ಭಿನ್ನಾಭಿಪ್ರಾಯಗಳಿಂದ ಪ್ರಭಾಸ್- ಪ್ರಶಾಂತ್ ನೀಲ್ 'ಸಲಾರ್- 2' ನಿಂತೇಹೋಯ್ತಾ?
ಬಾಹುಬಲಿ ಪ್ರಭಾಸ್ ನಟನೆಯ 'ಕಲ್ಕಿ 2898 AD' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. 'ರಾಜಾ ಸಾಬ್' ಎನ್ನುವ ಮತ್ತೊಂದು ಚಿತ್ರದಲ್ಲಿ ಪ್ರಭಾಸ್ ಬಣ್ಣ ಹಚ್ಚಿದ್ದಾರೆ. ಮತ್ತೆರಡು ಸಿನಿಮಾಗಳಿಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೆಲ್ಲದರ ನಡುವೆ 'ಸಲಾರ್- 2' ಸಿನಿಮಾ ಕಥೆ ಏನಾಯ್ತು? ಎನ್ನುವ ಚರ್ಚೆ ಶುರುವಾಗಿದೆ.
ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಕಳೆದ ವರ್ಷ ಕೊನೆಗೆ ತೆರೆಗೆ ಬಂದಿತ್ತು. ಕನ್ನಡದ 'ಉಗ್ರಂ' ಕಥೆಯನ್ನೇ 2 ಭಾಗಗಳಾಗಿ ದೊಡ್ಡದಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿತ್ತು ಚಿತ್ರತಂಡ. ಸಿನಿಮಾ ಕೂಡ ತಕ್ಕಮಟ್ಟಿಗೆ ಪ್ರೇಕ್ಷಕರ ಮನಗೆದ್ದಿತ್ತು. ಶಾರುಖ್ ಖಾನ್ ನಟನೆಯ 'ಡಂಕಿ' ಚಿತ್ರದ ಎದುರು ಬಾಕ್ಸಾಫೀಸ್ ಶೇಕ್ ಮಾಡಿತ್ತು. 'ಸಲಾರ್' ಬಳಿಕ ಪ್ರಶಾಂತ್ ನೀಲ್ ಜ್ಯೂ. ಎನ್ಟಿಆರ್ ಚಿತ್ರ ಕೈಗೆತ್ತಿಕೊಂಡಿದ್ದಾರೆ.

ತಾರಕ್ ಜೊತೆ ಪ್ರಶಾಂತ್ ನೀಲ್ ಸಿನಿಮಾ ಕಾರಣಾಂತರಗಳಿಂದ ತಡವಾಗುತ್ತಲೇ ಇದೆ. ಆದರೆ ಇದೇ ವರ್ಷ ಆಗಸ್ಟ್ನಲ್ಲಿ ಚಿತ್ರೀಕರಣ ಶುರು ಎಂದು ಇತ್ತೀಚೆಗೆ ಚಿತ್ರತಂಡ ಘೋಷಿಸಿದೆ. ಅಲ್ಲಿಗೆ 'ಸಲಾರ್' ಬಳಿಕ ನೀಲ್ 'NTR31' ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದು ಪಕ್ಕಾ ಆಗಿದೆ. ಹಾಗಾದರೆ 'ಸಲಾರ್'-2 ಕಥೆ ಏನಾಯ್ತು? ಎನ್ನುವುದು ಕೆಲವರ ಪ್ರಶ್ನೆ. ಆ ಸಿನಿಮಾ ನಿಂತೇ ಹೋಯ್ತು ಎಂದು ಟಾಲಿವುಡ್ನಲ್ಲೀ ಈಗ ಗುಲ್ಲಾಗಿದೆ.
ತೆಲುಗು ವೆಬ್ಸೈಟ್ಗಳಲ್ಲಿ ಹೋಗೊಂದು ಸುದ್ದಿ ಹರಿದಾಡುತ್ತಿದೆ. ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕೆಲ ಭಿನ್ನಾಭಿಪ್ರಾಯಗಳಿಂದ 'ಸಲಾರ್' ಸೀಕ್ವೆಲ್ ಮಾಡದಿರಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. 'ಸಲಾರ್' ಚಿತ್ರದಿಂದಲೂ ನಿರ್ಮಾಪಕರಿಗೆ ತಕ್ಕಮಟ್ಟಿಗೆ ಲಾಭ ಬಂದಿಲ್ಲ. ಹಾಗಾಗಿ ಈ ನಿರ್ಧಾರ ಎನ್ನುವ ಊಹಾಪೋಹ ಶುರುವಾಗಿದೆ.

