿ 'ಗೇಮ್ ಚೇಂಜರ್' ಚಿತ್ರದಿಂದ ಉಂಟಾದ ನಷ್ಟವನ್ನು ಮತ್ತೊಂದು ಸಿನಿಮಾದಿಂದ ನಿರ್ಮಾಪಕರು ಸರಿದೂಗಿಸಿಕೊಂಡಿದ್ದರು. 6 ತಿಂಗಳ ಬಳಿಕ ಮತ್ತೆ 'ಗೇಮ್ ಚೇಂಜರ್' ಸಿನಿಮಾ ನಷ್ಟದ ವಿಚಾರ ಚರ್ಚೆಗೆ ಬಂದಿದೆ. ನಿರ್ಮಾಪಕ ಶಿರೀಷ್ ರೆಡ್ಡಿ ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆಯೇ ಇದಕ್ಕೆಲ್ಲಾ ಕಾರಣವಾಗಿದೆ. ಇದರ ಬೆನ್ನಲ್ಲೇ ರಾಮ್ಚರಣ್ ಅಭಿಮಾನಿಗಳು ಬಹಿರಂಗ ಪತ್ರ ಬರೆದು ನಿರ್ಮಾಪಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಸುಖಾ ಸುಮ್ಮನೆ 'ಗೇಮ್ ಚೇಂಜರ್' ಸಿನಿಮಾ ಬಗ್ಗೆ ಮಾತನಾಡಿ ರಾಮ್ಚರಣ್ ಅಭಿಮಾನಿಗಳ ತಾಳ್ಮೆ ಪರೀಕ್ಷಿಸಬೇಡಿ. ಇದರ ಪರಿಣಾಮ ನೆಟ್ಟಗಿರಲ್ಲ ಎಂದು ಅಭಿಮಾನಿಗಳು ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದೆಲ್ಲದರ ನಡುವೆ ನಿರ್ಮಾಪಕ ಶಿರೀಷ್ ರೆಡ್ಡಿ ಕೂಡ ಪತ್ರ ಬರೆದು ತಮ್ಮ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನನ್ನ ಮಾತಿನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಿರ್ಮಾಪಕ ಶಿರೀಷ್ "ನಮಗೆ 'ಗೇಮ್ ಚೇಂಜರ್' ಚಿತ್ರದಿಂದ ಬಹಳ ನಷ್ಟವಾಯಿತು. ಸ್ವತಃ ಚಿರಂಜೀವಿ ಮಾತನಾಡಿ ಈ ಕಾಂಬಿನೇಷನ್ ಖುದುರಿಸಿದ್ದರು. ಆದರೆ ಸಿನಿಮಾದಿಂದ ಬಹಳ ನಷ್ಟವಾಯಿತು. ಸಿನಿಮಾ ಸೋತ ಬಳಿಕ ನಿರ್ದೇಶಕ ಶಂಕರ್ ಆಗಲಿ, ನಟ ರಾಮ್ಚರಣ್ ಆಗಿರಲಿ ನಮಗೆ ಒಂದು ಕರೆ ಮಾಡಿ ಮಾತನಾಡಲಿಲ್ಲ. ಅದು ಬಹಳ ಬೇಸರ ತಂದಿದೆ" ಎಂದಿದ್ದರು.
ರಾಮ್ಚರಣ್ ಸಹಕಾರದ ಬಗ್ಗೆ ದಿಲ್ ರಾಜು ಸಾಕಷ್ಟು ಬಾರಿ ಮಾತನಾಡಿದ್ದಾರೆ. ನಮ್ಮ ಸಿನಿಮಾ ಶುರುವಾಗಿ ಬಿಡುಗಡೆಯಾಗಲು ಮೂರ್ನಾಲ್ಕು ವರ್ಷ ಸಮಯ ಹಿಡಿಯಿತು. ಈ ನಡುವೆ ರಾಮ್ಚರಣ್ ಅವರಿಗೆ ಮತ್ತೊಂದು ಸಿನಿಮಾ ಅವಕಾಶ ಬಂದರೂ ಒಪ್ಪಿಕೊಳ್ಳದೇ ಮೊದಲು ನಮ್ಮ ಸಿನಿಮಾ ಮಾಡಬೇಕು ಎಂದು ಕಾಲ್ಶೀಟ್ ಕೊಟ್ಟಿದ್ದರು ಎಂದು ಹೇಳಿದ್ದರು. ಆದರೆ ಶಿರೀಷ್ ಮಾತ್ರ ಈ ರೀತಿ ಹೇಳಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಸದ್ಯ ವೈರಲ್ ಆಗಿರುವ ಪತ್ರದಲ್ಲಿ ಅಭಿಮಾನಿಗಳು ಒಂದಷ್ಟು ಪ್ರಶ್ನೆಗಳನ್ನು 'ಗೇಮ್ಚೇಂಜರ್' ನಿರ್ಮಾಪಕರ ಮುಂದಿಟ್ಟಿದ್ದಾರೆ. "ಸಿನಿಮಾ ಎನ್ನುವುದು ಬ್ಯುಸಿನೆಸ್. ಲಾಭ, ನಷ್ಟ ಇರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಸಿನಿಮಾ ಗೆದ್ದಾಗ ನಮ್ಮಿಂದಲೇ ಎನ್ನುವ ನೀವು, ಸೋತಾಗ ಬೇರೆಯವರ ಮೇಲೆ ಹಾಕುವುದು ಎಷ್ಟು ಸರಿ. ಈ ಹಿಂದೆ ಕೆಲ ಸಿನಿಮಾಗಳು ಸೋತು ನಷ್ಟವಾದಾಗ ಯಾವ ನಿರ್ಮಾಪಕರು ಕೂಡ ನಿಮ್ಮ ರೀತಿ ಮಾಧ್ಯಮಗಳ ಮುಂದೆ ಬಂದು ಮಾತನಾಡಲಿಲ್ಲ, ನೀವ್ಯಾಕೆ ಹೀಗೆ?" ಎಂದು ಕೇಳಿದ್ದಾರೆ.
3 ವರ್ಷಗಳ ಕಾಲ 'ಗೇಮ್ಚೇಂಜರ್' ಚಿತ್ರಕ್ಕಾಗಿ ನಾವು ಕಾಯುತ್ತಿದ್ದೆವು, ಸಿನಿಮಾ ಬಂದು ಸೋತು ಹೋಯಿತು. ನಮಗೂ ಬೇಸರ ಇದೆ. ಇಂತಹ ಸಮಯದಲ್ಲಿ ಮಾಧ್ಯಮಗಳ ಮುಂದೆ ಮಾತನಾಡುವುದು ಎಷ್ಟು ಸರಿ. ಇದೇ ಕೊನೆ, ಮತ್ತೆ 'ಗೇಮ್ಚೇಂಜರ್' ಸಿನಿಮಾ ಬಗ್ಗೆ ಆಗಲಿ, ರಾಮ್ಚರಣ್ ಕುರಿತಾಗಲಿ ಏನಾದರೂ ಮಾತನಾಡಿದರೆ ಪರಿಣಾಮ ಚೆನ್ನಾಗಿರಲ್ಲ" ಎಂದು ಅಭಿಮಾನಿಗಳು ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗುತ್ತಿದೆ. ಅಭಿಮಾನಿಗಳು ಹೀಗೆ ನಿರ್ಮಾಪಕರಿಗೆ ಬಹಿರಂಗವಾಗಿ ಎಚ್ಚರಿಕೆ ಕೊಡುವುದು ಸರಿಯಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











