ಯಶ್, ಪ್ರಭಾಸ್ ಫ್ಯಾನ್ಸ್ ದಾಖಲೆ ಮುರಿತ್ತಾರಾ ರಾಮ್ಚರಣ್ ಫ್ಯಾನ್ಸ್?
ಸ್ಟಾರ್ ನಟರು ಮಾತ್ರವಲ್ಲ, ಅವರ ಅಭಿಮಾನಿಗಳು ಆಗಾಗ್ಗೆ ದಾಖಲೆಗಳನ್ನು ಬರೆಯುತ್ತಾರೆ. ನೆಚ್ಚಿನ ನಟನ ಹೆಸರಿನಲ್ಲಿ ಏನಾದರೂ ಮಾಡಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. ದೊಡ್ಡ ದೊಡ್ಡ ಸಿನಿಮಾಗಳ ಬಿಡುಗಡೆ ಸಮಯದಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗುತ್ತದೆ.
ತೆಲುಗಿನಲ್ಲಿ ರಾಮ್ಚರಣ್ ಚಿತ್ರಗಳಿಗೆ ದೊಡ್ಡ ಅಭಿಮಾನಿ ಬಳಗವಿದೆ. 'ಮಗಧೀರ', 'ಧ್ರುವ', ಆರ್ಆರ್ಆರ್ ರೀತಿಯ ಬ್ಲಾಕ್ಬಸ್ಟರ್ ಸಿನಿಮಾಗಳಲ್ಲಿ ಮೆಗಾ ಪವರ್ ಸ್ಟಾರ್ ಅಬ್ಬರಿಸಿದ್ದಾರೆ. ತಂದೆ ಚಿರಂಜೀವಿ ಪ್ರಭಾವಳಿಯಿಂದ ಹೊರಬಂದು ತಮ್ಮದೇ ಸ್ವಂತ ಪರಿಶ್ರಮದಿಂದ ಅಭಿಮಾನಿಗಳ ಬಳಗ ಸೃಷ್ಟಿಸಿಕೊಂಡಿದ್ದಾರೆ. ಈಗಾಗಲೇ ಬಾಲಿವುಡ್ ಅಂಗಳಕ್ಕೂ ಎಂಟ್ರಿ ಕೊಟ್ಟಿದ್ದಾರೆ

ಸದ್ಯ ಶಂಕರ್ ನಿರ್ದೇಶನದಲ್ಲಿ ರಾಮ್ಚರಣ್ ನಟನೆಯ 'ಗೇಮ್ಚೇಂಜರ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಶಂಕರ್ ನಿರ್ದೇಶನದ ಚಿತ್ರಗಳು ಇತ್ತೀಚೆಗೆ ಅಷ್ಟಾಗಿ ಸದ್ದು ಮಾಡ್ತಿಲ್ಲ. 'ಇಂಡಿಯನ್'-2 ಹೀನಾಯವಾಗಿ ಸೋಲುಂಡಿತ್ತು. ಹಾಗಾಗಿ 'ಗೇಮ್ಚೇಂಜರ್' ಮೇಲೆ ಕೂಡ ನಿರೀಕ್ಷೆ ಕಮ್ಮಿ ಆಗಿದೆ.
ಚಿತ್ರದ ಟೀಸರ್, ಸಾಂಗ್ಸ್ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೂ ಶಂಕರ್ ಹಾಗೂ ಚರಣ್ ಕಾಂಬೋ ಒಂದು ಮಟ್ಟಕ್ಕೆ ಕುತೂಹಲ ಮೂಡಿಸಿದೆ. ಸುಗ್ಗಿ ಸಂಭ್ರಮದಲ್ಲಿ ಕನ್ನಡ, ತೆಲುಗು, ತಮಿಳಿನ ದೊಡ್ಡ ದೊಡ್ಡ ಚಿತ್ರಗಳು ತೆರೆಗೆ ಬರುತ್ತಿವೆ. ಅದರಲ್ಲಿ ದೊಡ್ಡ ಬಜೆಟ್ ಸಿನಿಮಾ ಅಂದರೆ 'ಗೇಮ್ಚೇಂಜರ್'. ಈ ಆಕ್ಷನ್ ಎಂಟರ್ಟೈನರ್ ಚಿತ್ರದಲ್ಲಿ ಚರಣ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ.