ಬೆಂಗಳೂರಿನಲ್ಲೇ 'ಸಲಾರ್' ಸಕ್ಸಸ್ ಪಾರ್ಟಿ ಮಾಡಿದ್ದರು. ಇನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪ್ರಶಾಂತ್ ನೀಲ್ 'ಸಲಾರ್-2' ಸ್ಕ್ರಿಪ್ಟ್ ರೆಡಿಯಿದೆ. ಯಾವಾಗ ಬೇಕಾದರೂ ಚಿತ್ರೀಕರಣ ಮಾಡಬಹುದು. ಸದ್ಯಕ್ಕೆ ನನಗೆ ಕೊಂಚ ವಿಶ್ರಾಂತಿ ಬೇಕು, ಮುಂದೆ 'ಕೆಜಿಎಫ್-3' ಕೂಡ ಬರುತ್ತದೆ ಎಂದಿದ್ದರು. ಪೃಥ್ವಿರಾಜ್ ಸುಕುಮಾರನ್, ಶ್ರಿಯಾ ರೆಡ್ಡಿ ಕೂಡ 'ಸಲಾರ್'-2 ಬಗ್ಗೆ ಬಹಳ ಉತ್ಸುಕರಾಗಿರುವುದಾಗಿ ಹೇಳಿಕೊಂಡಿದ್ದಾರೆ.
'ಸಲಾರ್-2 ಶೌರ್ಯಾಂಗ ಪರ್ವ' ಸಿನಿಮಾ ಬರಲ್ಲ ಎನ್ನುವುದು ಶುದ್ಧ ಸುಳ್ಳು ಎಂದು ಪ್ರಭಾಸ್ ಅಭಿಮಾನಿಗಳು ವಾದಿಸುತ್ತಿದ್ದಾರೆ. ಡಬ್ಬಾ ಸಿನಿಮಾಗಳಿಗೆಲ್ಲಾ ಸೀಕ್ವೆಲ್ ಮಾಡುತ್ತಾರೆ. ಇಂತಹ ಹಿಟ್ ಸಿನಿಮಾ ಮುಂದುವರೆದ ಭಾಗ ಯಾಕೆ ಬರಲ್ಲ? ಒಂದು ವೇಳೆ ಸಿನಿಮಾ ಬರದಿದ್ದರೂ ಪ್ರಭಾಸ್- ನೀಲ್ ಇಬ್ಬರಿಗೂ ಯಾವುದೇ ನಷ್ಟವಿಲ್ಲ ಬಿಡಿ ಎನ್ನುತ್ತಿದ್ದಾರೆ.
ಪ್ರಭಾಸ್ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಯಂಗ್ ರೆಬಲ್ ಸ್ಟಾರ್ ನಂಬಿ ನೂರಾರು ಕೋಟಿ ಬಂಡವಾಳ ಹೂಡುವ ನಿರ್ದೇಶಕರಿದ್ದಾರೆ. ಅದೇ ರೀತಿ ಪ್ರಶಾಂತ್ ನೀಲ್ ಪ್ರತಿಭೆ ಏನು ಎನ್ನುವುದು ಈಗ ಎಲ್ಲರಿಗೂ ಗೊತ್ತಿದೆ. 'ಸಲಾರ್'-2 ಸಿನಿಮಾ ಮಾಡದೇ ಇದ್ದರೂ ಇಬ್ಬರಿಗೂ ಆಗುವ ನಷ್ಟವೇನು ಇಲ್ಲ. ಇಂದಲ್ಲ ನಾಳೆ ಸಿನಿಮಾ ಬರುತ್ತದೆ. ಕೊಂಚ ತಡವಾಗಬಹುದು ಎನ್ನುವ ಕಾಮೆಂಟ್ಸ್ ಬರುತ್ತಿವೆ.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸ್ಪಿರಿಟ್ ಹಾಗೂ ಹನು ರಾಘವಪುಡಿ ಚಿತ್ರಕ್ಕೆ ಪ್ರಭಾಸ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ 'ಸಲಾರ್' ಕಥೆ ಮುಗಿದಿಲ್ಲ. ಕಥೆಗೆ ಒಂದು ತಾರ್ಕಿಕ ಅಂತ್ಯವಾಗಿಲ್ಲ. ಅರ್ಧಕ್ಕೆ ಕಥೆ ನಿಂತಿದೆ. ಹಾಗಾಗಿ ಸೀಕ್ವೆಲ್ ಬರುವುದು ಗ್ಯಾರೆಂಟಿ ಎನ್ನುವುದು ಬಹುತೇಕರ ಲೆಕ್ಕಾಚಾರ. ಈ ಬಗ್ಗೆ ಶೀಘ್ರದಲ್ಲೇ ಚಿತ್ರತಂಡ ಮಾಹಿತಿ ನೀಡಲಿದೆ.


Click it and Unblock the Notifications











