ತೆಲುಗಿನ ಹಿರಿಯ ನಟ ಗೊಲ್ಲಪುಡಿ ಮಾರುತಿ ರಾವ್ ನಿಧನ
ತೆಲುಗಿನ ಖ್ಯಾತ ನಟ, ಬರಹಗಾರ ಗೊಲ್ಲಪುಡಿ ಮಾರುತಿ ರಾವ್ (80) ಅವರು ಗುರವಾರ ಚೆನ್ನೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಟಿ ನಗರದ ಲೈಫ್ ಲೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಗೊಲ್ಲಪುಡಿ ಮಾರುತಿ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಗೊಲ್ಲಪುಡಿ ಅವರು 1939ರಲ್ಲಿ ಅಂದಿನ ಮದ್ರಾಸ್ ರಾಜ್ಯದಲ್ಲಿ ಜನಿಸಿದ್ದರು. ಈಗ ಅದು ಆಂಧ್ರಪ್ರದೇಶಕ್ಕೆ ಸೇರಿದೆ. ಮಾರುತಿ ರಾವ್ ಅವರು ಬರಿ ನಟರಾಗಿ ಮಾತ್ರವಲ್ಲದೇ ಅದ್ಭುತ ಬರಹಗಾರನಾಗಿ ಮೋಡಿ ಮಾಡಿದ್ದರು.
ಗೊಲ್ಲಪುಡಿ ಮಾರುತಿ ರಾವ್ ಅವರು 1982ರಲ್ಲಿ ಮೆಗಾಸ್ಟಾರ್ ಚಿರಂಜೀವಿ ಮತ್ತು ಮಾಧವಿ ನಟನೆಯ 'ಇಂಟಿಲೋ ರಾಮಯ್ಯ ವಿದೀಲೋ ಕೃಷ್ಣಯ್ಯ' ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಯಲ್ಲಿ ಜರ್ನಿ ಆರಂಭಿಸಿದ್ದರು. ಈ ಚಿತ್ರಕ್ಕೆ ಸಂಭಾಷಣೆ ಕೂಡ ಬರೆದಿದ್ದರು.

ಇಲ್ಲಿಯವರೆಗೂ ಸುಮಾರು 250ಕ್ಕೂ ಅಧಿಕ ಚಿತ್ರಗಳಲ್ಲಿ ಗೊಲ್ಲಪುಡಿ ಮಾರುತಿ ರಾವ್ ನಟಿಸಿದ್ದಾರೆ. ಹಲವು ಪುಸ್ತಕ, ಕಾದಂಬರಿಗಳನ್ನು ಕೂಡ ರಚಿಸಿದ್ದಾರೆ. ಆಲ್ ಇಂಡಿಯಾ ರೇಡಿಯೋ ಮುಖ್ಯಸ್ಥರಾಗಿ ಕೂಡ ಕೆಲಸ ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರದ ಕೊಡುಗೆಗಾಗಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹಿರಿಯ ನಟನ ನಿಧನಕ್ಕೆ ಇಂಡಸ್ಟ್ರಿಯ ಹಲವು ಜನರು ಸಂತಾಪ ಸೂಚಿಸಿದ್ದಾರೆ.


Click it and Unblock the Notifications