'ಗೇಮ್ಚೇಂಜರ್' ರಿಲೀಸ್ ಹೊಸ್ತಿಲಲ್ಲಿ ಅತಿ ಎತ್ತರದ ಕಟೌಟ್ ನಿಲ್ಲಿಸಿ ದಾಖಲೆ ಬರೆಯಲು ರಾಮ್ಚರಣ್ ಅಭಿಮಾನಿಗಳು ಸಜ್ಜಾಗಿದ್ದಾರೆ. ನೆಚ್ಚಿನ ನಟರ ಎತ್ತರದ ಕಟೌಟ್ ನಿಲ್ಲಿಸಿ ದಾಖಲೆ ಬರೆಯುವ ಟ್ರೆಂಡ್ ಕೂಡ ಇದೆ. ಇದಕ್ಕೂ ಮುನ್ನ ನಟ ಯಶ್, ಪ್ರಭಾಸ್ ಹಾಗೂ ಸೂರ್ಯ ಅಭಿಮಾನಿಗಳು ನೆಚ್ಚಿನ ನಟರ ಅತಿ ಎತ್ತರದ ಕಟೌಟ್ ನಿಲ್ಲಿಸುವ ಸಾಹಸ ಮಾಡಿದ್ದರು.
4 ವರ್ಷಗಳ ಹಿಂದೆ ನಗರದ ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ ಅಭಿಮಾನಿಗಳು ರಾಕಿಭಾಯ್ 216 ಅಡಿ ಎತ್ತರದ ಕಟೌಟ್ ನಿಲ್ಲಿಸಿ ಸದ್ದು ಮಾಡಿದ್ದರು. 5700 ಕೆಜಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಇದಕ್ಕೂ ಮುನ್ನ ತಮಿಳುನಾಡಿನಲ್ಲಿ ಸೂರ್ಯ ಅಭಿಮಾನಿಗಳು 215 ಅಡಿ ಎತ್ತರದ ಕಟೌಟ್ ನಿಲ್ಲಿಸಿದ್ದು ದಾಖಲೆ ಎನಿಸಿಕೊಂಡಿತ್ತು. ಕಳೆದ ವರ್ಷ ಪ್ರಭಾಸ್ ಅಭಿಮಾನಿಗಳು 230 ಅಡಿ ಕಟೌಟ್ ನಿಲ್ಲಿಸಿದ್ದು ದೊಡ್ಡ ದಾಖಲೆ ಎನಿಸಿದೆ. ಇದೀಗ ರಾಮ್ಚರಣ್ ಅಭಿಮಾನಿಗಳು ಬರೋಬ್ಬರಿ 250 ಅಡಿ ಎತ್ತರದ ಕಟೌಟ್ ನಿಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗ್ತಿದೆ.
ವಿಜಯವಾಡದಲ್ಲಿರುವ ಬೃಂದಾವನ ಕಾಲೋನಿಯ ವಜ್ರ ಗ್ರೌಂಡ್ಸ್ನಲ್ಲಿ ರಾಮ್ಚರಣ್ ಕಟೌಟ್ ಎದ್ದು ನಿಲ್ಲಲಿದೆ. ಡಿಸೆಂಬರ್ 29ಕ್ಕೆ 'ಗೇಮ್ಚೇಂಜರ್' ಕಟೌಟ್ ಅನಾವರಣ ಮಾಡಲು ಅಭಿಮಾನಿಗಳು ಮುಂದಾಗಿದ್ದಾರೆ.
ಅಂದಹಾಗೆ 'ಗೇಮ್ಚೇಂಜರ್' ಸಿನಿಮಾ ಜನವರಿ 10ಕ್ಕೆ ತೆರೆಗೆ ಬರಲಿದೆ. ಚಿತ್ರದಲ್ಲಿ ಕೈರಾ ಅದ್ವಾನಿ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಅಂಜಲಿ, ಸುನೀಲ್, ಎಸ್. ಜೆ ಸೂರ್ಯ, ಸಮುದ್ರ ಖನಿ, ನಾಸರ್, ಪ್ರಕಾಶ್ ರಾಜ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಎಸ್. ತಮನ್ ಸಂಗೀತ ಚಿತ್ರಕ್ಕಿದೆ. ಆದರೆ ಬಿಡುಗಡೆಯಾಗಿರುವ ಯಾವುದೇ ಸಾಂಗ್ ಹಿಟ್ ಆಗಿಲ್ಲ.
ಚಿತ್ರದಲ್ಲಿ IAS ಆಫೀಸರ್ ರಾಮ್ ನಂದನ್ ಹಾಗೂ ಅವರ ತಂದೆ ಅಪ್ಪಣ್ಣ ಪಾತ್ರದಲ್ಲಿ ರಾಮ್ಚರಣ್ ನಟಿಸಿದ್ದಾರೆ. ತೆಲುಗಿನಲ್ಲಿ ನಿರ್ಮಾಣ ಆಗಿರುವ ಸಿನಿಮಾ ತೆಲುಗಿಗೆ ಡಬ್ ಆಗಿದೆ. ಆದರೆ ಇನ್ನುಳಿದ ಭಾಷೆಗಳಿಗೆ ಡಬ್ ಆಗಿ ಬರುತ್ತಾ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











